ಭೂ ಪರಿವರ್ತನೆ ಸಮಸ್ಯೆಗಳ ಕೂಗೇಕೆ ಕೇಳದು?


Team Udayavani, Sep 25, 2018, 12:50 AM IST

land-24-9.jpg

ತಲೆಯ ಮೇಲೊಂದು ಸೂರು ಹೊಂದಬೇಕೆಂಬ ಮನುಷ್ಯನ ಬಯಕೆ ನಿಸ್ಸಂಶಯವಾಗಿಯೂ ಇತರ ಮೂಲ ಅವಶ್ಯಕತೆಯಾದ ಆಹಾರ ಮತ್ತು ಬಟ್ಟೆಯಷ್ಟೇ ಪ್ರಮುಖವಾದದ್ದು. ಸಾಮಾನ್ಯ ವರ್ಗದ ಜನರ ಬದುಕಿನ ಮೂಲ ಅಗತ್ಯವಾದ ರೋಟಿ, ಕಪಡಾ, ಮಕಾನ್‌ ಚುನಾವಣಾ ಹೊತ್ತಿನಲ್ಲಿ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಯಲ್ಲಿ ಮತ್ತು ಸರಕಾರಗಳ ಕಾರ್ಯಕ್ರಮಗಳ ಪಟ್ಟಿಯಲ್ಲಿ ಆದ್ಯತೆ ಪಡೆದುಕೊಳ್ಳುತ್ತದೆ. ಅಷ್ಟರಮಟ್ಟಿಗೆ ನಮ್ಮ ನಾಯಕರಿಗೆ ಅದೊಂದು ಶ್ರಿಸಾಮಾನ್ಯನನ್ನು ಸೆಳೆಯುವ ಮುಖ್ಯ ವಿಷಯವೇ ಆಗಿರುತ್ತದೆ. ಆಗಾಗ್ಗೆ ಕೇಂದ್ರ-ರಾಜ್ಯ ಸರಕಾರಗಳು ಮನೆ ಕಟ್ಟಿಕೊಳ್ಳುವವರಿಗೆ ನೆರವಾಗುವಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದು ಜನಪರ ಕಾಳಜಿ ತೋರುತ್ತವೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಮನೆ ಕಟ್ಟುವವರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿವೆ. ಆದರೆ ಕಳೆದ ಹಲವಾರು ತಿಂಗಳುಗಳಿಂದ ಕರಾವಳಿ ಜಿಲ್ಲೆಗಳಲ್ಲಿ ತಲೆಯ ಮೇಲೊಂದು ಸ್ವಂತ ಸೂರು ಕಟ್ಟಿಕೊಳ್ಳುವ ಆಸೆ ಹೊಂದಿದವರಿಗೆ ಸರಕಾರದ ಗೋಜಲು ಲ್ಯಾಂಡ್‌ ಕನ್ವರ್ಷನ್‌ (ಭೂ ಪರಿವರ್ತನೆ) ನೀತಿ ತಣ್ಣೀರೆರಚಿದೆ. ಕಚೇರಿಯಿಂದ ಕಚೇರಿಗೆ ಅಲೆದಾಟ, ಪ್ರತಿಯೊಂದು ಹಂತದಲ್ಲೂ ನೂರಾರು ವಿಘ್ನಗಳು, ನಿಯಮಗಳ ಕುರಿತು ಅಧಿಕಾರಿಗಳಲ್ಲೇ ಅರಿವಿಲ್ಲದ ಅತಂತ್ರ ಸ್ಥಿತಿ ಕಂಡ ಸಾಮಾನ್ಯ ಜನತೆ ಸರಕಾರಕ್ಕೆ ಹಿಡಿಶಾಪ ಹಾಕುವಂತಾಗಿದೆ.

ಕೃಷಿ ಭೂಮಿಯಲ್ಲಿ ಮನೆ ಕಟ್ಟಿಕೊಳ್ಳುವುದೇ ಅಥವಾ ಕೃಷಿಯೇತರ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಬೇಕಾದರೆ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದು ಭೂ ಪರಿವರ್ತನೆ ಆಗಬೇಕು ಎನ್ನುತ್ತದೆ ಕರ್ನಾಟಕ ಸರಕಾರದ ನಿಯಮ. ಕೃಷಿ ಭೂಮಿ ದುರ್ಬಳಕೆಯಾಗಬಾರದು, ವಾಣಿಜ್ಯಿಕ ಉದ್ದೇಶ್ಯಗಳಿಗೆ ಬಳಕೆ ಮಾಡುವವರು ಬೊಕ್ಕಸಕ್ಕೆ ಒಂದಷ್ಟು ಫೀ ಕಟ್ಟಲಿ ಎನ್ನುವುದರ ಕುರಿತು ಯಾರ ವಿರೋಧವಿಲ್ಲ. ಆದರೆ ಅದಕ್ಕಾಗಿ ಒಂದು ದೊಡ್ಡ ಸಮರವನ್ನೇ ಎದುರಿಸಬೇಕಾದಂತ ಕ್ಲಿಷ್ಟಕರ ವ್ಯವಸ್ಥೆ, ಮಧ್ಯವರ್ತಿಗಳ ಸಹಾಯವಿಲ್ಲದೇ ಆ ಕೆಲಸ ಸಂಭವವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿರುವುದರ ಕುರಿತು ಸಾಮಾನ್ಯ ಜನರಿಗೆ ಆಕ್ರೋಶವಿದೆ ಎನ್ನುವುದು ನಮ್ಮ ಜನಪ್ರತಿನಿಧಿಗಳ ಗಮನಕ್ಕೆ ಬಂದಿಲ್ಲವೇ? ವಾಸ್ತವ್ಯಕ್ಕಾಗಿ ಅಥವಾ ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕಾಗಿ ಅಧಿಕೃತವಾಗಿ ಕೃಷಿ ಭೂಮಿಯನ್ನು ಬಳಕೆ ಮಾಡಿಕೊಳ್ಳಬೇಕಾದರೆ ಲ್ಯಾಂಡ್‌ ಕನ್ವರ್ಷನ್‌ ಆಗದೇ ನಿಮ್ಮ ಕೆಲಸ ಒಂದಿಂಚೂ ಮುಂದೆ ಸಾಗದು. ಏಕೆಂದರೆ ಕೆಲವು ವರ್ಷಗಳ ಹಿಂದೆ ಬ್ಯಾಂಕಿನ ಸಾಲದ ಹಂಗಿದ್ದವರು ಮಾತ್ರ ಸರ್ವೇಯರ್‌ ನಕ್ಷೆ, ಋಣಭಾರ ಇಲ್ಲದಿರುವ ಕುರಿತು ಪ್ರಮಾಣ ಪತ್ರ, ಮ್ಯುಟೇಶನ್‌ ಪ್ರತಿ,ಆಕಾರ್‌ ಬಂದ್‌ ಮೊದಲಾದ ದಾಖಲೆಗಳಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಟದ ಕನ್ವರ್ಷನ್‌ ಜಂಜಾಟಕ್ಕೆ ಸಿಕ್ಕಿ ಬೀಳುತ್ತಿದ್ದರು. ಏಕೆಂದರೆ ಕನ್ವರ್ಷನ್‌ ಆಗದೇ ಬ್ಯಾಂಕ್‌ ಸಾಲ ಮಂಜೂರು ಮಾಡುತ್ತಿರಲಿಲ್ಲ.

ಉಳಿದಂತೆ ಹಣಕಾಸು ಸಂಸ್ಥೆಗಳ ನೆರವಿನ ಅಗತ್ಯವಿಲ್ಲದೇ ತಮ್ಮ ಸ್ವಂತ ಹಣದಲ್ಲೇ ಮನೆ ಕಟ್ಟಿಕೊಳ್ಳುವವರು ಕನ್ವರ್ಷನ್‌ ಪಡೆದುಕೊಳ್ಳದೇ ಧೈರ್ಯವಾಗಿ ಮನೆ ಕಟ್ಟಿಕೊಳ್ಳುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕನ್ವರ್ಷನ್‌ ಕುರಿತು ನಿಯಮ ಬಿಗಿಯಾಗಿದೆ. ಕನ್ವರ್ಷನ್‌ ಆಗದ ಸ್ಥಳದಲ್ಲಿ ಮನೆ ಕಟ್ಟಲು ಗ್ರಾಮ ಪಂಚಾಯತ್‌ ಅನುಮತಿಯೂ ಸಿಕ್ಕದು, ವಿದ್ಯುತ್‌ ಸೌಲಭ್ಯ ದೊರೆಯದು ಎಂದ ಮೇಲೆ ಭೂ ಪರಿವರ್ತನೆಯಾಗದೇ ಮನೆ ಅಥವಾ ವಾಣಿಜ್ಯ ಕಟ್ಟಡ ಕಟ್ಟುವುದು ಅಸಾಧ್ಯವೇ ಸರಿ.

ಸಿದ್ದರಾಮಯ್ಯನವರ ಸರ್ಕಾರದ ಕೊನೆಯ ದಿನಗಳಲ್ಲಿ ಕನ್ವರ್ಷನ್‌ ವ್ಯವಸ್ಥೆ ಸರಳೀಕೃತಗೊಳಿಸುವ ಸಲುವಾಗಿ ಹೊಸ ಆನ್‌ಲೈನ್‌ ವ್ಯವಸ್ಥೆಯ ಘೋಷಣೆಯೇನೋ ಆಯಿತು. ಆದರೆ ಅದಿನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ ಎನ್ನುವುದು ಖೇದಕರ. ಇದೀಗ ಆನಲೈನ್‌ ಅರ್ಜಿ ಪ್ರಕ್ರಿಯೆ ಶುರುವಾಗುವ ಮೊದಲು ಸದ್ರಿ ಸ್ಥಳ 1978ರ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ನಿಯಮದ ಉಲ್ಲಂಘನೆಯಾಗಿಲ್ಲ ಎಂದು ಅಸಿಸ್ಟೆಂಟ್‌ ಕಮಿಷನರ್‌ ಅವರ ದ‌ೃಢೀಕರಣ ಪಡೆದುಕೊಳ್ಳಬೇಕು ಎಂದು ಆದೇಶಿಸಲಾಗಿದೆ. ಆಗಾಗ್ಗೆ ಹೊಸ ಹೊಸ ಆದೇಶ ಜಾರಿಗೆ ಬರುತ್ತಿರುವುದರಿಂದ ಕಂದಾಯ ಇಲಾಖೆಯ ಸಿಬ್ಬಂದಿ ಸ್ವತಹ ಗೊಂದಲಕ್ಕೊಳಗಾಗಿದ್ದಾರೆ. ಪರಿಣಾಮವಾಗಿ ಕರಾವಳಿ ಜಿಲ್ಲೆಗಳಲ್ಲಿ ಲ್ಯಾಂಡ್‌ ಕನ್ವರ್ಷನ್‌ ಸ್ಥಗಿತವಾಗಿದೆ. ಒಂದೆಡೆ ಮರಳು ಸಮಸ್ಯೆಯಾದರೆ ಇನ್ನೊಂದೆಡೆ ಕನ್ವರ್ಷನ್‌ ಫೈಲ್‌ ಕಚೇರಿಗಳಲ್ಲಿ ಸಿಲುಕಿಕೊಂಡು ಮನೆ ಕಟ್ಟಿಕೊಳ್ಳುವ ಕನಸುಕಾಣುತ್ತಿದ್ದವರ ಪರಿಸ್ಥಿತಿ ಅಯೋಮಯವಾಗಿದೆ. ಕನ್ವರ್ಷನ್‌ ಆಗದೇ ಹೊಸ ಸಾಲ ನೀಡಲಾಗದ ಸ್ಥಿತಿಯಲ್ಲಿ ಬ್ಯಾಂಕ್‌ಗಳಲ್ಲಿ ಅದೆಷ್ಟೋ ಜನರ ಗೃಹ ಸಾಲದ ಅರ್ಜಿ ಧೂಳು ತಿನ್ನುತ್ತಿದೆ. ಕಂದಾಯ ಇಲಾಖೆಯ ಆದಾಯ ಸಂಗ್ರಹಕ್ಕೂ ಬ್ರೇಕ್‌ ಬಿದ್ದಿದೆ.

ಕುಂದಾಪುರ ಮೂಲದ ಮುಂಬಯಿ ಮಹಾನಗರದಲ್ಲಿ ಉದ್ಯೋಗ ಹೊಂದಿದ ನಿವೃತ್ತಿ ಅಂಚಿನಲ್ಲಿರುವ ವ್ಯಕ್ತಿಯೋರ್ವರು ಕಳೆದ ಒಂದು ವರ್ಷಗಳಿಂದ ಊರಲ್ಲೊಂದು ಸ್ವಂತ ಮನೆ ಕಟ್ಟಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ನಿವೃತ್ತಿಯ ನಂತರ ನೆಮ್ಮದಿಯಾಗಿರಲು ಅವರು ಹಾಕಿಕೊಂಡಿರುವ ಯೋಜನೆಗಳು ನಮ್ಮ ಘನ ಸರಕಾರದ ಕನ್ವರ್ಷನ್‌ ನೀತಿಯಿಂದಾಗಿ ಅರ್ಧಕ್ಕೇ ನಿಂತಿದೆ. ಕಳೆದ ಒಂದು ವರ್ಷದಿಂದ ಒಮ್ಮೆ ಗ್ರಾಮ ಪಂಚಾಯ್ತಿಯಿಂದ ಅನಾಪತ್ತಿ (NOC) ತರಲೆಂದೋ, ಇನ್ನೊಮ್ಮೆ ಮತ್ತಾವುದೋ ದಾಖಲೆ ತರಲೆಂದೋ, ಈಗ ಇಲೆಕ್ಷನ್‌ ಎಂತಲೋ, ಮತ್ತೂಮ್ಮೆ ಆನ್‌ಲೈನ್‌ ವ್ಯವಸ್ಥೆ ಶುರುವಾಗುತ್ತದೆಂದೋ ಸಬೂಬು ಕೇಳುತ್ತಾ ಪೆಚ್ಚಾಗಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ!

ಲ್ಯಾಂಡ್‌ ಕನ್ವರ್ಷನ್‌ ಮಾಡಿಸಲು ಕಚೇರಿಯಿಂದ ಕಚೇರಿಗೆ ಓಡಾಡಿ ಅಗತ್ಯವಿರುವ ದಾಖಲೆ ಕಲೆ ಹಾಕಲು ತನ್ನ ಬಳಿ ಸಮಯವಿಲ್ಲವೆಂದು ಸೇನೆಯ ಸೇವೆಯಲ್ಲಿದ್ದ ಯೋಧ ರೋರ್ವರು ಹತ್ತು ವರ್ಷದ ಹಿಂದೆ ಪಿತ್ರಾರ್ಜಿತ ಸ್ಥಳದಲ್ಲಿ ಸ್ವಂತ ಹಣದಲ್ಲಿ (ಗೃಹ ಸಾಲ ಪಡೆಯದೇ) ತಮ್ಮ ಎರಡು ವರ್ಷಗಳ ನಾಲ್ಕು ತಿಂಗಳ ವಾರ್ಷಿಕ ರಜೆಯನ್ನು ಉಪಯೋಗಿಸಿಕೊಂಡು ಮನೆ ಕಟ್ಟಿಸಿಕೊಂಡರು. ನಿವೃತ್ತಿಯ ನಂತರ ಇದೀಗ ಕನ್ವರ್ಷನ್‌ ಮಾಡಿಸಿ ದಾಖಲೆ ಸರಿಪಡಿಸಿಕೊಳ್ಳೋಣ ಎಂದರೆ ಅವರಿಗೆ ಕಳೆದ ಒಂದು ವರ್ಷದಿಂದ ಕಚೇರಿಯಿಂದ ಕಚೇರಿಗೆ ಅಲೆಯಬೇಕಾಗಿದೆ. ಮೊದಲು ಪಹಣಿ ಪತ್ರದಲ್ಲಿ ನ್ಯೂನತೆ ಇದೆ, ಅದನ್ನು ಸರಿಪಡಿಸಿಕೊಳ್ಳುವಂತೆ ತಿಳಿಸಲಾಯಿತು. ಪಹಣಿ ಪತ್ರ ಸರಿಪಡಿಸಿಕೊಳ್ಳಲು ಹಲವು ತಿಂಗಳುಗಳೇ ಬೇಕಾದವು. ನಂತರ ಭೂ ಪರಿವರ್ತನೆ ಕುರಿತು ಸರ್ವೇಯರ್‌ ಪಕ್ಷಿನೋಟ ನಕ್ಷೆ ಸಿದ್ದಪಡಿಸಿಕೊಳ್ಳಲು ಕೆಲವು ತಿಂಗಳುಗಳೇ ಕಳೆದವು. ಮಿಕ್ಕುಳಿದ ದಾಖಲೆಗಳನ್ನು ಕಲೆ ಹಾಕಿ ಇನ್ನು ತಾನು ಗೆದ್ದನೆಂದು ಬೀಗುವ ಹೊತ್ತಿನಲ್ಲಿ ಇನ್ನು ಮುಂದೆ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕಾರದ ಪದ್ಧತಿ ಜಾರಿಯಾಗಲಿದೆಯಾದ್ದರಿಂದ ಆ ಕುರಿತು ತಂತ್ರಾಶ ಸಿದ್ಧವಾಗುತ್ತಿರುವುದರಿಂದ ತಾತ್ಕಾಲಿಕವಾಗಿ ಭೂ ಪರಿವರ್ತನೆ ನಿಲ್ಲಿಸಲಾಗಿದೆ ಎನ್ನುವ ಸುದ್ದಿ ಬರ ಸಿಡಿಲಿನಂತೆ ಎರಗಿತು. ಛಲ ಬಿಡದ ತ್ರಿವಿಕ್ರಮನಂತೆ ಅವರು ಪುನಹ ಹೊಸದಾಗಿ ರೂ. 2000 ಕಟ್ಟಿ 11ಉನಕ್ಷೆ ಸಿದ್ಧಪಡಿಸಿಕೊಂಡು ತಾಲೂಕು ಕಚೇರಿಯ ಮುಂದೆ ನಿಂತಿದ್ದಾರೆ! ಮನೆ ಕಟ್ಟಿ ನೋಡಿ ಮದುವೆ ಮಾಡಿ ನೋಡಿ ಎಂದು ಹೇಳಿದ ಗಾದೆ ಮಾತಿನ ಮೊದಲ ಅರ್ಧದ ಮಹತ್ವ ತನಗೆ ಈಗ ಚೆನ್ನಾಗಿ ತಿಳಿಯಿತು ಎನ್ನುತ್ತಾರೆ ಅವರು.

ರಾಜ್ಯದಲ್ಲಿ ಗಂಡ – ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎಂದು ಹೇಳಿದಂತೆ ಸಮ್ಮಿಶ್ರ ಸರಕಾರದಲ್ಲಿ ಆಡಳಿತ ವ್ಯವಸ್ಥೆಯ ಮೇಲೆ ಸರಕಾರದ ಹಿಡಿತವಿಲ್ಲದೇ ಜನ ಸಮಸ್ಯೆಯನ್ನು ಕೇಳುವವರಿಲ್ಲವಾಗಿದೆ. ಸರಕಾರ ರಚನೆಯಾಗಿ ಆರು ತಿಂಗಳು ಕಳೆದರೂ ಆಡಳಿತ ಕುಂಟುತ್ತಾ ಸಾಗಿದೆ. ಅಧಿಕಾರ ಶಾಶ್ವತವಲ್ಲ. ಇಂದು ಅಧಿಕಾರದಲ್ಲಿರುವರು ರಾತ್ರಿ ಬೆಳಗಾಗುವುದರೊಳಗೆ ಮಾಜಿಗಳಾಗಿಬಿಡುತ್ತಾರೆ. ಗ್ರಾಮೀಣ ಅಭಿವೃದ್ಧಿಯ ಕುರಿತಾದ ನಜೀರ ಸಾಬ್‌ ಅವರ ಕಾಳಜಿಯನ್ನು, ಗೋವಿಂದೇಗೌಡರ ಶಿಕ್ಷಣ ಇಲಾಖೆಯ ಪ್ರಾಮಾಣಿಕ ಕೆಲಸಗಳನ್ನು, ವೀರಪ್ಪ ಮೊಯಿಲಿ ಯವರ ವೃತ್ತಿಪರ ಕೋರ್ಸ್‌ಗಳ ಸೀಟ್‌ ಹಂಚಿಕೆಯ ಸಿಇಟಿ ಪದ್ಧತಿ ಜಾರಿಗೆ ತಂದಂತಹ ಉತ್ತಮ ಕಾರ್ಯಗಳನ್ನು ಜನತೆ ಇಂದಿಗೂ ಸ್ಮರಿಸುತ್ತಾರೆ. ಕಂದಾಯ ಮಂತ್ರಿಗಳು ಲ್ಯಾಂಡ್‌ ಕನ್ವರ್ಷನ್‌ ವಿಷಯದಲ್ಲಿ ಲ್ಯಾಂಡ್‌ ಮಾರ್ಕ್‌ ನಿರ್ಣಯ ತಳೆದು ಶಾಶ್ವತ ಮತ್ತು ಪಾರದರ್ಶಿಕ ವ್ಯವಸ್ಥೆ ತಂದು ಉಪಕರಿಸುವರೆಂದು ಆಶಿಸಬಹುದೇ?

— ಬೈಂದೂರು ಚಂದ್ರಶೇಖರ ನಾವಡ

ಟಾಪ್ ನ್ಯೂಸ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.