ಇಂಗ್ಲಿಷ್‌ ಮಾಧ್ಯಮಕ್ಕೆ ವಿರೋಧ ಸಾಧುವೇ?


Team Udayavani, Jan 8, 2019, 12:30 AM IST

17.jpg

ಪ್ರಾಥಮಿಕ ಶಿಕ್ಷಣ ಮಾಧ್ಯಮವನ್ನು ನಿರ್ಧರಿಸುವ ಸ್ವಾತಂತ್ರ್ಯವನ್ನು ಆಯಾ ಮಕ್ಕಳ ಪಾಲಕರಿಗೆ ಬಿಡುವುದು ಒಳ್ಳೆಯದು. ಅದರಂತೆ ಸರ್ಕಾರಿ ಶಾಲೆಗಳಲ್ಲೂ ಇಂಗ್ಲಿಷ್‌ ಮಾಧ್ಯಮ ಸೌಲಭ್ಯ ಆರಂಭಿಸಿ, ಕನ್ನಡವೋ, ಇಂಗ್ಲಿಷೋ ಆಯ್ಕೆಯನ್ನು ಮುಕ್ತವಾಗಿಡುವುದು ಉತ್ತಮ.

ಪ್ರಾಥಮಿಕ ಶಿಕ್ಷಣ ಮಾಧ್ಯಮ ಎಂಬ ಸಂಕೀರ್ಣ ಸಮಸ್ಯೆಗೆ ಒಂದು ತಾರ್ಕಿಕ ಪರಿಹಾರ ದೊರೆಯದಿರುವ ಪ್ರಸ್ತುತ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು, ಸರ್ಕಾರಿ ಶಾಲೆಗಳಲ್ಲಿ ಕನ್ನಡದೊಂದಿಗೆ ಇಂಗ್ಲಿಷ್‌ ಮಾಧ್ಯಮ ತರಗತಿಗಳನ್ನೂ ಪ್ರಾರಂಭಿಸುವುದಾಗಿ ಘೋಷಿಸಿರುವುದು ಚರ್ಚೆಗೆ ಗ್ರಾಸವಾಗಿದೆ. 84ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನದಲ್ಲೂ ಸಾಹಿತಿಗಳು ಮತ್ತು ಚಿಂತಕರಿಂದ ಸರ್ಕಾರದ ಈ ನಿರ್ಧಾರಕ್ಕೆ ಸಾಕಷ್ಟು ವಿರೋಧವೂ ವ್ಯಕ್ತವಾಗಿದೆ. ದುರಂತವೆಂದರೆ ಈ ಚರ್ಚೆ, ವಿರೋಧವು ಸಮಸ್ಯೆಯ ಎಲ್ಲ ಆಯಾಮಗಳನ್ನು ಪರಾಮರ್ಶಿಸಿ, ವಾಸ್ತವಿಕ ನೆಲೆಗಟ್ಟಿನಲ್ಲಿ ಪರಿಹಾರ ಮಾರ್ಗ ಕಂಡುಕೊಳ್ಳದಿರುವುದು, ಹಾಗೂ ಏಕಮುಖವಾಗಿ, ಸಿದ್ಧಸೂತ್ರಗಳನ್ನು ಅನುಕರಿಸಿ ತೀರ್ಪು ನೀಡುವ ರೀತಿಯಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವುದು. ಆದರೆ ಇದರಿಂದ ಆಗಬಹುದಾದ ಹಾನಿ ಸರ್ಕಾರಕ್ಕೂ ಅಲ್ಲ, ವಿರೋಧಿಸುವವರಿಗೂ ಅಲ್ಲ. ಹಾನಿಯಾಗುವುದು ಈ ತನಕವೂ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಕೇಳಿದಷ್ಟು ಶುಲ್ಕ ಕಟ್ಟಿ ತಮ್ಮ ಮಕ್ಕಳನ್ನು ಓದಿಸುತ್ತಿರುವ ಎಲ್ಲ ವರ್ಗದ ಜನರಿಗೆ.

ಈ ವಿಚಾರವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತೆಗೆದುಕೊಂಡ ನಿರ್ಧಾರ ಸರಿ ಎಂದೋ ಅಥವಾ ಸರ್ಕಾರಿ ಶಾಲೆಗಳಲ್ಲಿ ಕನ್ನಡದೊಂದಿಗೆ ಇಂಗ್ಲಿಷ್‌ ಮಾಧ್ಯಮ ಆರಂಭಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಕನ್ನಡ ಸಾಹಿತಿಗಳು, ಕನ್ನಡಪರ ಸಂಘಟನೆಗಳ ಧೋರಣೆ ಸರಿಯಲ್ಲ ಎಂದೋ ಪೂರ್ವಗ್ರಹ ಪೀಡಿತವಾಗಿ ಗೆರೆ ಹಾಕಿ ತೀರ್ಪು ನೀಡುವುದು ಈ ಅವಲೋಕನದ ಉದ್ದೇಶ ಅಲ್ಲ. ಆದರೆ ಇದರ ಸಾಧಕ-ಬಾಧಕಗಳು, ಸರಿ-ತಪ್ಪುಗಳ ನೆಲೆಯಲ್ಲಿ ವಾಸ್ತವವನ್ನು ಶೋಧಿಸುವುದು ಉದ್ದೇಶ. ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ಮಕ್ಕಳನ್ನು ಓದಿಸುತ್ತಿರುವ ಎಲ್ಲ ಪಾಲಕರಿಗೆ ಈ ವಾಸ್ತವಾಂಶದ ಅಗತ್ಯವೂ ಇದೆ.

ಸಾಮಾಜಿಕ ವ್ಯವಸ್ಥೆಯಲ್ಲಿ ಹಲವು ಕಟುಸತ್ಯಗಳನ್ನು ಒಪ್ಪಿಕೊಳ್ಳುವ ಸನ್ನಿವೇಶಗಳು ತೀರಾ ವಿರಳ. ಶಿಕ್ಷಣ ಮಾಧ್ಯಮ ವಿಷಯದಲ್ಲೂ ಇದು ಹೊರತಾಗಿಲ್ಲ. ಕನ್ನಡ ಉಳಿಸುವುದಕ್ಕಾಗಿ ಇಂಗ್ಲಿಷ್‌ ಮಾಧ್ಯಮ ವಿರೋಧಿಸಬೇಕೆಂದರೆ ವಿರೋಧಿಸಬೇಕು ಎಂಬಂತಾಗಿದೆ ಅಷ್ಟೆ. ಹಾಗಾದರೆ ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಿದ ಮಾತ್ರಕ್ಕೆ ಕನ್ನಡ ಉಳಿಸಲು ಸಾಧ್ಯವೇ? ಹಾಗಾದರೆ ಖಾಸಗಿ ಸಂಸ್ಥೆಗಳು ಸರ್ಕಾರದಿಂದ ಪರವಾನಗಿ ಪಡೆದು, ಇಂಗ್ಲಿಷ್‌ ಮಾಧ್ಯಮ ಶಿಕ್ಷಣವನ್ನು ಈ ಮಟ್ಟದಲ್ಲಿ ವ್ಯವಹಾರವನ್ನಾಗಿ ಮಾಡಿರುವಾಗ, ಬಹುಪಾಲು (ಸುಮಾರು ಶೇ.70ರಷ್ಟು) ಪಾಲಕರು ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸುತ್ತಿರುವುದು ಕನ್ನಡದ ಅಸ್ತಿತ್ವತ್ವಕ್ಕೆ ಧಕ್ಕೆ ತರುವುದಿಲ್ಲವೆ? ಖಾಸಗಿ ವಲಯವನ್ನು ವಿರೋಧಿಸಲಾಗದು, ಸರ್ಕಾರಿ ವ್ಯವಸ್ಥೆಯನ್ನು ವಿರೋಧಿಸುವುದು ಸುಲಭ ಎಂದು ವಿರೋಧ ವ್ಯಕ್ತಪಡಿಸುವುದೇ? 

ಈ ನೆಲೆಯಲ್ಲಿ ಸರ್ಕಾರ ಯಾರ ಹಿತಕ್ಕೆ-ವಾದಕ್ಕೆ ಒತ್ತು ನೀಡಬೇಕು? ವಾರ್ಷಿಕ ಸಾವಿರಾರು ರೂಪಾಯಿ ವೆಚ್ಚ ಮಾಡಿ ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಮಕ್ಕಳನ್ನು ಓದಿಸುತ್ತಿರುವ ಪಾಲಕರ ಹಿತಕ್ಕೋ ಅಥವಾ ವಾಸ್ತವ ಸಮಸ್ಯೆಯನ್ನು ಅರಿಯದೇ ಸರ್ಕಾರದ ಕ್ರಮವನ್ನು ಮಾತ್ರ ವಿರೋಧಿಸಿ ಇಂಗ್ಲಿಷ್‌ ಮಾಧ್ಯಮ ಬೇಡ ಎನ್ನುವವರ ವಾದಕ್ಕೋ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸರಳವಾಗಿದೆ. ಪ್ರಸ್ತುತ ಬಹುಪಾಲು ವಿದ್ಯಾರ್ಥಿಗಳು “ಖಾಸಗಿ’ ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ಓದುತ್ತಿರುವಾಗ ಕನ್ನಡಕ್ಕೆ ಧಕ್ಕೆಯಾಗುವುದಿಲ್ಲ ಎನ್ನುವ ಇಂಗ್ಲಿಷ್‌ ಮಾಧ್ಯಮ ವಿರೋಧಿಸುವವರ ನಿಲುವು ಅತಾರ್ಕಿಕ. ಮತ್ತು ಸರ್ಕಾರವೇ ಇಂಗ್ಲಿಷ್‌ ಮಾಧ್ಯಮ ಶಿಕ್ಷಣವನ್ನು ಆರಂಭಿಸಿ ಉಚಿತವಾಗಿ ಪೂರೈಸುವುದು, ಕನ್ನಡ- ಇಂಗ್ಲಿಷ್‌ ಅನ್ನು ಪಾಲಕರ ಐಚ್ಛಿಕ ವಿಚಾರಕ್ಕೆ ಬಿಡುವುದರಿಂದ ಕನ್ನಡಕ್ಕೆ ಹಿನ್ನಡೆಯಾಗುತ್ತದೆ ಎಂಬುದು ಕೂಡ ಮೇಲಿನ ವಿಚಾರಕ್ಕೆ ಸಂವಾದಿಯಾಗಿ ಅತಾರ್ಕಿಕ. ಆದ್ದರಿಂದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಬೇಡ ಎನ್ನುವವರು ಮೊದಲು ತಾರ್ಕಿಕ ವಿಚಾರಗಳನ್ನು ಮುಂದಿಟ್ಟು ವಿರೋಧಿಸಲಿ. ವಾಸ್ತವ ನೆಲೆಗಟ್ಟನ್ನು ಅರಿತು, ಸಾಧಕ-ಬಾಧಕಗಳ ಪ್ರಮಾಣ ತಿಳಿದುಕೊಂಡು ಚಿಂತಿಸಲಿ. ಮತ್ತು ಇಂಗ್ಲಿಷ್‌ ಭಾಷೆಯನ್ನು ಪ್ರೀತಿಸಿದ ಮಾತ್ರಕ್ಕೆ ಕನ್ನಡದ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ ಎನ್ನುವಂತಹ ಮಡಿವಂತಿಕೆಯನ್ನು ಕಳಚಿಟ್ಟು ಮುಕ್ತಮನದಿಂದ ನೋಡುವ ಔದಾರ್ಯ ಅಳವಡಿಸಿಕೊಳ್ಳಲಿ.

ಇಂಗ್ಲಿಷ್‌ ಮಾಧ್ಯಮ ಸಾಧಕವೋ ಬಾಧಕವೋ ಎನ್ನುವ ಚರ್ಚೆ ಹೀಗಿದೆ. ಆದರೆ ಸಮಸ್ಯೆಯ ಹಿಂದೆ ಕನ್ನಡದ ಅಳಿವು-ಉಳಿವು ಎನ್ನುವ ಪ್ರಜ್ಞೆ ಪ್ರಮುಖವಾಗಿ ಕೆಲಸ ಮಾಡುವುದರಿಂದ ಈ ಕುರಿತಾಗಿ ಕೂಡ ಈ ಸಂದರ್ಭದಲ್ಲಿ ಬೆಳಕು ಚೆಲ್ಲಲು ಅವಕಾಶವಿದೆ.
ಯಾವುದೇ ಭಾಷೆ ಇರಲಿ ಅದು ಆಯಾ ಭೌಗೋಳಿಕ ವ್ಯಾಪ್ತಿ ಸಂಸ್ಕೃತಿಯ ಸ್ವಾಭಿಮಾನದ ಪ್ರತೀಕವಾಗಿರುತ್ತದೆ. ಆ ಸಂಸ್ಕೃತಿ, ಪರಂಪರೆಯ ಮಿಡಿತವಾಗಿರುತ್ತದೆ. ಹಾಗೆಂದ ಮಾತ್ರಕ್ಕೆ ಆ ಪ್ರದೇಶಲ್ಲಿರುವ ಜನರು ಜಾಗತಿಕ ವ್ಯಕ್ತಿಯಾಗಿ ಬೆಳೆಯಬಾರದು, ಜಗತ್ತಿನ ಇನ್ನಾವುದೇ ಭಾಷೆಯನ್ನು ಅಪ್ಪಿಕೊಳ್ಳಬಾರದು ಎಂಬ ಮನಸ್ಥಿತಿ ಸರಿಯಲ್ಲ. ಈ ಮನಸ್ಥಿತಿ ಬದಲಾಗುವತನಕ ಕುವೆಂಪು ಅವರ “ವಿಶ್ವ ಮಾನವ’ ಪರಿಕಲ್ಪನೆ ಸಾಕಾರವಾಗಲು ಸಾಧ್ಯವಿಲ್ಲ. ಇದೂ ಒಂದು ರೀತಿಯ ಮಡಿವಂತಿಕೆಯೇ! ಇಂಗ್ಲಿಷ್‌ ಅನ್ನು ಕಾರಣವಿಲ್ಲದೇ ವಿರೋಧಿಸುವವರು ಈ ಮಡಿವಂತಿಕೆಯನ್ನು ಬದಿಗಿಟ್ಟು ಕನ್ನಡವನ್ನು ಅಪ್ಪಿಕೊಂಡು, ಇಂಗ್ಲಿಷನ್ನು ಒಪ್ಪಿಕೊಂಡು ನಡೆದರೆ ಸಮಸ್ಯೆ ಸರಳವಾಗಿ ಪರಿಹಾರವಾದೀತು. 

ಒಂದಂತೂ ಕಟುಸತ್ಯ. ಜಾಗತೀಕರಣದ ಪ್ರಸ್ತುತ ಸಂದರ್ಭದಲ್ಲಿ ಇಂಗ್ಲಿಷಿನಂತಹ ಸಾವಿರಾರು ಭಾಷೆಗಳು ವ್ಯಾವಹಾರಿಕವಾಗಿ ಮುನ್ನೆಲೆಗೆ ಬಂದರೂ ಕನ್ನಡವನ್ನು ಅಳಿಸಲಾಗದು. ಅದು ಕನ್ನಡಕ್ಕಿರುವ ಸಾಮರ್ಥ್ಯ. ವಾಸ್ತವದಲ್ಲಿ ಕನ್ನಡದ ಅಸ್ತಿತ್ವಕ್ಕೆ ಸಾಂಸ್ಕೃತಿಕವಾಗಿ ಸ್ಪರ್ಧೆಯೊಡ್ಡುವ ಸಾಮರ್ಥ್ಯ ಇಂಗ್ಲಿಷ್‌ಗೆ ಇಲ್ಲವೇ ಇಲ್ಲ. ಆದ್ದರಿಂದ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅಪಾಯವಿದೆ, ಇಂಗ್ಲಿಷ್‌ನಿಂದ ಕನ್ನಡ ಅಳಿವಿನಂಚಿಗೆ ಬಂದಿದೆ ಎಂದು ಏಕತಾನತೆಯಿಂದ ಕಿರುಚುವ ಅಗತ್ಯವೂ ಇಲ್ಲ. ವ್ಯವಹಾರಿಕವಾಗಿ ಯಾವುದೇ ಪ್ರದೇಶದಲ್ಲಿ ಇಂಗ್ಲಿಷ್‌ ತನ್ನ ಪ್ರಾಬಲ್ಯ ಮೆರೆಯಬಹುದು. ಸಾಂಸ್ಕೃತಿಕ, ಪಾರಂಪರಿಕ, ಕಲಾತ್ಮಕವಾಗಿ, ಅಸ್ಮಿತೆಯ ವಿಚಾರದಲ್ಲಿ ಆಯಾ ಪ್ರಾದೇಶಿಕ ಭಾಷೆ ಸಶಕ್ತವಾಗಿರುವಂತೆ ಕನ್ನಡವೂ ತನ್ನ ನೆಲದಲ್ಲಿ ಸಶಕ್ತವಾಗಿದೆ, ಮುಂದೆಯೂ ಇರುತ್ತದೆ. ಇದಕ್ಕೆ ಶೈಕ್ಷಣಿಕ ಮಾಧ್ಯಮ ಒಂದು ಸಮಸ್ಯೆಯೇ ಅಲ್ಲ. ಕಾರಣ ಇಂಗ್ಲಿಷ್‌ ಮಾಧ್ಯಮದಲ್ಲಿ ಓದುವ ಮಕ್ಕಳು ತಮ್ಮ ಪ್ರಾದೇಶಿಕ ಭಾಷೆ-ಸಂಸ್ಕೃತಿಯ ಪರಿಸರದಲ್ಲಿ ಇರುವಾಗ ಪ್ರಾದೇಶಿಕ ಭಾಷೆ-ಸಂಸ್ಕೃತಿ ರಕ್ತಗತವಾಗಿರುತ್ತದೆ ಎಂದು ಹೇಳಬಹುದು.
ಇನ್ನು ಸಮಸ್ಯೆಯ ಕುರಿತ ಮೂರನೇ ಆಯಾಮ ಏನೆಂದರೆ, ಭಾಷಾಭಿಮಾನ, ವ್ಯಕ್ತಿಯ ಅಸ್ತಿತ್ವ ಹಾಗೂ ವಾಸ್ತವ ಸಾಮಾಜಿಕ ತೊಡಕುಗಳ ಕುರಿತು ನಡೆಸಬೇಕಾದ ಚಿಂತನೆ. ಒಂದು  ಪ್ರಾದೇಶಿಕ ಭಾಷೆ ಆಯಾ ನೆಲದ ಸಂಸ್ಕೃತಿ, ಸಾಹಿತ್ಯಿಕ ಹಿರಿಮೆಯನ್ನು ತಿಳಿಸುತ್ತದೆ. ಹಾಗಾಗಿ ಅದು ಅಭಿಮಾನ, ಹೆಮ್ಮೆಯ ಪ್ರತೀಕವೂ ಹೌದು. ಹಾಗಾದರೆ ನಮಗೆ ತಿಳಿದಿರುವ ಭಾಷೆ ಕುರಿತು ಹೆಮ್ಮೆ, ಅಭಿಮಾನವಿದ್ದ ಮಾತ್ರಕ್ಕೆ ಅದರಿಂದಲೇ ಜೀವನ ಕಟ್ಟಿಕೊಳ್ಳಲು ಸಾಧ್ಯವೇ? ಖಂಡಿತ ಇಲ್ಲ! ವಾಸ್ತವದಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಬದುಕು ಕಟ್ಟಿಕೊಳ್ಳುವುದು ತನ್ನ ಭಾಷೆಗಿಂತ ಪ್ರಮುಖ ವಿಚಾರವಾಗುತ್ತದೆ. ಆಗ ವ್ಯಕ್ತಿ ಸಹಜವಾಗಿ ಅನ್ನ ಒದಗಿಸಿಕೊಳ್ಳುವ ಮಾರ್ಗ ಕಂಡುಕೊಳ್ಳಬೇಕು. ಈ ಹಂತದಲ್ಲಿ ಇಂಗ್ಲಿಷ್‌ ಅಲ್ಪಮಟ್ಟಿಗಾದರೂ ಅನ್ನದ ಮಾರ್ಗವಾಗಿ ಪರಿಣಮಿಸುತ್ತದೆ. ಕಾರಣವಿಷ್ಟೆ- “ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ’ ಎನ್ನುವ ಕಾಲವೊಂದಿತ್ತು. ಆದರೆ ವರ್ತಮಾನ ಸ್ಥಿತಿಯಲ್ಲಿ “ನಾನು ಕನ್ನಡ ಪಂಡಿತ, ನನಗೆ ಕನ್ನಡ ಮಾತ್ರ ಬರುತ್ತದೆ’ ಎನ್ನುವವರನ್ನು ಯಾರೂ ಕಣ್ಣೆತ್ತಿಯೂ ನೋಡುವುದಿಲ್ಲ. ಕನ್ನಡ ಭಾಷೆಯೊಂದಿಗೆ ಇಂಗ್ಲಿಷ್‌ ಮೇಲೆಯೂ ಹಿಡಿತವಿದೆ ಎಂದರೆ ವ್ಯಕ್ತಿಯ ಗೌರವವೇ ಬದಲಾಗುತ್ತದೆ. ರಾಜ್ಯದ ಯಾವುದೇ ಮೂಲೆಯಲ್ಲಾದರೂ ಎಂತಹದೇ ಒಂದು ಉದ್ಯೋಗ ದೊರಕೀತು. 

ಹಾಗೆಂದ ಮಾತ್ರಕ್ಕೆ ನಾವು ಕನ್ನಡವನ್ನಷ್ಟೇ ಕಲಿತು ನಮ್ಮ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಇರುತ್ತೇವೆ ಎನ್ನುವವರಿಗೆ, ಬೇಡ ಎಂದೂ ಹೇಳಲಾಗದು. ಈ ಹಿನ್ನೆಲೆಯಲ್ಲಿ ನಾವು ಪ್ರೀತಿಸುವ ಭಾಷೆಯ ಕುರಿತಾಗಿ ಕೇವಲ ಭಾವುಕ ಕ್ಲೀಷೆಗಳನ್ನು ತುಂಬಿಕೊಳ್ಳುವುದಕ್ಕಿಂತ, ಭಾಷೆ ಅನ್ನ ಮತ್ತು ಅಸ್ತಿತ್ವಕ್ಕೆ ಮಾರ್ಗವಾಗುವುದು ಮುಖ್ಯವಾಗುತ್ತದೆ. ಇದು ವಾಸ್ತವ- ಭಾವುಕತೆಗಳ ನಡುವಿನ ಸತ್ಯ. 

ಮಕ್ಕಳ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಯೋಚಿಸಿದಾಗ, ಪ್ರಾಥಮಿಕ ಶಿಕ್ಷಣವನ್ನು ಆಯಾ ಪ್ರಾದೇಶಿಕ ಭಾಷೆಯಲ್ಲಿ ಪಡೆದಾಗಲೇ ಪರಿಣಾಮಕಾರಿಯಾಗಿರುತ್ತದೆ ಎಂಬುದು ತಜ್ಞರ ಅಭಿಮತ. ಒಪ್ಪಬಹುದು. ಆದರೆ ಅನ್ಯ ಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ಕೊಡುವುದರಿಂದ ಪ್ರಾದೇಶಿಕ ಭಾಷೆ ಅಸ್ತಿತ್ವ ಕಳೆದುಕೊಳ್ಳುತ್ತದೆ ಎನ್ನುವುದು ಅತಾರ್ಕಿಕ. ಅಲ್ಲದೇ ಶಿಕ್ಷಣ ಮಾಧ್ಯಮವನ್ನು ಆ ಕುರಿತಾದ ಸ್ವಾಸ್ಥ್ಯವನ್ನು ನಿರ್ಧರಿಸಬೇಕಾದದ್ದು ಮಕ್ಕಳ ಪಾಲಕರೇ ಹೊರತು, ಸರ್ಕಾರ, ಸಾಹಿತಿಗಳು ಮತ್ತು ಕನ್ನಡಪರ ಸಂಘಟನೆಯವರು ಅಲ್ಲ. ಹತ್ತು ಜನರಲ್ಲಿ ಎಂಟು ಜನರಿಗೆ ಹೊಟ್ಟೆ ನೋವು ಇದೆ ಎಂದ ಮಾತ್ರಕ್ಕೆ ಆರೋಗ್ಯವಂತ ಇನ್ನಿಬ್ಬರೂ ಔಷಧ ತೆಗೆದುಕೊಳ್ಳಲೇಬೇಕು ಎಂಬ ಮೊಂಡು ವಾದಕ್ಕೆ ಏನೆನ್ನಬೇಕು? ಖಾಸಗಿ ಶಾಲೆಗಳಲ್ಲಿ ಮಾತ್ರ ಇಂಗ್ಲಿಷ್‌ ಮಾಧ್ಯಮ ಇರಲಿ, ಅವರು ಬೇಕಿದ್ದರೆ ಶಿಕ್ಷಣವನ್ನು ವ್ಯಾಪಾರವಾಗಿಸಿಕೊಂಡು ಗಳಿಕೆ ಮಾಡಲಿ, ಸರ್ಕಾರಿ ಶಾಲೆಗಳಲ್ಲಿ ಮಾತ್ರ ಆ ಸೌಲಭ್ಯವನ್ನು ಉಚಿತವಾಗಿ ಆರಂಭಿಸುವುದು ಬೇಡ ಎನ್ನುವ ಮನಸ್ಥಿತಿ ಹಾಗಾಗಿದೆ ಈಗ. ಕಾರಣ ಈ ಕುರಿತು ಈಗಾಗಲೇ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿರುವಂತೆ, ಪ್ರಾಥಮಿಕ ಶಿಕ್ಷಣ ಮಾಧ್ಯಮವನ್ನು ನಿರ್ಧರಿಸುವ ಸ್ವಾತಂತ್ರ್ಯವನ್ನು ಆಯಾ ಮಕ್ಕಳ ಪಾಲಕರಿಗೆ ಬಿಡುವುದು ಒಳ್ಳೆಯದು. ಅದರಂತೆ ಸರ್ಕಾರಿ ಶಾಲೆಗಳಲ್ಲೂ ಇಂಗ್ಲಿಷ್‌ ಮಾಧ್ಯಮ ಸೌಲಭ್ಯ ಆರಂಭಿಸಿ, ಕನ್ನಡವೋ, ಇಂಗ್ಲಿಷೋ ಆಯ್ಕೆಯನ್ನು ಮುಕ್ತವಾಗಿಡುವುದು ಉತ್ತಮ.

ಒಂದು ಆಶಾದಾಯಕ ವಿಚಾರವೆಂದರೆ, ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮವೇನಾದರೂ ಆರಂಭವಾದಲ್ಲಿ ರಾಜ್ಯದ ಸಾವಿರಾರು ಸರ್ಕಾರಿ ಶಾಲೆಗಳು ಮತ್ತೆ ವಿದ್ಯಾರ್ಥಿಗಳಿಂದ ತುಂಬಬಹುದು. ಸಾವಿರಾರು ರೂಪಾಯಿ ವೆಚ್ಚ ಮಾಡಿ ಖಾಸಗಿಯವರಿಂದ ಪಡೆಯುತ್ತಿದ್ದ ಶಿಕ್ಷಣ ಸರ್ಕಾರಿ ವ್ಯವಸ್ಥೆಯಿಂದ ದೊರೆಯುವ ಹಿನ್ನೆಲೆಯಲ್ಲಿ ಕಾಲಾನುಕ್ರಮದಲ್ಲಿ ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಲ್ಲದೇ ಅಸ್ತಿತ್ವ ಕಳೆದುಕೊಳ್ಳಬಹುದು. ಅದೇ ರೀತಿಯಲ್ಲಿ ಶೈಕ್ಷಣಿಕ ವ್ಯವಸ್ಥೆಯನ್ನು ಮತ್ತಷ್ಟು ಶಿಸ್ತುಬದ್ಧವಾಗಿ ರೂಪಿಸಿದಲ್ಲಿ- ಖಾಸಗಿಯವರು ಶಿಕ್ಷಣ ವ್ಯಾಪಾರ ನಡೆಸುವುದಕ್ಕೆ ಕಡಿವಾಣ ಬೀಳಬಹುದು. ಈ ಹಿನ್ನೆಲೆಯಲ್ಲಿ ವಿದ್ವಾಂಸರು, ಶಿಕ್ಷಣ ತಜ್ಞರು, ಪರ-ವಿರೋಧಿಗಳು ಸಮಸ್ಯೆಯ ವಾಸ್ತವ ಅರಿತು, ಸಂಸ್ಕೃತಿ-ಭಾಷೆಯ ಉಳಿವಿನ ವಿಚಾರದೊಂದಿಗೆ ಮಕ್ಕಳ ಪಾಲಕರ ಹಿತವನ್ನೂ ಚಿಂತಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಈ ವಿಷಯದಲ್ಲಿ ಉನ್ನತ ಮಟ್ಟದ ವಿಚಾರ ಸಂಕಿರಣ, ಸಂವಾದ, ಅಭಿಪ್ರಾಯ ಮಂಡನೆ, ಜನ ಮತ ಕ್ರೋಢಿಕರಣ ಅಗತ್ಯ.

ಕುಮಾರ ಬೇಂದ್ರೆ

ಟಾಪ್ ನ್ಯೂಸ್

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.