ಮನೋಸಮಸ್ಯೆಗಳ ಹೊತ್ತು ಬದಲಾಗುತ್ತಿದೆ ಜಗತ್ತು!
Team Udayavani, Mar 11, 2018, 12:30 AM IST
ಪೋಷಕರು ಒಂದು ವಿಷಯವನ್ನು ಅರ್ಥಮಾಡಿ ಕೊಳ್ಳಬೇಕು. ಕೆಲವೊಮ್ಮೆ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮಾನಸಿಕ ಆರೋಗ್ಯ ಸಮಸ್ಯೆಗಳಿವೆಯಲ್ಲ, ಅವು ಪ್ರೌಢರು ಎದುರಿಸುವ ಸಮಸ್ಯೆಗಳಿಗಿಂತಲೂ ಭಿನ್ನವಾಗಿರುತ್ತವೆ. ಮಕ್ಕಳೆಂದರೆ “ಪುಟ್ಟ ಪ್ರೌಢ’ರಲ್ಲ. ಹೀಗಾಗಿ ಅವರನ್ನು ಅರ್ಥಮಾಡಿಕೊಳ್ಳಲು ಹಾಗೂ ನಿರ್ವಹಿಸಲು ವಿಶೇಷ ಅಭಿವೃದ್ಧಿ ದೃಷ್ಟಿಕೋನ ಅಗತ್ಯ.
ಕಳೆದೊಂದು ದಶಕದಲ್ಲಿ ಸಾಮಾಜಿಕ ಪ್ಯಾಟರ್ನ್ಗಳಲ್ಲಿ(ಮಾದರಿಗಳು) ಮತ್ತು ಟ್ರೆಂಡ್ಗಳಲ್ಲಿ ಮಹತ್ತರ ಪಲ್ಲಟಗಳಾಗಿವೆ. ಗಮನಾರ್ಹ ಸಂಗತಿಯೆಂದರೆ ಮಕ್ಕಳು, ಯುವ ಜನರು ಮತ್ತು ಕುಟುಂಬಗಳ ಮೇಲೆ ಈ ಬದಲಾವಣೆಗಳು/ ಪಲ್ಲಟಗಳು ಬಹಳಷ್ಟು ಪರಿಣಾಮ ಬೀರಿವೆ. ಉದಾಹರಣೆಗೆ, ಕಳೆದೊಂದು ದಶಕದಲ್ಲಿ ಮಕ್ಕಳು ಮತ್ತು ಹರೆಯದವರು/ಯುವಕರಲ್ಲಿನ ಖನ್ನತೆಯ ಪ್ರಮಾಣ ದುಪ್ಪಟ್ಟಾಗಿರುವುದು.
20 ವರ್ಷಗಳ ಹಿಂದಕ್ಕೆ ಹೋಲಿಸಿ ನೋಡಿದಾಗ ಕಳೆದ ದಶಕದಲ್ಲಿ ಬೋರ್ಡ್ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಪರ್ಸಟೇಂಜ್ ತೆಗೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದೆ. ಸಹಜವಾಗಿಯೇ ಇದರಿಂದ ಸ್ಪರ್ಧಾತ್ಮಕತೆ, ಪರೀಕ್ಷಾ ಒತ್ತಡ ಮತ್ತು ಖನ್ನತೆಯಂಥ ಮಾನಸಿಕ ಆರೋಗ್ಯ ಸಮಸ್ಯೆಗಳ ಸಂಭಾವ್ಯತೆ ಹೆಚ್ಚುತ್ತಿದೆ. ಇದೇ ನಾಣ್ಯದ ಇನ್ನೊಂದು ಮುಖವೆಂದರೆ, ಶೈಕ್ಷಣಿಕವಾಗಿ ತುಸು ದುರ್ಬಲವಾಗಿ ರುವವರ ತುಲನಾತ್ಮಕ ವೈಫಲ್ಯ. ಇದು ಕೂಡ ನಿಜಕ್ಕೂ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ರಿಸ್ಕ್ ಫ್ಯಾಕ್ಟರ್ ಆಗಿ ಬದಲಾಗಬಲ್ಲದು.
ದುರಂತವೆಂದರೆ ಇಂದು ಮದ್ಯ ಮತ್ತು ಮಾದಕ ದ್ರವ್ಯಗಳು ಸುಲಭವಾಗಿ ಕೈಗೆಟಕುತ್ತಿರುವುದರಿಂದ ಹಾಗೂ ಸಹವಯಸ್ಕರ ನಡುವಿನ ಸಹಜ ಒತ್ತಡಗಳಿಂದಾಗಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದೆ. ಇನ್ನು ಬೆಳೆಯುತ್ತಿರುವ ಹುಡು ಗಿಯರೂ ಅನೇಕಾನೇಕ ಮಾನಸಿಕ ಒತ್ತಡಗಳನ್ನು ಎದುರಿಸುತ್ತಿದ್ದಾರೆ. ತೀರಾ ಅಸಹಜವೆನಿಸುವಂಥ, ತೆಳು ಮೈಕಟ್ಟಿನ ಮಾಡೆಲ್ಗಳ ಫೋಟೋಶಾಪ್ಡ್ ಚಿತ್ರಗಳು ಬೆಳೆಯುತ್ತಿರುವ ಹುಡುಗಿಯರಲ್ಲಿ ಅಸಾಧ್ಯವೆನಿಸುವಂಥ ಸ್ಟಾಂಡರ್ಡ್ಗಳನ್ನು ಸ್ಥಾಪಿಸಿಬಿಟ್ಟಿವೆ. ಇದರಿಂದಾಗಿ ತಮ್ಮ ದೇಹದ ಬಗ್ಗೆ ಕೀಳರಿಮೆ ಅನುಭವಿಸುವ, ಆಹಾರ ಸೇವನೆಯನ್ನು ಏರುಪೇರು ಮಾಡಿಕೊಳ್ಳುವ ಹುಡುಗಿಯರ ಪ್ರಮಾಣ ಹೆಚ್ಚುತ್ತಿದೆ. ಇದೆಲ್ಲದರ ಒಟ್ಟಾರೆ ಪರಿಣಾಮವೆಂಬಂತೆ ಕಚ್ಚಾ ಭಾವನಾತ್ಮಕ ನೋವನ್ನು ಹೇಗೆ ಎದುರಿಸಬೇಕೆಂದು ತಿಳಿಯದೇ ಕೈ ಕುಯ್ದುಕೊಳ್ಳುವುದು ಅಥವಾ ಓವರ್ಡೋಸ್ ಮಾಡಿಕೊಳ್ಳುವ ಪ್ರವೃತ್ತಿ ಯುವಜನರಲ್ಲಿ ಹೆಚ್ಚುತ್ತಿದೆ.
ಈ ಸಹಸ್ರಮಾನದ ಆರಂಭದಿಂದಂತೂ ಅಂತರ್ಜಾಲದ ಸುಲಭ ನಿಲುಕು ಹಾಗೂ ಅದರ ಅಪಾಯಗಳು ಯುವ ಜನರಲ್ಲಿ ತಮ್ಮ ಸಹ ವಯಸ್ಕರೊಂದಿಗೆ (ನಿರ್ದಿಷ್ಟವಾಗಿ) ಮತ್ತು ಸಮಾಜದಲ್ಲಿ(ಒಟ್ಟಾರೆಯಾಗಿ) ಅಂಗೀಕಾರಕ್ಕೊಳ ಬೇಕಾದ ಒತ್ತಡವನ್ನು ಹೆಚ್ಚಿಸಿಬಿಟ್ಟಿದೆ.
ಇತ್ತೀಚಿನ ದಿನಗಳಲ್ಲಿ ಸೈಬರ್ ಪುಂಡಾಟಿಕೆ ಕಣ್ಣು ಕುಕ್ಕುವಷ್ಟು ಅಧಿಕವಾಗುತ್ತಿದೆ. ಅಂತೆಯೇ ಸಾಮಾಜಿಕ ಮಾಧ್ಯಮಗಳ ಸಮಕಾಲೀನ ಟ್ರೆಂಡ್ಗಳಿಗೆ ತಕ್ಕಂತೆ ಹೆಜ್ಜೆ ಹಾಕಬೇಕೆಂಬ ಸಮಾನಸ್ಕಂದರ ಒತ್ತಡವೂ ಕೂಡ! ಕಾಮುಕರಿಂದ ಮಕ್ಕಳ ಪೀಡನೆ(ಅಂತರ್ಜಾಲದ ಮೂಲಕ ಅಥವಾ ಕುಟಂಬ/ಪರಿಚಯಸ್ಥ ವಲಯ ದೊಳಗಿಂದ), ವಯೋ ಸಹಜವಲ್ಲದ ಲೈಂಗಿಕ ಅರಿವು, ಆರಂಭಿಕ ಪ್ರಾಯೋಗಿಕ ಸಾಮರ್ಥ್ಯವೆಲ್ಲವೂ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರಬಲ್ಲವು. ಕೌಟುಂಬಿಕ ವ್ಯವಸ್ಥೆಯಲ್ಲಾಗಿರುವ ಬದಲಾವಣೆ, ವಿಚ್ಛೇದಿತ/ಏಕ-ಪೋಷಕ ಕುಟುಂಬಗಳ ಸಂಖ್ಯೆ ಇಂದು ಏರುಗತಿಯಲ್ಲಿದೆ. ಪರಿಚಿತ ಕೌಟುಂಬಿಕ ರಚನೆ ಮತ್ತು ಸಂವಹನಕ್ಕೆ ಹೊಂದಿಕೊಳ್ಳಲು ಮಗುವಿಗೆ ಸಮಯ ಬೇಕಾಗುತ್ತದೆ. ಹೀಗಾಗಿ, ಇದೇ ವೇಳೆಯಲ್ಲೇ ಪ್ರೌಢರ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿರುವುದರಿಂದ ಅವರ ಮನೆಯಲ್ಲಿನ ಮಕ್ಕಳಿಗೂ ಹಾನಿ ಉಂಟಾಗುತ್ತಿದೆ. ಮಾನಸಿಕ ಅಸ್ವಸ್ಥ ಪೋಷಕರಿದ್ದಾಗ ಮಕ್ಕಳು “ಚಿಕ್ಕ ಆರೈಕೆಗಾರರ’ ಪಾತ್ರ ವಹಿಸಿಕೊಳ್ಳಬೇಕಾಗುತ್ತದೆ.
ಪೋಷಕರು ಒಂದು ವಿಷಯವನ್ನು ಅರ್ಥಮಾಡಿಕೊಳ್ಳಬೇಕು. ಕೆಲವೊಮ್ಮೆ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮಾನಸಿಕ ಆರೋಗ್ಯ ಸಮಸ್ಯೆಗಳಿವೆಯಲ್ಲ, ಅವು ಪ್ರೌಢರು ಎದುರಿಸುವ ಸಮಸ್ಯೆಗಳಿಗಿಂತಲೂ ಭಿನ್ನವಾಗಿರುತ್ತವೆ. ಮಕ್ಕಳೆಂದರೆ “ಪುಟ್ಟ ಪ್ರೌಢ’ರಲ್ಲ. ಹೀಗಾಗಿ ಅವರನ್ನು ಅರ್ಥಮಾಡಿಕೊಳ್ಳಲು ಹಾಗೂ ನಿರ್ವಹಿಸಲು ವಿಶೇಷ ಅಭಿವೃದ್ಧಿ ದೃಷ್ಟಿಕೋನ ಅಗತ್ಯವಿರುತ್ತದೆ. ಒಂದು ವೇಳೆ ಮಗುವೊಂದರ ವರ್ತನೆ ಅಥವಾ ಭಾವನೆಗಳು ಅದರ ಸ್ವಾಭಾವಿಕ ಗುಣಕ್ಕೆ ಹೊಂದಿಕೆಯಾಗದಿದ್ದರೆ ಅಥವಾ ಮೇಲ್ನೋಟಕ್ಕೆ ಯಾವ ಗುರುತುಗಳು ಕಾಣಿಸದಿದ್ದರೂ ಅದಕ್ಕೆ ದೈಹಿಕ ಅನಾರೋಗ್ಯ ಬಾಧಿಸಿದಾಗ ಕೂಡಲೇ ಚೈಲ್ಡ್ ಮತ್ತು ಅಡೋಲ್ಸೆಂಟ್ ಸೈಕಿಯಾಟ್ರಿಸ್ಟ್ರ ಬಳಿ ಕರೆದೊಯ್ಯುವುದು ಅಗತ್ಯ. ಹೆಸರೇ ಸೂಚಿಸುವಂತೆ ಈ ವೈದ್ಯರು ಮಕ್ಕಳು ಮತ್ತು ಹರೆಯದವರ ಮಾನಸಿಕ ಬೆಳವಣಿಗೆಯನ್ನು ಅರ್ಥಮಾಡಿಕೊಂಡು, ಬೆಂಬಲಿಸುವಲ್ಲಿ ಪರಿಣತಿ ಹೊಂದಿರುತ್ತಾರೆ. ಈ ಅನುಭವಿ ವೈದ್ಯರು ವಿಶೇಷ ಅಭಿವೃದ್ಧಿ ದೃಷ್ಟಿಕೋನವನ್ನು ಒದಗಿಸುವ ವಿಚಾರದಲ್ಲಿ ಪರಿಣತರಾಗಿರುತ್ತಾರೆ. ಅವರ ಈ ಪರಿಣತಿ ಯುವ ಜನರಲ್ಲಿನ ಮಾನಸಿಕ ಆರೋಗ್ಯ, ಬೆಳವಣಿಗೆ ಮತ್ತು ಭಾವನಾತ್ಮಕ ಸಮಸ್ಯೆಗಳ ನಿರ್ವಹಣೆಯಲ್ಲಿ ಮತ್ತು ಅವುಗಳು ಇನ್ನೊಮ್ಮೆ ಹೆಡೆಯೆತ್ತದಂತೆ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನಿಮ್ಮ ಮಕ್ಕಳಲ್ಲಿನ ಮಾನಸಿಕ ಸಮಸ್ಯೆಗಳನ್ನು ಗುರುತಿಸಿ ಸರಿಯಾದ ಸಮಯಕ್ಕೆ ಅವರಿಗೆ ಸಹಾಯ ಮಾಡಿದರೆ, ಇದರಿಂದ ಮಕ್ಕಳ ಸಾಮರ್ಥಯ ವೃದ್ಧಿಸಲು ಸಾಧ್ಯವಾಗುತ್ತದೆ.
ಮಕ್ಕಳು ಮತ್ತು ಹರೆಯದವರ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ಕಾಪಾಡುವುದು ಪ್ರತಿಯೊಬ್ಬರ ನೈತಿಕ ಜವಾಬ್ದಾರಿಯಾಗಿದೆ. ಮಕ್ಕಳು ಮತ್ತು ಯುವ ಜನರು ಸುರಕ್ಷಿತವಾಗಿ ಇರಲು ಪೋಷಕರು, ಕುಟುಂಬ ಸದಸ್ಯರು, ಶಿಕ್ಷಕರು/ಶಾಲೆಗಳು ಪ್ರಮುಖ ಪಾತ್ರ ವಹಿಸಬೇಕಿದೆ.
ಇದೆಲ್ಲದರ ನಡುವೆಯೂ ಇತ್ತೀಚಿನ ದಿನಗಳಲ್ಲಿ ಮಕ್ಕಳ ಪೋಷಣೆ ವಿಚಾರದಲ್ಲಿ ಪೋಷಕರು ಜಾಗೃತರಾಗಿರುವುದು, ಮಕ್ಕಳು ಮತ್ತು ಹರೆಯದವರು ಎದುರಿಸುವ ಸಹಜ ಸಮಸ್ಯೆಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಂಡು ಅವುಗಳ ಪರಿಹಾರಕ್ಕೆ ಪ್ರಯತ್ನಿಸುತ್ತಿರುವುದು ಹೃದಯಸ್ಪರ್ಶಿ ಸಂಗತಿಯಾಗಿದೆ. ಈ ಅಂಶಗಳನ್ನೆಲ್ಲ ಒಗ್ಗೂಡಿಸಿದರೆ ಮಕ್ಕಳಿಗೆ ಉತ್ತಮ ಭವಿಷ್ಯ ನಿರ್ಮಿಸಲು ಸಾಧ್ಯವಾಗುತ್ತದೆ.
– ಡಾ. ರಮ್ಯಾ ಮೋಹನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ
ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…
Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”
World Water Day: ಜುಳು ಜುಳು ಸದ್ದೇಕೆ ಉರಿ ಮೌನ
ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫಕೀರ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ