ಸಕ್ಕರೆ ಕಾರ್ಖಾನೆ ಗ್ರಹಣ ಮುಕ್ತಿಗಿದು ಸಕಾಲ
Team Udayavani, Oct 14, 2018, 6:00 AM IST
ಉಡುಪಿಯಿಂದ ಬ್ರಹ್ಮಾವರದ ಕಡೆಗೆ ಹೊರಟರೆ ಹೇರೂರಿನ ಹತ್ತಿರ ಬರುವಾಗಲೇ ಕಣ್ಣಿಗೆ ಗೋಚರಿಸುತ್ತದೆ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆ. ರಾಷ್ಟ್ರೀಯ ಹೆದ್ದಾರಿ ಅರವತ್ತಾರರ ಮಗ್ಗುಲಲ್ಲೇ ಇರುವ ಬೃಹತ್ ಗಾತ್ರದ ಸಕ್ಕರೆ ಕಾರ್ಖಾನೆ ಎನ್ನಬಹುದಾದರೂ ಇಂದು ಅಲ್ಲಿ ಅದರ ಅಸ್ಥಿಪಂಜರ ಮಾತ್ರವೇ ಇದೆ. ಹೆಚ್ಚಾ ಕಮ್ಮಿ ಕಾರ್ಖಾನೆ ಶಿಥಿಲಾವಸ್ಥೆಯಲ್ಲಿದ್ದಂತೆ ಗೋಚರಿಸುತ್ತದೆ. ಜಿಲ್ಲೆಯ ಮಣ್ಣಿನ ಮಕ್ಕಳ ಬೆವರಿಗೂ ಸಾರ್ಥಕತೆಯ ಉಲ್ಲಾಸದ ಕಸುವು ನೀಡಬೇಕಿದ್ದ ಸಹಕಾರಿ ಸಕ್ಕರೆ ಕಾರ್ಖಾನೆ ಮೂರು ಜಿಲ್ಲೆಯ ಪಾಲಿಗೆ ಕಲ್ಪವೃಕ್ಷವಾಗಬೇಕಿತ್ತು. ಹಿರಿಯ ಸಹಕಾರಿ ಧುರೀಣರಾದ ಬಂಟ್ವಾಳ ನಾರಾಯಣ ನಾಯಕರ, ಮಣಿಪಾಲದ ಟಿ.ಎ. ಪೈಗಳ ಮತ್ತು ನೂರಾರು ಮಂದಿ ಹಿರಿಯರ ಕನಸಿನ ಕೂಸದು.
ಹಿಂದೆ ಬೈಕಾಡಿ ಬಡಹಾಡಿ ಎಂದೇ ಕರೆಯಿಸಿಕೊಂಡಿದ್ದ ಸುಮಾರು ನೂರಾ ಹತ್ತು ಎಕರೆ ಜಾಗದಲ್ಲಿ ಹಬ್ಬಿ ಹರಡಿ ನಿಂತ ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಈ ಜಾಗವನ್ನ ಗುರುತಿಸಿ ಕೊಟ್ಟದ್ದು ಆ ಕಾಲದ ಹಿರಿಯ ರಾಜಕಾರಣಿ ಹೇರೂರು ಬಾಲಕೃಷ್ಣ ಶೆಟ್ಟರು. ಜಿಲ್ಲೆಯ ಸೌಭಾಗ್ಯದ ಸೌಧವಾಗಬೇಕಿದ್ದ ಸಕ್ಕರೆ ಕಾರ್ಖಾನೆ ಅರಣ್ಯದ ನಡುವೆ ರೋದಿಸುತ್ತಾ ಕಿಲುಬೆದ್ದು ಹೋಗುತ್ತಿದ್ದರೂ ,ಆಗೊಮ್ಮೆ ಈಗೊಮ್ಮೆ ರಾಜಕಾರಣದ ವೇದಿಕೆಯಲ್ಲಿ ಭಾಷಣದ ವಸ್ತುವಾಗಿಯಷ್ಟೇ ಸುದ್ದಿಯಾಗಿದ್ದರೂ ನಮ್ಮ ಜಿಲ್ಲೆಯ ರಾಜಕಾರಣಿಗಳಲ್ಲಿನ ಪ್ರಬಲವಾದ ಇಚ್ಛಾಶಕ್ತಿಯ ಕೊರತೆಯ ಕಾರಣಕ್ಕೆ ಮರುಜೀವ ಪಡೆಯಲೇ ಇಲ್ಲ. ಕೇವಲ ರಾಜಕಾರಣಿಗಳನ್ನಷ್ಟೇ ಹಳಿದರೆ ಸಾಕೇ? ನಮ್ಮ ಜಿಲ್ಲೆಯ ರೈತರು ಪ್ರತಿಭಟಿಸಲೇ ಇಲ್ಲ. ರೈತಪರವಾದಂತಹ ಧ್ವನಿ ಮೊಳಗಲೇ ಇಲ್ಲ. ಹಾಗಾಗಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಮತ್ತೆ ಬಾಗಿಲು ತೆಗೆಯಲೇ ಇಲ್ಲ. ಇಂದಿಗೂ ಅಲ್ಲೊಂದು ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಲಿದೆ. ಮೊಳಹಳ್ಳಿ ಜಯಶೀಲ ಶೆಟ್ಟರು ಅದರ ಅಧ್ಯಕ್ಷರಾಗಿದ್ದಾರೆ. ನೂರಾರು ಮಾಫಿಯಾಗಳು ಸಕ್ಕರೆ ಕಾರ್ಖಾನೆಯ ಫಲವತ್ತಾದ ಜಾಗವನ್ನು ಕೊಳ್ಳೆಹೊಡೆಯುವ ಸಂಚಿನಲ್ಲಿವೆ. ಸರಕಾರವೇ ಅದನ್ನು ಲಿಕ್ವಿಡೇಶನ್ ಮಾಡಿ ಬಿಡುವ ಸಾಧ್ಯತೆಗಳೂ ಇತ್ತು. ಆದರೆ ಒಂದು ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿದ್ದ ಕಾರಣಕ್ಕೆ ಅದು ಸಾಧ್ಯವಾಗಲಿಲ್ಲ.
ಇದೀಗ ಮತ್ತೂಂದು ಸುತ್ತಿನಲ್ಲಿ “ಮತ್ತೆ ಕಟ್ಟೋಣ ಸಕ್ಕರೆ ಕಾರ್ಖಾನೆ’ ಎನ್ನುವ ಕೂಗು ಕೇಳಿಸುತ್ತಿದೆ. ಹತ್ತು ಎಕರೆ ಜಾಗವನ್ನ ಮಾರಿಯಾದರೂ ಕಾರ್ಖಾನೆ ಆರಂಭಿಸಬೇಕು ಎನ್ನುವ ಹಠಕ್ಕೆ ಆಡಳಿತ ಮಂಡಳಿಯೂ ಬಂದಿದೆ. ಜಿಲ್ಲೆಗೆ ಬಂದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಕ್ಕರೆ ಕಾರ್ಖಾನೆಯ ವಿಚಾರ ಪ್ರಸ್ತಾಪ ಬಂದಾಗ “ನೀವು ಕಬ್ಬು ಬೆಳೆಯಿರಿ, ಕಾರ್ಖಾನೆಯ ಪುನಶ್ಚೇತನಕ್ಕೆ ಹಣವನ್ನು ಸರಕಾರ ಕೊಡುತ್ತದೆ’ ಎನ್ನುವ ಮೂಲಕ ಮತ್ತೆ ರೈತರಲ್ಲಿ ಆಶಾಭಾವನೆ ಮೂಡಿಸಿ ಹೋಗಿದ್ದಾರೆ. ಆ ನಿಟ್ಟಿನಲ್ಲಿ ರೈತ ಸಂಘದ ಕೆ. ಪ್ರತಾಪಚಂದ್ರ ಶೆಟ್ಟಿ, ಎನ್. ಬಾಲಕೃಷ್ಣ ಶೆಟ್ಟಿ, ಉಮಾನಾಥ ಶೆಟ್ಟಿ ಮತ್ತು ಕಾರ್ಖಾನೆಯ ಅಧ್ಯಕ್ಷ ಜಯಶೀಲ ಶೆಟ್ಟಿ ಇನ್ನಿತರರು ಕಾರ್ಖಾನೆಯನ್ನು ಮತ್ತೆ ತೆರೆಯುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.
ಪುಣೆಯ ವಾಲಚಂದ್ ನಗರ್ ಟೆಕ್ನಾಲಜಿಯ ವಾಲ್ ಚಂದ್ ಪ್ಲಾಂಟ್ ಮೂಲಕ ಆರಂಭವಾದ ಈ ಸಕ್ಕರೆ ಕಾರ್ಖಾನೆಯ ಕಬ್ಬು ಅರೆಯುವ ಸಾಮರ್ಥ್ಯ 1250 ಮೆಟ್ರಿಕ್ ಟನ್. ವಾರಾಹಿ ಯೋಜನೆಗೂ, ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೂ ಒಂದೇ ದಿವಸ ಅಂದಿನ ಮುಖ್ಯಮಂತ್ರಿ ಗುಂಡುರಾವ್ ಬಂದು ಶಂಕು ಸ್ಥಾಪನೆ ಮಾಡಿ ಹೋದರು. ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಕಬ್ಬು ಬೆಳೆಯುವ ರೈತರಿಗೆ ವಾರಾಹಿ ಯೋಜನೆಯಿಂದ ನೀರು ನೀಡುವುದು ಎನ್ನುವ ಕನಸು ಬಹಳ ಸೊಗಸಾಗಿತ್ತು. ಆದರೆ ಕಾಲ ಸವೆದಂತೆ ವಾರಾಹಿ ಕುಂಟುತ್ತ ಸಾಗಿದರೆ ಸಕ್ಕರೆ ಕಾರ್ಖಾನೆ ಭರದಿಂದ ಸಾಗಿ ಕೊನೆಗೆ ಬರದ ಪರಿಸ್ಥಿತಿ ತಲುಪಿ ಬಾಗಿಲೆಳೆದುಕೊಂಡಿತು. ಯಡಿಯೂರಪ್ಪನವರು ಕುದುರೆ ಗಾಡಿಯಲ್ಲಿ ಬಂದು ಪ್ರತಿಭಟಿಸಿ “ನಮ್ಮ ಸರಕಾರದ ಆರಂಭ, ಸಕ್ಕರೆ ಕಾರ್ಖಾನೆಯ ಪ್ರಾರಂಭ’ ಎಂದೂ ಆರ್ಭಟಿಸಿ ಹೋದರು. ಮುಂದೆ ಅವರು ಮುಖ್ಯಮಂತ್ರಿಯಾಗಿ ರೈತನ ಹೆಸರಲ್ಲೇ ಪ್ರಮಾಣವಚನ ಸ್ವೀಕರಿಸಿದಾಗ ಈ ವರ್ಷ ಕಾರ್ಖಾನೆ ಆಗುತ್ತದೆ ಎಂದವರಿದ್ದಾರೆ. ಆದರೆ ರಾಜಕಾರಣಿಗಳು ಆ ನಿಟ್ಟಿನಲ್ಲಿ ಪ್ರಯತ್ನಿಸಲೇ ಇಲ್ಲ. ಇದೀಗ ಕೇಂದ್ರ ಸರಕಾರ ಐದು ಸಾವಿರ ಕೋಟಿ ಮೊತ್ತವನ್ನು ಕಬ್ಬು ಬೆಳೆಗಾರ ರೈತರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ತೆಗೆದಿರಿಸಿರುವ ಕಾರಣಕ್ಕೆ ರಾಜ್ಯದ ಮುಖ್ಯಮಂತ್ರಿಯೂ ಕಾರ್ಖಾನೆಗೆ ಹಣ ಕೊಡುತ್ತೇನೆ ಎಂದಿರುವ ಕಾರಣಕ್ಕೆ, ವಾರಾಹಿ ಯೋಜನೆಗೆ ಮತ್ತೆ ಚಾಲನೆ ಸಿಕ್ಕಿದ ಕಾರಣಕ್ಕೆ ಕಾರ್ಖಾನೆ ಮರಳಿ ಆರಂಭಗೊಳ್ಳುವ ವಿಶ್ವಾಸ ಗರಿಗೆದರಿದೆ.
ಸಕ್ಕರೆ ಕಾರ್ಖಾನೆ ಆರಂಭಗೊಳ್ಳುವ ಮೊದಲೂ ಜಿಲ್ಲೆಯಲ್ಲಿ ಸಾವಿರಾರು ಎಕರೆ ಕಬ್ಬು ಬೆಳೆಯುತ್ತಿದ್ದರು. ವಾರಾಹಿ ನೀರು ಹರಿದು ಬಾರದಿದ್ದ ಕಾಲದಲ್ಲಿಯೂ ಏತದ ಮೂಲಕವೂ ನೀರು ಹಾಯಿಸಿ ಕಬ್ಬು ಬೆಳೆದ ಇತಿಹಾಸವಿದೆ. ಆಗ ಸಾವಿರಾರು ಬೆಲ್ಲದ ಗಾಣಗಳಿದ್ದವು. 1977ರಲ್ಲಿ ಜನತಾ ಸರ್ಕಾರ ಬಂದಾಗ ಸಕ್ಕರೆಗೆ ಸಬ್ಸಿಡಿ ಕೊಟ್ಟು ಸುಲಭವಾಗಿ ಎಲ್ಲರಿಗೂ ದೊರಕುವಂತೆ ಮಾಡಿತು. ಸಕ್ಕರೆ ಕಾರ್ಖಾನೆಗಳ ಅಗತ್ಯವೂ ಹೆಚ್ಚಾಯಿತು. ಕೊನೆಗೆ ಬ್ರಹ್ಮಾವರದಲ್ಲಿ ಸಕ್ಕರೆ ಕಾರ್ಖಾನೆ ಆರಂಭಗೊಂಡ ನಂತರ ಬೆಲ್ಲದ ಆಲೆಗಳೂ ಕಣ್ಣು ಮುಚ್ಚಿದವು. ಕಬ್ಬು ಬೆಳೆದ ರೈತ ಕಬ್ಬನ್ನು ಸಕ್ಕರೆ ಕಾರ್ಖಾನೆಗೆ ಕೊಟ್ಟ, ಒಂದಷ್ಟು ಕಾಲ ಕಾರ್ಖಾನೆಯೂ ಬೆಳೆಯುತ್ತಲೇ ಹೋಯಿತು. ಕೆ.ಕೆ. ಪೈ, ಶಂಭು ಶೆಟ್ಟಿ, ಆಸ್ಕರ್ ಫೆರ್ನಾಂಡಿಸ್, ಜಯಪ್ರಕಾಶ ಹೆಗ್ಡೆ, ಜಯಶೀಲ ಶೆಟ್ಟಿ ಹೀಗೆ ಸಕ್ಕರೆ ಕಾರ್ಖಾನೆಯ ಚುಕ್ಕಾಣಿ ಹಿಡಿದವರೇನೂ ಸಾಮಾನ್ಯರಾಗಿರಲಿಲ್ಲ. ಆದರೂ ಕಾರ್ಖಾನೆ ಸಾಲದ ಸುಳಿಗೆ ಸಿಲುಕಿ ಬಾಗೆಲೆಳೆದು ಕೊಂಡದ್ದೀಗ ಇತಿಹಾಸ. ಇಂದು ಬಹುತೇಕ ಸಾಲಗಳು ತೀರಿವೆ. ಹೆಚ್ಚಾ ಕಮ್ಮಿ ಎಂಬತ್ತೂಂದು ಸೊಸೈಟಿಗಳಲ್ಲಿದ್ದ ಸಾಲವೀಗ ಬಹುತೇಕ ತೀರಿ ಕೇವಲ ಮೂರು ಸೊಸೈಟಿಗಳಲ್ಲಿ ಮಾತ್ರವೇ ಬಾಕಿ ಉಳಿದಿದೆ, ಅದೂ ಕೆಲವೇ ಲಕ್ಷಗಳು ಮಾತ್ರ. ಕಾರ್ಮಿಕರ ಹಣವೂ ಸಂದಾಯವಾಗಿದೆ. ಹಿಂದಿನ ಸರಕಾರ ಎರಡೆರಡು ಸಂಸ್ಥೆಯಿಂದ ಇದರ ಸಾಧಕ-ಬಾಧಕದ ಬಗ್ಗೆ ವರದಿಯನ್ನ ತರಿಸಿಕೊಂಡಿದ್ದು, ಆ ಎರಡೂ ವರದಿಗಳೂ ಸಕ್ಕರೆ ಕಾರ್ಖಾನೆಗೆ ಪೂರಕವಾಗಿಯೇ ಬಂದಿವೆ. ಇದೀಗ ಕಾರ್ಖಾನೆಯ ಪುನರಾರಂಭಕ್ಕೆ ಬೇಕಿರುವುದು ಸುಮಾರು ಅರವತ್ತು ಕೋಟಿ ಹಣ. ಮೂವತ್ತು ಕೋಟಿ ಹಣ ಬಂದರೂ ಸಕ್ಕರೆ ಕಾರ್ಖಾನೆ ಚಾಲನೆಗೊಳ್ಳುತ್ತದೆ. ಆ ಕುರಿತು ದೇಶದ ಪ್ರತಿಷ್ಠಿತ ಮಿಟ್ಕಾನ್ ಸಂಸ್ಥೆ ಒಂದು ಪ್ರಾಜೆಕ್ಟ್ ರಿಪೋರ್ಟ್ ಕೊಟ್ಟಿದೆ. ಅದರಲ್ಲಿ ಮೂರು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿಯನ್ನೂ ಒಳಗೊಂಡಿದೆ. ಕಾರ್ಖಾನೆ ಆರಂಭಗೊಂಡಲ್ಲಿ ಇಲ್ಲಿಗೆ ಮುಖ್ಯವಾಗಿ ಬೇಕಿರುವುದು ಇಥೆನಾಲ್ ಮೂಲಕ ಕಾರ್ಖಾನೆಯನ್ನು ಭದ್ರವಾಗಿಸುವುದು.
ಇಥೆನಾಲ್ ಬಳಕೆಗೆ ಕೇಂದ್ರ ಸರ್ಕಾರದ ಪೂರ್ಣ ಬೆಂಬಲವಿದೆ. ಕೇಂದ್ರ ಸರಕಾರವೂ ಇಥೆನಾಲ್ ಬೆಲೆಯನ್ನು ಲೀಟರ್ ಒಂದಕ್ಕೆ 47.50 ರೂಪಾಯಿ ಇಂದ 59.50 ರೂಪಾಯಿಗೆ ಹೆಚ್ಚಿಸಿರುವುದು ಕಬ್ಬು ಬೆಳೆಗಾರರಿಗೆ ಆಶಾದಾಯಕವಾದ ಬೆಳವಣಿಗೆ. ಇಥೆನಾಲ್ ಹೆಚ್ಚಿನ ಪ್ರಮಾಣದ ಬಳಕೆ ಕೇಂದ್ರ ಸರಕಾರದ ಪ್ರಧಾನ ಗುರಿಯಾಗಿದೆ. ರೂಪಾಯಿ ಮೌಲ್ಯವರ್ಧನೆಗೆ ಅದು ಅಗತ್ಯವೂ ಹೌದು. ಇದರಿಂದ ಸಕ್ಕರೆ ಉದ್ಯಮಕ್ಕೆ ಹೆಚ್ಚಿನ ಬೆಂಬಲ ದೊರಕುತ್ತದೆ. ಒಂದೊಮ್ಮೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಇಥೆನಾಲ್ ಪೂರೈಕೆಯನ್ನ ಮಾಡಲು ಹೊರಟಿತೆಂದರೆ ಸಕ್ಕರೆಗಿಂತಲೂ ಇಥೆನಾಲಿಗೇ ಅತೀ ಹೆಚ್ಚಿನ ಬೇಡಿಕೆ ಬರಲಿದೆ. ಆರ್ಥಿಕವಾಗಿಯೂ ಎಂದೂ ಕೊರತೆಯಾಗದಷ್ಟು ಹಣದ ಹರಿವು ಸಾಧ್ಯವಾಗಲಿದೆ. ರಾಜ್ಯದ ಬೇರೆ ಯಾವ ಸಕ್ಕರೆ ಕಾರ್ಖಾನೆಗಿಂತಲೂ ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಅದರ ಲಾಭದ ಅಂಶ ಹೆಚ್ಚು. ಯಾಕೆಂದರೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಿಂದ ಕೇವಲ ಐವತ್ತು ನಿಮಿಷದ ಅಂತರದಲ್ಲಿ ಎಂ.ಆರ್.ಪಿ.ಎಲ್. ಕಾರ್ಯನಿರ್ವಹಿಸುತ್ತಿದೆ. ಎಷ್ಟು ಇಥೆನಾಲ್ ಕೊಟ್ಟರೂ ಖರೀದಿಗೆ ಎಂ.ಆರ್.ಪಿ.ಎಲ…. ತಯಾರಿದೆ. ಹಾಗಾಗಿ ಕಬ್ಬು ಬೆಳೆದ ರೈತರಿಗೂ ಹಿಂದಿನಂತೆ ಹಣಸಂದಾಯದ ತೊಂದರೆಯಂತೂ ಬರುವುದಿಲ್ಲ. ತಕ್ಷಣವೇ ಹಣವನ್ನ ಕೊಡುವ ವ್ಯವಸ್ಥೆಯೂ ಆಗುತ್ತದೆ. ಎಂ.ಆರ್.ಪಿ.ಎಲ್. ಮುಂಗಡ ಹಣವನ್ನೂ ಪಾವತಿಸಬಲ್ಲುದು. ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಇನ್ನೊಂದು ಧನಾತ್ಮಕ ಅಂಶವೆಂದರೆ ರಾಷ್ಟ್ರೀಯ ಹೆ¨ªಾರಿಯ ಮಗ್ಗುಲಿನಲ್ಲಿರುವ ಕಾರಣಕ್ಕೆ ಸಾರಿಗೆ ವ್ಯವಸ್ಥೆ ಸುಲಭ. ಬಂದರು ಹತ್ತಿರದÇÉೇ ಇರುವ ಕಾರಣಕ್ಕೆ ಸಕ್ಕರೆಗೆ ಆಮದು ಮತ್ತು ರಪು¤ ಸುಂಕ ವಿನಾಯತಿ ಇರುವ ಕಾರಣಕ್ಕೆ ವಿದೇಶಗಳಿಂದ ಕಚ್ಚಾ ಸಕ್ಕರೆ ತರಿಸಿ ಸಕ್ಕರೆ ತಯಾರು ಮಾಡಿ ರವಾನೆ ಮಾಡಿದರೆ ಕಾರ್ಖಾನೆಯೂ ಲಾಭದಾಯಕವಾಗಿ ನಡೆಯಲಿದ್ದು, ಕಾರ್ಮಿಕರಿಗೂ ವರ್ಷವಿಡೀ ಕೆಲಸ ದೊರಕಲಿದೆ. ಕಬ್ಬಿನ ಉಪ ಉತ್ಪನ್ನಗಳನ್ನು ಇಲ್ಲಿ ಧಾರಾಳವಾಗಿ ಮಾಡಬಹುದು. ಸಕ್ಕರೆ ಕಾರ್ಖಾನೆಯಿಂದ ಯಾವುದೇ ತ್ಯಾಜ್ಯವೂ ನಿರ್ಮಾಣ ವಾಗುವುದಿಲ್ಲ ಮೊಲೇಸಿಸ್ ಬಳಕೆ, ವಿದ್ಯುತ್ ಉತ್ಪಾದನೆ, ಸ್ಪಿರಿಟ್, ಪಶು ಆಹಾರ… ಹಿಗೆ ಹಲವಾರು ಸಾಧ್ಯತೆಗಳಿವೆ.
ಇದೀಗ ವಾರಾಹಿ ನೀರು ಕೂಡಾ ಹರಿದು ಬರುತ್ತಿದೆ. ವಾರಾಹಿ ಕಾಮಗಾರಿಯೂ ಅತ್ಯಂತ ವೇಗವಾಗಿ ಸಾಗುತ್ತಿದೆ. ಸಕ್ಕರೆ ಕಾರ್ಖಾನೆ ಆರಂಭಿಸುವ ಭರವಸೆ ಕೊಟ್ಟರೆ ಕಬ್ಬು ಬೆಳೆಯಲು ನಾವು ತಯಾರು ಎಂದು 2700 ರೈತರು ಮುಂದೆ ಬಂದಿದ್ದಾರೆ. ಈಗಾಗಲೆ 9000 ಎಕರೆಗೆ ನೀರು ಕೊಡುವಷ್ಟು ವಾರಾಹಿ ಯೋಜನೆ ಯಶಕಂಡಿದೆ. ಸದ್ಯದಲ್ಲೇ ಇನ್ನೂ ಹೆಚ್ಚಾಗಲಿದೆ. ಒಟ್ಟು ಆರು ಸಾವಿರ ಎಕರೆ ಕಬ್ಬು ಬೆಳೆದರೂ ಕಾರ್ಖಾನೆಗೆ ಸಾಕಾದೀತು. ಬದಲಾದ ಹವಮಾನ ವೈಪರೀತ್ಯದಲ್ಲಿ ಭತ್ತದ ಬೆಳೆಗಿಂತಲೂ ಕಬ್ಬು ಬೆಳೆಯುವುದು ಸೂಕ್ತ. ಒಂದರಿಂದ ಏಳು ವರ್ಷದ ತನಕವೂ ಕೊಳೆ ಹಾಕಿ ಮತ್ತೆ ಮತ್ತೆ ಬೆಳೆಯಬಹುದಾದ ಬೆಳೆ ಕಬ್ಬು. ಮಿಗಿಲಾಗಿ ಇದು ವಾಣಿಜ್ಯ ಬೆಳೆ. ವರ್ಷಕ್ಕೆ ಎರಡು ಬುಡ ಮಾಡುವುದು ಬಿಟ್ಟರೆ ಭಾರೀ ಕೆಲಸವನ್ನೂ ಕಬ್ಬು ಬೇಡುವುದಿಲ್ಲ. ಕಟಾವು ಮಾಡಲು ಕಾರ್ಮಿಕರು ಬೇಕಾಗುತ್ತಾರೆ ಹೌದಾದರೂ ಆಧುನಿಕವಾದ ಕ್ರಮದಲ್ಲಿ ಅದೂ ಸುಲಭವಾಗಲಿದೆ. ಇನ್ನು ನಮ್ಮ ಜಿಲ್ಲೆಯಲ್ಲಿ ಕಬ್ಬಿನ ಇಳುವರಿ ಪ್ರಮಾಣ ಕಡಿಮೆ ಅದು ಶೇ. 9 ಎನ್ನುವ ಮಾತಿದೆ. ಆದರೆ ಇದೀಗ ಯಾವ ಹವಾಮಾನಕ್ಕೆ ಯಾವ ರೀತಿಯ ವಿಕಸಿತ ತಳಿಯನ್ನ ಬಳಸಬೇಕು ಎನ್ನುವುದನ್ನ ಕೃಷಿ ಸಂಶೋಧಕರು ಸಂಶೋಧಿಸಿದ್ದಾರೆ. ಹೆಚ್ಚು ಕಬ್ಬು ಬೆಳೆಯುವ ಮಂಡ್ಯದಲ್ಲಿ ಬರುವುದು ಕೂಡ ಶೇ. 10 ಮಾತ್ರ.
ಹೀಗೆ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಎಲ್ಲಾ ರೀತಿಯಲ್ಲಿಯೂ ಸಕಾರಾತ್ಮಕವಾದ ಅಂಶಗಳು ಗೋಚರಿಸುತ್ತಲಿವೆ. ರೈತರ ಸಾಲಮನ್ನಾಕ್ಕೆ ನಲವತ್ತು ಸಾವಿರ ಕೋಟಿ ವ್ಯಯಿಸುವ ಸರ್ಕಾರಕ್ಕೆ, ಮಠ ಮಾನ್ಯಗಳಿಗೆ ನೂರಾರು ಕೋಟಿ, ಉತ್ಸವಾದಿಗಳಿಗೆ, ಜಯಂತಿಗಳಿಗೆ ನೂರಾರು ಕೋಟಿ ವ್ಯಯ ಮಾಡುವ ಸರಕಾರಕ್ಕೆ ರೈತರ ಕೈಗೆ ಬಲ ಕೊಡುವ, ದುಡಿಯುವ ವರ್ಗಕ್ಕೆ ಶಕ್ತಿ ತುಂಬುವ, ಒಂದು ಜಿಲ್ಲೆಯನ್ನೇ ಅಭಿವೃದ್ಧಿಯತ್ತ ಕೊಂಡೊಯ್ಯುವ ಸಕ್ಕರೆ ಕಾರ್ಖಾನೆಗೆ ಅರವತ್ತು- ಎಪ್ಪತ್ತು ಕೋಟಿ ಕೊಡಲಾಗದೆ?
ವಸಂತ್ ಗಿಳಿಯಾರ್