ಸುಧಾರಣೆ ಏಕೆ ಕೈ ಜಾರಿ ಹೋಗುತ್ತಿದೆ?


Team Udayavani, Jul 4, 2018, 8:24 AM IST

reforms.jpg

ನಾಲ್ಕು ದಶಕಗಳ ಹಿಂದಿನ ಹಸಿರು ಕ್ರಾಂತಿಯಿಂದ ಪ್ರಾರಂಭಗೊಂಡು ಇಂದಿನ ತನಕವೂ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಯ ನಿಟ್ಟಿನಲ್ಲಿ ನಮ್ಮ ದೃಷ್ಟಿಕೋನ ಹೆಚ್ಚು ಕಡಿಮೆ ಒಂದೇ ರೀತಿಯದ್ದಾಗಿದೆ. ಒಂದೇ ಉತ್ಪನ್ನವನ್ನು ಹೆಚ್ಚು ಹೆಚ್ಚು ಉತ್ಪಾದಿಸಲು ತಂತ್ರಜ್ಞಾನ ಬಹಳ ಸಹಕಾರಿ ಅನ್ನುವ ನಿಲುವನ್ನು ನಾವು ಬದಲಾಯಿಸಲೇ ಇಲ್ಲ. 

ಸುಧಾರಣೆ (Reform) ಅನ್ನುವ ಪದದ ವ್ಯಾಪಕತೆ ಮತ್ತು ಜನಪ್ರಿಯತೆ ಹಿಂದೆಂದಿಗಿಂತಲೂ ಇಂದು ಜಾಸ್ತಿ. ಪ್ರಸ್ತುತ ಸುಧಾರಣೆ ರಹಿತ ವಲಯವನ್ನು ಊಹಿಸಲಸಾಧ್ಯ. ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಕೌಟುಂಬಿಕ, ಆರ್ಥಿಕ, ತಾಂತ್ರಿಕ ಮತ್ತು ವಿದೇಶಿ ವಲಯಗಳಲ್ಲಿ ಈ ಪದದ ಬಳಕೆ ತೀರಾ ಸಾಮಾನ್ಯ. ಈ ವಲಯಗಳಲ್ಲಿ ಕಾಲಕಾಲಕ್ಕೆ ಕೈಗೊಳ್ಳುವ ಸುಧಾರಣೆಗಳು ಇಚ್ಛಿತ ಬದಲಾವಣೆ ಮತ್ತು ಫ‌ಲವನ್ನು ತಂದೇ ತರುತ್ತದೆ ಅನ್ನುವ ನಂಬಿಕೆ ನಮ್ಮೆಲ್ಲರಲ್ಲೂ ಇದೆ. ಇದರಲ್ಲಿ ಅತಿಶಯೋಕ್ತಿಯೇನಿಲ್ಲ. ಆದರೆ ಅದೆಷ್ಟೋ ಬಾರಿ ಬೃಹತ್‌ ಮೊತ್ತದ ಸುಧಾರಣೆಗಳನ್ನು ಕೈಗೊಂಡರೂ ಫ‌ಲಾನುಭವಿಗಳು ಇಷ್ಟಪಟ್ಟ ಬದಲಾವಣೆ, ಫ‌ಲಶ್ರುತಿ ತಲೆದೋರುವುದಿಲ್ಲ. ಹಾಗಾದರೆ ಕೈಗೊಂಡ ಸುಧಾರಣೆ ಎಲ್ಲಿ ಕೈಚೆಲ್ಲಿ ಹೋಯಿತು? ಸುಧಾರಣೆಯ ನೈಜ ಅರ್ಥ, ಸ್ವಭಾವ, ವ್ಯಾಪ್ತಿ ಮತ್ತು ಪರಿಣಾಮಗಳನ್ನು ಅರಿತುಕೊಳ್ಳುವುದರಲ್ಲಿ ನಾವೆಲ್ಲಿ ಎಡವಿದ್ದೇವೆ? ಇವೇ ಮೊದಲಾದ ಪ್ರಶ್ನೆಗಳು ಸುಧಾರಣೆಯ ಪರಿಣಾಮಗಳ ಕುರಿತು ಗಹನವಾಗಿ ಚಿಂತಿಸುವ ಜಿಜ್ಞಾಸುಗಳಿಗೆ ಕಾಡುತ್ತಲೇ ಇವೆ. ಈ ನಿಟ್ಟಿನಲ್ಲಿ ನಮ್ಮ ದೇಶದ ಪ್ರಸಿದ್ಧ ಚಿಂತಕರಾದ ಜಿಡ್ಡು ಕೃಷ್ಣಮೂರ್ತಿ ಅವರ ಮಾತನ್ನು ಕೇಳಲೇಬೇಕು. ಅವರು ಹೇಳುವಂತೆ ಸುಧಾರಣೆಗಳು ಬೇರೆ ಬೇರೆ ವಲಯಕ್ಕೆ ಸಂಬಂಧಿಸಿರಬಹುದು ನಿಜ. ಯಾವುದೇ ಸುಧಾರಣೆ ಸೂಕ್ತ ಪರಿಣಾಮ ಬೀರಲು ಆ ಸುಧಾರಣೆಯ ಜೊತೆ ಇನ್ನೂ ಹೆಚ್ಚಿನ ಸುಧಾರಣೆಗಳು ಕಾರ್ಯವೆಸಗುವುದು ಅನಿವಾರ್ಯ. ಈ ಚಿಂತನೆಯ ಆಧಾರದಲ್ಲಿ ಸುಧಾರಣೆಯ ನೈಜ ಅರ್ಥ, ಸ್ವಭಾವ, ವ್ಯಾಪ್ತಿ ಮತ್ತು ಪರಿಣಾಮಗಳನ್ನು ಉದಾಹರಣೆಗಳೊಂದಿಗೆ ವಿವರಿಸುವುದು ಈ ಲೇಖನದ ಮುಖ್ಯ ಉದ್ದೇಶ.

ಸುಧಾರಣೆ- ನೈಜ ವಾಖ್ಯಾನವೇನು?
ಸಾಮಾನ್ಯವಾಗಿ ಯಾವುದನ್ನಾದರೂ ಹೆಚ್ಚು ಅಥವಾ ಕಡಿಮೆ ಮಾಡುವ ಪ್ರಕ್ರಿಯೆ ಸುಧಾರಣೆ ಎಂದು ಕರೆಸಿಕೊಳ್ಳುವುದಿಲ್ಲ. ಆದರೆ ನಾವು ಎಷ್ಟೋ ಸಲ ಸುಧಾರಣೆಯನ್ನು ಯಾವುದನ್ನಾದರೂ ಹೆಚ್ಚು ಅಥವಾ ಕಡಿಮೆ ಮಾಡಲು ಬಳಸುವ ಅಸ್ತ್ರವನ್ನಾಗಿ ಬಳಸುತ್ತಲೇ ಇದ್ದೇವೆ. ಇದು ನಿಜಕ್ಕೂ ವಿಪರ್ಯಾಸವೇ ಸರಿ. ಮೂಲಭೂತವಾಗಿ ನೈಜ ಸುಧಾರಣೆ ವಿಭಿನ್ನ ಶೈಲಿಯಲ್ಲಿ ಕಾರ್ಯನಿರ್ವಹಿಸಿ ಬಯಸಿದ ಫ‌ಲವನ್ನೀಯುವ ಒಂದು ಪ್ರಕ್ರಿಯೆ. ಸುಧಾರಣೆಗೆ ಸಂಬಂಧಪಟ್ಟ ವ್ಯಾಖ್ಯಾನಗಳಲ್ಲಿ ಚಿಂತನೆಗಿಂತ ಅನುಷ್ಟಾನಕ್ಕೆ ಹೆಚ್ಚಿನ ಮಹತ್ವವಿದೆ. ಉದಾಹರಣೆಗಾಗಿ ಆಡಳಿತಾತ್ಮಕ ಬೆಲೆಗಳನ್ನು ಸಂಪೂರ್ಣವಾಗಿ ತ್ಯಜಿಸಿ ಮಾರುಕಟ್ಟೆ ಆಧಾರಿತ ಬೆಲೆಗಳ ಮೊರೆಹೋಗುವ ಪ್ರಕ್ರಿಯೆ ನಿಸ್ಸಂದೇಹವಾಗಿ ಸುಧಾರಣೆ ಎಂದು ಕರೆಯಲ್ಪಡುತ್ತದೆ. ಇದಕ್ಕೆ ಬದಲಾಗಿ ಸರಕಾರಿ ನಿಯಂತ್ರಿತ ಬೆಲೆಗಳನ್ನು ಹೆಚ್ಚು ಅಥವಾ ಕಡಿಮೆ ಮಾಡುವ ಧೋರಣೆ ಸುಧಾರಣೆಯಾಗುವುದಿಲ್ಲ. ಒಂದು ಮಾತು ನಿಜ, ಸುಧಾರಣೆಗೆ ಸಂಬಂಧಿಸಿದ ವ್ಯಾಖ್ಯಾನದಲ್ಲೇ ಸುಧಾರಣೆಯ ನೇರ ಪರಿಣಾಮವೂ ಆಡಗಿದೆ ಅನ್ನುವುದನ್ನು ನಾವು ಮನಗಾಣಲೇಬೇಕು. 

ಗ್ರಾಮೀಣ ಸುಧಾರಣೆ- ಎಲ್ಲಿ ಎಡವಿದ್ದೇವೆ? 
 ಇತ್ತೀಚಿನ ಅಂಕಿಅಂಶಗಳ ಪ್ರಕಾರ ನಮ್ಮ ದೇಶ ಸ್ಪಷ್ಟವಾಗಿ ಅಭಿವೃದ್ಧಿಹೊಂದುತ್ತಿರುವುದು ಕಂಡು ಬರುತ್ತಿದೆ. ಆದರೆ ನಮ್ಮ ಗ್ರಾಮೀಣ ವಲಯ ದೇಶದ ಅಭಿವೃದ್ಧಿ ಜೊತೆ ಸರಿಯಾದ ಹೆಜ್ಜೆಯನ್ನು ಇಡುತ್ತಿಲ್ಲ. ಹಾಗೆಯೇ ನಮ್ಮ ಗ್ರಾಮೀಣ ಜನತೆಯ ಅಸಂತೃಪ್ತಿಗೆ ಅವರ ಆದಾಯದ ಕೊರತೆಯೇ ಮೂಲಕಾರಣ ಅನ್ನುವುದು ಬಹಿರಂಗ ಸತ್ಯ. ಈ ಸಮಸ್ಯೆಯನ್ನು ನಿವಾರಿಸಲು ಗ್ರಾಮೀಣ ಜನತೆಯ ಆದಾಯವನ್ನು ವೃದ್ಧಿಸುವ ಸುಧಾರ ಣೆಗಳನ್ನು ಕೈಗೊಂಡು ಅವುಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಬೇಕು. ಅಂದರೆ ನಮ್ಮ ದೇಶದ ಗ್ರಾಮೀಣ ಸುಧಾರಣೆಯ ಮುಖ್ಯ ಉದ್ದೇಶ ಗ್ರಾಮೀಣ ಜನತೆಯ ಆದಾಯ ವೃದ್ಧಿಸುವಿಕೆಯೇ ಹೊರತು ಬೇರೇನಲ್ಲ. ಇನ್ನಿತರ ವಲಯಗಳಾದ ಆರೋಗ್ಯ, ಶಿಕ್ಷಣ, ಸಾರಿಗೆ ಸಂಪರ್ಕ ಮತ್ತು ತಂತ್ರಜ್ಞಾನ, ಗ್ರಾಮೀಣ ಜನತೆಯ ಆದಾಯ ವೃದ್ಧಿಸುವ ನಿಟ್ಟಿನಲ್ಲಿ ಪೂರಕ ಅಂಶಗಳಾಗಿ ನಿರಂತರ ಕಾರ್ಯವೆಸಗಬೇಕು. 

ಕೃಷಿ ಗ್ರಾಮೀಣ ಬದುಕಿನ ಜೀವಾಳ. ಮಳೆಯಿಲ್ಲದೆ ಕೃಷಿಯಿಲ್ಲ. ಈ ಬಾರಿಯ ಮುಂಗಾರು ಹರ್ಷದಾಯಕವಾಗಿಯೇ ಸಾಗುತ್ತಲಿದೆ. ಅಧಿಕ ಇಳುವರಿ, ಪರಿಣಾಮಕಾರಿ ಬೇಡಿಕೆ, ಸೂಕ್ತ ಬೆಲೆ, ಆದಾಯ ವೃದ್ಧಿಗೆ ನೆರವಾಗುವ ಅಂಶಗಳು ಹೌದು. ಅಧಿಕ ಇಳುವರಿ, ಉತ್ಪಾದಕತೆಗೆ ಸಂಬಂಧಿಸಿ ಸುಧಾರಣೆ ಹೇಗಿರಬೇಕು? ಇದು ಬಹಳ ಮುಖ್ಯ ಪ್ರಶ್ನೆ. ಬಹುತೇಕ ಉತ್ಪನ್ನಗಳಿಗಾಗಿ ಅತ್ಯಧಿಕ ಕಚ್ಚಾವಸ್ತುಗಳ ಬಳಕೆ ಅನ್ನುವ ಸಿದ್ಧಾಂತದಿಂದ ನಾವು ಮೊದಲು ಹೊರಬರಬೇಕು. ಬದಲಾಗಿ ಸೂಕ್ತ ಕಚ್ಚಾವಸ್ತುಗಳ ಸಮಂಜಸ ಸದ್ಬಳಕೆಯಿಂದ ಗರಿಷ್ಟ ಪ್ರಮಾಣದ ಉತ್ಪಾದನೆಯತ್ತ ಸುಧಾರಣೆ ಕೇಂದ್ರೀಕರಿಸಬೇಕು. ಹಾಗೆಯೇ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಬಳಸುವ ನಿಟ್ಟಿನಲ್ಲಿ ಸಾಕಷ್ಟು ಸುಧಾರಣೆಯಾಗಬೇಕು. ನಾಲ್ಕು ದಶಕಗಳ ಹಿಂದಿನ ಹಸಿರು ಕ್ರಾಂತಿಯಿಂದ ಪ್ರಾರಂಭಗೊಂಡು ಇಂದಿನ ತನಕವೂ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಯ ನಿಟ್ಟಿನಲ್ಲಿ ನಮ್ಮ ದೃಷ್ಟಿಕೋನ ಹೆಚ್ಚು ಕಡಿಮೆ ಒಂದೇ ರೀತಿಯದ್ದಾಗಿದೆ. ಒಂದೇ ಉತ್ಪನ್ನವನ್ನು ಹೆಚ್ಚು ಹೆಚ್ಚು ಉತ್ಪಾದಿಸಲು ತಂತ್ರಜ್ಞಾನ ಬಹಳ ಸಹಕಾರಿ ಅನ್ನುವ ನಿಲುವನ್ನು ನಾವು ಬದಲಾಯಿಸಲೇ ಇಲ್ಲ. ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ನಿರ್ದಿಷ್ಟ ಮತ್ತು ವ್ಯಾಪಕ ಬಳಕೆಯತ್ತ ಸುಧಾರಣೆ ರೂಪಿಸಬೇಕು. ಉದಾಹರಣೆಗೆ ಸಾಕಷ್ಟು ವಿರೋಧಗಳಿದ್ದರೂ ಜೈವಿಕವಾಗಿ ಮಾರ್ಪಾಟು ಮಾಡಿದ ಬಿಟಿ ಹತ್ತಿಯನ್ನು ನಾವು ಸ್ವೀಕಾರ ಮಾಡಿರುವುದು ಒಂದು ನೈಜ ಸುಧಾರಣೆ ಅನ್ನುವುದರಲ್ಲಿ ಎರಡು ಮಾತಿಲ್ಲ. 

ಈಗಿನ ಪರಿಸ್ಥಿತಿಯಲ್ಲಿ ದೇಶದ ಅಭಿವೃದ್ಧಿಯನ್ನು ಇನ್ನೂ ವ್ಯಾಪಕಗೊಳಿಸಿ, ಗ್ರಾಮೀಣ ಅನುಭೋಗವನ್ನು ಹೆಚ್ಚಿಸುವಲ್ಲಿ ಆದಾಯ ಮತ್ತು ಬೆಲೆ ಪರಿಹಾರಗಳನ್ನು ನಮ್ಮ ರೈತಾಪಿ ಜನತೆಗೆ ಶೀಘ್ರವಾಗಿ ಒದಗಿಸುವತ್ತ ಸುಧಾರಣೆಯ ಅನಿವಾರ್ಯತೆ ಇದೆ. ಮಾರುಕಟ್ಟೆ ಬೆಲೆಗಳು, ಕನಿಷ್ಟ ಬೆಂಬಲ ಬೆಲೆಗಳು, ಹಣದುಬ್ಬರ ಮತ್ತು ಒಟ್ಟಾರೆ ಮುಂಗಾರಿನ ಪರಿಸ್ಥಿತಿಯನ್ನು ಸಮಗ್ರವಾಗಿ ಅವಲೋಕಿಸಿ ಸುಧಾರಣೆಯನ್ನು ಅನುಷ್ಟಾನಗೊಳಿಸಬೇಕು. ಇಲ್ಲಿ ಇನ್ನೊಂದು ವಿಚಾರ ಮುಖ್ಯ, ನಗರ ಕೇಂದ್ರಿತ ಸಾರಿಗೆ ಸಂಪರ್ಕ ಅಭಿವೃದ್ಧಿಯಿಂದ ಪ್ರಯೋಜನಗಳು ಮೇಲಿನ ಸ್ತರದಿಂದ ಕೆಳಮುಖವಾಗಿ ಪಸರಿಸಿದರೆ, ಗ್ರಾಮೀಣ ಅಭಿವೃದ್ಧಿಯ ಪ್ರಯೋಜನಗಳು ಕೆಳಸ್ತರದಿಂದ ಮೇಲ್ಮುಖವಾಗಿ ಪಸರಿಸುತ್ತದೆ ಅನ್ನುವ ವಾಸ್ತವವನ್ನು ಸುಧಾರಣೆಗಳು ಪ್ರತಿಪಾದಿಸಬೇಕು. 

ಶಿಕ್ಷಣದಲ್ಲಿ ಸುಧಾರಣೆ -ಹೇಗಿರಬೇಕು? 
ಶಿಕ್ಷಣದ ಮಹತ್ವಕ್ಕೆ ಸಂಬಂಧಿಸಿ ವಿಶ್ವವಿಖ್ಯಾತ ನಾಯಕರಾದ ನೆಲ್ಸನ್‌ ಮಂಡೆಲಾ ಒಮ್ಮೆ ಹೀಗೆ ಹೇಳಿದ್ದರು, “ಗುಲಾಮಗಿರಿ ಮತ್ತು ವರ್ಣಬೇಧ ನೀತಿಯಂತೆ, ದಾರಿದ್ರÂ ಸ್ವಾಭಾವಿಕವಲ್ಲ. ಅದು ಮಾನವ ನಿರ್ಮಿತ. ಮನುಷ್ಯನ ಕ್ರಿಯಾಶಕ್ತಿಯಿಂದ ಈ ಸಮಸ್ಯೆಗಳನ್ನು ನಿರ್ಮೂಲನ ಮಾಡಬಹುದು. ವ್ಯಕ್ತಿಯ ಸುಸ್ಥಿರ ಕ್ರಿಯಾಶೀಲತೆ ಶಿಕ್ಷಣದಿಂದ ಸಾಧ್ಯ’. ಕೇಂದ್ರ ಸರಕಾರ ಶಿಕ್ಷಣ ಕ್ಷೇತ್ರದಲ್ಲಿ, ಅದರಲ್ಲೂ ಮುಖ್ಯವಾಗಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳನ್ನು ಜಾರಿಗೊಳಿಸುತ್ತಲೇ ಇದೆ. ಕೌಶಲಾಭಿವೃದ್ಧಿಗೆಂದೇ ಮೀಸಲಿಟ್ಟ ಪ್ರತ್ಯೇಕ ಸಚಿವಾಲಯ ಒಂದು ಉತ್ತಮ ಬೆಳವಣಿಗೆ. ಆದರೆ ಕೌಶಲ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಬಿಕ್ಕಟ್ಟು ಇಂದಿಗೂ ಕಗ್ಗಂಟಾಗಿಯೇ ಉಳಿದಿದೆ. ಈ ದಿಸೆಯಲ್ಲಿ ಬಹಳ ವ್ಯವಸ್ಥಿತ ಸುಧಾರಣೆ ಅನಿವಾರ್ಯ. ವಿದ್ಯಾರ್ಥಿಯ ಕಲಿಕೆಗೆ ಸಂಬಂಧಿಸಿದ ಪ್ರತಿ ವಿಚಾರ ವ್ಯವಸ್ಥಿತ ಸುಧಾರಣೆಯಲ್ಲಿ ಸೇರ್ಪಡೆಗೊಳ್ಳಬೇಕು. ಕೃತಕ ಮೇಧಾಶಕ್ತಿ, ಯಂತ್ರ ಕಲಿಕೆ ಅನ್ನುವ ಹೊಸ ಜಗತ್ತಿನಲ್ಲಿ ನಾವಿದ್ದೇವೆ. ಈ ಹೊಸ ಜಗತ್ತನ್ನು ಅರಿತು ಯಶಸ್ಸು ಹೊಂದಲು ಮೂರು ಪ್ರಮುಖ ಕೌಶಲಗಳಾದ ಬರವಣಿಗೆ, ಓದುವಿಕೆ ಮತ್ತು ಗಣಿತದಲ್ಲಿ ನಮ್ಮ ವಿದ್ಯಾರ್ಥಿಗಳು ಪ್ರೌಢಿಮೆ ಹೊಂದುವುದರ ಜೊತೆಗೆ ಪ್ರೌಢ ಕೌಶಲಗಳೆಂದು ಪರಿಗಣಿಸಲ್ಪಟ್ಟ ಮಾನವೀಯ ಸಂಬಂಧಗಳು, ಸೃಜನಶೀಲತೆ, ಯೋಜನೆ, ನಾಯಕತ್ವ ಇವೇ ಮೊದಲಾದ ಕೌಶಲಗಳ ಮೇಲೂ ನಮ್ಮ ಯುವ ಪೀಳಿಗೆ ಹಿಡಿತ ಸಾಧಿಸುವುದು ಅಷ್ಟೇ ಮುಖ್ಯ. 

ಕಲಿಕೆಗೆ ಪ್ರಾಮುಖ್ಯತೆ ನೀಡದೆ ಕೌಶಲಾಭಿವೃದ್ಧಿ ಅಸಾಧ್ಯ. ಆದರೆ ನಮ್ಮ ಶಾಲಾ ಕಾಲೇಜುಗಳ ಪಠ್ಯ ಇನ್ನೂ ಸಹ ತಿಳಿವಳಿಕೆಗೆ ಮಹತ್ವವನ್ನು ನೀಡುತ್ತದೆಯೇ ಹೊರತು ಕಲಿಕೆಗೆ ಆದ್ಯತೆ ನೀಡುತ್ತಿಲ್ಲ. ಕಲಿಕಾ ಪ್ರವೃತ್ತಿ ಉದ್ಭವಿಸುವುದು ಮಾನವ ಮೆದುಳಿನಲ್ಲಿ. ಮೆದುಳಿನ ಪ್ರಮುಖ ಅಂಗಗಳಾದ ಅಮಿಗಾxಲ ಮತ್ತು ಹಿಪ್ಪೊಕೊಂಪಸ್‌ಗಳ ನಡುವೆ ಗರಿಷ್ಠ ಹೊಂದಾಣಿಕೆ ಏರ್ಪಟ್ಟರೆ ಕಲಿಕಾ ಪರಿಣಾಮವೂ ಅತ್ಯುತ್ತಮವಾಗಿರುತ್ತದೆ.

ಈ ಬಗ್ಗೆ ಸಾಕಷ್ಟು ಸಂಶೋಧನಾ ಲೇಖನಗಳು ಪ್ರಕಟಗೊಳ್ಳುತ್ತಲೇ ಇವೆ. ವಿದ್ಯಾರ್ಥಿಗಳಲ್ಲಿ ಕಲಿಕಾ ಮನೋಭಾವವನ್ನು ಉತ್ತೇಜಿಸಲು ಈ ಲೇಖನಗಳ ಸಾರ ಸಂಗ್ರಹವನ್ನು ಅರಿತು ಶಿಕ್ಷಕರಾದ ನಾವು ನಮ್ಮ ವಿದ್ಯಾರ್ಥಿಗಳಿಗೆ ಮನದಟ್ಟುಮಾಡಬೇಕು. ಅದೇ ರೀತಿ ಮೆದುಳಾಧಾರಿತ ಕಲಿಕೆ (Brain based learning) ವಿದ್ಯಾರ್ಥಿಗಳಲ್ಲಿ ಕಲಿಕೆಯ ಪರಿಣಾಮ ಹೆಚ್ಚಿಸುವತ್ತ ಸಹಕಾರಿಯಾಗಬಹುದು. ಪ್ರತಿ ಕಲಿಕಾ ಹಂತದಲ್ಲೂ ಇದು ಒಂದು ಪಠ್ಯವಾಗಬೇಕು. ಈ ನಿಟ್ಟಿನಲ್ಲಿ ತಜ್ಞ ವೈದ್ಯರ ಸಲಹೆಗಳು ಹೆಚ್ಚು ಸಹಕಾರಿ. ಶಿಕ್ಷಣ ಕ್ಷೇತ್ರದಲ್ಲಿನ ಸುಧಾರಣೆಗಳು ಈ ನವಿರಾದ ಅಂಶಗಳನ್ನು ಸೇರ್ಪಡೆಗೊಳಿಸಿ ರೂಪುಗೊಳ್ಳಬೇಕು. 

ಕಲಿಕೆಯಿಂದ ಗಳಿಸಿದ ಫ‌ಲಿತಾಂಶವನ್ನು ಕ್ರಿಯಾಶಕ್ತಿಯನ್ನಾಗಿಸಿ, ಆ ಕ್ರಿಯಾಶಕ್ತಿಯಿಂದ ಆವಿಷ್ಕಾರಗಳನ್ನು ಕೈಗೊಂಡು ದೇಶ ಸರ್ವತೋಮುಖ ಪ್ರಗತಿ ಸಾಧಿಸಬಹುದು ಎಂದು ಜಾಗತಿಕ ಬ್ಯಾಂಕ್‌ ಇತ್ತೀಚೆಗೆ ವರದಿ ಮಾಡಿದೆ. ಶಿಕ್ಷಣ ಹಕ್ಕು ಕಲಿಕಾ ಹಕ್ಕಾಗಿ ಬದಲಾದರೆ ಇವೆಲ್ಲವೂ ಸುಗಮ ಸಾಧ್ಯ.

– ಡಾ| ಸುಧೀರ್‌ ರಾಜ್‌ ಕೆ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.