ರಾಗಿ ಕೇಂದ್ರದಲ್ಲಿ ಮೂಲ ಸೌಲಭ್ಯವೇ ಮರೀಚಿಕೆ
Team Udayavani, Mar 16, 2019, 7:36 AM IST
ಕುದೂರು: ರಾಗಿ ಖರೀದಿ ಕೇಂದ್ರ ನಿರ್ಜನ ಪ್ರದೇಶದಲ್ಲಿ ಪ್ರಾರಂಭಿಸಿದ್ದು, ಮೂಲಕ ಸೌಲಭ್ಯವೇ ಮರೀಚಿಕೆಯಾಗಿದೆ. ಕೇಂದ್ರದ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಗ್ರಾಮ, ಹೋಟೆಲ್ ಇಲ್ಲದೆ ರೈತರು ಊಟ, ತಿಂಡಿಗಾಗಿ ಪರದಾಡ ನಡೆಸುತ್ತಿದ್ದಾರೆ. ಇಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲದೇ ಬಯಲು ಪ್ರದೇಶದಲ್ಲಿ ರೈತರು ತಮ್ಮ ನಿತ್ಯ ಕರ್ಮಗಳನ್ನು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಮೂಟೆಗಳನ್ನು ಜೋಡಿಸಲು ರೈತರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ರೈತ ವಲಯದಲ್ಲಿ ಕೇಳಿ ಬರುತ್ತಿದೆ.
ರಾಗಿ ಖರೀದಿಸುವ ಪ್ರಕ್ರಿಯೆ ಆರಂಭ: ಸರ್ಕಾರ ರಾಗಿಗೆ ಬೆಂಬಲ ಬೆಲೆ ನೀಡಿ, ರೈತರಿಂದ ರಾಗಿಯನ್ನು ಖರೀದಿಸಲು ಎಲ್ಲಾ ತಾಲೂಕಿನಲ್ಲಿಯೂ ರಾಗಿ ಖರೀದಿ ಕೇಂದ್ರವನ್ನು ಪ್ರಾರಂಭಿಸಿದೆ. ಅದೇ ರೀತಿ ಮಾಗಡಿ ತಾಲೂಕಿನ ಸೋಲೂರು ಹೋಬಳಿಯ ಗದ್ದುಗೆ ಮಠಕ್ಕೆ ತೆರಳುವ ರಸ್ತೆಯಲ್ಲಿ ರಾಗಿ ಖರೀದಿ ಕೇಂದ್ರವನ್ನು ತೆರದಿದೆ. ಫೆ.26ರಿಂದಲೂ ಇಲ್ಲಿ ರೈತರಿಂದ ರಾಗಿಯನ್ನು ಖರೀದಿಸುವ ಪ್ರಕ್ರಿಯೆ ಆರಂಭವಾಗಿರುವುದರಿಂದ ಪ್ರತಿದಿನ ನೂರಕ್ಕೂ ಹೆಚ್ಚು ರೈತರು ರಾಗಿಯನ್ನು ತರುತ್ತಿದ್ದಾರೆ.
ರೈತರಿಂದ ಹಣ ವಸೂಲಿ: ರೈತರು ಕೇಂದ್ರಕ್ಕೆ 50 ಕೆ.ಜಿ. ಮೂಟೆಗಳಲ್ಲಿ ರಾಗಿಯನ್ನು ತರುತ್ತಿದ್ದು, ಮೂಟೆಯ ತೂಕವೂ ಸೇರಿ 51 ಕೆ.ಜಿ. ರಾಗಿಯನ್ನು ಪೂರೈಸಬೇಕಿದೆ. ಅದರೆ, ಖರೀದಿ ಕೇಂದ್ರದ ನೌಕರರು ಐವತ್ತೂಂದುವರೆ ಕೆ.ಜಿ. ರಾಗಿಯನ್ನು ತರಬೇಕು ಎಂದು ರೈತರಿಗೆ ಸೂಚಿಸಿರುವ ಕಾರಣ ಪ್ರತಿಯೊಬ್ಬ ರೈತರು ಚೀಲ ಸೇರಿ 51.500 ಕೆ.ಜಿ. ರಾಗಿಯನ್ನು ಕೇಂದ್ರಕ್ಕೆ ತರುತ್ತಿದ್ದಾರೆ. ರಾಗಿ ಖರೀದಿ ಕೇಂದ್ರಕ್ಕೆ ರಾಗಿಯ ಮೂಟೆಗಳನ್ನು ತರುವ ರೈತರು ತೂಕ ಮಾಡುವುದು ಸೇರಿದಂತೆ ಮೂಟೆಗಳನ್ನು ಜೋಡಿಸುವುದಕ್ಕೆ ಹಣವನ್ನು ಪಡೆಯುತ್ತಿರುವುದು ರೈತರಿಗೆ ಬಹಳಷ್ಟು ಹೊರೆಯಾಗುತ್ತಿದೆ.
ಕಾಯುವ ಪರಿಸ್ಥಿತಿ ನಿರ್ಮಾಣ: ರಾಗಿ ಖರೀದಿ ಕೇಂದ್ರಕ್ಕೆ ಪ್ರತಿ ದಿನ ನೂರಾರು ರೈತರು ತಮ್ಮ ವಾಹನಗಳಲ್ಲಿ ರಾಗಿಯನ್ನು ತರುತ್ತಿರುವುದರಿಂದ ಎಲ್ಲರಿಗೂ ಕ್ರಮ ಸಂಖ್ಯೆಯನ್ನು ನೀಡಲಾಗುತ್ತಿದೆ. ತಮ್ಮ ಸರದಿ ಬರುವವರೆಗೂ ರೈತರು ಒಂದೊಂದು ಬಾರಿ ಬೆಳಗ್ಗೆಯಿಂದ ರಾತ್ರಿಯವರೆಗೂ ಕಾಯುತ್ತಾ ಕೂರಬೇಕಿದೆ. ಕೆಲವು ರೈತರು ರಾತ್ರಿ ಸಮಯದಲ್ಲಿಯೇ ಕೇಂದ್ರಕ್ಕೆ ರಾಗಿಯನ್ನು ತರುತ್ತಾರೆ.
ಆಹಾರ, ಶೌಚಾಲಯಕ್ಕೆ ಸಮಸ್ಯೆ: ರಾಗಿ ಖರೀದಿ ಕೇಂದ್ರವನ್ನು ನಿರ್ಜನ ಪ್ರದೇಶದಲ್ಲಿ ಪ್ರಾರಂಭಿಸಿದ್ದು, ಇದರ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಗ್ರಾಮಗಳಾಗಲಿ, ಹೋಟೆಲ್ ಆಗಲಿ ಇಲ್ಲ. ಇದರಿಂದ ರೈತರಿಗೆ ಊಟ, ತಿಂಡಿಗೆ ಬಹಳಷ್ಟು ಸಮಸ್ಯೆಯಾಗಿದೆ. ಅಲ್ಲದೆ, ಇಲ್ಲಿ ಶೌಚಾಲಯ ವ್ಯವಸ್ಥೆಯೂ ಸಹ ಇಲ್ಲವಾಗಿದೆ. ಕೇಂದ್ರದಲ್ಲಿ ಮೂಲ ಸೌಲಭ್ಯವೇ ಇಲ್ಲದೇ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆ ಕಾಲವಾಗಿರುವುದರಿಂದ ಬಿಸಿಲಿನ ತಾಪಮಾನಕ್ಕೆ ರೈತರು ಬಳಲುವಂತಾಗಿದೆ.
ಪ್ರತಿದಿನ 70 ರೈತರು ರಾಗಿ ತರುವಂತೆ ಸೂಚನೆ: ತಾಲೂಕಿನ ಗದ್ದಿಗೆ ಮಠಕ್ಕೆ ತೆರಳುವ ರಸ್ತೆಯಲ್ಲಿ ರಾಗಿ ಖರೀದಿ ಕೇಂದ್ರ ಪ್ರಾರಂಭಿಸಲಾಗಿದ್ದು, ಪ್ರತಿದಿನ 70 ರೈತರು ರಾಗಿ ತರುವಂತೆ ಸೂಚಿಸಲಾಗಿದೆ. ಆದರೂ ಸಹ 100ಕ್ಕೂ ಹೆಚ್ಚು ರೈತರು ಬರುವುದರಿಂದ ಅವರಿಗೆ ಕ್ರಮ ಸಂಖ್ಯೆಯನ್ನು ನೀಡಲಾಗಿದೆ. ರೈತರಿಂದ ಪಹಣಿ, ಖಾತೆ ಸಂಖ್ಯೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ,ರಾಗಿಯನ್ನು ಖರೀದಿಸಿ ಅದನ್ನು ಆನ್ಲೈನ್ನಲ್ಲಿ ನಮೂದಿಸಲಾಗುತ್ತಿದೆ.
ವಾಹನಗಳ ಜೊತೆಯಲ್ಲಿ ರಾಗಿ ಮೂಟೆಗಳನ್ನು ತೆಗೆದುಕೊಂಡು ಒಬ್ಬ ರೈತರು ಮಾತ್ರ ಬರುವುದರಿಂದ ಅವರು ಮೂಟೆಗಳನ್ನು ತೂಕ ಮಾಡಿಸಿ, ಜೋಡಿಸಿಡಲು ಸಾಧ್ಯವಾಗುವುದಿಲ್ಲ ಎನ್ನುವ ಕಾರಣದಿಂದ ಕೂಲಿ ಕಾರ್ಮಿಕರನ್ನು ನೇಮಿಸಿಕೊಂಡಿದ್ದೇವೆ. ಇದರಿಂದ ಒಂದು ಮೂಟೆಗೆ ಇಂತಿಷ್ಟು ಎಂದು ಹಣವನ್ನು ಪಡೆಯಲಾಗುತ್ತಿದೆ ಎಂದು ಮಾಗಡಿ ಆಹಾರ ಇಲಾಖೆ ಅಧಿಕಾರಿ ಶ್ರೀಧರ್ ತಿಳಿಸಿದ್ದಾರೆ.
ರಾಗಿ ಖರೀದಿ ಕೇಂದ್ರದಲ್ಲಿ ಪ್ರತಿಯೊಂದು ಮೂಟೆಯನ್ನು ಜೋಡಿಸಲು ಹಣ ಪಡೆಯುತ್ತಿದ್ದು, 500 ಗ್ರಾಂ ರಾಗಿ ಹೆಚ್ಚಾಗಿ ತರುವಂತೆ ತಿಳಿಸಿದ್ದಾರೆ. ಇಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿಲ್ಲ. ರೈತರು ಊಟ, ತಿಂಡಿ, ಕಾಫಿ, ಟೀ ಕುಡಿಯಲು ಹಾಗೂ ಶೌಚಾಲಯಕ್ಕೆ ತೆರಳಲು ಪರದಾಡುವ ಸ್ಥಿತಿ ಇದೆ.
-ಹನುಮಂತ, ಹೊಸಹಳ್ಳಿ ರೈತ
ಪ್ರತಿದಿನ ನಿಗದಿಗಿಂತ ಹೆಚ್ಚಿನ ರೈತರು ಬರುತ್ತಿರುವುದರಿಂದ ತಮ್ಮ ಸರದಿಗಾಗಿ ಕಾಯುವ ಪರಿಸ್ಥಿತಿ ಇದೆ. ಎಷ್ಟೇ ರೈತರು ಬಂದರೂ ಸಹ ಅವರನ್ನು ಹಿಂದಕ್ಕೆ ಕಳುಹಿಸದೇ ಎಲ್ಲರಿಂದ ರಾಗಿಯನ್ನು ಖರೀದಿಸಲಾಗುತ್ತಿದೆ. ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಸಂಗ್ರಹಣಾ ಕೇಂದ್ರದಲ್ಲಿಯೇ ರಾಗಿಯ ತೂಕ ಕಡಿಮೆಯಾಗುವುದರಿಂದ ಒಂದು ಮೂಟೆಗೆ 500 ಗ್ರಾಂ ಹೆಚ್ಚು ತರುವಂತೆ ರೈತರಲ್ಲಿ ಮನವಿ ಮಾಡಲಾಗಿದೆ. ಖರೀದಿ ಕೇಂದ್ರದಲ್ಲಿ ರೈತರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ.
-ನಾಗರಾಜ್, ಖರೀದಿ ಕೇಂದ್ರದ ವ್ಯವಸ್ಥಾಪಕ
* ಕೆ.ಎಸ್.ಮಂಜುನಾಥ್ ಕುದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ