ಭೂಸ್ವಾಧೀನ ಬಳಿಕ ಕಾಮಗಾರಿಗೆ ಪಟ್ಟು
Team Udayavani, Dec 14, 2018, 2:19 PM IST
ಮುದಗಲ್ಲ: ಈ ಭಾಗದ ಮಹತ್ವಾಕಾಂಕ್ಷಿ ಯೋಜನೆಯಾದ ನಂದವಾಡಗಿ ಏತ ನೀರಾವರಿ ಯೋಜನೆಯ ಜಾಕ್ವೆಲ್ ಹಾಗೂ ಪೈಪ್ಲೈನ್ ಕಾಮಗಾರಿಗೆ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳದೇ ಮತ್ತು ಪರಿಹಾರ ಧನ ವಿತರಿಸದೇ ಗುತ್ತಿಗೆ ಕಂಪನಿ ಎಲ್ ಆ್ಯಂಡ್ ಟಿ. ಕಂಪನಿ ರೈತರ ಹೊಲದಲ್ಲಿ ಕಾಮಗಾರಿ ಆರಂಭಿಸಿದ್ದಕ್ಕೆ ಆಕ್ರೋಶಗೊಂಡ ವಿವಿಧ ಗ್ರಾಮಗಳ ನೂರಾರು ರೈತರು ಗುರುವಾರ ಜಾಕ್ವೆಲ್ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
ಸಮೀಪದ ತೊಂಡಿಹಾಳ ಗ್ರಾಮದ ಬಳಿ ರೈತರ ಭೂಮಿ ಸ್ವಾಧೀನ ಮಾಡಿಕೊಳ್ಳದೇ ಮತ್ತು ಪರಿಹಾರ ಧನ ವಿತರಿಸದೇ ಹಾಗೂ ರೈತರಿಗೆ ಮಾಹಿತಿ ನೀಡದೇ ಎಲ್ ಆ್ಯಂಡ್ ಟಿ ಕಂಪನಿ ಕಾಮಗಾರಿ ಆರಂಭಿಸಿದ್ದಾರೆ. ಹೀಗಾಗಿ ತೊಂಡಿಹಾಳ, ಅಂಕನಾಳ, ಹಲ್ಕಾವಟಗಿ ಮತ್ತು ಉಪನಾಳ ಗ್ರಾಮಸ್ಥರು ಪರಿಹಾರ ಧನ ಬರುವವರೆಗೆ ಹಾಗೂ
ಭೂಸ್ವಾಧಿಧೀನ ಪಡೆಸಿಕೊಂಡೇ ಕಾಮಗಾರಿ ಆರಂಭಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಲು ಮುಂದಾದ ಕೆಬಿಜೆಎನ್ ಎಲ್ ಎಇಇ ಹರ್ಷ ಅವರ ಜೊತೆ ರೈತರು ಮಾತಿನ ಚಕಮಕಿ ನಡೆಸಿದರು. ಈ ವೇಳೆ ಎಇಇ ಹರ್ಷ ರೈತರೊಂದಿಗೆ ಅನುಚಿತವಾಗಿ ವರ್ತಿಸಿದ್ದರಿಂದ ರೈತರು ಆಕ್ರೋಶ ವ್ಯಕ್ತಪಡಿಸಿ, ವರ್ಗಾವಣೆಗೊಂಡಿದ್ದರೂ ಎಇಇ ಹರ್ಷ ರೈತರ ಮೇಲೆ ದರ್ಪ ತೋರುತ್ತಿದ್ದಾರೆ ರೈತರು ಆರೋಪಿಸಿದರು. ಎಇಇ ಅವರನ್ನು ಸಭೆಯಿಂದ ಹೊರಹಾಕಬೇಕು ಮತ್ತು ಲಿಂಗಸುಗೂರ ಉಪವಿಭಾಗಾಧಿಕಾರಿ ಜೊತೆಗೆ ಮಾತಿಗೆ ಮುಂದಾಗುತ್ತೇವೆ ಎಂದು ರೈತರು ಪಟ್ಟು ಹಿಡಿದರು.
ಬಳಿಕ ಪೊಲೀಸರು ಎಇಇ ಹರ್ಷ ಅವರನ್ನು ಹೊರಗೆ ಕಳುಹಿಸಿದರು. ಬಳಿಕ ಲಿಂಗಸುಗೂರು ಉಪ ವಿಭಾಗಾಧಿಕಾರಿ ಮಾರುತಿ ರೈತರೊಂದಿಗೆ ಚರ್ಚಿಸಿ ಏಳು ದಿನದಲ್ಲಿ ಸಭೆ ಕರೆಯಲಾಗುವುದು. ಪರಿಹಾರ ಧನಕ್ಕಾಗಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.
ಜಿಲ್ಲಾಧ್ಯಕ್ಷ ವಾಸುದೇವ, ತಾಲೂಕು ಅಧ್ಯಕ್ಷ ಶಿವಪುತ್ರಗೌಡ, ಅಮೀನಪಾಷಾ, ಮಲ್ಲನಗೌಡ, ಅಮರೇಶ, ಕರಿಹೊಳೆಯಪ್ಪ, ಲಕ್ಷ್ಮಣ, ಶರಣಪ್ಪ, ಹನುಮನಗೌಡ ಸೇರಿ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.