ಕೆಳ ಭಾಗದ ರೈತರಿಗೆ ನೀರು ಕೊಡಿ
Team Udayavani, Oct 21, 2018, 4:46 PM IST
ಮಾನ್ವಿ: ತುಂಗಭದ್ರಾ ಎಡದಂಡೆ ನಾಲೆಯ ಉಪಕಾಲುವೆ ನಂ. 76, 82, 85, 89, 98ಗಳಿಗೆ ನೀರು ಹರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನೂರಾರು ರೈತರು ತಾಲೂಕಿನ ನೀರಮಾನ್ವಿ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ರಸ್ತೆತಡೆ ಚಳವಳಿ ನಡೆಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಗೌರಾವಧ್ಯಕ್ಷ ಚಾಮರಾಸ ಮಾಲಿಪಾಟೀಲ ಬೆಟ್ಟದೂರು, ಮುಖ್ಯ ಕಾಲುವೆಗಳಿಗೆ ನೀರು ಬಿಟ್ಟು ಮೂರು ತಿಂಗಳು ಕಳೆದರೂ ಕೆಳಭಾಗದ ರೈತರಿಗೆ ಕುಡಿಯಲು ಸಹ ನೀರು ಬಂದಿಲ್ಲ. ಎಲ್ಲ ಕಾಲುವೆಗಳಿಗೆ ಸಂಬಂಧಪಟ್ಟ ವಾರಬಂದಿ ಇದೆ. ಆದರೆ ವಾರಬಂದಿ ಸರಿಯಾಗಿ ನಿರ್ವಹಣೆ ಮಾಡದೇ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಆರೋಪಿಸಿದರು.
ಮಳೆ ಇಲ್ಲದೇ ರೈತರು ಹಾಗೂ ಜನಸಾಮಾನ್ಯರು ಜೀವನ ಸಾಗಿಸುವುದು ತುಂಬಾ ಕಷ್ಟವಾಗಿದೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬೆಳೆಗಳು ಒಣಗಿವೆ. ಇದರಿಂದ ರೈತರು ಕಂಗಲಾಗಿದ್ದಾರೆ. ಕೆಳಭಾಗದ ರೈತರಿಗೆ ತಲುಪಬೇಕಾದ ನೀರನ್ನು ಮೇಲ್ಭಾಗದ ರೈತರು ಅಕ್ರಮವಾಗಿ ಟ್ರಾÂಕ್ಟರ್ಗಳು ಹಾಗೂ ಅಯಿಲ್ ಇಂಜಿನ್ಗಳ ಮೂಲಕ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಕೆಳಭಾಗದ ರೈತರಿಗೆ ನೀರು ಇಲ್ಲದೇ ತೀವ್ರ ತೊಂದರೆಯಾಗಿದೆ. ಕಾಲುವೆಗಳಿಗೆ ಅಕ್ರಮವಾಗಿ ನೀರು ಸರಬರಾಜು ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ
ಎಂದು ದೂರಿದರು.
ಮುನಿರಾಬಾದ್ ಮುಖ್ಯ ಇಂಜಿನಿಯರ್ ರವರು ಉಪ ಕಾಲುವೆಗಳಿಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳನ್ನು ದಾಖಲೆಗಳ ಸಮೇತ ಕರೆಯಿಸಿ ಕೆಳಭಾಗದ ರೈತರಿಗೆ ನೀರು ಒದಗಿಸಬೇಕೆಂದು ಒತ್ತಾಯಿಸಿದರು. ಒಂದು ವೇಳೆ ಉಪಕಾಲುವೆಗಳಿಗೆ ನೀರು ಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ ಎಂದು ಎಚ್ಚರಿಸಿದರು. ಬಳಿಕ ತಹಶೀಲ್ದಾರ್ ಅಮರೇಶ ಬಿರಾದಾರ್ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಗೌರವಾಧ್ಯಕ್ಷ ಸೂಗೂರಯ್ಯ ಆರ್.ಎಸ್. ಮಠ, ಜಿಲ್ಲಾಧ್ಯಕ್ಷ ಲಕ್ಷ್ಮಣ ಕಡಗಂದೊಡ್ಡಿ, ಜಿಲ್ಲಾ ಉಪಾಧ್ಯಕ್ಷ ಬಸನಗೌಡ, ವೆಂಕಟರೆಡ್ಡಿ, ಸಿರವಾರ ತಾಲೂಕು ಅಧ್ಯಕ್ಷ ನರಸಪ್ಪ ಹೊಕ್ರಾಣಿ, ರೈತ ಮುಖಂಡರಾದ ಭೀಮೇಶರಾವ್, ಬಸಪ್ಪ ಪೂಜಾರಿ, ವೀರೇಶ ಕಂಬಳಿ ಬೆಟ್ಟದೂರು, ಬಾಲಾಜಿ, ಕರೆಪ್ಪ ಜೀನೂರು, ಚಂದ್ರಕಾಂತ ಸ್ವಾಮಿ, ಅಮರಯ್ಯ ಸ್ವಾಮಿ, ವೀರೇಶ ಗವಿಗಟ್, ವೆಂಕಪ್ಪ ಕಾರಭಾರಿ, ಶ್ರೀರಾಮುಲು, ದೊಡ್ಡಬಸಪ್ಪಗೌಡ, ಕರಿಸಬಸಪ್ಪಗೌಡ, ಚೆನ್ನಬಸವ ಬೆಟ್ಟದೂರು ಸೇರಿದಂತೆ ಅನೇಕ ರೈತ ಮುಖಂಡರಿದ್ದರು.