ಬಿಸಿಯೂಟ ನೌಕರರನ್ನು ಬೀದಿಗೆ ತಳ್ಳಲು ಹುನ್ನಾರ
Team Udayavani, Dec 17, 2018, 2:34 PM IST
ಮಸ್ಕಿ: ಕೇಂದ್ರ ಸರ್ಕಾರ ದೇಶದಲ್ಲಿನ 24 ಲಕ್ಷ ಬಿಸಿಯೂಟ ನೌಕರರನ್ನು ಬೀದಿಗೆ ತಳ್ಳುವ ವ್ಯವಸ್ಥಿತ ಹುನ್ನಾರ ಮಾಡುತ್ತಿದೆ ಎಂದು ಬಿಸಿಯೂಟ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಮಹಾದೇವಮ್ಮ ಆರೋಪಿಸಿದರು.
ಪಟ್ಟಣದ ಗಚ್ಚಿನ ಮಠದ ಆವರಣದಲ್ಲಿ ರವಿವಾರ ಆಯೋಜಿಸಿದ್ದ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ 3ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ 17 ವರ್ಷಗಳ ಹಿಂದೆ ದೇಶದಲ್ಲಿ ಜಾರಿಗೆ ತಂದಿರುವ ಅಕ್ಷರ ದಾಸೋಹ ಬಿಸಿಯೂಟ ಯೋಜನೆಯನ್ನು ರಾಜ್ಯದಲ್ಲಿ 2003 ರಿಂದ ರಾಜ್ಯದ ಎಲ್ಲೆಡೆ ಆರಂಭಿಸಲಾಗಿದೆ. ರಾಜ್ಯದಲ್ಲಿ 1.19 ಲಕ್ಷ ಬಿಸಿಯೂಟ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಸರ್ಕಾರ ಕಾರ್ಮಿಕ ಕಾಯ್ದೆ ಪ್ರಕಾರ ಕನಿಷ್ಠ ವೇತನ 18 ಸಾವಿರ ರೂ. ಕೂಲಿ ನೀಡದೇ ಕೇಂದ್ರ ಸರ್ಕಾರ ನಮ್ಮನ್ನು ಶೋಷಿಸುತ್ತಿದೆ ಎಂದು ಆರೋಪಿಸಿದರು.
ಈಗಾಗಲೇ ಸರ್ಕಾರ ಕೇಂದ್ರಿಕೃತ ಅಡುಗೆ ಮನೆಗಳನ್ನು ಆರಂಭಿಸಿ ಅಲ್ಲಿಂದ ಶಾಲೆಗಳಿಗೆ ಅಡುಗೆ ಸರಬರಾಜು ಮಾಡಲು ಮುಂದಾಗುತ್ತಿದೆ. ಆದರೆ ಇದರಿಂದ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಪೌಷ್ಟಿಕ ಆಹಾರ ಸಿಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಗೌರವಧನ ಆಧಾರದಲ್ಲಿ ದುಡಿಯುತ್ತಿರುವ ನಮಗೆ ಗೌರವವೇ ಇಲ್ಲದಂತಾಗಿದೆ ಎಂದು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಖಾ ಖಾದ್ರಿ ಮಾತನಾಡಿ, ದೇಶದಲ್ಲಿ ಜೀವನಾವಶ್ಯಕ ವಸ್ತುಗಳ ಬೆಲೆ ನಿತ್ಯ
ಏರುತ್ತಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೆಲೆ ನಿಯಂತ್ರಿಸುವಲ್ಲಿ ವಿಫಲವಾಗಿದೆ. ದೇಶದ ಬಡ ಜನರಿಗೆ ಬ್ಯಾಂಕ್ಗಳಲ್ಲಿ ಜೀರೋ ಬ್ಯಾಲೆನ್ಸ್ ಅಕೌಂಟ್ ಖಾತೆ ತೆರೆಯುವಂತೆ ಪ್ರಧಾನಿ ಮೋದಿ ಹೇಳಿದ್ದರು. ಆದರೆ ಆರ್ಟಿಐ ಮಾಹಿತಿ ಪ್ರಕಾರ ದೇಶದಲ್ಲಿ 21 ಸರ್ಕಾರಿ ಬ್ಯಾಂಕ್ ಹಾಗೂ 3 ಖಾಸಗಿ ಬ್ಯಾಂಕ್ಗಳಿಂದ ಒಟ್ಟು 72 ಸಾವಿರ ಕೋಟಿ ಹಣವನ್ನು ಬಡವರ ಖಾತೆಗಳಿಂದ ಸಂಗ್ರಹಿಸಲಾಗಿದೆ. ಇದರಿಂದ ಯಾರಿಗೆ ಲಾಭವಾಗಿದೆ ಎನ್ನುವುದನ್ನು ಜನಸಾಮಾನ್ಯರು ಅರಿಯಬೇಕು ಎಂದರು.
ರೈತ ಸಂಘದ ಮುಖಂಡ ವೀರನಗೌಡ ಮಾತನಾಡಿದರು. ವರಲಕ್ಷ್ಮೀ, ಅನ್ನಪೂರ್ಣ, ಮಲ್ಲಮ್ಮ ಮಸ್ಕಿ, ವಿಶಾಲಾಕ್ಷಿ, ರೇಣುಕಮ್ಮ, ಹನೀಫ್, ಯಂಕಪ್ಪ ಇದ್ದರು. ವಿವಿಧ ತಾಲೂಕುಗಳಿಂದ ಆಗಮಿಸಿದ್ದ ನೂರಾರು ಬಿಸಿಯೂಟ ನೌಕರರ ಸಂಘದ ಪದಾಧಿಕಾರಿಗಳು ಇದ್ದರು.
ೇಂದ್ರ ಸರ್ಕಾರ ಕಳೆದ ಹಲವು ವರ್ಷಗಳಿಂದ ಇದ್ದ 44 ಕಾರ್ಮಿಕ ಕಾಯ್ದೆಗಳನ್ನು ಬದಲಿಸಿ ಕಾರ್ಪೋರೇಟರ್ ಸಂಸ್ಥೆಗಳಿಗೆ ಅನುಕೂಲವಾಗುವಂತಹ ಕಾರ್ಮಿಕ ಕಾನೂನುಗಳನ್ನು ಜಾರಿಗೆ ತರಲು ಮುಂದಾಗಿದೆ. ಇದನ್ನು ಖಂಡಿಸಿ ಜನವರಿ 8, 9ರಂದು ದೇಶಾದ್ಯಂತ ಎಲ್ಲ ದುಡಿಯುವ ವರ್ಗದ ಕಾರ್ಮಿಕರು, ರೈತರು ಹಾಗೂ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೌಕರರು ಸೇರಿ ಕೇಂದ್ರ ಸರ್ಕಾರದ ನೀತಿಗಳ ವಿರುದ್ದ 48 ಗಂಟೆಗಳ ಐತಿಹಾಸಿಕ ಬಂದ್ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು.
ಶೇಕ್ಷಾ ಖಾದ್ರಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ