ಸಂಸ್ಕೃತಿಗಳ ಸಂಘರ್ಷವೆದುರಿಸಲು ಜಾಗತಿಕ ಹಿಂದೂ ಸಂಘಟನೆ ಅನಿವಾರ್ಯ


Team Udayavani, Sep 9, 2018, 6:00 AM IST

x-42.jpg

ಹಲವು ಸಂಘಟನೆಗಳು ವರ್ಲ್ಡ್ ಹಿಂದೂ ಕಾಂಗ್ರೆಸ್‌ ಘೋಷಣೆಯಾದ ತಕ್ಷಣವೇ ಅದರ ವಿರುದ್ಧ ಧ್ವನಿ ಎತ್ತಲಿಕ್ಕೆ ಶುರು ಮಾಡಿದವು. ಅಮೆರಿಕ ಸರ್ಕಾರದ ವಿವಿಧ ಇಲಾಖೆಗಳಿಗೆ ಪತ್ರ, ಅರ್ಜಿಗಳನ್ನು ಬರೆದು, ಸಮ್ಮೇಳನವನ್ನು ರದ್ದುಗೊಳಿಸುವಂತೆ ಕೋರಿದವು. ಇಂಥ ಹಿಂದೂ ವಿರೋಧಿ ಭಾವನೆ ವ್ಯಕ್ತವಾಗುತ್ತಿರುವುದು ಹೊಸದೇನೂ ಅಲ್ಲ. ಸ್ವಾಮಿ ವಿವೇಕಾನಂದರು ಶಿಕಾಗೋಗೆ ಹಿಂದೂ ಪ್ರತಿನಿಧಿಯಾಗಿ ಹೋದಾಗ ಅವರೂ ಅವಮಾನ ಅನುಭವಿಸಿದ್ದರು.

ಸ್ವಾಮಿ ವಿವೇಕಾನಂದರ ಐತಿಹಾಸಿಕ ಶಿಕಾಗೋ ಭಾಷಣದ 125ನೇ ವರ್ಷದ ನೆನಪಿನಾರ್ಥ  ಶಿಕಾಗೋದಲ್ಲಿ ಒಂದು ಬೃಹತ್‌ ವಿಶ್ವ ಹಿಂದೂ ಸಮ್ಮೇಳನವನ್ನು (World Hindu Congress) ಆಯೋಜಿಸಲಾಗಿದೆ. ಪ್ರಪಂಚದ ಹಲವಾರು ರಾಷ್ಟ್ರಗಳಲ್ಲಿರುವ ಹಿಂದೂಗಳನ್ನು ಒಂದೆಡೆ ಸಂಘಟಿಸುವ ಪ್ರಯತ್ನವಿದು. ರಾಜಕೀಯ, ಉದ್ಯಮ, ಹಿಂದೂ ಸಂಘಟನೆ, ಸಾರಸ್ವತ ಲೋಕ…ಹೀಗೆ ಹಲವಾರು ಕ್ಷೇತ್ರಗಳಲ್ಲಿ ಹೆಸರು ಮಾಡಿರುವ, ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳಲ್ಲಿ ನೆಲೆಸಿರುವ  ಹಿಂದೂಗಳನ್ನು ಆಹ್ವಾನಿಸಿ, ಹಿಂದೂ ಸಮುದಾಯದ ಮುಂದಿರುವ ಸವಾಲುಗಳಿಗೆ ಸಮಾಧಾನವನ್ನು ಹುಡುಕುವ ಪ್ರಯತ್ನ ಈ ಸಮ್ಮೇಳನದ ಉದ್ದೇಶವಾಗಿದೆ. 

ಈ ಸಮ್ಮೇಳನದಲ್ಲಿ “ಯುವ ಹಿಂದೂ ರಾಜಕೀಯ ನಾಯಕರಿಗಿರುವ ಸವಾಲುಗಳು’ ಎಂಬ ವಿಚಾರ ಗೋಷ್ಠಿಯಲ್ಲಿ ಮಾತನಾಡಲು ನನಗೆ ಆಹ್ವಾನ ಬಂದಿದ್ದು ನನ್ನ ಅದೃಷ್ಟ. ಆದರೆ ಕಾರಣಾಂತರಗಳಿಂದ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಪಾಲ್ಗೊಳ್ಳುವುದಕ್ಕೆ ಸಾಧ್ಯವಾಗದೇ ಇರುವುದು ಒಂದೆಡೆ 
ಬೇಸರ ಮೂಡಿಸಿದ್ದರೆ, ಸಮ್ಮೇಳನದ ವಿರುದ್ಧವಾಗಿ ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ವ್ಯಕ್ತವಾದ ಅತೀವ ವಿರೋಧ ನನ್ನಲ್ಲಿ ಮತ್ತಷ್ಟು ಬೇಸರ ಹುಟ್ಟಿಸಿತು. ಹಿಂದೂ ಸಂಘಟನೆಯ ವಿರುದ್ಧವಾಗಿ ಜಾಗತಿಕ ಮಟ್ಟದಲ್ಲಿ ಎಂತಹ ಕಡು ವಿರೋಧವಿದೆ ಎಂಬ ಸಂಗತಿ ಅರಿತು ದಿಗ್ಭ್ರಮೆಯೂ ಉಂಟಾಯಿತು.

ಹಿಂದೂಗಳ ವಿರುದ್ಧವಾಗಿ, ಹಿಂದೂ ವಿರೋಧಿ ಭಾವನೆ ವ್ಯಕ್ತವಾಗುತ್ತಿರುವುದು ಹೊಸದೇನೂ ಅಲ್ಲ. ವಿವೇಕಾನಂದರು ಶಿಕಾಗೋಗೆ ಹಿಂದೂ ಪ್ರತಿನಿಧಿಯಾಗಿ ಹೋದಾಗ ಅವರೂ ಅವಮಾನ ಅನುಭವಿಸಿದ್ದರು. ಆಗ ಯಾವ ಶಕ್ತಿಗಳು ಸ್ವಾಮಿ ವಿವೇಕಾನಂದರಿಗೆ ಅವಮಾನವಾಗುವಂತೆ ನಡೆದು ಕೊಂಡಿದ್ದವೋ ಈಗಲೂ ಅದೇ ಶಕ್ತಿಗಳು ಜೀವಂತವಾಗಿರುವುದು ಜಾಗತಿಕ ಬೆಳವಣಿಗೆಗಳನ್ನು ಗಮನಿಸಿದಾಗ ಸ್ಪಷ್ಟವಾಗುತ್ತದೆ.

ಸದಾ ಒಂದಲ್ಲಾ ಒಂದು ಕಾರಣಕ್ಕಾಗಿ ಹಿಂದೂಗಳನ್ನು ಟಾರ್ಗೆಟ್‌ ಮಾಡುವ ಭಾರತ ಭಂಜನ ಉದ್ದೇಶ ಹೊಂದಿರುವ, ಆರ್ಗನೈಸೇಷನ್‌ ಫಾರ್‌ ಇಂಡಿಯಾ ಸಿವಿಲ್‌ ವಾಚ್‌, ಸಿಖ್‌ ಇನ್ಫಾರ್ಮೇಷನ್‌ ಸೆಂಟರ್‌, ಅಂಬೇಡ್ಕರ್‌ ಕಿಂಗ್‌ ಸ್ಟಡಿ ಸರ್ಕಲ್‌, ಆರ್ಗನೈಸೇಷನ್‌ ಫಾರ್‌ ಮೈನಾರಿಟೀಸ್‌ ಆಫ್ ಇಂಡಿಯಾ, ಇಂಡಿಯನ್‌-ಅಮೆರಿಕನ್‌ ಮುಸ್ಲಿಂ ಕೌನ್ಸಿಲ್‌, ಪೆರಿಯಾರ್‌ ಅಂಬೇಡ್ಕರ್‌ ಸ್ಟಡಿ ಸರ್ಕಲ್‌…ಹೀಗೆ  ಹಲವು ಸಂಘಟನೆಗಳು ವರ್ಲ್ಡ್ ಹಿಂದೂ ಕಾಂಗ್ರೆಸ್‌ ಘೋಷಣೆಯಾದ ತಕ್ಷಣವೇ ಅದರ ವಿರುದ್ಧ ಧ್ವನಿ ಎತ್ತಲಿಕ್ಕೆ ಶುರು ಮಾಡಿದವು. ಅಮೆರಿಕ ಸರ್ಕಾರದ ವಿವಿಧ ಇಲಾಖೆಗಳಿಗೆ ಪತ್ರ, ಅರ್ಜಿಗಳನ್ನು ಬರೆದು, “ಹಿಂದೂ ಸಮ್ಮೇಳನವನ್ನು ಆಯೋಜಿಸಿರುವ ಹಿಂದೂ ಸಂಘಟನೆಗಳು ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿವೆ’ ಎಂಬ ಆರೋಪ ಮಾಡಿ ಸಮ್ಮೇಳನವನ್ನು ರದ್ದುಗೊಳಿಸುವಂತೆ ಕೋರಿದವು. ಇಲ್ಲಿಗೇ ನಿಲ್ಲದೇ ಸಮ್ಮೇಳನದ ಆಯೋಜಕರು- ಸಂಘಟನೆಗಳು ಭಾರತದಲ್ಲಿ ಅಲ್ಪಸಂಖ್ಯಾತರ ಹತ್ಯಾಕಾಂಡ ನಡೆಯುತ್ತಿದೆ, ಜಾತೀಯತೆ, ಅಸ್ಪೃಶ‌ತೆ ಮಾಡುತ್ತಿವೆ ಎಂಬ ಗುಲ್ಲೆಬ್ಬಿಸಿ, ಹಫಿಂಗ್ಟನ್‌ ಪೋಸ್ಟ್, ನ್ಯೂಯಾರ್ಕ್‌ ಟೈಮ್ಸ್‌, ವಾಷಿಂಗ್‌ಟನ್‌ ಪೋಸ್ಟ್, ವಾಲ್‌ಸ್ಟ್ರೀಟ್‌ ಜರ್ನಲ್‌ನಂತಹ  ಅಮೆರಿಕನ್‌ ಪತ್ರಿಕೆಗಳಿಗೆ ಪುಂಖಾನುಪುಂಖವಾಗಿ ಲೇಖನಗಳನ್ನೂ ಬರೆದವು. ಸಮ್ಮೇಳನದ ಅಧ್ಯಕ್ಷತೆಯನ್ನು ಅಮೆರಿಕದ ಮೊದಲ ಹಿಂದೂ ಸೆನೆಟರ್‌ ತುಳಸಿ ಗಬಾರ್ಡ್‌ ವಹಿಸಬೇಕಿತ್ತು.

 ಸೆನೆಟ್‌ಗೆ ಆಯ್ಕೆಯಾದ ನಂತರ ಭಗವದ್ಗೀತೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಾಯಕಿ ಈ ಸಮ್ಮೇಳನದ ಅಧ್ಯಕ್ಷತೆ ವಹಿಸುತ್ತಾರೆಂದು ತಿಳಿದು ಮತ್ತಷ್ಟು ಅಸಹಿಷ್ಣುತೆ ತೋರಿದ ಈ ಸಂಘಟನೆಗಳು ಅವರ ವಿರುದ್ಧವೂ ಅಪಪ್ರಚಾರ ಮಾಡತೊಡಗಿದವು. ಈ ಪ್ರತಿಭಟನೆಗಳು ಹಾಗೂ ಅವರು ಪ್ರತಿನಿಧಿಸುವ ಡೆಮಾಕ್ರೆಟಿಕ್‌ ಪಾರ್ಟಿಯ ಒತ್ತಡಕ್ಕೆ ಮಣಿದು ಕಡೆಯ ಕ್ಷಣದಲ್ಲಿ ತುಳಸಿ ಗಬಾರ್ಡ್‌ ಈ ಸಮ್ಮೇಳನದಿಂದ ದೂರ ಸರಿದಿದ್ದು ವಿಷಾದದ ಸಂಗತಿ.

ಈ ಸಂಘಟನೆಗಳ ಪೂರ್ವಾಪರ ಮತ್ತು ಇತಿಹಾಸ ಗಮನಿಸಲು ಹೋದರೆ ಹಲವು ಅಚ್ಚರಿಗಳು ತೆರೆದುಕೊಳ್ಳುತ್ತವೆ. ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್ಗನೈಸೇಷನ್‌ ಫಾರ್‌ ಮೈನಾರಿ ಟೀಸ್‌ ಆಫ್ ಇಂಡಿಯಾ, ಇಂಡಿಯನ್‌ ಅಮೆರಿಕನ್‌ ಮುಸ್ಲಿಂ ಕೌನ್ಸಿಲ್‌ ಎಂಬ ಸಂಘಟನೆಗಳಿಗೆ “ಹಿಂದೂಗಳು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗುತ್ತಿ¨ªಾರೆ’ ಎಂದು ಸತತವಾಗಿ ಅಮೆರಿಕದ ಸರ್ಕಾರಕ್ಕೆ ಅರ್ಜಿ ಬರೆಯುವುದೇ ಪೂರ್ಣಾವಧಿ ಕೆಲಸ.  ಈ ಮಾನವ ಹಕ್ಕುಗಳ ಮುಖವಾಡ ಕಳಚಿದರೆ ಈ ಸಂಸ್ಥೆ ಹಾಗೂ ಅದರಲ್ಲಿ ತೊಡಗಿಸಿಕೊಂಡಿರುವ ಸದಸ್ಯರ ಸಂಬಂಧಗಳು ಹಲವು ಇಸ್ಲಾಮಿಕ್‌ ಭಯೋತ್ಪಾದಕ ಸಂಘಟನೆಗಳೊಂದಿಗೆ ಇರುವುದು ಅಮೆರಿಕ ಸರ್ಕಾರದ ತನಿಖೆಯಿಂದಲೇ ಸ್ಪಷ್ಟವಾಗಿದೆ. ಹಿಂದೂ ಸಮ್ಮೇಳನಕ್ಕೆ ಈ ಮೂಲಭೂತ ಇಸ್ಲಾಮಿ ಸಂಘಟನೆಗಳ ವಿರೋಧ ಒಂದೆಡೆಯಾದರೆ, ಇಂಡಿಯಾ ಸಿವಿಲ್‌ ವಾಚ್‌, ಚಿಕಾಗೋ ದೇಶಿ ಯೂತ್‌ ರೈಸಿಂಗ್‌ ಎಂಬ ಕಮ್ಯುನಿಸ್ಟ್ ಸಂಘಟನೆಗಳು ನಾಯಿ ಕೊಡೆಯಂತೆ ರಾತ್ರೋ ರಾತ್ರಿ ತಲೆಯೆತ್ತಿ ಚಿಕಾಗೋದಲ್ಲಿ ಈ ಸಮ್ಮೇಳನದ ವಿರುದ್ಧ ಪ್ರತಿಭಟಿಸಿದವು. ಲೆಟರ್‌ ಹೆಡ್‌ ಬಿಟ್ಟರೆ ಮತ್ತೆ ಯಾವ ಅಸ್ತಿತ್ವವೂ ಇಲ್ಲದ ಈ ಬ್ಯಾನರ್‌ ಸಂಘಟನೆಗಳಿಗೆ ಅಮೆರಿಕದ ಸಾಕಷ್ಟು ಕ್ರೈಸ್ತ ಮಿಷನರಿಗಳಿಂದ ಭರಪೂರ ದೇಣಿಗೆ ಸಿಕ್ಕಿರುವುದೂ ಸ್ಪಷ್ಟವಾಗಿದೆ.  ಇವರ ಜೊತೆಗೆ ಪೆರಿಯಾರ್‌ ಅಂಬೇಡ್ಕರ್‌ ಸ್ಟಡಿ ಸರ್ಕಲ್‌ ಎಂಬ ಸಂಘಟನೆಯೂ ಈ ಸಮ್ಮೇಳನವನ್ನು ವಿರೋಧಿಸಿದೆ. ಭಾರತದಲ್ಲಿ ದ್ರಾವಿಡಸ್ಥಾನ ಎಂಬ ಪ್ರತ್ಯೇಕತೆಯ ಕೂಗನ್ನು ಸೃಷ್ಟಿ ಮಾಡಬೇಕೆಂಬ ಹುನ್ನಾರದಿಂದ ಕೆಲಸ ಮಾಡುತಿರುವ ಸಂಘಟನೆ ಇದು. ಈ ಸಂಘಟನೆಯ ಸದಸ್ಯರುಗಳಿಗೆ ಶ್ರೀಲಂಕಾದ ಎಲ್‌ಟಿಟಿಇ ಜೊತೆಗೂ ಸಂಬಂಧವಿರುವುದು ಅವರ ವೆಬ್‌ಸೈಟ್‌ ನೋಡಿದಾಗ ಗೊತ್ತಾಗುವ ಸಂಗತಿ.  ಇನ್ನು ಅಂಬೇಡ್ಕರ್‌ ಸಿಖ್‌ ಫೌಂಡೇಷನ್‌, ಸಿಖ್‌ ಇನ್ಫಾರ್ಮೇಷನ್‌ ಸೆಂಟರ್‌ ಎಂಬ ಸಂಘಟನೆಗಳೂ ಈ ಸಮ್ಮೇಳನದ ವಿರುದ್ಧ ಪ್ರತಿಭಟಿಸಿವೆ. ಈ ಭಾರತ ವಿರೋಧಿ ಶಕ್ತಿಗಳು, ತಮ್ಮ ಸಂಘಟನೆಗಳಿಗೆ  ಹೇಗೆ ನಾಮಕರಣ ಮಾಡಿಕೊಳ್ಳುತ್ತಾರೆ ನೋಡಿ,  ಎಲ್ಲಿಯ ಅಂಬೇಡ್ಕರ್‌ ಎಲ್ಲಿಯ ಸಿಖ್‌ ಸಂಘಟನೆ? ಎಲ್ಲಿಯ ಅಂಬೇಡ್ಕರ್‌ ಎಲ್ಲಿಯ ದ್ರಾವಿಡ ಸ್ಥಾನದ ವಾದ? ಅಂಬೇಡ್ಕರ್‌ ಅವರ ಹೆಸರನ್ನು ಕವಚವಾಗಿ ಬಳಸಿಕೊಂಡು ಭಾರತ ವಿರೋಧಿ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಈ ಸಂಘಟನೆಗಳ ಪೂರ್ಣಾವಧಿ ಕೆಲಸ. ಪಂಜಾಬ್‌ ಪ್ರತ್ಯೇಕತೆಯ ಖಾಲಿಸ್ತಾನಿವಾದ ಜಾಗತಿಕ ಮಟ್ಟದಲ್ಲಿ ಇನ್ನೂ ಜೀವಂತವಾಗಿರಿಸಿರುವ ಈ ಸಂಘಟನೆಗಳು ಈ ಸಮ್ಮೇಳನವನ್ನು ವಿರೋಧಿಸುತ್ತಿರುವುದು ಗಮನಾರ್ಹ ಸಂಗತಿ. ಈ ಸಂಘಟನೆಗಳ ವಿರೋಧ ಕೇವಲ ಆರ್‌ಎಸ್‌ಎಸ್‌, ವಿಹೆಚ್‌ಪಿ, ಬಿಜೆಪಿಗೆ ಸೀಮಿತವಾಗಿಲ್ಲ. ಇವರ ಮೂಲ ವಿರೋಧ ಇರುವುದು ಹಿಂದುತ್ವದ ಮೇಲೆಯೇ.

ಇವರ ಸ್ಪಷ್ಟ ಉದ್ದೇಶ ಅವರ ಭಾಷಣ, ಲೇಖನಗಳಿಂದಲೇ ಸ್ಪಷ್ಟವಾಗುವಂತೆ ಭಾರತವನ್ನು “ಹಿಂದೂ ಧರ್ಮ ಮುಕ್ತ’ ಮಾಡುವುದು ಹಾಗೂ ಭೌಗೋಳಿಕವಾಗಿ ಭಾರತವನ್ನು ವಿಚ್ಛಿದ್ರಗೊಳಿಸುವುದು. ದುರಾದೃಷ್ಟವೆಂದರೆ ಈ ಎಲ್ಲಾ ಸಂಘಟನೆಗಳ ಬ್ರಾಂಚ್‌ ಆಫೀಸ್‌ನಂತೆ ಕೆಲಸ ಮಾಡುವ 
ಹಲವು ಸಂಸ್ಥೆಗಳು ಭಾರತದಲ್ಲೂ ಇವೆ. ಉದಾಹರಣೆ: ವೆಂಡಿ ಡಾನಿಗರ್‌ ಅಮೆರಿಕದ ಪತ್ರಿಕೆಯಲ್ಲಿ ಹಿಂದೂ ವಿರೋಧಿ ಲೇಖನ ಬರೆದರೆ  ಭಾರತದಲ್ಲಿರುವ ಅವರ ಏಜೆಂಟ್‌ ಆಗಿ ಗಿರೀಶ್‌ ಕಾರ್ನಾಡ್‌ ನಂತಹವರು “ನಾನು ಅರ್ಬನ್‌ ನಕ್ಸಲ್‌’ ಎಂದು ಬೆಂಗಳೂರಿನಲ್ಲಿ ಹಿಂದೂಗಳ ವಿರುದ್ಧವಾಗಿ ಮಾತನಾಡುತ್ತಾರೆ. ಅತ್ತ ಪೆರಿಯಾರ್‌ ಅಂಬೇಡ್ಕರ್‌ ಸ್ಟಡಿ ಸರ್ಕಲ್‌ನಂತಹ ಸಂಘಟನೆಗಳು ಹಿಂದೂ ಸಮ್ಮೇಳನವನ್ನು ವಿರೋಧಿಸಿದರೆ, ಇತ್ತ ಅಂತಹ ಸಂಘಟನೆಗಳ ಸಮಾನ ಮನಸ್ಕರಾಗಿರುವ ಮಹಾನ್‌ ಇತಿಹಾಸಕಾರರಾದ ರಾಮಚಂದ್ರಗುಹ ಅಂತಹವರು ಭಾರತದಲ್ಲಿ ಪ್ರತ್ಯೇಕ ದ್ರಾವಿಡದೇಶ ಸೃಷ್ಟಿ ಮಾಡಬೇಕೆಂಬ ಖಚಿತ ಉದ್ದೇಶ ಇಟ್ಟುಕೊಂಡು ಪ್ರತ್ಯೇಕ ದಕ್ಷಿಣ ಭಾರತ ದೇಶದ ಕುರಿತು ಲೇಖನಗಳನ್ನು ಬರೆಯುತ್ತಾರೆ. ಸಮಾನ ಮನಸ್ಕ ಸಂಘಟನೆಗಳು ಬೆಂಗಳೂರಿನಲ್ಲಿ ದ್ರಾವಿಡ ಸಮ್ಮೇಳನದ ಮೂಲಕ ಪ್ರತ್ಯೇಕತೆಯ ಕೂಗನ್ನು ಎಬ್ಬಿಸುತ್ತಾರೆ.

ಅಮೆರಿಕದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿವೆ ಎಂದು ಕ್ರೈಸ್ತ ಸಂಘಟನೆಗಳು ಬೊಬ್ಬೆ ಹೊಡೆದರೆ ಅವರ ಏಜೆಂಟ್‌ಗಳಂತೆ ಭಾರತದಲ್ಲಿರುವ ಕ್ರೈಸ್ತ ಮಿಷನರಿ ಬೆಂಬಲಿತ ಮಾನವ ಹಕ್ಕು ಸಂಘಟನೆಗಳು ಕೆಲಸ ಮಾಡುತ್ತವೆ. ಅದೇ ರೀತಿ ಕಮ್ಯುನಿಸ್ಟರ ಜಾಗತಿಕ ಷಡ್ಯಂತ್ರ ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ಭಾರತವನ್ನು ಅಭದ್ರಗೊಳಿಸಲು ಸಂಘಟಿತ ಪ್ರಯತ್ನ ಮಾಡುತ್ತವೆ. ಇವರ ಸಂಘಟಿತ ಪ್ರಯತ್ನ ನಿಜವಾಗಿಯೂ ಬೆರಗು ಹುಟ್ಟಿಸುವಂಥದ್ದು!  ಈ ಎಲ್ಲಾ ಸಂಗತಿಗಳನ್ನು ಗಮನಿಸಿದಾಗ ಒಂದಂತೂ ತಿಳಿ ಯುತ್ತದೆ. ಭಾರತವನ್ನು, ಅದರಲ್ಲೂ ವಿಶೇಷವಾಗಿ ಹಿಂದೂ ಗಳನ್ನು ದುರ್ಬಲಗೊಳಿಸಲು ಜಾಗತಿಕ ಮಟ್ಟದಲ್ಲಿ ಅತ್ಯಂತ ಯೋಜನಾ ಬದ್ಧವಾದ ಕಾರ್ಯತಂತ್ರ ಜಾರಿಯಲ್ಲಿದೆ. ಅದರ ಬೆಂಬಲಕ್ಕೆ ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳಲ್ಲಿಯೂ ಕೆಲಸ ಮಾಡುತ್ತಿರುವ ಕಮ್ಯುನಿಸ್ಟ್ ಇಸ್ಲಾಮಿಕ್‌, ಕ್ರೈಸ್ತ ದ್ರಾವಿಡಸ್ಥಾನಿ, ಖಾಲಿಸ್ತಾನಿ, ಐಡಿಯಾಲಜಿಗಳ ಪರವಾಗಿ ಕೆಲಸ ಮಾಡುವ ಶಕ್ತಿಗಳಿವೆ. ಈ ಭಾರತ ಭಂಜನ ಐಡಿಯಾಲಜಿಗಳ ಜಂಟಿ ಸವಾಲುಗಳನ್ನು ಇವತ್ತಿನ ಹಿಂದೂಗಳು ಎದುರಿಸಬೇಕಾಗಿದೆ. ಈ ಎಲ್ಲಾ ಸವಾಲುಗಳ ಕುರಿತಾಗಿ ಎಚ್ಚರಿಸುವ ಪ್ರಯತ್ನವನ್ನು ಸ್ವಾಮಿ ವಿವೇಕಾನಂದರು, ಋಷಿ ಅರವಿಂದರು, ಸಾವರ್ಕರರು, ಅಂಬೇಡ್ಕರ್‌ ಮಾಡಿದ್ದರು. ಆದರೂ ಹಿಂದೂಗಳು ಇಂದಿಗೂ ಸಂಪೂರ್ಣ ಎಚ್ಚರಗೊಳ್ಳದೇ ಇರುವುದು ದೌರ್ಭಾಗ್ಯ. ಇಂತಹ ಸವಾಲುಗಳನ್ನು ಎದುರಿಸುವ  ಉದ್ದೇಶದಿಂದಲೇ ಇಂದು ವರ್ಲ್ಡ್ ಹಿಂದೂ ಕಾಂಗ್ರೆಸ್‌ ನಡೆಯುತ್ತಿರುವುದು ಸಂತಸದ ಸಂಗತಿ.

ಇತ್ತೀಚೆಗೆ ಅಮೆರಿಕದ ಹಾರ್ವರ್ಡ್‌ ವಿವಿಯ ಪ್ರಖ್ಯಾತ ಪ್ರೊಫೆಸರ್‌, ಸ್ಯಾಮ್ಯುಯಲ್‌ ಹಂಟಿಂಗ್ಟನ್‌ “ಪ್ರಪಂಚದಲ್ಲಿ ಸಧ್ಯದಲ್ಲೇ ಕ್ಲಾಶ್‌ ಆಫ್ ಸಿವಿಲೈಸೇಷನ್‌ ಉಂಟಾಗುತ್ತದೆ’ ಎಂಬ ವಾದವನ್ನು ಮಂಡಿಸಿದ್ದರು. ಅವರ ಪ್ರಕಾರ ಆ ಸಂಘರ್ಷದಲ್ಲಿ ಕ್ರೈಸ್ತರ ಪರವಾಗಿ ಅಮೆರಿಕ ಮತ್ತು ಯುರೋಪ್‌ ರಾಷ್ಟ್ರಗಳು, ಇಸ್ಲಾಮ್‌ ಪರವಾಗಿ ಮಧ್ಯಪ್ರಾಚ್ಯ ಇಸ್ಲಾಮಿಕ್‌ ರಾಷ್ಟ್ರಗಳು ನಿಲ್ಲಲಿವೆ.  ಈ ವಾದವನ್ನು ಕೇಳಿದಾಗ ಹಿಂದೂಗಳ ಪರವಾಗಿ ಯಾವ ದೇಶ ಮತ್ತು ಸರ್ಕಾರ ನಿಲ್ಲುತ್ತದೆ? ಎಂಬುದು ಹಿಂದೂಗಳಲ್ಲಿ ಮೂಡುವ ಸಹಜ ಪ್ರಶ್ನೆ.  ಹಿಂದೂಗಳಿಗೆ ಇರುವ ದೇಶ ಭಾರತ ಒಂದೇ. ಭಾರತದಲ್ಲಿ ಹಿಂದೂಗಳ ಭಾವನೆಗಳನ್ನು ಗೌರವಿಸುವ ಮೋದಿ ಸರ್ಕಾರ ಇರುವ ಕಾರಣದಿಂದಾಗಿಯೇ ಕಳೆದ 4-5 ವರ್ಷಗಳಲ್ಲಿ, ಜಾಗತಿಕ ಮಟ್ಟದಲ್ಲಿ ಭಾರತ ಮತ್ತು ಹಿಂದೂ ವಿರೋಧಿ ಶಕ್ತಿಗಳು ಮತ್ತಷ್ಟು ತೀವ್ರವಾಗಿ ಕೆಲಸ ಮಾಡುತ್ತಿರುವುದು. ಈ ಸಂಘರ್ಷವನ್ನು  ಇಂದಿನ ಹಿಂದೂ ಅರಿಯದೇ ಕಣ್ಮುಚ್ಚಿ ಕುಳಿತರೇ ಪ್ರಪಂಚದ ಭೂಪಟದಿಂದ ಹಿಂದೂ ಚಿಂತನೆ ನಶಿಸಿ ಹೋಗುವ ಎಲ್ಲಾ ಸಾಧ್ಯತೆಗಳೂ ಇವೆ.

ಇಂದಿನ ಮುಸ್ಲಿಮರ ಧ್ವನಿಯಾಗಿ ಜಾಗತಿಕ ಮಟ್ಟದಲ್ಲಿ ಅಲ್‌ ಜಹೀರಾ ಕೆಲಸ ಮಾಡಿದರೆ, ಕ್ರೈಸ್ತರ ಪರವಾಗಿ ಬಿಬಿಸಿ, ಸಿಎನ್‌ಎನ್‌ ನಂತಹ ಸುದ್ದಿ ಸಂಸ್ಥೆಗಳು ಕೆಲಸ ಮಾಡುತ್ತಿವೆ. ನಮ್ಮ ದೃಷ್ಟಿಕೋನವನ್ನು ಜಾಗತಿಕ ಮಟ್ಟದಲ್ಲಿ ಇಡುವ ಒಂದೇ ಒಂದೂ ಸುದ್ದಿ ಸಂಸ್ಥೆಯನ್ನು ಹೊಂದದಿರುವುದು ಹಿಂದೂಗಳ ಬಹಳ ದೊಡ್ಡ ದೌರ್ಬಲ್ಯ. ಕ್ರೈಸ್ತ ಮತ್ತು ಇಸ್ಲಾಮ್‌ ಮತಗಳ ನಂತರ ಪ್ರಪಂಚದ ಅತ್ಯಂತ ದೊಡ್ಡ ಜನಸಂಖ್ಯೆಯುಳ್ಳ ಧರ್ಮಗಳಲ್ಲಿ ಒಂದಾಗಿರುವ ಹಿಂದೂ ಧರ್ಮವು ತನ್ನ ಧ್ವನಿ ಹಾಗೂ ದೃಷ್ಟಿಕೋನವನ್ನು ತಿಳಿಸುವ ಸಂವಹನ ಮಾಧ್ಯಮವನ್ನು ಹೊಂದದೇ ಇರುವ ದೌರ್ಬಲ್ಯವನ್ನು ಆದಷ್ಟು ಬೇಗ ಸರಿಪಡಿಸಬೇಕಿದೆ. ಭಾರತಕ್ಕೆ ಸೀಮಿತವಾಗದೇ ಹಿಂದೂ ಸಂಘಟನೆ ಇಂದು ಜಾಗತಿಕ ಮಟ್ಟದ ಸ್ವರೂಪವನ್ನು ಪಡೆಯಬೇಕಾದ ಅನಿವಾರ್ಯತೆ ಇದೆ. 

ಹೇಗೆ ಭಾರತದ ಒಡಿಶಾದಲ್ಲಿ ಕ್ರೈಸ್ತ ಮಿಷನರಿಗಳಿಗೆ ತೊಂದರೆ ಉಂಟಾದರೆ ಅಮೆರಿಕದ ಸರ್ಕಾರಿ ಇಲಾಖೆ ಹಾಗೂ ಯುರೋಪ್‌ನ ಚರ್ಚ್‌ಗಳು ಧ್ವನಿ ಎತ್ತುತ್ತವೆಯೋ ಅದೇರೀತಿ ಮಲೇಷ್ಯಾ, ಆಸ್ಟ್ರೇಲಿಯಾ, ಬಲೂಚಿಸ್ಥಾನದಲ್ಲಿ ಹಿಂದೂಗಳಿಗೆ ಸಮಸ್ಯೆಯಾದರೆ ಪ್ರಪಂಚದ ಮೂಲೆ ಮೂಲೆಯಿಂದಲೂ ಹಿಂದೂಗಳ ಸಹಾಯಕ್ಕೆ ಧಾವಿಸುವ ವ್ಯವಸ್ಥೆಯನ್ನು ನಿರ್ಮಿಸಬೇಕಿದೆ.

ಈ ಅನಿವಾರ್ಯತೆಯನ್ನು ಸ್ವಾಮಿ ವಿವೇಕಾನಂದರು ಅಮೆರಿಕಾದ ಶಿಕಾಗೋದ ಭಾಷಣಗಳಲ್ಲಿಯೂ ಒತ್ತಿ ಹೇಳಿದ್ದರು. ವಿವೇಕಾನಂದರು ಈ ಸಂದೇಶ ಕೊಟ್ಟ 125 ವರ್ಷಗಳ ನಂತರ ಮತ್ತೂಮ್ಮೆ ಹಿಂದೂಗಳಿಗೆ ಸ್ವಾಮೀಜಿಯ ಸಂದೇಶವನ್ನು ನೆನಪಿಸುವ ವಿಶ್ವ ಹಿಂದೂ ಸಮ್ಮೇಳನ ನಡೆಯುತ್ತಿರುವುದು ಸಂತಸದ ಸಂಗತಿ. ಈ ಸಮ್ಮೇಳನದ ಘೋಷ ವಾಕ್ಯ “ಸುಮಂತ್ರಿತೇ ಸುವಿಕ್ರಾಂತೆ’  (ಜೊತೆಯಾಗಿ ಚಿಂತಿಸೋಣ, ಸಾಹಸದಿಂದ ಸಾಧಿಸೋಣ) ಸನಾತನ ಹಿಂದೂ ಚಿಂತನೆಯ ಈ ಸಾಲುಗಳು ಜಾಗತಿಕ ಮಟ್ಟದಲ್ಲಿ ಹಿಂದೂಗಳನ್ನು ಪ್ರೇರೇಪಿಸಲಿ ಎಂಬುದೇ ನಮ್ಮೆಲ್ಲರ ಆಶಯ.

ತೇಜಸ್ವಿ ಸೂರ್ಯ

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.