ಶಿಕ್ಷಕರನ್ನು ಬಲಿಪಶು ಮಾಡದಿರಿ
Team Udayavani, Jul 13, 2018, 9:47 AM IST
ಮೊಬೈಲ್, ಐ ಪ್ಯಾಡ್, ವಾಟ್ಸ್ಆ್ಯಪ್ಗ್ಳಲ್ಲಿ ಮೈಮರೆಯುವ ಇಂದಿನ ದಿನಮಾನಗಳಲ್ಲಿ ಮಕ್ಕಳ ಏಕಾಗ್ರತೆ ಕುರಿತು ಹೇಳಬೇಕಾದ್ದಿಲ್ಲ. ಅವರ ಪರೀಕ್ಷೆಗಳಲ್ಲಿನ ಅಂಕ, ಗ್ರೇಡ್, ದರ್ಜೆ ಬಗ್ಗೆ ಬೋಧಕರ ಮೇಲೆ ಅತೀವ ಒತ್ತಡ ಹೇರುವುದು ಸಲ್ಲದು. ಒಂದು ವಿಷಯದ ಫಲಿತಾಂಶವನ್ನು ಇನ್ನೊಂದಕ್ಕೆ ಹೋಲಿಸುವುದು ಅಷ್ಟೇ ಅರ್ಥಹೀನ. ನಿದರ್ಶನವಾಗಿ ಗಣಿತ, ರಸಾಯನ ಶಾಸ್ತ್ರದ ಫಲಿತಾಂಶವನ್ನು ಭಾಷಾ ವಿಷಯಕ್ಕೆ ಹೋಲಿಸುವುದು ಸರಿಯಲ್ಲ.
ಕಳೆದ ಐದು ವರ್ಷಗಳಲ್ಲಿ ಯಾವ ಶಾಲೆ/ಕಾಲೇಜಿನ ಪರೀಕ್ಷಾ ಫಲಿತಾಂಶವು ಆಯಾ ಜಿಲ್ಲೆಯ ಸರಾಸರಿ ಫಲಿತಾಂಶಕ್ಕಿಂತ ಕಡಿಮೆ ಇರುವುದೋ ಅಲ್ಲಿಯ ಸಿಬ್ಬಂದಿಯ ಜೂನ್ ತಿಂಗಳ ವೇತನ ತಡೆಹಿಡಿಯುವ ಆದೇಶವನ್ನು ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ ಹೊರಡಿಸಿದೆ. ಫಲಿತಾಂಶದ ಕೊರತೆಗೆ ವಾಸ್ತವ ಕಾರಣಗಳನ್ನು ಸಮರ್ಪಕವಾಗಿ ವಿಶ್ಲೇಷಿಸದೆ ಶಿಕ್ಷಕರನ್ನೇ ಏಕಾಏಕಿ ಕಟಕಟೆಯಲ್ಲಿ ನಿಲ್ಲಿಸುವ ಈ ನಿಲುವು ಅವೈಜ್ಞಾನಿಕ. ಪೋಷಕರು ತಮ್ಮ ಮಕ್ಕಳ ಹೊರತಾಗಿ ಬೇರೆ ಯಾರೂ ಬುದ್ಧಿವಂತರೆ ಇಲ್ಲ ಎಂದು ಭ್ರಮಿಸಬಾರದು. “ಹೆತ್ತವರಿಗೆ ಹೆಗ್ಗಣ ಮುದ್ದು’ ಗಾದೆಯೇ ಇದೆ ಸರಿ. ಆದರೆ ಇಂಥ ಮೇಲರಿಮೆ ಮಕ್ಕಳ ಏಳಿಗೆಗೆ ತಡೆಯೊಡ್ಡುತ್ತದೆ. ನಾನು ಗಣಿತ ಉಪನ್ಯಾಸಕನಾಗಿದ್ದಾಗಿನ ಪ್ರಸಂಗವೊಂದನ್ನು ನಿಮ್ಮ ಮುಂದಿಡಬಯಸುತ್ತೇನೆ.
ಆಗಷ್ಟೇ ದ್ವಿತೀಯ ಪಿ.ಯು.ಸಿ. ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಬಂದಿತ್ತು. ಪರೀಕ್ಷೆ ಎದುರಿಸಿದ ಬಾಲಕನ ತಂದೆ ನನ್ನ ಬಳಿ ಬಂದು “”ಸಾರ್, ನನ್ನ ಮಗ ಗಣಿತದಲ್ಲಿ ಫೇಲಾಗಿದ್ದಾನೆ. ಅವನು ಎಸ್.ಎಸ್.ಎಲ್.ಸಿ.ಯಲ್ಲಿ ನೂರಕ್ಕೆ ಎಪ್ಪತ್ತೆಂಟು ತೆಗೆದುಕೊಂಡಿದ್ದ. ಇಗೋ ನೋಡಿ ಅವನ ಎರಡೂ ಅಂಕಪಟ್ಟಿ ಪ್ರತಿಗಳು. ಇದೇನ್ಸಾರ್ ಏಕಾಏಕಿ ನಲವತ್ತೆ„ದು ಕಡಿಮೆಯಾಗೋದಾ?” ಎಂದರು! ಅವರಿಗೆ ಏನು ಹೇಳಬೇಕೆನ್ನುವುದೇ ನನಗೆ ತಿಳಿಯದಾಯ್ತು. “”ನಿಧಾನವಾಗಿ ಮಾತಾಡೋಣ, ಸ್ಟಾಫ್ ರೂಮಿಗೆ ಬನ್ನಿ” ಎಂದೆ. ಅಂತೂ ನನ್ನ ಸಹೋದ್ಯೋಗಿಗಳೊಂದಿಗೆ ಸೇರಿ ಬೋಧನೆ, ಬೋಧಕರ ಇತಿಮಿತಿಗಳನ್ನು ಅವರಿಗೆ ವಿವರಿಸಿದ್ದಾಯಿತು. ನಿಜವೆ, ಮಾಸ್ತರು ಮಕ್ಕಳಿಗೆ ಚೆನ್ನಾಗಿ ಪಾಠ ಹೇಳಿಕೊಡಬೇಕು. ಅವರಿಗೆ ಅರ್ಥವಾಗದ್ದನ್ನು ಮತ್ತೆ ಮತ್ತೆ ವಿವರಿಸಿ ಮನದಟ್ಟಾಗಿಸಬೇಕು. ಇದರಲ್ಲಿ ಎರಡು ಮಾತಿಲ್ಲ. ಪರೀಕ್ಷಾ ಫಲಿತಾಂಶದ ನಿಟ್ಟಿನಲ್ಲಿ ನಾವು ಹಲವು ಅಂಶಗಳನ್ನು ಪರಿಗಣಿಸಬೇಕು. ಎಲ್ಲ ವಿದ್ಯಾರ್ಥಿಗಳ ಶ್ರದ್ಧೆ, ಆಸಕ್ತಿ, ಗ್ರಹಣ ಚಾತುರ್ಯ ಒಂದೇ ತೆರನಾಗಿರುವುದಿಲ್ಲ. ತರಗತಿಯಲ್ಲಿ ಭೌತಿಕವಾಗಷ್ಟೆ ಕೂರುವರಿರುತ್ತಾರೆ. ಅವರ ಮನಸ್ಸು ಪಾಠ, ಪ್ರವಚನದ ಮೇಲಿರದೆ ಬೇರೆಲ್ಲೋ ಇರುತ್ತದೆ. ಮೂಲತಃ ಮಕ್ಕಳನ್ನು ತರಗತಿಯಲ್ಲಿ ಶಿಸ್ತಿನಿಂದ ಕೂರಿಸಿಕೊಳ್ಳುವುದೇ ಶಿಕ್ಷಕರ ಪಾಲಿಗೆ ದೊಡ್ಡ ಸವಾಲು. ಒಂದಲ್ಲೊಂದು ಕುಚೋದ್ಯ, ಗೌಜು ಗದ್ದಲದಲ್ಲಿ ತೊಡಗಿರುತ್ತಾರೆ. ಖಂಡಿತವಾಗಿಯೂ ಇದಕ್ಕೆ ಅಪವಾದವಿದೆ. ಒಂದರ್ಥದಲ್ಲಿ ಮನೆಯಲ್ಲಿ ತಂದೆ, ತಾಯಿ ಕಲಿಸಲಾಗದ ಶಿಸ್ತನ್ನು ಶಿಕ್ಷಕರು ಮಕ್ಕಳಿಗೆ ಹೇಳಿಕೊಡಬೇಕಾದಂಥ ಪರಿಸ್ಥಿತಿ. ಕೊಂಚ ಸಹನೆ ತಪ್ಪಿದರೂ “ಹೊಡೆದರು, ನಿಂದಿಸಿದರು’ ಮುಂತಾಗಿ ಗುರುವರ್ಯರ ಮೇಲೆ ಪೋಷಕರ ದೂರು. ವಿದ್ಯಾರ್ಥಿಗಳು ಕಿಡಿಗೇಡಿತನ ಮೆರೆದಿರುತ್ತಾರೆನ್ನಿ. ಶಿಕ್ಷಕರು ತಾಳ್ಮೆಗೆಟ್ಟು ಆವೇಶದಲ್ಲಿ ಆಡಿದ ಮಾತಿಗೆ ಅವರೇ ಕ್ಷಮೆ ಯಾಚಿಸಬೇಕಾದ ಸನ್ನಿವೇಶಗಳು ಎದುರಾಗುತ್ತವೆ!
ಒಂದು ತರಗತಿಯಲ್ಲಿ ಎಪ್ಪತ್ತು ವಿದ್ಯಾರ್ಥಿಗಳಿದ್ದರೆ ಅವರಿಗೆಲ್ಲ ಬೋಧನೆ ಒಂದೇ ತಾನೇ? ಆದರೂ ಏಕೆ ಎಲ್ಲ ವಿದ್ಯಾರ್ಥಿಗಳೂ ಪರೀಕ್ಷೆಯಲ್ಲಿ ಒಂದೇ ಅಂಕ ಪಡೆಯುವುದಿಲ್ಲ? ಉತ್ತರ ಸ್ಪಷ್ಟವಿದೆ. ಮಕ್ಕಳ ಕಲಿಕಾ ಸಾಮರ್ಥ್ಯ ಬೇರೆ ಬೇರೆಯೇ. ಅವರ ಜಾಣ್ಮೆ, ಬುಧ್ಯಂಕ(ಐ.ಕ್ಯೂ.) ಭಿನ್ನ ಭಿನ್ನ. ನಿಸ್ಸಂದೇಹವಾಗಿ ಶಿಕ್ಷಕ ವೃಂದ ಪರಿಶ್ರಮಪಟ್ಟು ಪೂರ್ವತಯಾರಿ ನಡೆಸಿ ಆಯಾ ವಿಷಯವನ್ನು ಅಧ್ಯಯನ ಮಾಡಬೇಕು. ತರಗತಿಯಲ್ಲಿ ಸಮರ್ಥವಾಗಿ ಬೋಧಿಸಬೇಕು ಸರಿಯೆ. ಕುದುರೆಯನ್ನು ನೀರಿನ ತನಕ ಒಯ್ಯಬಹುದು, ಆದರೆ ನೀರು ಸೇವಿಸಬೇಕಾದ್ದು ಕುದುರೆಯೇ. ದವಸ, ಧಾನ್ಯ, ಹಣ್ಣು ಹಂಪಲು ಅಥವಾ ನೋಟ್ ಬುಕ್ ವಿತರಿಸಿದಂತೆ ಪಠ್ಯದ ಭಾಗಗಳನ್ನು ಮಕ್ಕಳಿಗೆ ಸಲ್ಲಿಸಲಾಗದು. ವಿವರಿಸುವ ಪಾಠ ಮಕ್ಕಳನ್ನು ಮುಟ್ಟುವುದು, ಪ್ರಭಾವಿಸುವುದು ಪರೋಕ್ಷವಾಗಿಯೇ. ಅದರಲ್ಲೂ ಮಕ್ಕಳು ಮೊಬೈಲ್, ಐ ಪ್ಯಾಡ್, ವಾಟ್ಸ್ ಆ್ಯಪ್ಗ್ಳಲ್ಲಿ ಮೈಮರೆಯುವ ಇಂದಿನ ದಿನಮಾನಗಳಲ್ಲಿ ಮಕ್ಕಳ ಏಕಾಗ್ರತೆ ಕುರಿತು ಹೇಳಬೇಕಾದ್ದಿಲ್ಲ. ಮಕ್ಕಳ ಪರೀಕ್ಷೆಗಳಲ್ಲಿನ ಅಂಕ, ಗ್ರೇಡ್, ದರ್ಜೆ ಬಗ್ಗೆ ಬೋಧಕರ ಮೇಲೆ ಅತೀವ ಒತ್ತಡ ಹೇರುವುದು ಸಲ್ಲದು. ಒಂದು ವಿಷಯದ ಫಲಿತಾಂಶವನ್ನು ಇನ್ನೊಂದಕ್ಕೆ ಹೋಲಿಸುವುದು ಅಷ್ಟೇ ಅರ್ಥಹೀನ. ನಿದರ್ಶನವಾಗಿ ಗಣಿತ ಅಥವಾ ರಸಾಯನ ಶಾಸ್ತ್ರದ ಫಲಿತಾಂಶವನ್ನು ಭಾಷಾ ವಿಷಯಕ್ಕೆ ಹೋಲಿಸುವುದು ಸರಿಯಲ್ಲ. ಶಿಕ್ಷಕರು ಮಾರ್ಗದರ್ಶಕರೇ ಹೊರತು ಅವರೇ ಪರೀಕ್ಷೆಯಲ್ಲಿ ಕೂತು ಬರೆಯಲಗುತ್ತದೇನು? ಸಮಸ್ಯೆ ಯಾವಾಗ ಉದ್ಭವಿಸುವುದೆಂದರೆ ಶಿಕ್ಷಕರು ಆಳವಾದ ಜಾನ, ಸಂವಹನ ಪ್ರತಿಭೆ ಹೊಂದಿಲ್ಲದಿದ್ದಾಗ. ಅಂಥ ಸಂದರ್ಭಗಳಲ್ಲೂ ತಮ್ಮ ವಿವೇಚನೆಯಿಂದ ಸ್ವತಃ ಪಾಠವನ್ನು ಓದಿಕೊಳ್ಳುವ ವಿದ್ಯಾರ್ಥಿಗಳಿಗೆ ಕೊರತೆಯಿಲ್ಲ. ವಿದ್ಯಾರ್ಜನೆ ಎಂದರೆ ವಿದ್ಯೆಯನ್ನು ಅರ್ಜಿಸುವುದು ಎಂದೇ ಅರ್ಥ. ಏಕಲವ್ಯನ ದೃಷ್ಟಾಂತ ಯಾರಿಗೆ ತಾನೆ ತಿಳಿದಿಲ್ಲ? ಗುರುವರ್ಯ ದ್ರೋಣಾಚಾರ್ಯರ ಪುತ್ಥಳಿ ನಿರ್ಮಿಸಿ ಆತ ಶ್ರದ್ಧಾಸಕ್ತಿಯಿಂದಲೇ ಬಿಲ್ಲು ವಿದ್ಯೆ ಅಭ್ಯಸಿಸಿ ಪರಾಕ್ರಮಿಯಾದ. ಇದು ಪುರಾಣ, ಕಥೆಯೆಂದರೂ ಪರಿಕಲ್ಪನೆ ಅದೆಷ್ಟು ಅದ್ಭುತವಲ್ಲವೇ? ಈಜೋಪಾಸಕ ನೀರಿಗಿಳಿದು ಯುಕ್ತವಾಗಿ ಕೈ ಕಾಲು ಬಡಿಯದಿದ್ದರೆ ಈಜು ಕಲಿಸುವ ಮಾಸ್ತರು ತಾನೆ ಏನು ಮಾಡಬಲ್ಲರು?! ಬೈಸಿಕಲ್ ಮೇಲೆ ಸವಾರಿ ಕಲಿಸುವವ, ಕಲಿಯುವಾಕಾಂಕ್ಷಿ ನೆಲದ ಮೇಲೆ ಇದ್ದಷ್ಟೇ ಹಾಸ್ಯಾಸ್ಪದ ಇದು.
ಒಂದು ಸ್ವಾರಸ್ಯಕರ ಪ್ರಸಂಗ ನೆನಪಾಗುತ್ತದೆ. ಆ ಪ್ರೌಢಶಾಲೆಯಲ್ಲಿ ಹೊಸದಾಗಿ ಮಾಸ್ತರರೊಬ್ಬರು ನೇಮಕಗೊಂಡಿದ್ದರು. ಅವರು ಕರ್ತವ್ಯಕ್ಕೆ ಹಾಜರಾದ ಮೊದಲ ದಿನ ಮುಖ್ಯೋಪಾಧ್ಯಾಯರು “”ತರಗತಿ ತೆಗೆದುಕೊಳ್ಳಲು ಅಭ್ಯಸಿಸಿ ಬಂದಿದ್ದೀರಿ ತಾನೇ?” ಎಂದು ಪ್ರಶ್ನಿಸಿದರು. ಮಾಸ್ತರರ ಪ್ರತಿಕ್ರಿಯೆ ಅನಿರೀಕ್ಷಿತವಾಗಿತ್ತು: “”ಇಲ್ಲ, ಎರಡು ದಿನ ವಿದ್ಯಾರ್ಥಿಗಳನ್ನು ಅಭ್ಯಸಿಸುತ್ತೇನೆ…ನಂತರವಷ್ಟೆ ನನ್ನ ಪಾಠ ಶುರು.” ಬೋಧನೆಯ ಕೈಂಕರ್ಯಕ್ಕೆ ವಿದ್ಯಾರ್ಥಿಗಳ ಸಹಭಾಗಿತ್ವ ಎಷ್ಟು ಮಹತ್ವದ್ದೆನ್ನಲಿಕ್ಕೆ ಇದೊಂದು ಉದಾಹರಣೆ. ಬೋಧನೆಯ ಗುರಿ ಮಗುವಿನಲ್ಲಿರುವ ವ್ಯಕ್ತಿಯನ್ನು ಹೊರತೆಗೆಯುವುದು. ಅದಕ್ಕೆ ಈಗಾಗಲೇ ತಿಳಿದಿರುವುದನ್ನು ನಿನಗೆ ತಿಳಿದಿದೆ ಎಂದು ಮನದಟ್ಟಾಗಿಸುವುದು. ಶಿಕ್ಷಕ ಪಾತಾಳ ಗರಡಿಯ ಹಾಗೆ. ಬಾವಿಯಲ್ಲಿ ಕೊಡ, ತಪ್ಪಲೆ ವಗೈರೆ ಬಿದ್ದಿದ್ದರೆ ಅದು ಹೊರತೆಗೆಯುವುದು. ಇಲ್ಲದಿದ್ದರೆ ಹೊರತೆಗೆಯುವುದಾದರೂ ಏನನ್ನು?! ಮಕ್ಕಳ ಪ್ರಗತಿಯೆಂದರೆ ಅವರ ಶೈಕ್ಷಣಿಕ ಮುನ್ನಡೆ ಮಾತ್ರವಲ್ಲ. ಬದಲಿಗೆ ಅವರ ಇಡಿಯಾದ ಬೆಳವಣಿಗೆ. ಹಾಗೆ ಪರೀಕ್ಷೆಯಲ್ಲಿ ಮಕ್ಕಳನ್ನು ಅಂಕಭೂಪರನ್ನಾಗಿಸುವುದೇ ಬೋಧನೆಯೆನ್ನುವುದಾದರೆ ಶಿಕ್ಷಕರು ತಾನೆ ಏಕೆ ಬೇಕು? ಪ್ರತೀ ತರಗತಿಗೆ ಒಂದೊಂದು ಕಂಪ್ಯೂಟರನ್ನೋ ಇಲ್ಲವೇ ರೋಬಟ್ ಯಂತ್ರ ಇರಿಸಿದರಾಯಿತು! ಶಿಕ್ಷಕರಿಗಿರುವಷ್ಟೇ ಹೊಣೆಗಾರಿಕೆ ವಿದ್ಯಾರ್ಥಿಗೆ ಹಾಗೂ ಪೋಷಕರಿಗೆ ಇದೆ.
ಅಮೆರಿಕದ ಕೊಲರಾಡೊ ರಾಜ್ಯದ ರಾಜಕಾರಣಿ, ಶಿಕ್ಷಣ ತಜ್ಞ ಬಾಬ್ ಬ್ಯುಪ್ರೇಸ್ “”ಶಿಕ್ಷಣ ಸಮರ್ಪಣ ಭಾವದ ಶಿಕ್ಷಕರು, ಪ್ರೇರಿತ ವಿದ್ಯಾರ್ಥಿಗಳು ಮತ್ತು ನಿರೀಕ್ಷೆಗಳುಳ್ಳ ಪೋಷಕರ ಬದ್ಧತೆಯ ಪಾಲುದಾರಿಕೆ” ಎನ್ನುತ್ತಾರೆ. ವಿದ್ಯಾಲಯ ಒಂದು ಕಾರ್ಖಾನೆಯಲ್ಲ. ಇಂತಿಷ್ಟು ಫಲಿತಾಂಶ ತರಿಸಬೇಕು ಎಂದು ಗುತ್ತಿಗೆ ನೀಡಲಾದೀತೇ!? ವಿದ್ಯಾಲಯಕ್ಕೆ ಆಗಿಂದ್ದಾಗ್ಗೆ ಪೋಷಕರು ಭೇಟಿ ನೀಡಿ ಮುಖ್ಯಸ್ಥರೊದಿಗೆ ತಮ್ಮ ಮಕ್ಕಳ ವಿದ್ಯಾಭ್ಯಾಸದ ಪ್ರಗತಿ ಕುರಿತು ಚರ್ಚಿಸಬೇಕು. ಪೋಷಕ-ಬೋಧಕ ಸಭೆಗಳಲ್ಲಿ ತಪ್ಪದೆ ಭಾಗವಹಿಸಬೇಕು. ಶಿಕ್ಷರನ್ನು “ಹೆಚ್ಚಿನ ಫಲಿತಾಂಶ’ಕ್ಕಾಗಿ ಒತ್ತಾಯಿಸಿದರೆ ಆಗಬಹುದಾದ ಮಾರಕ ಪರಿಣಾಮವನ್ನೂ ಆಲೋಚಿಸಬೇಕು. ಏನಾದರೂ ಮಾಡಿ ಒಳ್ಳೆಯ ಫಲಿತಾಂಶ ತರಿಸೋಣವೆನ್ನುವುದೇ ಗುರಿಯಾಗಿಬಿಡುತ್ತದೆ! ಪರೀಕ್ಷೆಗಳನ್ನು ನಡೆಸುವ ಬಿಗಿಯೇ ತಪ್ಪಬಹುದಲ್ಲವೇ? ಹಾಗಾಗಿ ಶಿಕ್ಷಕರಲ್ಲಿ ಗಂಭೀರ ಅಧ್ಯಯನ ಪ್ರವೃತ್ತಿ, ವಿದ್ಯಾರ್ಥಿಗಳಲ್ಲಿ ಗ್ರಂಥ ಪರಾಮರ್ಶೆಯ ಪ್ರವೃತ್ತಿ ಜಾಗೃತಗೊಳಿಸಬೇಕು. ಪೋಷಕರು ತಮ್ಮ ಮಕ್ಕಳು ಅಂಕಪಟ್ಟಿಗೆ ಅತೀತವಾದ ಜಾnನಾರ್ಜನೆಯನ್ನು ಧ್ಯೇಯವಾಗಿಟ್ಟುಕೊಳ್ಳುವಂತೆ ನಿಗಾ ಇಡಬೇಕು.
*ಬಿಂಡಿಗನವಿಲೆ ಭಗವಾನ್