ಮನೆ ನಿಮ್ಮದು, ಮನ ನಿಮ್ಮದು…ಕಸಪೊರಕೆ ಸಿದ್ಧವಿದೆಯೇ?
Team Udayavani, Oct 28, 2018, 6:00 AM IST
ಅಮ್ಮ ಹೇಳುತ್ತಲೇ ಇದ್ದಳು: “ಈ ಬಾರಿ ಅವರು ಸಿಗಲಿ, ಅವತ್ತು ಯಾಕೆ ಹೀಗಂದಿರಿ? ಎಂದು ಹಿಡಿದು ಕೇಳಿಯೇ ಬಿಡುತ್ತೇನೆ ಅಂತ. ಆದರೆ ಹಾಗೆ ಅನ್ನುವ ಧೈರ್ಯವನ್ನು ಅಮ್ಮ ತೋರಲಿಲ್ಲ. ಬದಲಿಗೆ, ಪ್ರತಿಬಾರಿಯೂ ಆ ಸಂಬಂಧಿಕರು ಬಂದಾಗ ಇನ್ನೇನೋ ಕುಹಕದ ಮಾತನಾಡುವುದು, ಅಮ್ಮನ ಅಕೌಂಟ್ನಲ್ಲಿ ನೋವಿನ ಮಾತುಗಳು ಜಮೆಯಾಗುವುದು ನಡೆಯುತ್ತಲೇ ಹೋಯಿತು.
ನೀವು ಮೊದಲೇ ಈ ಕಥೆಯನ್ನು ಕೇಳಿದ್ದೀರಿ ಎಂದು ಅನಿಸಿದರೂ ಮತ್ತೂಮ್ಮೆ ಮನಗೊಟ್ಟು ಓದಿಬಿಡಿ…
16ನೇ ಶತಮಾನ. ಮಳೆಗಾಲದ ಸಮಯ. ಜಪಾನ್ನ ಇಸಾಕು ಗ್ರಾಮದಲ್ಲಿ ಜೆನ್ ಗುರುವೊಬ್ಬರು ತಮ್ಮ ಇಬ್ಬರು ಶಿಷ್ಯಂದಿರೊಂದಿಗೆ ಆಶ್ರಮದತ್ತ ತೆರಳುತ್ತಿದ್ದರು. ಊರಲ್ಲಿದ್ದ ಚಿಕ್ಕ ಕೆರೆಯೊಂದು ಮಳೆಯಿಂದಾಗಿ ಮೈದುಂಬಿಕೊಂಡು ರಸ್ತೆಯನ್ನೆಲ್ಲ ಆವರಿಸಿಬಿಟ್ಟಿತ್ತು. ಗುರು ಮತ್ತು ಶಿಷ್ಯರು ಈ ಕೆರೆಯತ್ತ ಬಂದರು. ಅಲ್ಲಿ ನೋಡುತ್ತಾರೆ, ಯುವತಿಯೊಬ್ಬಳು ಚಿಂತಾಕ್ರಾಂತಳಾಗಿ ನಿಂತಿದ್ದಾಳೆ. ರಸ್ತೆಯಲ್ಲಿ ಮೊಣಕಾಲು ಮುಳುಗುವಷ್ಟು ನೀರಷ್ಟೇ ತುಂಬಿತ್ತಾದರೂ ಅದನ್ನು ದಾಟುವುದಕ್ಕೆ ಅವಳಿಗೆ ಹೆದರಿಕೆ. ಈ ಯುವತಿಯನ್ನು ನೋಡಿ ಶಿಷ್ಯರಿಗೆ ಕರುಣೆಯ ಜೊತೆಗೆ ನಗುವೂ ಉಕ್ಕಿತು. ಇವರು ಮುಸಿಮುಸಿ ನಗುವುದನ್ನು ಗಮನಿಸಿದರೂ ಗಮನಿಸದಂತಿದ್ದ ಗುರು ಕೂಡಲೇ ಆ ಯುವತಿಯ ಬಳಿ ತೆರಳಿದರು.
ಶಿಷ್ಯಂದಿರಿಗೆ ತಮ್ಮ ಗುರು ಆ ಯುವತಿಯೊಂದಿಗೆ ಏನು ಮಾತನಾಡುತ್ತಿರಬಹುದು ಎನ್ನುವ ಕುತೂಹಲ. ಇವರಿಬ್ಬರೂ ಹುಬ್ಬೇರಿಸಿ ಕುತೂಹಲದಿಂದ ನೋಡುತ್ತಿರುವಾಗಲೇ ಆ ಗುರು ಯುವತಿಯನ್ನು ಹೊತ್ತುಕೊಂಡು ಜಲಾವೃತಗೊಂಡ ರಸ್ತೆಯಲ್ಲಿ ನಡೆದೇ ಬಿಟ್ಟರು. ಶಿಷೊತ್ತಮರು ಹೌಹಾರಿಬಿಟ್ಟರು! ಗರಬಡಿದವರಂತೆ ಕಣ್ಣುಪಿಳಿಪಿಳಿ ಬಿಡುತ್ತಾ ಗುರುವನ್ನು ಹಿಂಬಾಲಿಸಿದರು. ಅರೆ ನಿಮಿಷದಲ್ಲಿಯೇ ಯುವತಿಯನ್ನು ಗುರು ರಸ್ತೆ ದಾಟಿಸಿ ಕೆಳಗಿಳಿಸಿದರು. ಆಕೆ ನಸುನಗುತ್ತಾ ತಲೆಬಾಗಿ ವಂದಿಸಿ ಮನೆಯತ್ತ ಹೊರಟಳು. ಗುರು-ಶಿಷ್ಯರು ಆಶ್ರಮದತ್ತ ಹೊರಟರು.
ಶಿಷ್ಯರಿಗೆ ತಮ್ಮ ಗುರುವಿನ ನಡೆಯ ಬಗ್ಗೆ ಗೊಂದಲ, ಅನುಮಾನದ ಜೊತೆಗೆ ಸಿಟ್ಟೂ ಬರಲಾರಂಭಿಸಿತು. ಇವರು ತುಂಬು ಯೌವನದ ಯುವತಿಯನ್ನು ಹೊತ್ತುಕೊಳ್ಳುವುದು ಎಷ್ಟು ಸರಿ? ಎಂದು ಶಿಷ್ಯರಿಬ್ಬರೂ ತಾಸುಗಟ್ಟಲೇ ಪಿಸುಪಿಸು ಮಾತನಾಡಿ ಕೊಂಡರು… ಕೆಲ ದಿನಗಳು ಕಳೆದವು, ಇವರಿಗೆ ಸಮಾಧಾನವಾಗಲೇ ಇಲ್ಲ. ಕಡೆಗೆ ತಲೆ ಚಿಟ್ಟುಹಿಡಿದಂತಾಗಿ ಇಬ್ಬರೂ ಗುರುವಿನ ಕೊಠಡಿಗೆ ತೆರಳಿದರು. ಇವರನ್ನು ನೋಡಿ ಗುರು “ಏನು ಬೇಕು?’ ಎಂದು ಕೇಳಿದರು. ಮೊದಲನೇ ಶಿಷ್ಯ ನೆಲ ನೋಡುತ್ತಾ “ನೀವು ಮಾಡಿದ್ದು ಸರಿಯಲ್ಲ’ ಎಂದ. ಅವ ಮಾತು ಮುಗಿಸುವ ಮುನ್ನವೇ ಎರಡನೆಯ ಶಿಷ್ಯ, “ನೀವು ಆ ಹುಡುಗಿಯನ್ನು ಹೊತ್ತುಕೊಂಡು ಹೆಜ್ಜೆಹಾಕಿದ್ದರ ಬಗ್ಗೇನೇ ನಾವು ಮಾತನಾಡುತ್ತಿರೋದು’ ಎಂದ.
ಗುರುವಿಗೆ ಇವರೇನು ಮಾತನಾಡುತ್ತಿದ್ದಾರೆ ಎನ್ನುವುದು ತಕ್ಷಣ ನೆನಪಾಗಲಿಲ್ಲ. ತುಸು ಯೋಚಿಸಿದ ನಂತರ ಯಾವ ಘಟನೆಯನ್ನು ಉಲ್ಲೇಖೀಸುತ್ತಿದ್ದಾರೆ ಎನ್ನುವುದು ಅರ್ಥವಾಯಿತು. ಗುರು ನಗಲಾರಂಭಿಸಿದರು. ಆಗ ಎರಡನೇ ಶಿಷ್ಯ, “ಗುರುಗಳೇ, ನಮ್ಮ ಪ್ರಶ್ನೆಗೆ ಉತ್ತರ ಕೊಡಿ. ನಿಮ್ಮ ಉದ್ದೇಶ ಆ ಯುವತಿಗೆ ಸಹಾಯ ಮಾಡುವುದೇ ಆಗಿತ್ತಾದರೂ, ಒಬ್ಬ ಬ್ರಹ್ಮಚಾರಿಯಾಗಿ ನೀವು ಆ ಯುವತಿಯನ್ನು ಹೊತ್ತುಕೊಂಡದ್ದು ತಪ್ಪಲ್ಲವೇ?’ ಎಂದು ತುಸು ಮುನಿಸಿನಿಂದ ಪ್ರಶ್ನಿಸಿದ. ಗುರುವಿನ ಮುಖ ಗಂಭೀರವಾಯಿತು, “ಈ ಘಟನೆ ನಡೆದದ್ದು ಎಷ್ಟು ದಿನದ ಹಿಂದೆ?’ ಎಂದು ಮರುಪ್ರಶ್ನೆ ಹಾಕಿದರು ಗುರುಗಳು.
“ನಾಳೆಗೆ 5 ದಿನವಾಗುತ್ತದೆ’ ಎಂದ ಮೊದಲನೆಯ ಶಿಷ್ಯ.
ಉತ್ತರ ಕೇಳಿ ಗುರುವಿಗೆ ಮತ್ತೆ ನಗು ಬಂದಿತು.
ಎರಡನೇ ಶಿಷ್ಯನಿಗೆ ಸಿಟ್ಟು ನೆತ್ತಿಗೇರಿತು: “ಗುರುಗಳೇ ನಮ್ಮ ಪ್ರಶ್ನೆಗೆ ಉತ್ತರಿಸಿ, ಬ್ರಹ್ಮಚಾರಿಯಾದ ನೀವು ಆ ಯುವತಿಯನ್ನು ಹೊತ್ತುಕೊಂಡದ್ದು ಎಷ್ಟು ಸರಿ?’ ಎಂದ.
ಗುರು ಇಬ್ಬರನ್ನೂ ಎದುರು ಕುಳಿತುಕೊಳ್ಳಲು ಸೂಚಿಸಿ ಅಂದರು “ಅಯ್ಯೋ ಪೆದ್ದರಾ, ನಾನು ಆ ಯುವತಿಯನ್ನು ಹೆಚ್ಚೆಂದರೆ 1 ನಿಮಿಷ ಹೊತ್ತುಕೊಂಡೆನಷ್ಟೇ…ಆದರೆ ನೀವಿಬ್ಬರೂ ಆಕೆಯನ್ನು 5 ದಿನಗಳಿಂದಲೂ ತಲೆಯಲ್ಲಿ ಹೊತ್ತು ಅಡ್ಡಾಡುತ್ತಿದ್ದೀರಲ್ಲ, ಮೊದಲು ನೀವು ಆಕೆಯನ್ನು ಕೆಳಗಿಳಿಸಿ!”
ಈ ಜೆನ್ ಕಥೆ ಹಲವಾರು ಕಾದಂಬರಿಗಳಲ್ಲಿ, ವಿಡಿಯೋಗಳಲ್ಲಿ, ಪ್ರೇರಣಾದಾಯಕ ಭಾಷಣಗಳಲ್ಲಿ ಪದೇ ಪದೆ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಪ್ರತಿಬಾರಿಯೂ ಇದು ನನಗೆ ಮೊದಲ ಬಾರಿ ಓದಿದಷ್ಟೇ ಅಚ್ಚರಿ, ಪುಳಕವನ್ನು ಉಂಟುಮಾಡುತ್ತದೆ. ಏಕೆಂದರೆ, ಪ್ರತಿಯೊಬ್ಬ ಮನುಷ್ಯನ ಅತಿದೊಡ್ಡ ದೌರ್ಬಲ್ಯವನ್ನೇ ಈ ಕಥೆ ಕಟ್ಟಿಕೊಡುತ್ತದೆ. ನಾವೆಲ್ಲರೂ ನಮ್ಮ ನಮ್ಮ ಕಥೆಗಳಲ್ಲಿ ಯಾವ ಪಾತ್ರ ವಹಿಸುತ್ತಿದ್ದೇವೋ ಗಮನಿಸಿದ್ದೀರಾ? ಬಹುತೇಕರು ಶಿಷ್ಯರದ್ದೇ ಪಾತ್ರ ವಹಿಸಿರುತ್ತೀವಿ.
ವಿನಾಕಾರಣ ಅನೇಕ ಸಂಗತಿಗಳನ್ನು ತಲೆಯಲ್ಲಿ ಹೊತ್ತು ಅಡ್ಡಾಡುತ್ತಿರುತ್ತೇವೆ. ಅವು 5 ದಿನಗಳಲ್ಲ, 5-10 ವರ್ಷಗಳವರೆಗೂ ತಲೆಯಲ್ಲಿ ಇರುತ್ತವೆ. ನನ್ನ ಅಮ್ಮನ ಕಥೆಯನ್ನೇ ಹೇಳುತ್ತೇನೆ ಕೇಳಿ. ಮನೆಯಲ್ಲಿ ಕ್ರಿಸ್ಮಸ್ ಹಬ್ಬ ನಡೆದಿತ್ತು. ಆ ಸಮಯದಲ್ಲಿ ಅಮ್ಮನ ಸಂಬಂಧಿಯೊಬ್ಬರು ಏನೋ ಮನ ನೋಯಿಸುವಂಥ ಕುಹಕದ ಮಾತನಾಡಿದ್ದಾರೆ. ಈಕೆಯೋ ಸೌಮ್ಯ ಸ್ವಭಾವದವಳು(ಸ್ವಲ್ಪ ಭೋಳೆ ಸ್ವಭಾವದವಳೂ ಕೂಡ). ಆ ಕ್ಷಣಕ್ಕೆ ಅವರ ಮಾತು ಅಮ್ಮನ ತಲೆಯ ಮೇಲಿಂದ ಹಾರಿ ಹೋಗಿದೆ. ಆದರೆ ಕೆಲಸಮಯದ ನಂತರ ಅವರ ದ್ವಂದ್ವಾರ್ಥ ಅರ್ಥವಾಗಿ ಮನಸ್ಸಿಗೆ ತೀವ್ರ ನೋವಾಗಿದೆ. ತಾನು ಎಲ್ಲವನ್ನೂ ಹಲ್ಲುಕಚ್ಚಿ ಸಹಿಸಿಕೊಳ್ಳುವುದರಿಂದಲೇ ಎಲ್ಲರಿಗೆ ಸದರ ಸಿಕ್ಕಿದೆ ಎನ್ನುವ ಸಿಟ್ಟು ಬಂದಿದೆ. ಆದರೇನು ಮಾಡುವುದು ಹಬ್ಬದ ಮೂಡ್ ಹಾಳು ಮಾಡಲು ಮನಸ್ಸಿಲ್ಲದೆ, ಪ್ರತ್ಯುತ್ತರ ಕೊಡಲು ಸರಿಯಾದ ಸಮಯ ಬರಲಿ ಎಂದು ಕಾಯುತ್ತಾ ಕುಳಿತಿದ್ದಾಳೆ.
ತದನಂತರದ ದಿನಗಳಿಂದ ಅಮ್ಮ ಹೇಳುತ್ತಲೇ ಇದ್ದಳು: “ಈ ಬಾರಿ ಅವರು ಸಿಗಲಿ, ಅವತ್ತು ಯಾಕೆ ಹೀಗಂದಿರಿ? ಎಂದು ಹಿಡಿದು ಕೇಳಿಯೇ ಬಿಡುತ್ತೇನೆ ಅಂತ. ಆದರೆ ಹಾಗೆ ಅನ್ನುವ ಧೈರ್ಯವನ್ನು ಅಮ್ಮ ತೋರಲಿಲ್ಲ. ಬದಲಿಗೆ, ಪ್ರತಿಬಾರಿಯೂ ಅವರು ಬಂದಾಗ ಇನ್ನೇನೋ ಕುಹಕದ ಮಾತನಾಡುವುದು, ಅಮ್ಮನ ಅಕೌಂಟ್ನಲ್ಲಿ ನೋವಿನ ಮಾತುಗಳು ಜಮೆಯಾಗುವುದು ನಡೆಯುತ್ತಲೇ ಹೋಯಿತು.
ಈ ಘಟನೆ ನಡೆದು 20 ವರ್ಷಗಳಾದವು! ಅಮ್ಮನ ಅಕೌಂಟ್ ಭರ್ತಿಯಾಗಿ, ಬಡ್ಡಿಗೆ ಚಕ್ರಬಡ್ಡಿ ಸೇರಿದೆ. ಆದರೆ ಈಗ ನನ್ನಮ್ಮ “ಈ ಬಾರಿ ಅವರು ಸಿಗಲಿ’ ಎಂದು ಹೇಳುವುದಿಲ್ಲ. ಏಕೆಂದರೆ ಆ ಸಂಬಂಧಿಕರು ಸತ್ತು ಸ್ವರ್ಗ ಸೇರಿದ್ದಾರೆ! ನಿಜ ಹೇಳಬೇಕೆಂದರೆ, ಅಮ್ಮನ ಈ ಗುಣ ನನಗೂ ಬಳುವಳಿಯಾಗಿ ಬಂದಿತ್ತು. ಮನಸ್ಸಲ್ಲಿ ಇಂಥ ಪಿಗ್ಮಿಗಳನ್ನು ಜಮಾಯಿಸುತ್ತಲೇ ಇರುತ್ತಿದ್ದೆ. ಆದರೆ, ಯಾವಾಗ ನಾನು ಮನಃಶಾÏಸ್ತ್ರ ಆಯ್ಕೆ ಮಾಡಿಕೊಂಡೆನೋ, ನಿಧಾನಕ್ಕೆ ಮನೋಲೋಕದ ಹುಚ್ಚಾಟಗಳನ್ನು ಅರ್ಥಮಾಡಿಕೊಳ್ಳತೊಡಗಿದೆನೋ…ಆಗಿನಿಂದ ನನ್ನ ಮನಸ್ಸಿನಲ್ಲಿ ಅನವಶ್ಯಕ ಕಸ ತುಂಬುವುದನ್ನು ಬಿಟ್ಟುಬಿಟ್ಟಿದ್ದೇನೆ. ಮನಶಾಸ್ತ್ರಜ್ಞಳೆಂದಾಕ್ಷಣ ನನ್ನ ಮನಸ್ಸು ಸ್ಫಟಿಕ ಶುಭ್ರ ಎಂದೇನೂ ಅಲ್ಲ. ಆದರೂ ಕಸ ತುಂಬಿದಾಕ್ಷಣ ಅದನ್ನು ಹೊರಕ್ಕೆಸೆದುಬಿಡುತ್ತೇನೆ…
ಮನಸ್ಸಿನ ಚಟುವಟಿಕೆ ಅತ್ಯಂತ ಜಟಿಲವಾದದ್ದು-ಅದನ್ನು ಅಷ್ಟು ಸುಲಭವಾಗಿ ವಿವರಿಸುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಗೊತ್ತಿರುವಂಥದ್ದೇ..ಆದರೂ ಅತ್ಯಂತ ಸರಳವಾಗಿ ಹೇಳುತ್ತೇನೆ ಕೇಳಿ. ಮನಸ್ಸು ಮನೆಯಿದ್ದಂತೆ. ಅದು ಎಷ್ಟು ಸ್ವತ್ಛವಾಗಿರುತ್ತದೋ ನಾವೂ ಅಷ್ಟೇ ಆರಾಮವಾಗಿ ಇರುತ್ತೇವೆ. ಆದರೆ ಸಮಸ್ಯೆಯೇನೆಂದರೆ, ನಾವು ಬಯಸದಿದ್ದರೂ ಮನೆಯೊಳಗೆ ಹೊಲಸು ಜಮೆಯಾಗುತ್ತಲೇ ಇರುತ್ತದೆ. ಕಿರಾಣಿ ಅಂಗಡಿಯಿಂದ ತಂದ ಪ್ಲಾಸ್ಟಿಕ್ಕುಗಳು ಮನೆಯಲ್ಲಿ ಸೇರುತ್ತವೆ, ಕಿಟಕಿಯಿಂದ ಧೂಳು ಬಂದು ಕೂಡುತ್ತದೆ, ಸಿಂಕಿನಲ್ಲಿ ನಿತ್ಯ ಪಾತ್ರೆಗಳು ಉದ್ಭವವಾಗುತ್ತಿರುತ್ತವೆ, ಬಟ್ಟೆಗಳು ಕೊಳೆಯಾಗುತ್ತವೆ, ಶೂಗೆ ಅಂಟಿದ ಚೂಯಿಂಗ್ ಗಮ್ ಮನೆಯನ್ನು ಹೊಕ್ಕು ಹೊಲಸುಮಾಡಿಬಿಡುತ್ತದೆ…
ನಮ್ಮ ಮನಸ್ಸೂ ಕೂಡ ಹೀಗೆಯೇ. ಇದರಲ್ಲೂ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯ ರೂಪದಲ್ಲೋ, ಜನರ ಮಾತು-ವರ್ತನೆಯ ರೂಪದಲ್ಲೋ ಕಸ ಒಳಸೇರುತ್ತಲೇ ಇರುತ್ತದೆ, ಇಲ್ಲವೇ ಸಿಂಕ್ನಲ್ಲಿರುವ ಪಾತ್ರೆಗಳಂತೆ ಅವನ್ನು ನಾವೇ ಸೃಷ್ಟಿಸುತ್ತಲೂ ಇರುತ್ತೇವೆ. ಈಗ ಒಂದು ಪ್ರಶ್ನೆ. ನಿಮ್ಮ ಮನೆಯಲ್ಲಿ ಅಚಾನಕ್ಕಾಗಿ ಏನೋ ಕೆಟ್ಟ ವಾಸನೆ ಆರಂಭವಾಗುತ್ತಾ ಹೋಗುತ್ತದೆ ಎಂದುಕೊಳ್ಳಿ. ಈಗ ಇದಕ್ಕೆ ಪರಿಹಾರವೇನಿದೆ? ಮನೆ ತುಂಬಾ ರೂಂ ಫ್ರೆಷನರ್(ಸುಗಂಧದ ಸ್ಪ್ರೆ) ಹೊಡೆದರೆ ಸಮಸ್ಯೆ ಬಗೆಹರಿಯುತ್ತದೆಯೇ? ಹಾಂ..ತುಸು ಹೊತ್ತು ಘಮಘಮ ಎನ್ನಬಹುದಷ್ಟೆ. ನಂತರ? ಕಸಪೊರಕೆ, ಫಿನೈಲ್, ಬಕೆಟ್ ಹಿಡಿದು ನೀವು ಎದ್ದು ನಿಲ್ಲಲೇಬೇಕು. ಮನೆಯಲ್ಲಿ ಜಮೆಯಾದ ಕಸವನ್ನು ಹೊರಹಾಕಲೇಬೇಕು…ವಾಸನೆಯ ಮೂಲವನ್ನೂ ಪತ್ತೆ ಹಚ್ಚಿ ಅದನ್ನು ಸ್ವತ್ಛಗೊಳಿಸಬೇಕು ತಾನೇ? ಕೆಲವೊಮ್ಮೆ ಮನೆಯೆಲ್ಲ ಸ್ವತ್ಛಗೊಳಿಸಿದರೂ ಕೆಟ್ಟ ವಾಸನೆ ಮಾತ್ರ ಉಳಿದುಬಿಡುತ್ತದೆ. ಆ ದುರ್ನಾಥ ಎಲ್ಲಿಂದ ಬರುತ್ತಿದೆಯೇ ನಿಮಗೆ ತಿಳಿಯದು…ಆಗ ಏನು ಮಾಡುತ್ತೀರಿ? ಎಲ್ಲಾ ಕೆಲಸವನ್ನು ಬದಿಗೊತ್ತಿ, ಆ ದುರ್ನಾಥದ ಮೂಲ ಅರಸುತ್ತಾ ಹೋಗುತ್ತೀರಿ. ಅದೋ! ವಾಶಿಂಗ್ ಮಷೀನಿನ ಹಿಂಭಾಗದಲ್ಲಿ ಕೊಳೆತು ನಾರುತ್ತಿದೆ ಇಲಿಯ ಶವ! ಆ ಇಲಿ ಯಾವಾಗ ಬಂತು? ತಾನಾಗಿಯೇ ಬಂತೇ? ಅಥವಾ ನಿಮ್ಮ ಮನೆಯ ಬೆಕ್ಕು ತಂದು ಹಾಕಿತೇ? ನಿಮಗೆ ಗೊತ್ತಿಲ್ಲ, ಆದರೆ ಅದರ ವಾಸನೆಯ ಜಾಡು ಹಿಡಿದು ಅದು ಸತ್ತ ಜಾಗವನ್ನು ನೀವು ಹುಡುಕಿದ್ದೀರಿ.
ಬದುಕಲ್ಲೂ ಹಾಗೆಯೇ ಮಾಡಬೇಕು. ಅನೇಕ ಬಾರಿ ಯಾರೋ ಯಾವುದೋ ಸಂದರ್ಭದಲ್ಲೋ ಆಡಿದ ಮಾತೋ, ನಡೆದುಕೊಂಡ ರೀತಿಯೋ ನಮ್ಮ ಮನದ ಮೂಲೆಯಲ್ಲಿ ಈ ರೀತಿ ಸತ್ತ ಇಲಿಯಂತೆ ಸೇರಿಕೊಂಡುಬಿಟ್ಟಿರುತ್ತದೆ. ಆ ಇಲಿಗಳು ನಮ್ಮಲ್ಲಿ ಕೀಳರಿಮೆ, ಸಿಟ್ಟು, ಅಸಹನೆ, ಹಿಂಜರಿಕೆ, ದುಗುಡ ಎನ್ನುವ ದುರ್ನಾಥವನ್ನು ಹುಟ್ಟುಹಾಕುತ್ತಿರುತ್ತವೆ. ಅದೆಲ್ಲದರ ಫಲವಾಗಿಯೇ ನಮಗೆ ಸಮಾಧಾನವೇ ಇಲ್ಲದಂತಾಗಿಬಿಡುತ್ತದೆ. ಆದರೆ ನಾವು, ಇಲಿಯನ್ನು ದೂರುವ ಬದುಕು “ನನ್ನ ಗುಣವೇ ಹೀಗೆ’ ಎಂದು ಸುಮ್ಮನೇ ಕೊರಗುತ್ತಲೇ ಇರುತ್ತೇವೆ! ಆದರೆ ನೆನಪಿರಲಿ, ಎಲ್ಲರಿಗೂ ಮನದಲ್ಲಿನ ಈ ದುರ್ವಾಸನೆಯನ್ನು ದೂರಮಾಡುವ ಸಾಮರ್ಥ್ಯ ಇರುತ್ತದೆ. ಆದರೆ, ಅದಕ್ಕಾಗಿ ನೀವು ಸಮಯ ಮೀಸಲಿಡಲೇಬೇಕು. ಆತ್ಮಾವಲೋಕನವೆಂಬ ಕಸಪೊರಕೆಯನ್ನು ಹೊತ್ತು ಮನೆಯೊಳಗೆ(ಮನದೊಳಗೆ) ದೃಢ ಹೆಜ್ಜೆ ಇಡಲೇಬೇಕು. ನಿಮ್ಮ ಮನದ ಮೂಲೆಯಲ್ಲಿ ಒಂದೇ ಇಲಿಯಲ್ಲ, ಹಲವಾರು ಇಲಿಗಳು ಸಿಗಬಹುದು. ಕೆಲವು ನಿಮ್ಮ ತಲೆ ಚಿಟ್ಟುಹಿಡಿಸಬಹುದು, ಕೆಲವು ನಿಮ್ಮನ್ನು ಬೆಚ್ಚಿಬೀಳಿಸಬಹುದು, ಕೆಲವು ವಾಕರಿಕೆ ಬರಿಸಬಹುದು. ಅಲ್ಲದೇ, ನಿಮ್ಮ ಮನೆಯವರು ಯಾರೋ ಅರ್ಧ ತಿಂದೆಸೆದ ಹಣ್ಣೊಂದು ಮಂಚದ ಕೆಳಕ್ಕೆ ಸಿಲುಕಿ ಕೊಳೆತಿರಬಹುದು! ಆದರೂ, ಮನೆಯಿಂದ ಮೂಗು ಮುಚ್ಚಿಕೊಂಡು ಹೊರಗೋಡಿ ಬಂದರೆ (ಬಹಿರ್ಮುಖೀಗಳಾದರೆ) ಸಮಸ್ಯೆ ಬಗೆ ಹರಿಯುವುದಿಲ್ಲವಲ್ಲ? ಮೂಗಿಗೆ ಸತ್ಯಾನ್ವೇಷಣೆಯ ಬಟ್ಟೆ ಕಟ್ಟಿಕೊಳ್ಳಿ. ಕಸಪೊರಕೆ ಹಿಡಿದು ಮನೆಯೊಳಗೆ ನುಗ್ಗಿ.
ನೆನಪಿರಲಿ, ಇಲಿ ಸತ್ತ ಜಾಗದಲ್ಲಿ ನೀವು ಎಷ್ಟೇ ಫಿನಾಯಿಲ್ ಹಾಕಿ ಸ್ವತ್ಛಗೊಳಿಸಿದರೂ…99.99 ಪ್ರತಿಶತ ಬ್ಯಾಕ್ಟೀರಿಯಾಗಳಷ್ಟೇ ಸಾಯುತ್ತವೆ. ಇನ್ನುಳಿದ 0.1 ಪ್ರತಿಶತ ಬ್ಯಾಕ್ಟೀರಿಯಾ ಅಂತೂ ಇದ್ದೇ ಇರುತ್ತದೆ. ಚಿಂತೆ ಬೇಡ, ಇಲಿಯೇ ಇಲ್ಲದ ಮೇಲೆ ಈ 0.1 ಪ್ರತಿಶತ ಬ್ಯಾಕ್ಟೀರಿಯಾವಾದರೂ ಎಷ್ಟುಹೊತ್ತು ಉಳಿದೀತು?
ಈಗ ಹೇಳಿ, ಮನೆ ನಿಮ್ಮದು ಮನ ನಿಮ್ಮದು…ಕಸಪೊರಕೆ ಸಿದ್ಧವಿದೆಯೇ?
ಎಲೆನಾ ಸ್ಯಾಂಟರೆಲಿ
ಮನಃಶಾಸ್ತ್ರಜ್ಞರು