ಸುಖಿಯಾಗಿಪ್ಪ ಒಕ್ಕಲು ಮಗನ…


Team Udayavani, Nov 12, 2017, 4:38 AM IST

farmar.jpg

ನಾವೂ ಸಾವಕಾರ ಆಗೂದ ಬ್ಯಾಡೇನ? ಬದುಕುವ ಹಕ್ಕು ನಮಗೆ ಇಲ್ಲೇನ? ಈ ಪ್ರಶ್ನೆಗಳು  ರೈತರ ಗೊಣಗಾಟದಂತೆ ಕೇಳಿ ಬರುತ್ತಿವೆ. ಕೇಳಿಸಿಕೊಳ್ಳುವವರು ಯಾರಾದರೂ ಇದ್ದಾರೋ? ರೈತ ಸಮುದಾಯದ ಕೂಗು ಇದು.  ರೈತರು ಆಹಾರಧಾನ್ಯ ಬೆಳೆದು ಕಣಜ ತುಂಬಿಸಿದರೂ ಹಸಿದಿದ್ದಾರೆ. 

“”ಎತ್ತು ಬಿತ್ತಿತ್ತು ಒಕ್ಕಲಿಗನಿಗಿಂತ ಉತ್ತಮರಿಲ್ಲೆಂದು ಎತ್ತಾಗಿ ಬಿತ್ತಿದ ನಮ್ಮ ಬಸವಣ್ಣ ”. ಇದೊಂದು ಜಾನಪದ ರೂಪಕ. ಒಕ್ಕಲಿಗ ಉತ್ತಮ ವ್ಯಕ್ತಿ. ಸದ್ವಿನಯಿ ಸದಾಚಾರವುಳ್ಳವನು. ಸಮಾಜದಲ್ಲಿ ಒಕ್ಕಲಿಗರಿಗಿಂತ ಉತ್ತಮರ್ಯಾರೂ ಇಲ್ಲ. ಒಕ್ಕಲಿಗನ ಗುಣಕ್ಕೆ ಮೆಚ್ಚಿ ಎತ್ತುಗಳು ನೊಗಕ್ಕೆ ಹೆಗಲು ಕೊಟ್ಟು ಅವನ ಹೊಲವನ್ನು ಉತ್ತಿಬಿತ್ತಿ ಬೆಳೆ ಮಾಡಲು ಕಾರಣವಾದ ಬಗೆ ಇಲ್ಲಿ ಸೊಗಸಾಗಿ ಮೂಡಿ ಬಂದಿದೆ. ಹಿಂದೆ ಪ್ರಕೃತಿಯಲ್ಲಿ ದೈವೀ ಸ್ವರೂಪ ಕಂಡ ರೈತರು ಭೂಮಿ ಬೆಳೆ, ಮಳೆ, ಬೀಜ ಎತ್ತು ಮತ್ತು ಗಾಳಿ ಎಲ್ಲವೂ ದೈವದತ್ತವಾದ ದೇಣಿಗೆ ಎಂದು ನಂಬಿದ್ದರು. ಕೃಷಿಕರಿಗೆ ಸಮಾಜದಲ್ಲಿ ಅನ್ನದಾತ ಎಂಬ ಮನ್ನಣೆ ಇತ್ತು. ಕಠಿಣ ಪರಿಶ್ರಮ, ಕಷ್ಟ-ನಷ್ಟ ಸಹಿಷ್ಣುತೆ, ಮನಮುಟ್ಟಿ ಮೈಮುರಿದು ದುಡಿಯುವ ಪ್ರವೃತ್ತಿ ರೈತರಲ್ಲಿತ್ತು. ರೈತರ ಬದುಕಿನಲ್ಲಿ ಆರೋಗ್ಯ ಇತ್ತು. ನೆಮ್ಮದಿ ಇತ್ತು, ಸಮೃದ್ಧಿಯೂ ಇತ್ತು. ಆಶೆ ಆಕಾಂಕ್ಷೆ ಮತ್ತು ತವಕ ತಲ್ಲಣಗಳು ರೈತರಲ್ಲಿದ್ದರೂ ಸಂಯಮದ ಗಡಿ ದಾಟುತ್ತಿರಲಿಲ್ಲ. ರೈತರ ಸಂಸ್ಕೃತಿ ಕೃಷಿ ಸಂಸ್ಕೃತಿ ಈ ನೆಲದ ಈ ಮಣ್ಣಿನ ಸಂಸ್ಕೃತಿ ಆಗಿತ್ತು.

ಹೌದು, ಅದು “ಸತ್ತ ಎಮ್ಮೆಗೆ ಸೇರು ತುಪ್ಪ’ ಎಂಬ ಭಾವದಿಂದಲ್ಲ. ಪುಣ್ಯಭೂಮಿ ಇದು. ಬೆಳೆ ಹುಲುಸಾಗಿ ಬೆಳೆಯಲು ಈ ಮಣ್ಣು ಫ‌ಲವತ್ತಾಗಿದೆ. ಚಿತ್ತಶುದ್ಧಿಯಿಂದ ಕೃಷಿ ಮಾಡುತ್ತಿದ್ದ ರೈತರು ಅಚ್ಚ ಕನ್ನಡದ ಬೇಸಾಯಗಾರರು. ಅವರು “ಕುರಿತೋದದೆಯುಂ ಕಾವ್ಯ ಪರಿಣತಮತಿಗಳು’! ಕೃಷಿ ಕೆಲಸ ಕಾರ್ಯಗಳು ಲೌಕಿಕ ಸ್ವರೂಪದವು ಆಗಿದ್ದರೂ ಅಲೌಕಿಕ ಸಾಧನೆ ಮತ್ತು ಸಿದ್ಧಿಗೂ ಪೂರಕ ಆಗಿವೆ. ಕೃಷಿಯೂ ಒಂದು ಯೋಗ ಆಗಿದೆ. ಸಸಿಯ ಕರುಳು ನೋಯದಂತೆ ನಾಟಿ ಮಾಡುವ ರೈತರು ಬೆಳೆಯನ್ನು ಕೂಸಿನಂತೆ ಆರೈಕೆ ಮಾಡಿ. ಬೆಳೆಗಳಲ್ಲಿರುವ ಕಳೆ ಕಸಕೀಳುವಾಗ ಬೆಳೆಯ ಬೇರಿಗೆ ತೊಂದರೆ ಆಗದ ಹಾಗೆ, ಎಡೆಕುಂಟೆ ಹೊಡೆಯುವಾಗ ಬೆಳೆಯ ಸಾಲಿನಲ್ಲಿರುವ ಸಸ್ಯಗಳನ್ನು ಎತ್ತುಗಳು ತುಳಿಯದ ಹಾಗೆ, ಜಾಗೃತಿ ವಹಿಸುವಿಕೆಯಲ್ಲಿ ರೈತರ ಕಳಕಳಿ ಮೆಚ್ಚುವಂಥಾದ್ದು. 

ಉಳುಮೆ ಮಾಡುವಾಗಲೂ ಕಟ್ಟಿಗೆಯ ರೆಂಟೆಯಿಂದ ಭೂಮಿತಾಯಿಯ ಒಡಲಿಗೆ ಹಿಂಸೆಯಾಗದಂತೆ ಮಾಡುವ ಕ್ರಮಗಳು ಪರಿಸರ ಸ್ನೇಹಿ ಕ್ರಮಗಳೇ ಸರಿ. ಸಾವಯವ ಗೊಬ್ಬರದ ಬಳಕೆ ಒಂದೇ ಎರಡೇ! ಅವುಗಳಲ್ಲಿರುವ ವೈಜ್ಞಾನಿಕ ಸಂಗತಿಗಳು ಇಂದಿನ ಜಾಣ ಕುರುಡು ವಿಜ್ಞಾನಿಗಳ ಕಣ್ಣಿಗೆ ಕಾಣಿಸುವುದೇ ಇಲ್ಲ. 

ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಕೃಷಿ ಕುರಿತು “ಇದು ಪ್ರಕೃತಿಯ ಪ್ರತಿಕೃತಿಯಂತಿದ್ದು ನಿಸರ್ಗದ ಬಲಿಷ್ಠ ತತ್ವಗಳನ್ನಾಧರಿಸಿದೆ. ಜಾನುವಾರುಗಳನ್ನು ಕೇವಲ ಹಾಲು, ಹಯನ, ಮಾಂಸ ಮತ್ತು ಉಳುಮೆಗಾಗಿ ಮಾತ್ರವಲ್ಲ. ಅವುಗಳ ಸೆಗಣಿ ಗಂಜಲುಗಳನ್ನು ಕೂಡ ಭೂಮಿಗೆ ಹಾಕುತ್ತಾರೆ. ಮಿಶ್ರಬೆಳೆ ಪದ್ಧತಿ, ಬೆಳೆ ವೈವಿಧ್ಯತೆ, ಬೆಳೆ ತ್ಯಾಜ್ಯಗಳನ್ನು ಮರಳಿ ಭೂಮಿಗೆ ಸೇರಿಸಲು ಪುನರ್‌ಬಳಸುವುದು. ಹಸಿರೆಲೆ ಗೊಬ್ಬರ ಹಾಕುವುದು. ಇಂಥ ಕ್ರಮಗಳಲ್ಲಿ ಬೆಳೆ ಅಭಿವೃದ್ಧಿಯಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆ’ ಎಂದು ಬ್ರಿಟಿಷ್‌ ಕೃಷಿ ತಜ್ಞ ಸರ್‌ ಅಲ್ಬರ್ಟ್‌ ಹೋವರ್ಡ್‌ ಶ್ಲಾಘನೆ ಮಾಡಿದ್ದು ಇತಿಹಾಸ ಆಗಿದೆ. ಇಂಥ ಸುಸ್ಥಿರ ಕೃಷಿ ಸ್ವಾತಂತ್ರಾé ನಂತರದಲ್ಲಿ ಅಸ್ಥಿರಗೊಂಡು ಕೃಷಿಯ ಕಥೆ ವ್ಯಥೆ ಆಗಲು ಯಾರು ಕಾರಣ? ಎಂಬ ಪ್ರಶ್ನೆ ಇಲ್ಲಿ ಸಹಜವಾಗಿ ಉದ್ಭವವಾಗುತ್ತದೆ. 
ಅಕ್ಕರವ ಕಲಿತಾತ ಒಕ್ಕಲನು ತಿನಗಲಿತ: ಸ್ವಾವಲಂಬಿ (ಪರಂಪರಾಗತ) ಮತ್ತು ಪರಾವಲಂಬಿ (ಆಧುನಿಕ ವೈಜ್ಞಾನಿಕ) ಕೃಷಿಯ ನಡುವೆ ರೈತರು ಪರತಂತ್ರ ಆಗಿದ್ದಾರೆ. ಇದು ತೀರ್ಮಾನದ ಮಾತಲ್ಲ. ಕೃಷಿಕನಿಗೆ ಕೃಷಿಯು ಅಂತರಂಗ ಮತ್ತು ಬಹಿರಂಗದ ಬದುಕನ್ನು ತುಂಬಿಕೊಡುವ ಜೀವನದರ್ಶನ ಆಗಿದ್ದುದು ಈಗಿಲ್ಲ. ಬದುಕಿನ ವಿಧಾನ ಆಗಿದ್ದ ಜೀವನೋಪಾಯದ ಕೃಷಿಯನ್ನು ಅಪ್ರಸ್ತುತವಾಗಿರಿಸಿದ್ದು ಆರ್ಥಿಕ ಆಯಾಮ. ಹಸಿರು ಕ್ರಾಂತಿ ಮತ್ತು ಜಾಗತೀಕರಣದ ಮೂಲಕ ಜನಕೇಂದ್ರಿತವಾಗಿದ್ದ ಪವಿತ್ರ ಕೃಷಿಗೆ ವಿಜ್ಞಾನ ತಂತ್ರಜ್ಞಾನ ಕೇಂದ್ರಿತವಾದ ಚೌಕಟ್ಟನ್ನು ಹಾಕಿಕೊಟ್ಟಿತು. ಇಂದಿನ ಕೃಷಿಯ ಸಾರ್ಥಕತೆ ಹಣದ ರೂಪದಲ್ಲಿದೆ “”ಮಾರುದ್ದ ಪೈರಾಗಲಿ ಮೊಳವುದ್ದ ತೆನಿಯಾಗಲಿ, ಬಡವನ ಮನಿಗೆ ಸಿರಿಬರಲಿ| ಭೂಮಿತಾಯಿ ಕಂದಯ್ಯ ಹಸಿವು ಇಂಗೋಗ್ಲಿ ||”
ಬೆಳೆಯುವ ಜನಸಂಖ್ಯೆಯ ಹೊಟ್ಟೆ ತುಂಬಿಸಲು ರೈತರು ಹೈಬ್ರಿಡ್‌ ಬೀಜಗಳನ್ನು ಬಳಸಿದರು. ಹಸಿವು ಇಂಗಿ ಹೋಯ್ತು. ಆದರೆ ಬಡವನ ಮನೆಗೆ ರೈತರ ಪಾಲಿಗೆ ಸಿರಿತನ ಮಾತ್ರ ಬರಲೇ ಇಲ್ಲ. ಜನಪದ ಕವಿಯ ಆಶಯ ಬರೀ ಕನಸಾಗಿ ಉಳಿದಿದೆ. ಕಳೆದ 50 ವರ್ಷಗಳಲ್ಲಿ ರೈತರ ಬದುಕು ಪಲ್ಲಟ ಆಗಿದೆ. ಸಮಸ್ಯೆಗಳು ಮತ್ತು ಸವಾಲುಗಳ ನಡುವೆಯೇ ರೈತರು ಬದುಕಬೇಕೆಂಬ ಹಂಬಲ ಹಠವಾಗಿದೆ. ಬದುಕು ಮೂರೇ ದಿನದ್ದಾದರೂ ಸಂತೋಷ ಮತ್ತು ನೆಮ್ಮದಿಯಿಂದ ಬದುಕಬೇಕೆಂಬುದು ಸಹಜ ಬಯಕೆ ಆಗಿದೆ. ಆಳುವವರು, ಅಧಿಕಾರಿಗಳು, ಉದ್ಯಮಿಗಳು, ನೌಕರಸ್ಥರು ಮತ್ತು 
ವ್ಯಾಪಾರಿ ವರ್ಗ ಕೈಕೈ ಹಿಡಿದು ರೈತರನ್ನು ಉತ್ಪಾದನಾ ಜೀತದಾಳುಗಳಾಗಿಸಿ, ಅವರ ಉತ್ಪಾದನೆಯನ್ನು ಅತಿ ಕಡಿಮೆ ಬೆಲೆಗೆ ಖರೀದಿಸು (ದೋಚು)ವ ಬೆಲೆ ಹೆಣೆಯಲಾಗಿದೆ. ಆ ಬಲೆಯಲ್ಲಿ ರೈತರೆಂಬ ಮೀನುಗಳು ಸಿಲುಕಿ ವಿಲವಿಲನೆ ಒದ್ದಾಡುತ್ತಿವೆ.
“ಅಕ್ಕರವಕಲಿತಾತ ಒಕ್ಕಲನುತಿನಗಲಿತ’. ಓದು ಬರಹ ಬಲ್ಲವನು ಜಾಣನಾಗಿ ಮುಗ್ಧ ಹಾಗೂ ಅಕ್ಷರ ಕಲಿಯದ ರೈತರನ್ನು ನುಂಗಿ ಹಾಳು ಮಾಡುತ್ತಾನೆಂದು ಸರ್ವಜ್ಞ ಕವಿ ಹೇಳಿದಂತೆ ಕೃಷಿ ವಿಜ್ಞಾನ ಕೃಷಿ ಸಂಶೋಧನೆಗಳು ಮತ್ತು ತಂತ್ರಜ್ಞಾನ ಹಾಗೂ ಯಂತ್ರಗಳು ರೈತರನ್ನು ಮತ್ತು ಕೃಷಿಯನ್ನು ಹಾಳು ಮಾಡಿದ ಸಂಗತಿ ಅಲ್ಲಗಳೆಯಲಾಗದು. “ಒಕ್ಕಲನುನಲುಗಿಸದೆ | ಲೆಕ್ಕವನು ಸಿಕ್ಕಿಸದೆ ಕಕ್ಕುಲತೆಯಿಂದ ನಡೆಸುವಾ ಅರಸು ತಾ | ಚಕ್ಕಂದವಿರುವ ಸರ್ವಜ್ಞ||’

ರೈತರನ್ನು ಕೊರಗದಂತೆ ಕೃಷಿಯನ್ನು ಪ್ರೋತ್ಸಾಹಿಸುತ್ತ ರೈತರನ್ನು ಹಿಂಸಿಸದೆ ಇರುವ ಸರಕಾರ (ಅರಸು) ನೆಮ್ಮದಿಯಿಂದ ರಾಜ್ಯವಾಳಬಲ್ಲದು. ಸರ್ವಜ್ಞ ಕವಿಯ ಈ ತ್ರಿಪದಿ ರೈತರ ಬಗೆಗಿನ ಇಂದಿನ ಸರಕಾರಗಳ ಧೋರಣೆಯನ್ನು ಅವಲೋಕಿಸುವಂತೆ ಮಾಡಿದೆ. ರೈತರನ್ನು ಸಾಲದಲ್ಲಿ ಸಿಲುಕಿಸಿ, ರೈತರಿಗೆ ಏನೆಲ್ಲಾ ತೊಂದರೆ ಕೊಡುತ್ತಲೇ ಸಂಕಟದಲ್ಲಿ ಸಿಲುಕಿಸುತ್ತಿರುವ ಸರಕಾರಗಳು ಅದ್ಹೇಗೆ ನೆಮ್ಮದಿಯಿಂದ ರಾಜ್ಯಭಾರ ಮಾಡುತ್ತಿವೆ ಎಂಬುದು ಗಮನಾರ್ಹ ಸಂಗತಿ ಆಗಿದೆ. ರಾಜ್ಯದ ಭಂಡಾರ ತುಂಬಲು ರೈತರು ಹೆಚ್ಚು ಉತ್ಪಾದಿಸಿದ್ದರಿಂದ ಸಾಧ್ಯವಾಗಿರುವುದನ್ನು ಗಮನಿಸಿ ರೈತರನ್ನು ಕೊಂಡಾಡುವ ಸರಕಾರ ಇಂದಿಲ್ಲ. ದೇಶವನ್ನು ಸ್ವಾವಲಂಬಿಯಾಗಿಸಿದ ರೈತರ ಉಪಕಾರ ಸ್ಮರಣೆಯ ಮಾತುಗಳೂ ಕೇಳಿಬರಲಿಲ್ಲ.

ಆಹಾರ ಧಾನ್ಯ, ತರಕಾರಿ, ಹಣ್ಣು ಹಂಪಲು, ರೇಷ್ಮೆ, ಕಬ್ಬು, ಹತ್ತಿ ಮತ್ತು ಬೇಳೆಕಾಳು ಏನೆಲ್ಲಾ ಬೆಳೆಯುವ ಭೂಮಿಯಲ್ಲಿ ಪ್ರಳಯದ ಕಸ ಯಥೇತ್ಛವಾಗಿ ಬೆಳೆಯುತ್ತಿದೆ. ಇದು ವೈಜ್ಞಾನಿಕ ಅಥವಾ ಪರಾವಲಂಬಿಯ ಕೃಷಿಯ ಕೊಡುಗೆ. 2015ರಿಂದ ರೈತರು ದಾಖಲೆ ಪ್ರಮಾಣದಲ್ಲಿ ಆತ್ಮಹತ್ಯೆಗೆ ಮುಂದಾಗಿರುವುದು. ಸಮಾಜದ ಮುಖ್ಯ ಪ್ರವಾಹದ ಆಗು-ಹೋಗುಗಳತ್ತ ಬೆನ್ನು ತೋರಿಸಿರುವ ಸರಕಾರದ ನಡೆ ಎತ್ತ? ಜನಪದರ ರೂಪಕವೆತ್ತ? “ಹೆಚ್ಚು ಖರ್ಚು ಮಾಡಿರಿ. ಹೆಚ್ಚು ಉತ್ಪಾದಿಸಿರಿ. ಕಡಿಮೆ ಬೆಲೆಗೆ ಕೃಷಿ ಉತ್ಪನ್ನಗಳನ್ನು ಮಾರಿ, ಸಾಲಗಾರರಾಗಿರಿ ಎಂಬುದು ಇಂದಿನ ಘೋಷವಾಕ್ಯ. ಅಭಿವೃದ್ಧಿಯ ಸರಳ ವ್ಯಾಖ್ಯಾನ ಇದೇ ಇರಬೇಕು.

ಗಾಣದಲ್ಲಿ ಸಿಕ್ಕ ಕಬ್ಬಿನಂತಾದ ರೈತರು: ತಮ್ಮ ಸುತ್ತಮುತ್ತ ಆವರಿಸಿರುವ ಅಲ್ಪಶ್ರಮಕ್ಕೆ ಅಧಿಕ ಆದಾಯ ಪಡೆಯುವವರನ್ನು ಕಂಡು ರೈತರ ಕಣ್ಣು ಕುಕ್ಕದೇ ಇರದು. ತಮಗ್ಯಾಕೆ ಇಂಥ ಸ್ಥಿತಿ ಎಂದು ರೈತರು ಕೊರಗುತ್ತಿದ್ದಾರೆ. ತಾಳಿಕೆ ಬಾಳಿಕೆಯ ಕೃಷಿ ಇಂದಿಲ್ಲ. ಆಗುವ ಲಕ್ಷಣಗಳೂ ಇಲ್ಲ. ನಿಸರ್ಗವೂ ರೈತರನ್ನು ಕಾಡುತ್ತಲೇ ಇದೆ. ಯಾರನ್ನು ಹೊಣೆಗಾರರನ್ನು ಮಾಡಬೇಕೆನ್ನುವ ಗೊಂದಲದಲ್ಲಿ ರೈತರಿದ್ದಾರೆ. ನಾವೂ ಸಾವಕಾರ ಆಗೂದ ಬ್ಯಾಡೇನ? ಬದುಕುವ ಹಕ್ಕು ನಮಗೆ ಇಲ್ಲೇನ? ಈ ಪ್ರಶ್ನೆಗಳು 
ರೈತರ ಗೊಣಗಾಟದಂತೆ ಕೇಳಿ ಬರುತ್ತಿವೆ. 

ಕೇಳಿಸಿಕೊಳ್ಳುವವರು ಯಾರಾದರೂ ಇದ್ದಾರೋ? ರೈತ ಸಮುದಾಯದ ಕೂಗು ಇದು. 

ರೈತರು ಆಹಾರಧಾನ್ಯ ಬೆಳೆದು ಕಣಜ ತುಂಬಿಸಿದರೂ ಹಸಿದಿದ್ದಾರೆ. ಹಾಲು ಹಯನ ಉತ್ಪಾದಿಸಿದರೂ ಮಕ್ಕಳಿಗೆ ಹಾಲಿಲ್ಲ. ಉತ್ತಮ ತರಕಾರಿ ಸತ್ವಯುತ ಹಣ್ಣು ಹಾಗೂ ತಪ್ಪಲು ಪಲ್ಯ ಬೆಳೆದರೂ ರೈತರು ಅಪೌಷ್ಟಿಕತೆಯಿಂದ ರೋಗಿಷ್ಟ ಆಗಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಈ ಮಾತನ್ನು ಹೇಳಿದವರು ಯಾರೂ ಅಲ್ಲ. ರೈತರ ಕಲ್ಯಾಣ ಮಾಡುವ ನಾಟಕದ ಮಾತುಗಳಲ್ಲ. ಮಹಾತ್ಮಾ ಗಾಂಧೀಜಿಯವರ ಮಾತುಗಳಿವು! “ಆರಂಭವ ಮಾಡಿ ಸಂಸಾರ ಸ್ಥಿತಿ ಕಳೆಯದಿದ್ದರೆ ಆ ಆರಂಭವೇ ಕೇಡು’. ಕೃಷಿ ಮಾಡಿ ಸಂಸಾರ ಸ್ಥಿತಿ ಸುಧಾರಿಸದಿದ್ದರೆ ಅಂಥ ಕೃಷಿ ಕೆಲಸ ವ್ಯರ್ಥ. ವ್ಯವಸಾಯವ ಮಾಡಿ ಮನೆಯ ಬೀಯಕ್ಕೆ ಭತ್ತ ಇಲ್ಲದಿದ್ದರೆ ಆ ಬೆವಸಾಯದ ಘೋರವೇತಕ್ಕಯ್ನಾ’, ಭತ್ತ ಮತ್ತು ನವಧಾನ್ಯಗಳನ್ನು ಬಿತ್ತಿ ಬೆಳೆಯುವ ರೈತನ ಮನೆಯಲ್ಲಿ ಉಣ್ಣಲು ಭತ್ತ ಇರದಿದ್ದರೆ. ಅಂಥ ಘೋರವಾದ ವ್ಯವಸಾಯ ಯಾತಕ್ಕೆಂದು ಶರಣರು ವ್ಯವಸಾಯದ ಸಾರ್ಥಕತೆ ಕುರಿತು ಚೆನ್ನಾಗಿ ಹೇಳಿದ್ದಾರೆ. ವಾಣಿಜ್ಯ ಬೆಳೆ ಮಾಡಲು ಸಾಕಷ್ಟು ಬಂಡವಾಳ ಹಾಕಿ, ಅವುಗಳ ಬೆಲೆ ಕುಸಿತದಿಂದ ಹಾನಿಗೊಳಗಾಗುವ ರೈತರು ತಿಂದುಣ್ಣಲು ತಮ್ಮ ಮನೆಗೆ ಬೇಕಾದ ದವಸಧಾನ್ಯ ಬೆಳೆಯುವುದನ್ನು ನಿಲ್ಲಿಸಿ ವಾಣಿಜ್ಯ ಉತ್ಪನ್ನ ಉತ್ಪಾದಿಸಿ ಮಾರಿ ಮನೆಗೆ ಬೇಕಾದ ಧಾನ್ಯಗಳನ್ನು ಖರೀದಿಸಲು ಹೊರಟಿದ್ದಾರೆ.

ಹೊಲಮೂಲದ ಸಮಸ್ಯೆಗಳಿಗೆ ಹೊಲಮೂಲದಲ್ಲೇ ಪರಿಹಾರಗಳು ಕೈ ಅಳತೆಯಲ್ಲೇ ಸಿಗಬಲ್ಲವು. ಅದರ ಬದಲಾಗಿ ಯಾವ್ಯಾವುದೋ ಸಂಶೋಧಕರು. ವಿಜ್ಞಾನಿಗಳು ಕೃಷಿ ವಿಶ್ವವಿದ್ಯಾಲಯಗಳು, ಹೊರದೇಶದ ತಂತ್ರಜ್ಞಾನ ಮತ್ತು ಸಂಶೋಧನೆಗಳು ಪರಿಹಾರ ಒದಗಿಸುವಂತಾಗಿದೆ. ಅದೆಲ್ಲ ರೈತರ ಋಣಭಾರ ಹೆಚ್ಚಿಸುವ ಮೂಲ ಉದ್ದೇಶ ಹೊಂದಿರುವದು ಒಂದು ದುರಂತ. ಆದರೆ ಅವರು ಕೊಡುವ ಪರಿಹಾರಗಳೇ ಸಮಸ್ಯೆಗಳಾಗಿ ರೈತರನ್ನು ಕಾಡುವಂತಾಗಿರುವುದು ದೊಡ್ಡ ದುರಂತ. ಒಕ್ಕಲುತನದ ಭವಿಷ್ಯ ಕುರಿತಂತೆ ಕರಪಲ್ಲದವರು ಹೇಳಿದ ಕಾಲಜ್ಞಾನದ ವಚನವೊಂದು ಹೀಗಿದೆ.

“ಒಕ್ಕಲಿಗರು ನೋಡಿಕೊಳ್ಳಿರಿ ಲೆಕ್ಕವಿಲ್ಲದ ತೆರಿಗೆ ಬರುವದು|
ಹಕ್ಕಲಾದ ಮನೆಗೆಲ್ಲ ಇಕ್ಕುವರು ಮುದ್ರೆ|
ಕಾಲದೂತರ ತೆರದಿ ಮನುಜರ ಮೂಲದ್ರವ್ಯವನ್ನು
ತೆಗೆದುಕೊಂಬುವರು ಆಲಿಗಿಕ್ಕಿದ ಕಬ್ಬಿನಂದದಿ
ಅಗೆದು ಬಿಸಾಡುವರು ! ಸುವ್ವಿ ಬಾ ಚೆನ್ನಯ್ಯ…..’
ಖರ್ಚಿಲ್ಲದೇ ಮಾಡುತ್ತಿದ್ದ ಒಕ್ಕಲುತನವನ್ನು ದುಬಾರಿ ಖರ್ಚುಮಾಡಿ ಒಕ್ಕಲುತನ ಮಾಡುವುದನ್ನು ಅನಿವಾರ್ಯ ಆಗಿಸಿದ ಇಂದಿನ ವ್ಯವಸ್ಥೆಯ ಬಗ್ಗೆ ಗಾಣದಲ್ಲಿ ಸಿಕ್ಕ ಕಬ್ಬಿನಂತೆ ರೈತರು ಸಿಲುಕಿದ್ದಾರೆಂದು ಹೇಳಿದ ಭವಿಷ್ಯ ನಿಜವೇ ಆದ ಹಾಗಿದೆ ಅದನ್ನು ಸುಳ್ಳಾಗಿಸುವ ರೈತಪರ ಕಾಳಜಿ ಉಳ್ಳವರು ಅವತರಿಸಿ ಬರಬೇಕಷ್ಟೇ!

ಚಿಂತನೆ

ಈರಯ್ಯ ಕಿಲ್ಲೇದಾರ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.