ದುಡ್ಡಿನ ಮೂಟೆಗಳನ್ನು ಬಾಗಿಸಿದ ನ್ಯಾಯಾಂಗ 


Team Udayavani, Mar 6, 2019, 12:30 AM IST

z-15.jpg

ದೇಶದ ಕಾರ್ಪೊರೇಟ್‌ ಕ್ಷೇತ್ರದಲ್ಲಿ ಅಂಬಾನಿಗಳ ಉತ್ಕರ್ಷೆಗೆ ಅವರ ಉದ್ಯಮ ಸಾಹಸ ಹಾಗೂ ಧೈರ್ಯದ ನಡೆಯೇ ಕಾರಣ ಎನ್ನುವವರು ಅನೇಕರಿದ್ದಾರೆ, ಆದರೂ ಈ ಉದ್ಯಮ ಶೂರರು ಉನ್ನತ ಮಟ್ಟಕ್ಕೆ ಏರಿರುವುದು ಉನ್ನತ ರಾಜಕಾರಣಿಗಳ ಹಾಗೂ ಅಧಿಕಾರಿಗಳ ಜೊತೆಗೆ ಇರುವ “ಸರಿಯಾದ ಸಂಪರ್ಕ’ದಿಂದ.

ಹಣದ ದರ್ಪದ ಎದುರಲ್ಲಿ ಕಾನೂನು ವಿಜಯ ಪತಾಕೆ ಹಾರಿಸಿದ ವಿದ್ಯಮಾನ ಸಂಭವಿಸಿದೆ. ಕೈಗಾರಿಕೋದ್ಯಮಿ ಅನಿಲ್‌ ಅಂಬಾನಿ ನ್ಯಾಯಾಲಯದ ನಿಂದನೆಯೆಸಗಿದ್ದಾರೆಂದು ತೀರ್ಪು ನೀಡುವ ಮೂಲಕ ಸುಪ್ರೀಂ ಕೋರ್ಟ್‌ ಇಂಥದೊಂದು ಸಂದೇಶವನ್ನು ಸಾರಿದೆ. ಅಂಬಾನಿ ಸಹೋದರರ ಪೈಕಿ ಕಿರಿಯರಾದ ಅನಿಲ್‌ ಹಾಗೂ ಇತರ ಇಬ್ಬರು, ಸ್ವೀಡಿಶ್‌ ಟೆಲಿಕಾಂ ಸಾಧನಗಳ ಕಂಪೆನಿಯಾದ ಎರಿಕ್‌ಸನ್‌ ಸಂಸ್ಥೆಗೆ ನಾಲ್ಕು ವಾರಗಳ ಒಳಗೆ 453 ಕೋ. ರೂ. ಪಾವತಿಸಬೇಕು, ಇದಕ್ಕೆ ತಪ್ಪಿದಲ್ಲಿ ಮೂರು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಧೀಶರಾದ ರೋಹಿಂಗ್ಟನ್‌ ನಾರಿಮನ್‌ ಹಾಗೂ ವಿನೀತ್‌ ಶರಣ್‌ ಆದೇಶ ಹೊರಡಿಸಿದ್ದಾರೆ. ಅನಿಲ್‌ ಅಂಬಾನಿ ಮತ್ತಿಬ್ಬರು ಆರೋಪಿಗಳ ಬೇಷರತ್‌ ಕ್ಷಮಾಯಾಚನೆಯ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಾಲಯ, ಈ ಆರೋಪಿಗಳು ಉದ್ದಕ್ಕೂ ದುಡುಕಿನಿಂದ ವರ್ತಿಸುತ್ತಾ ಬಂದಿದ್ದಾರೆಂದು ಅಭಿಪ್ರಾಯಪಟ್ಟಿದೆ. ಕೊನೆಗೂ ಈ ನ್ಯಾಯಾಧೀಶದ್ವಯರು ದೇಶದ ಅತ್ಯಂತ ಶ್ರೀಮಂತ ಕುಟುಂಬದ ಸದಸ್ಯನನ್ನು ಕಾನೂನಿನೆದುರು ತಲೆಬಾಗುವಂತೆ ಮಾಡಿದ್ದಾರೆ. 

ದೇಶದಲ್ಲಿರುವ “ದುಡ್ಡಿನ ಮೂಟೆ’ಗಳಿಗೆ ಸಂಬಂಧಿಸಿದಂತೆ ಜನಮಾನಸದಲ್ಲಿ ಬಹುದೀರ್ಘ‌ಕಾಲದಿಂದ ಗಾಢವಾದ ಭಾವನೆಯೊಂದು ಬಲವಾಗಿ ಬೇರುಬಿಟ್ಟಿದೆ. ಈ ಶ್ರೀಮಂತ ಕುಳಗಳು ನ್ಯಾಯಾಲಯದಲ್ಲಿ, ಅದರಲ್ಲೂ ವಿಶೇಷವಾಗಿ ಉನ್ನತ ನ್ಯಾಯಾಲಯಗಳಲ್ಲಿ, ಬಾಯಿಬಲದಿಂದಲೇ ಖ್ಯಾತರಾಗಿರುವ, ವಿಚಾರಣಾ ನ್ಯಾಯಾಲಯದ ಸಪ್ಪೆ ವಾದಗಳ ವಕೀಲರುಗಳಿಗಿಂತ ಗಡುಸಾದ ವಾಕ್ಚಾತುರ್ಯವಿರುವ, ದುಬಾರಿ ವೆಚ್ಚದ ಲಾಯರ್‌ಗಳನ್ನು ಛೂಬಿಟ್ಟು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆಂಬುದೇ ಹೆಚ್ಚಿನವರ ಭಾವನೆ. ಇನ್ನು ನ್ಯಾಯಮೂರ್ತಿಗಳ ಪೈಕಿ ಕೆಲವರು ಪ್ರಭಾವಕ್ಕೊಳಗಾಗುತ್ತಾರೆ ಅಥವಾ ಸಿರಿವಂತ ಅಥವಾ ಬಲಿಷ್ಠ ಕುಳಗಳ, ಇಲ್ಲವೇ ಅವರುಗಳ ಲಾಯರ್‌ಗಳಿಂದ “ನಿಭಾಯಿಸಲ್ಪಡುತ್ತಾರೆ’ ಎಂಬಂಥ ಸಡಿಲ ಅಥವಾ ದೇಶಾವರಿ ಮಾತುಗಳೂ ಕೇಳಿ ಬರುತ್ತವೆ. ವಿದ್ಯಾವಂತರೂ ಸೇರಿದಂತೆ ಅನೇಕರು, ಕಂದಾಯ ಹಾಗೂ ಪೊಲೀಸ್‌ ಇಲಾಖೆಗಳ ಲಂಚಕೋರ ಅಧಿಕಾರಿಗಳ ಹಾಗೂ ನ್ಯಾಯಮೂರ್ತಿಗಳ ನಡುವೆ ಯಾವುದೇ ವ್ಯತ್ಯಾಸವನ್ನೂ ಕಾಣಲಾರರು. ಇಂಥ ತರ್ಕ ಅಥವಾ ಊಹೆ ನಿರಾಧಾರಿತ ಎನ್ನುವುದನ್ನು ಸರ್ವೋಚ್ಚ ನ್ಯಾಯಾಲಯ ಅಂಬಾನಿ ಪ್ರಕರಣದ ಈ ತೀರ್ಪು ತೋರಿಸಿಕೊಟ್ಟಿದೆ.

ದೇಶದ ಕಾರ್ಪೊರೇಟ್‌ ಕ್ಷೇತ್ರದಲ್ಲಿ ಅಂಬಾನಿಗಳ ಉತ್ಕರ್ಷೆಗೆ ಅವರ ಉದ್ಯಮ ಸಾಹಸ ಹಾಗೂ ಧೈರ್ಯದ ನಡೆಯೇ ಕಾರಣ ಎನ್ನುವವರು ಅನೇಕರಿದ್ದಾರೆ, ಆದರೂ ಕೈಗಾರಿಕೋದ್ಯಮದಲ್ಲಿ ಈ ಉದ್ಯಮ ಶೂರರು ಉನ್ನತ ಮಟ್ಟಕ್ಕೆ ಏರಿರುವುದು ಇವರು ಉನ್ನತ ರಾಜಕಾರಣಿಗಳ ಹಾಗೂ ಅಧಿಕಾರಿಗಳ ಜೊತೆಗೆ “ಸರಿಯಾದ ಸಂಪರ್ಕ’ ಇರಿಸಿಕೊಂಡಿರುವುದರಿಂದಲೇ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ವಿವಾದಾತ್ಮಕ ರಫೇಲ್‌ ವ್ಯವಹಾರದಲ್ಲಿ ಅನಿಲ್‌ ಅಂಬಾನಿಯ ರಿಲಯನ್ಸ್‌ ಡಿಫೆನ್ಸ್‌ ಸಂಸ್ಥೆಯನ್ನು “ಬಾಹ್ಯ ಭಾಗೀದಾರ’ನೆಂದು ಆಯ್ಕೆ ಮಾಡಿರುವುದಕ್ಕಾಗಿ ನರೇಂದ್ರ ಮೋದಿ ಸರಕಾರ ಇಂದು ಟೀಕೆಗೊಳಗಾಗಿದೆಯಾದರೂ, ಅಂಬಾನಿಗಳನ್ನು ದೊಡ್ಡ ಕುಳಗಳನ್ನಾಗಿ ಬೆಳೆಯಗೊಟ್ಟಿರುವುದು ಕಾಂಗ್ರೆಸ್‌ ಸರಕಾರಗಳೇ ಎನ್ನುವುದನ್ನು ಅಂಕಿ-ಅಂಶಗಳು ಚೆನ್ನಾಗಿಯೇ ಶ್ರುತಪಡಿಸುತ್ತವೆ. ಮೋದಿ ಅವರು 2014ರಲ್ಲಿ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶ ಪಡೆಯುವುದಕ್ಕೆ ಮುನ್ನವೇ ಅಂಬಾನಿಗಳು ದೇಶದ ನಂ. 1 ಶ್ರೀಮಂತ ಕುಳಗಳಾಗಿ ಹೊರಹೊಮ್ಮಿದ್ದರು. ಮೋದಿ ಹಾಗೂ ಅವರ ಬಿಜೆಪಿ ಇವರುಗಳ ಇನ್ನಷ್ಟು ಬೆಳೆಯಲು ನೆರವಾದರಷ್ಟೆ.

ದೇಶದಲ್ಲಿ “ರಾಜಕೀಯ ಪಕ್ಷಪಾತದ ಬಂಡವಾಳಶಾಹಿ’ ವ್ಯವಸ್ಥೆ ಯಾವ ರೀತಿ ವಿಜೃಂಭಿಸುತ್ತಿದೆ ಎನ್ನುವುದನ್ನು ತೋರಿಸಲು ಅಂಬಾನಿಗಳ “ಕ್ಷಿಪ್ರ ಉತ್ಕರ್ಷ’ವನ್ನೇ ಉದಾಹರಣೆಯನ್ನಾಗಿ ನೀಡಲಾಗುತ್ತಿದೆ. “ರಾಜಕೀಯ ಸಂಬಂಧದ ಬಂಡವಾಳಶಾಹಿ ವ್ಯವಸ್ಥೆ’ ಎಂಬ ಪದಪುಂಜ, ರಾಜಕಾರಣಿಗಳು ಹಾಗೂ ಅಧಿಕಾರಿಗಳೊಂದಿಗೆ ವಾಣಿಜ್ಯೋದ್ಯಮ ಕ್ಷೇತ್ರಗಳು ಹೊಂದಿರುವ ಪರಸ್ಪರ ಕೊಡುಕೊಳ್ಳುವಿಕೆಯ ಸಂಬಂಧವನ್ನೇ ಸೂಚಿಸುತ್ತಿದೆ. ಹಿಂದೆ ಟಾಟಾಗಳು ಹಾಗೂ ಬಿರ್ಲಾಗಳಿದ್ದರು; ಇಂದಿನ ನಮ್ಮ ಉನ್ನತ ಕೈಗಾರಿಕೋದ್ಯಮಿಗಳು ಹಾಗೂ ವಾಣಿಜ್ಯೋದ್ಯಮಿಗಳಲ್ಲಿ ಅಂಬಾನಿಗಳು ಕಾಣಿಸಿಕೊಂಡಿದ್ದಾರೆ. ಹಿಂದಿನ ನಮ್ಮ ಮಹಾರಾಜರುಗಳಂತೆ ಅಂಬಾನಿಗಳು ಕೂಡ ತಮ್ಮ ಸಂಪತ್ತಿನ ಪ್ರದರ್ಶನವನ್ನು ಬಯಸುವವರು. ಅಂಬಾನಿ ಸಹೋದರರಲ್ಲಿ ಹಿರಿಯರಾದ ಮುಖೇಶ್‌ ಅಂಬಾನಿ ಮುಂಬಯಿಯಲ್ಲಿ ವಿಶ್ವದಲ್ಲೇ ಅತ್ಯಂತ ದುಬಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 7000 ಕೋ. ರೂ. ವೆಚ್ಚದ 27 ಮಹಡಿಗಳ ಬೃಹತ್‌ “ಆಂಟೀಲಿಯಾ’ವನ್ನು ನಿರ್ಮಿಸಿಕೊಂಡಿದ್ದಾರೆ. ಸಿರಿವಂತಿಕೆಯ ಪ್ರದರ್ಶನದ ದೃಷ್ಟಾಂತವೆಂಬಂತೆ, ನಮ್ಮ ಐಪಿಎಲ್‌ ಕ್ರಿಕೆಟ್‌ ಪಂದ್ಯಗಳ ಸಂದರ್ಭದಲ್ಲಿ ಈ ಭವ್ಯ ಬಂಗಲೆ ನೋಡುಗರಿಗಾಗಿ ಪೂರ್ಣವಾಗಿ ತೆರೆದಿರುತ್ತದೆ! ಮುಖೇಶ್‌ ಅವರ ಪತ್ನಿ ತಾನು ಖರೀದಿಸಿರುವ ಆಟಗಾರರು ಸೋತರೆ ಬಹಿರಂಗವಾಗಿಯೇ ತಮ್ಮ ಕೋಪವನ್ನು ಪ್ರಕಟಿಸುವುದನ್ನು ಕಂಡಿದ್ದೇವೆ.

ನಮ್ಮ ಸಮಾಜವಾದಿಗಳು ಇಂದು ಎಲ್ಲಿದ್ದಾರೆ? ನಾನು ಈ ರೀತಿ ಪ್ರಶ್ನಿಸಲು ಕಾರಣವಿದೆ. 1950ರ ದಶಕದಷ್ಟು ಹಿಂದೆಯೇ ಕೇಂದ್ರದ ಮಾಜಿ ವಿತ್ತ ಸಚಿವ ಪ್ರೊ| ಮಧು ದಂಡವತೆ ಅವರು (ಓರ್ವ ಪ್ರಾಮಾಣಿಕ ಸಮಾಜವಾದಿ ಎಂದು ಪರಿಗಣಿತರಾಗಿದ್ದವರು) ಸಿಂಧಿಯಾ ರಾಜವಂಶಕ್ಕೆ ಸೇರಿದ್ದ ಬಂಗಲೆಯೊಂದಕ್ಕೆ ಮುತ್ತಿಗೆ ಹಾಕಿಸುವ ಸಲುವಾಗಿ ಬಾಂಬೆಯ ಕೊಳೆಗೇರಿ ನಿವಾಸಿಗಳ ಜಾಥಾವನ್ನು ನಡೆಸಿದ್ದರು. ಸಮುದ್ರ ಮಹಲ್‌ ಎಂಬ ಈ ಬಂಗೆಲೆಯಿದ್ದುದು ಬಾಂಬೆಯ ಹಾರ್ನಿಬಿ ವೆಲ್ಲರ್ಡ್‌ ಪ್ರದೇಶ (ವರ್ಲಿ)ದಲ್ಲಿ. ಬಡಜನರೇ ತುಂಬಿರುವ ಭಾರತದಂಥ ದೇಶದಲ್ಲಿ ಇಂಥ ಬಂಗಲೆಗಳು ಇರಕೂಡದೆಂಬುದು ದಂಡವತೆಯವರ ವಾದವಾಗಿತ್ತು. ಅವರು ಒಯ್ದಿದ್ದ ಕೊಳೆಗೇರಿ ನಿವಾಸಿಗಳು ಬಂಗಲೆಯನ್ನು ಹಾಳುಗೆಡವಿದ್ದರು; ಮುಂದೆ ಸಿಂಧಿಯಾ ಕುಟುಂಬ ಇದನ್ನು ಭೂ ವ್ಯವಹಾರಸ್ಥನೊಬ್ಬನಿಗೆ ಮಾರಬೇಕಾಯಿತು.; ಇದಕ್ಕೆ ವ್ಯತಿರಿಕ್ತವಾಗಿ ಇಂದಿನ ಸಮಾಜವಾದಿಗಳಿಗೆ ಅಂಬಾನಿಯವರ ಬಂಗಲೆಯ ಬಗ್ಗೆ ಖುಷಿಯೇ ಇದೆ; ಬೆಂಗಳೂರು, ಮಂಗಳೂರು ಅಥವಾ ಇತರೆಡೆಗಳಲ್ಲಿರುವ ಸ್ವಂತ ವೈಭವೋಪೇತ ನಿವಾಸ ಕಟ್ಟಡಗಳ ಬಗೆಗೂ ಇಷ್ಟೇ ಖುಷಿಯಿದೆ. 

ಸಮಾಜವಾದಿ ನಿಲುವಿನ ಸಂವಿಧಾನ ನಮ್ಮದು; ಹಾಗಾಗಿ ಸರಕಾರಿ ನೀತಿಯ ಮಾರ್ಗದರ್ಶಿ ಸೂತ್ರಗಳಿಗೆ ಕೇಂದ್ರ ಹಾಗೂ ರಾಜ್ಯಗಳಲ್ಲಿನ ನಮ್ಮ ಮಂತ್ರಿ ಮಹೋದಯರಲ್ಲಿ ಜಾಗ್ರತಿ ಮೂಡಿಸಬೇಕಾದ ಅಗತ್ಯವಿದೆ. ನಮ್ಮ ಮಂತ್ರಿಗಳ ಗಡಣ ಆರ್ಥಿಕ ವ್ಯವಸ್ಥೆಯ ನಿರ್ವಹಣೆ ಸಂಪತ್ತಿನ ಶೇಖರಣೆಗೆ ಹಾದಿ ಮಾಡಿಕೊಡ ಬಾರದೆಂಬ ಉಲ್ಲೇಖವಿರುವ ಸಂವಿಧಾನದ 39ನೇ ವಿಧಿಯನ್ನು ಇವರುಗಳು ಓದಿ ಅರ್ಥ ಮಾಡಿಕೊಂಡಿರುತ್ತಿದ್ದರೆ ನಮ್ಮ ದೇಶ “ಅಂಬಾನಿ ಮುಕ್ತ’ ರಾಷ್ಟ್ರವಾಗಿರುತ್ತಿತ್ತು! ದುರದೃಷ್ಟವಶಾತ್‌, ಮಾರ್ಗದರ್ಶಿ ಸೂತ್ರಗಳನ್ನು ಅನುಷ್ಠಾನ ಮಾಡುವಂತಿಲ್ಲ; ನೆನಪಿನಲ್ಲಿರಿಸಿಕೊಳ್ಳಬೇಕೆಂಬುದಷ್ಟೆ ಅವುಗಳ ಆಶಯವಾಗಿದೆ. 

ಕೇಂದ್ರ ಸರಕಾರದ ಮೇಲೆ “ಇಂಥದೇ ನೀತಿ ರೂಪಿಸಿರಿ’- ಎಂದು, “ಬಜೆಟ್‌ನಲ್ಲಿ ಇಂತಿಂಥ ಅಂಶಗಳೇ ಇರಲಿ’ ಎಂದು ಒತ್ತಡ ಹಾಕುತ್ತಿರುವ ಅರ್ಥಾತ್‌ ವಶೀಲಿಬಾಜಿ ಮಾಡುತ್ತಿರುವ ನಮ್ಮ ವಾಣಿಜ್ಯೋದ್ಯಮಿಗಳ ಯಾದಿಯಲ್ಲಿ ಅಂಬಾನಿಗಳ ಹೆಸರು ಎಲ್ಲರಿಗಿಂತಲೂ ಮೇಲೆ ಇದೆ. 1990ರ ಉತ್ತರಾರ್ಧದಲ್ಲಿ ದಿವಂಗತ ಧೀರೂಭಾಯ್‌ ಹಾಗೂ ಬಾಂಬೆ ಡೈಯಿಂಗ್‌ ಹಾಗೂ ಆರ್ಕೆಮಿಲ್ಸ್‌ನ ನುಸ್ಲಿವಾಡಿಯಾ (ಮೊಹಮ್ಮದ್‌ ಅಲಿ ಜಿನ್ನಾರ ಮೊಮ್ಮಗ) ನಡುವೆ ನಡೆದ “ಪಾಲಿಯೆಸ್ಟರ್‌ ಸಮರ’ವನ್ನು ಮರೆಯುವುದು ಹೇಗೆ? ಪ್ರಬಲ ಸ್ಪರ್ಧಿ ಅಂಬಾನಿ ಅವರ ವಸ್ತ್ರೋದ್ಯಮ ಸಂಸ್ಥೆ (ಓನ್ಲಿ ವಿಮಲ್‌)ಯೆದುರು ವಾಡಿಯಾ ಸೋತು ಕೈ ಚೆಲ್ಲಿದರು. ಪಾಲಿಯೆಸ್ಟರ್‌ ಮೇಲಿನ ಕಸ್ಟಮ್ಸ್‌ , ಆಮದು ಸುಂಕ ದರಗಳನ್ನು ತನಗೆ ಅನುಕೂಲವಾಗುವಂತೆ “ಸರಿ ಹೊಂದಾಣಿಕೆ’ ಮಾಡಿಕೊಳ್ಳುವಲ್ಲಿ ಅಂಬಾನಿ ಯಶಸ್ವಿಯಾದರು. ಅವರಿಗೆ ಇಂದಿರಾ ಮತ್ತು ರಾಜೀವ ಗಾಂಧಿಯವರ ಪೂರ್ಣಾನು ಗ್ರಹವಿತ್ತು. ಅವರನ್ನು ಬೆಳೆಯಗೊಟ್ಟವರು, ಇತ್ತೀಚೆಗಷ್ಟೇ ಭಾರತರತ್ನ ಬಿರುದಾಂಕಿತರಾದ ಪ್ರಣವ್‌ ಮುಖರ್ಜಿಯವರು.

ಸ್ವಾತಂತ್ರ್ಯಪೂರ್ವದ ದಿನಗಳಲ್ಲಿ ಹಿಂದೂ ಕೈಗಾರಿಕೋದ್ಯಮಿಗಳು ಮಹಾತ್ಮಾಗಾಂಧಿ ನೇತೃತ್ವದ ಕಾಂಗ್ರೆಸ್‌ಗೆ ಹಾಗೂ ಅವರ ಸ್ವಾತಂತ್ರ್ಯ ಚಳವಳಿಗೆ ಧನಸಹಾಯ ನೀಡಿದ್ದರು. ಸ್ವಾತಂತ್ರ್ಯದ ಬಳಿಕ ಅವರು ಇದರ ಧಾರಾಳ ಪ್ರಯೋಜನವನ್ನು ದಕ್ಕಿಸಿಕೊಂಡರು. ಅಂಬಾನಿಗಳು ಮತ್ತಿತರರು ಸ್ವಾತಂತ್ರ್ಯೋತ್ತರ ವರ್ಷಗಳಲ್ಲಿ ರಾಜಕೀಯ ಪಕ್ಷಗಳಿಗೆ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಧನ ಸಹಾಯ ನೀಡುತ್ತ, ಬ್ಯಾಂಕುಗಳ ಹಣವನ್ನು ಬಾಚುತ್ತ, ತಮ್ಮ ಸಂಪತ್ತನ್ನು ವಿದೇಶಿ ಬ್ಯಾಂಕುಗಳಲ್ಲಿ ಇರಿಸುತ್ತ ಬಂದಿರುವವರ ಪೀಳಿಗೆಯವರು. “ಉದ್ಯಮರಂಗದ ಸಾಮಾಜಿಕ ಹೊಣೆ’ಯ ಹೆಸರಿನಲ್ಲಿ ಇವರುಗಳು ಸಾರ್ವಜನಿಕ ದಾನದತ್ತಿಗಳನ್ನು ಮಾಡುತ್ತ ಬಂದಿದ್ದಾರೆ ಅಷ್ಟೆ.  ಇದೀಗ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬಿದ್ದಿರುವ ಹಿನ್ನೆಲೆಯಲ್ಲಿ ಅನಿಲ್‌ ಅಂಬಾನಿಯವರ ರಿಲಯನ್ಸ್‌ ಡಿಫೆನ್ಸ್‌ ಕಂಪೆನಿಯನ್ನು ರಫೇಲ್‌ ವಿಮಾನ ಕಂಪೆನಿಯ ಭಾಗೀದಾರ ಕಂಪೆನಿಯನ್ನಾಗಿಸಲು ಹೊರಟಿರುವ ತನ್ನ ನಿರ್ಧಾರವನ್ನು ಮೋದಿ ಸರಕಾರ ಮರುಪರಿಶೀಲಿಸಬೇಕಿದೆ.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.