ಇಂದು ವಿಶ್ವ ಜಲ ದಿನ; ಮೂಡಲಿ ನೀರಿನೆಚ್ಚರ


Team Udayavani, Mar 21, 2017, 10:20 PM IST

21-ANKANA-2.jpg

ಕುಗ್ಗುತ್ತಿರುವ ಉಪಯುಕ್ತ ನೀರಿನ ಪ್ರಮಾಣದ ಬಗ್ಗೆ ಜನರನ್ನು ಎಚ್ಚರಿಸಲು ಮತ್ತು ಅರಿವು ಮೂಡಿಸಲು ಶತಪ್ರಯತ್ನ ನಡೆಯುತ್ತಲೇ ಇದೆ. ಈ ಉದ್ದೇಶಕ್ಕೆಂದೇ ಮಾರ್ಚ್‌ 22ನ್ನು ವಿಶ್ವ ಜಲ ದಿನ ಎಂದು ಕರೆಯಲಾಗಿದೆ. ಆದರೆ ನೀರಿನ ಸಂರಕ್ಷಣೆ ಮತ್ತು ಅದರ ಮಿತ ಬಳಕೆಯನ್ನು ಸಾಮಾನ್ಯ ಜನರ ಬದ್ಧತೆಯ ವಿಷಯವನ್ನಾಗಿ ರೂಪಿಸುವ ಪ್ರಯತ್ನ ಇನ್ನೂ ನಿರೀಕ್ಷಿತ ಫ‌ಲ ಕಂಡಿಲ್ಲ. ನಾವು ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ.

ನೀರು ಮಾನವ ಕುಲದ ಅಸ್ತಿತ್ವ ಹಾಗೂ ಪುನಶ್ಚೇತನಕ್ಕೆ ಜೀವನಾಧಾರ ದ್ರವವಾಗಿದ್ದು, ಜೀವಜಲ ಎಂದೇ ಭಾವಿಸಲಾಗಿದೆ. ಮನುಷ್ಯನಿಗೆ ಗಾಳಿಯಂತೆಯೇ ನೀರು ಅತಿ ಅಮೂಲ್ಯ. ಕಳೆದ 300 ವರ್ಷಗಳಲ್ಲಿ ನೀರಿನ ಬಳಕೆಯ ಪ್ರಮಾಣ ಶೇ.35ರಷ್ಟು ಹೆಚ್ಚಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಾರ್ಷಿಕ ಸುಮಾರು 650 ಕ್ಯುಬಿಕ್‌ ಕಿ.ಮೀ. ನೀರಿನ ಆವಶ್ಯಕತೆಯಿದ್ದು ಇದರ ಶೇ.60 ಭಾಗ ಕೃಷಿಗೆ, ಶೇ.30 ಕೈಗಾರಿಕೆಗಳ ನಿರ್ವಹಣೆಗೆ ಹಾಗೂ ಶೇ.10 ಇತರ ಉಪಯೋಗಕ್ಕೆ ಲಭ್ಯವಾಗುತ್ತಿದೆ. ಭೂಮಿಯ ಮೇಲೆ ಲಭ್ಯವಿರುವ ಶೇ.99 ನೀರು ಮಾನವನ ನೇರ ಬಳಕೆಗೆ ಸಾಧ್ಯವಿಲ್ಲದ್ದು. ಶೇ.1ರಷ್ಟು ನೀರು ಮಾತ್ರ ಮಾನವನ ಉಪಯೋಗಕ್ಕೆ ದಕ್ಕಬಹುದಾದದ್ದು ಎಂಬ ವಾಸ್ತವ ಆಧುನಿಕ ವಿಜ್ಞಾನದ ಉದಯದ ದಿನಗಳಿಂದ ಮನುಷ್ಯನ ಅರಿವಿಗೆ ಬಂದಿದ್ದರೂ ಮಾನವ ಆ ಜೀವಜಲದ ಸಂರಕ್ಷಣೆಗೆ, ಅದರ ಸದುಪಯೋಗಕ್ಕೆ ಮತ್ತು ಅದನ್ನು ಮುಂದಿನ ಪೀಳಿಗೆಗೆ ಕಾಪಾಡಿಕೊಳ್ಳುವಲ್ಲಿ ಮಾತ್ರ ಬದ್ಧತೆ ಮೆರೆದಿಲ್ಲ ಎಂಬುದೇ ತೀವ್ರ ವಿಷಾದದ ಸಂಗತಿ.

ಜೀವದ್ರವವೆನಿಸಿದ ನೀರನ್ನು ಮನುಷ್ಯ ಪ್ರಜ್ಞಾಪೂರ್ವಧಿಕಧಿವಾಗಿಯೇ ಕಲುಷಿತಗೊಳಿಸುತ್ತಿರುವುದಲ್ಲದೆ ಅದರ ಬಳಕೆ ಹಾಗೂ ಸಂರಕ್ಷಣೆಯಲ್ಲಿ ಸೂಕ್ತ ವಿವೇಚನೆ ಇಲ್ಲದೆ ಭವಿಷ್ಯದ ನಾಗಧಿರಿಧಿಕತೆಯನ್ನೂ ತಲ್ಲಣ, ಆತಂಕಗಳ ವಿಷವ್ಯೂಹಕ್ಕೆ ಸಿಲುಕಿಸುತ್ತಿದ್ದಾನೆ. ಜೀವನಾಧಾರವಾದ ನೀರು ಕಲುಷಿತಗೊಳ್ಳಲು, ಅನುಧಿಪಯುಕ್ತಧಿವಾಗಲು ಅಥವಾ ವ್ಯರ್ಥವಾಗಲು ಈ ಅಂಶಗಳು ಕಾರಣಧಿವಾಗಿವೆ. ನಾಗರಿಕತೆ ಮತ್ತು ಕೈಗಾರಿಕೀಕರಣದ ಶಾಪಗಳೆನಿಸಿದ ಬೃಹತ್‌ ಕಾರ್ಖಾನೆಗಳ ತ್ಯಾಜ್ಯಗಳು ಅನಿರ್ಬಂಧಿತವಾಗಿ ನದಿ, ಜಲಾಶಯ, ಕೆರೆ ಮೊದಲಾದ ಉಪಯುಕ್ತ ನೀರಿನ ಮೂಲಧಿಗಳನ್ನು ಸೇರುತ್ತಿರುವುದು, ಅಂತರ್ಜಲದ ಅತಿ ಬಳಕೆ, ಕೃಷಿ ರಾಸಾಯನಿಕ ತ್ಯಾಜ್ಯಗಳು ಬಳಕೆಯ ನೀರನ್ನು ಸೇರುತ್ತಿರುವುದು, ನಗರಗಳ ಚರಂಡಿ ನೀರು ಹಾಗೂ ತ್ಯಾಜ್ಯ ವಸ್ತುಗಳು ಜಲಮೂಲ ಸೇರುತ್ತಿರುವುದು, ಕೈಗಾರಿಕೆಗಳಿಂದ ನದಿ ನೀರಿನ ಅನಿಯಂತ್ರಿತ  ಬಳಕೆ, ಅವೈಜ್ಞಾನಿಕ ಕೃಷಿ ಪದ್ಧತಿ, ಸಾಗರ ಸಮುದ್ರಗಳ ಮಾಲಿನ್ಯ- ಇವು ನೀರು ಮಲಿನಗೊಳ್ಳಲು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾಗಿರುವ ಕೆಲವು ಪ್ರಮುಖ ಕಾರಣಗಳು. ಇದಲ್ಲದೆ ಭೌಗೋಳಿಕ ಅಂಶಗಳು, ಜನಸಾಂದ್ರತೆ, ಒಂದು ದೇಶದ ಆರ್ಥಿಕ ಚಟುವಟಿಕೆಗಳು, ಆಧುನಿಕತೆಯ ದುಷ್ಪರಿಣಾಮಗಳು ಮತ್ತು ಅಲ್ಲಿನ ಆಂತರಿಕ ಸಂಘರ್ಷಗಳ ಆಧಾರದ ಮೇಲೆ ಪ್ರದೇಶದಿಂದ ಪ್ರದೇಶಕ್ಕೆ, ದೇಶದಿಂದ ದೇಶಕ್ಕೆ ಈ ಕಾರಣಗಳು ಬದಲಾಗುತ್ತಲೂ ಹೋಗಬಹುದು.

ಶತ ಪ್ರಯತ್ನ ನಡೆದರೂ ಮೂಡದ ಜಾಗೃತಿ
ನೀರಿನ ಸಂರಕ್ಷಣೆ ಮತ್ತು ನಿರ್ವಹಣೆ ಕುರಿತಂತೆ ಸುಮಾರು 50 ವರ್ಷಗಳಿಂದ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಲೇ ಇವೆ. ವಿಶ್ವಸಂಸ್ಥೆ, ಯುನಿಸೆಫ್, ಅಂತಾರಾಷ್ಟ್ರೀಯ ಸಮುದಾಯಗಳು ನೀರಿನ ಮೇಲಾಗುತ್ತಿರುವ ಆಕ್ರಮಣ ಮತ್ತು ಮಾಲಿನ್ಯವನ್ನು ತಡೆಗಟ್ಟಲು ಶತಾಯಗತಾಯ ಪ್ರಯತ್ನ ನಡೆಸಿವೆ. ಕುಗ್ಗುತ್ತಿರುವ ಉಪಯುಕ್ತ ನೀರಿನ ಪ್ರಮಾಣದ ಬಗ್ಗೆ ಜನರನ್ನು ಎಚ್ಚರಿಸಲು ಮತ್ತು ಅವರಲ್ಲಿ ಅರಿವು ಮೂಡಿಸಲು ಹಲವು ತುರ್ತು ಕ್ರಮಗಳನ್ನು ಕೈಗೊಂಡಿವೆ. ಈ ಉದ್ದೇಶಕ್ಕೆಂದೇ ಮಾರ್ಚ್‌ 22ನ್ನು ವಿಶ್ವ ಜಲ ದಿನ ಎಂದು ಕರೆದು ಜಾಗತಿಕ ಮಟ್ಟದಲ್ಲಿ ಜನರಲ್ಲಿ ನೀರಿನ ಮಹತ್ವದ ಅರಿವು ಮೂಡಿಸುವ ಪ್ರಯತ್ನ ನಡೆದಿದೆ. ಆದರೆ ಇಷ್ಟೆಲ್ಲ ಪ್ರಯತ್ನಗಳ ನಡುವೆಯೂ ನೀರಿನ ಸಮಾನ ಹಂಚಿಕೆ ಮೂಲಭೂತ ಹಕ್ಕಾಗಿ ಉಳಿದಿಲ್ಲ. ನೀರಿನ ಸಂರಕ್ಷಣೆ ಮತ್ತು ಅದರ ಮಿತ ಬಳಕೆಯನ್ನು ಸಾಮಾನ್ಯ ಜನರ ಬದ್ಧತೆಯ ವಿಷಯವನ್ನಾಗಿ ರೂಪಿಸುವಲ್ಲಿ ಸರಕಾರಗಳು ಮತ್ತು ಸಾಮಾಜಿಕ ಸಂಸ್ಥೆಗಳು ವಿಫ‌ಲವಾಗಿವೆ.

ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ಅನಕ್ಷರಸ್ಥರಿಗಿಂತ ಅಕ್ಷರಸ್ಥರೇ ನೀರಿನ ಮಹತ್ವದ ಬಗ್ಗೆ ಅರಿವು ಬೆಳೆಸಿಕೊಂಡಿಲ್ಲ. ಹೀಗಾಗಿ ಅದನ್ನು ಮನಸೋ ಇಚ್ಛೆ ಪೋಲು ಮಾಡುವ ಮನೋಭಾವ ಹೊಂದಿದ್ದಾರೆ. ಆಧುನಿಕ ಜೀವನ ಶೈಲಿ, ಐಶಾರಾಮಿ ಬದುಕು ಹಾಗೂ ಕೊಳ್ಳುಬಾಕ ಸಂಸ್ಕೃತಿ ಜನರನ್ನು ಸ್ವಾರ್ಥಪರರನ್ನಾಗಿ ಮಾಡಿ ಮತ್ತೂಬ್ಬನ ಅಸ್ತಿತ್ವದ ಬಗ್ಗೆ ಯೋಚಿಸದಂತೆ ಮಾಡಿವೆ. ನೀರಿಗೂ ಇದು ಅನ್ವಯಿಸುತ್ತದೆ. ಇಂತಹ ಮನೋಭಾವದ ಒಂದು ಸಮುದಾಯವನ್ನು ಪರಿವರ್ತಿಸಿ ಅವರಲ್ಲಿ ನೀರಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಪರಿಣಾಮಕಾರಿ ತಂತ್ರಗಳನ್ನು ರೂಪಿಸಬೇಕಿದೆ.

ತಾಂತ್ರಿಕ ದೃಷ್ಟಿಕೋನವೂ ಅಗತ್ಯ
ನೀರಿನ ನಿರ್ವಹಣೆ, ಸಂರಕ್ಷಣೆ ಕುರಿತು ಯಾರಾದರೂ ಜಾಗೃತಿ ಮೂಡಿಸಬಹುದಾಗಿದೆ ಮತ್ತು ಅದು ಎಲ್ಲರ ಕರ್ತವ್ಯವೂ ಆಗಿದೆ ಎಂಬುದು ನಿಜವೇ! ಆದರೆ ನೀರಿನ ನಿರ್ವಹಣೆ ಅಂದರೆ ಅದು ಇಂದಿನ ದಿನಗಳಲ್ಲಿ ಕೇವಲ ಸಾರ್ವಜನಿಕ ಬಾವಿ, ಕೆರೆಗಳ ನೀರಿನ ನಿರ್ವಹಣೆ ಮಾತ್ರವಲ್ಲ. ಸಮುದಾಯದ ಹಿತ ಕಾಯುವಲ್ಲಿ ನೀರಿನ ಬಳಕೆ ಮತ್ತು ಅದರ ಸಂರಕ್ಷಣೆಯನ್ನು ತಾಂತ್ರಿಕ ದೃಷ್ಟಿಕೋನದಿಂದ ಕೂಡ ನೋಡಬೇಕಾಗುತ್ತದೆ. ಏಕೆಂದರೆ ನೀರು ಇಂದಿನ ನಮ್ಮ ದೈನಂದಿನ ಉಪಯೋಗದ ಲಭ್ಯತೆಯ ದೃಷ್ಟಿಯಿಂದಷ್ಟೇ ಮುಖ್ಯವಲ್ಲ. ಅದು ಪ್ರತಿಯೊಂದು ಉತ್ಪನ್ನ, ಸರಕು ಹಾಗೂ ಸೌಲಭ್ಯದೊಂದಿಗೆ ಅಂತರ್ಗತವಾದ ಸಂಬಂಧವನ್ನು ಹೊಂದಿದೆ. ನೀರು ಹಾಗೂ ಈ ಉಪಭೋಗದ ಸಂಬಂಧಗಳ ವಿಶ್ಲೇಷಣೆ ಅತಿ ಮುಖ್ಯವಾದದ್ದು. ಹಾಗಾಗಿ ಇದು ವಿದ್ಯಾರ್ಥಿಗಳು ಹಾಗೂ ಯುವಜನತೆಯ ಪಾಲ್ಗೊಳ್ಳುವಿಕೆಯನ್ನೇ ಹೆಚ್ಚು ಅಪೇಕ್ಷಿಸುತ್ತದೆ. ಉದಾಹರಣೆಗೆ, ಒಂದು ಗ್ಯಾಲನ್‌ ಕಚ್ಚಾ ತೈಲ ಉತ್ಪಾದನೆಗೆ 2.2ರಿಂದ 6 ಗ್ಯಾಲನ್‌ನಷ್ಟು ನೀರು ಬೇಕಾಗುತ್ತದೆ. ಹೆಚ್ಚು ಹೆಚ್ಚು ದೂರದಿಂದ ನಾವು ಆಹಾರ ಮತ್ತು ಎಣ್ಣೆಯನ್ನು ಅಮದು ಮಾಡಿಕೊಂಡಂತೆಲ್ಲ ಅದಕ್ಕೆ ಬಳಕೆಯಾಗುವ ನೀರು ಕೂಡ ಹೆಚ್ಚುತ್ತದೆ. ನಾವು ಸ್ಥಳೀಯವಾಗಿ ವಸ್ತುಗಳನ್ನು ಕೊಂಡಾಗ ಅಂತಧಿರ್ಗತ ನೀರಿನ ಖರ್ಚು ಗಣನೀಯವಾಗಿ ಕಡಿಮೆಧಿಯಾಧಿಗುತ್ತದೆ. ಹಾಗೇ ಒಂದು ಕೆಜಿ ಬಿ.ಟಿ. ಹತ್ತಿ ಉತ್ಪಾದನೆಗೆ 20 ಸಾವಿರ ಲೀಟರ್‌ ನೀರು ಬೇಕಾಗುತ್ತದೆ. ಹಲವು ಫ್ಯಾಶನ್‌ ಉಡುಪುಗಳು ಕೂಡ ಇದೇ ಮಾದರಿಯಲ್ಲಿ ದುಬಾರಿ ನೀರಿನ ಖರ್ಚು ಹೊಂದಿರುತ್ತವೆ. ಸಾವಯವ ವಸ್ತುಗಳ ಉಪಯೋಗ ಬಳಕೆಯಾಗುವ ನೀರಿನ ಪ್ರಮಾಣವನ್ನು ಕುಗ್ಗಿಸುತ್ತದೆ. ಬ್ರೆಜಿಲ್‌ನಲ್ಲಿ 1 ಪೌಂಡ್‌ ಹತ್ತಿಯನ್ನು 10.6 ಗ್ಯಾಲನ್‌ ನೈಸರ್ಗಿಕ ಮಳೆ ನೀರಿನಿಂದ ಬೆಳೆದರೆ ಕ್ಯಾಲಿಫೋರ್ನಿಯಾದಲ್ಲಿ ಅದೇ ಪ್ರಮಾಣದ ಹತ್ತಿ ಬೆಳೆಯಲು 782 ಗ್ಯಾಲನ್‌ ನೀರು ಬೇಕಾಗುತ್ತದೆ ಎಂದು ಒಂದು ವರದಿ ತಿಳಿಸುತ್ತದೆ. ಹಾಗಾಗಿ ಸಾವಯವ ಬಳಕೆಯ ವಸ್ತುಗಳು ಹಾಗೂ ಸ್ವದೇಶೀ ನಿರ್ಮಿತ ವಸ್ತುಗಳನ್ನು ಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ

ಸಮುದ್ರ ನೀರನ್ನು ರಕ್ಷಿಸಬೇಡವೇ!
ಇಷ್ಟಾಗಿಯೂ ನಮ್ಮಲ್ಲಿ ಒಂದು ತಪ್ಪು ಕಲ್ಪನೆಯಿದೆ- ಮನುಷ್ಯನ ಬಳಕೆಗೆ ಈ ಭೂಮಿಯಲ್ಲಿ ಲಭ್ಯವಿರುವ ಶೇ.1ರಷ್ಟು ನೀರನ್ನು ಸಂರಕ್ಷಿಸಿದರೆ, ಹಿತಮಿತವಾಗಿ ಬಳಸಿಬಿಟ್ಟರೆ ಸಾಕು! ಆದರೆ ಸಿಹಿ ನೀರನ್ನು ಸಂರಕ್ಷಿಸುವಂತೆಯೇ ಸಮುದ್ರ ಸಾಗರಗಳ ನೀರನ್ನೂ ರಕ್ಷಿಸಬೇಕಾದದ್ದು ನಮ್ಮ ಮಹತ್ವದ ಕರ್ತವ್ಯ. 2002ರಲ್ಲಿ ಬಹಾಮದ ತೈಲ ಸಾಗಣೆ ಹಡಗೊಂದು ಸ್ಪೇಯ್ನನ ಕಡಲ ತೀರದಲ್ಲಿ ಅಪಘಾತಕ್ಕೀಡಾಗಿ 77 ಸಾವಿರ ಮೆ.ಟನ್‌ನಷ್ಟು ತೈಲ ಸಮುದ್ರಕ್ಕೆ ಸೋರಿ ಅಪಾರ ಪ್ರಮಾಣದಲ್ಲಿ ನೀರು ಕಲುಶಿತಗೊಂಡಿತ್ತು. 2003ರಲ್ಲಿ ಗಲ್ಫ್ ಯುದ್ಧದ ಸಂದರ್ಭದಲ್ಲೂ ಕೆಂಪು ಸಮುದ್ರ, ಮೆಡಿಟರೇನಿಯನ್‌ ಸಮುದ್ರ ಹಾಗೂ ಅರೇಬಿಯನ್‌ ಸಮುದ್ರದ ನೀರು ತೈಲ ಸೋರಿಕೆ ಹಾಗೂ ಇತರ ಯುದ್ಧ ರಾಸಾಯನಿಕಗಳಿಂದ ಕಲುಷಿತಗೊಂಡಿತ್ತು. ಇಂತಹ ಘಟನೆಗಳು ಜೈವಿಕ ಸರಪಣಿ ಹಾಗೂ ವಾತಾವರಣದ ಮೇಲೆ ದೊಡ್ಡ ಆತಂಕವನ್ನು ಸೃಷ್ಟಿಸುತ್ತವೆ. ಈ ವಿಷಯಗಳ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮೂಡಬೇಕಿದೆ.

ಈಗ ನೀರಿನ ಉಪಯೋಗದ ಸೂತ್ರವೇ ಬದಲಾಗಿದೆ. ಈಗ ಉತ್ಪನ್ನದ ಮಾಪನ ಪ್ರತಿ ಪ್ರದೇಶದ ತಲಾ ಗರಿಷ್ಠ ಉತ್ಪಾದನೆಯ ಅಳತೆಯಾಗಿ ಉಳಿದಿಲ್ಲ. ಅದೀಗ ತಲಾ ಯುನಿಟ್‌ ನೀರಿನ ಉಪಯೋಗದಿಂದ ಬಂದ ಗರಿಷ್ಠ ಉತ್ಪನ್ನಕ್ಕೆ ಬದಲಾಗಿದೆ. ಈ ಹಿನ್ನೆಲೆಯಲ್ಲಿ, ಅತಿ ಕಡಿಮೆ ಬಳಕೆಯ ನೀರಿನಿಂದ ಹೆಚ್ಚು ಉತ್ಪನ್ನಗಳನ್ನು ಉತ್ಪಾದಿಸುವುದೇ ಹೆಚ್ಚು ಲಾಭದಾಯಕ ಮತ್ತು ಸುಸ್ಥಿರ ಅಭಿವೃದ್ಧಿ ಎಂದು ಭಾವಿಸಲಾಗಿದೆ. ಈ ಹಿನ್ನೆಲೆಯಲ್ಲೇ ನೀರಿನ ಕುರಿತಾದ ಎಲ್ಲ ಯೋಜನೆಗಳನ್ನು ವಿಶ್ಲೇಷಿಸಬೇಕಿದೆ. ಹಾಗೆಯೇ ನೀರಿನ ಹಕ್ಕಿನ ಖಾಸಗೀಕರಣ ನಿಲ್ಲಬೇಕಿದೆ. ಎಲ್ಲ ಖಾಸಗಿ ನೀರಿನ ಮೂಲಗಳು ಹಿಂದಿದ್ದ ಕೆರೆಕಟ್ಟೆಗಳ ಮಾದರಿಯಲ್ಲಿ ಸಮುದಾಯದ ನಿಯಂತ್ರಣಕ್ಕೊಳಪಡಬೇಕು. ಸಮುದಾಯವೇ ಅವುಗಳನ್ನು ನಿಯಂತ್ರಿಸುವಂತಾಗಬೇಕು. ಜಲಸಂರಕ್ಷಣೆ ಮತ್ತು ಮಳೆಕೊಯ್ಲಿನಿಂದ ಮಾತ್ರ ನಾವು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಸಮುದಾಯದಲ್ಲಿ ನೀರಿನ ಸಮರ್ಪಕ ಹಂಚಿಕೆಯಾಗಬೇಕು. ನೀರು ಇಂದು ಆರೋಗ್ಯ, ಸಾಕ್ಷರತೆ, ಉದ್ಯೋಗ ಹೀಗೆ ಬದುಕಿನ ಎಲ್ಲ ಆಯಾಮಗಳಿಗೂ ತಳುಕು ಹಾಕಿಕೊಂಡಿದೆ. ಬಡತನ, ಅನಾರೋಗ್ಯ ಸಮಸ್ಯೆಗಳಿಗೆ ನೀರು ಮುಖ್ಯ ಕಾರಣವಾಗುತ್ತಿದೆ. ಅಭಿವೃದ್ಧಿಯ ಹೆಸರಲ್ಲಿ ಕಾಂಕ್ರೀಟ್‌ ಕಾಡುಗಳನ್ನು ಕಟ್ಟುತ್ತಾ ಹಳ್ಳಿಗಳನ್ನು, ಕೆರೆಕಟ್ಟೆಗಳನ್ನು ನುಂಗಿದ ನಾವು ನಮ್ಮ ಮುಂದಿನ ಪೀಳಿಗೆಯ ಭವಿಷ್ಯವನ್ನೇ ಹಾಳು ಮಾಡುತ್ತಿದ್ದೇವೆ. ನಾವು ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ.

ಟಿ. ಪಿ. ಶರಧಿ, ಹಾಸನ

ಟಾಪ್ ನ್ಯೂಸ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

10-uv-fusion

Theater: ಅಳಿವು ಉಳಿವಿನ ದವಡೆಯಲ್ಲಿ ರಂಗಭೂಮಿ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

9-fusion

Friendship: ಕೈಜಾರದಿರಲಿ ಗೆಳೆತನವೆಂಬ ಆಪ್ತ ನಿಧಿ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.