ಪರೀಕ್ಷೆ ಚಿಂತನೆ ಊಹಿಸಿದಷ್ಟು ಸಂಕುಚಿತವಲ್ಲ


Team Udayavani, Jul 29, 2018, 12:30 AM IST

bottom-left.jpg

ನಮ್ಮಲ್ಲಿ ತೆರೆದ ಪುಸ್ತಕ ಪರೀಕ್ಷೆ ವ್ಯವಸ್ಥೆ ಬಗ್ಗೆ ಚರ್ಚೆ ಜಾರಿಯಲ್ಲಿದೆ. ಬೋಧನ ಶೈಲಿಯನ್ನು ಯಥಾವತ್ತಾಗಿ ಉಳಿಸಿಕೊಂಡು ಪರೀಕ್ಷೆ ವ್ಯವಸ್ಥೆಯನ್ನು ಮಾತ್ರ ಬದಲಾಯಿಸಿದರೆ ಪ್ರಯೋಜನ ಆಗದು. ಇದರಿಂದ ಮಕ್ಕಳ ಸ್ಥಿತಿ ಬಾಣಲೆಯಿಂದ ಒಲೆಗೆ ಬಿದ್ದಂತಾದೀತು. ಬೋಧನ ಕ್ರಮ ಬದಲಾಗದೆ ಪರೀಕ್ಷೆ ಪದ್ಧತಿ ಕಡೆಗಷ್ಟೆ ಬದಲಾವಣೆಯ ಗಮನ ಹರಿಸಿದರೆ ಅದು ಒಳಗೆ ನಂಜಿನ ಮುಳ್ಳನ್ನಿಟ್ಟು ಹೊರಗಿನಿಂದ ಮುಲಾಮು ಹಚ್ಚುವುದಕ್ಕೆ ಸಮಾನವಾದೀತು. 

ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಣೆ ಬಗೆಗಿನ ಚಿಂತನೆ ಮತ್ತು ಚರ್ಚೆ ಸದಾ ಚಾಲ್ತಿಯಲ್ಲಿರುತ್ತದೆ. ಹೊಸ ರಾಜಕೀಯ ವಿಷಯವಾಗಿ ಶಿಕ್ಷಣವನ್ನು ಒಂದು ಪರಿಣಾಮಕಾರಿ ಅಸ್ತ್ರ ಎಂದು ಭಾವಿಸುವವರು ಮತ್ತು ಬಳಸುವವರಿಗೂ ಕೊರತೆಯಿಲ್ಲ. ಭಾರತದಂಥ ದೇಶದಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವವಿರುವುದು ಇದಕ್ಕೆ ಪ್ರಮುಖ ಕಾರಣ.

ಶಿಕ್ಷಣದ ಜತೆಯಲ್ಲಿಯೇ ಪರೀಕ್ಷೆಯ ವಿಷಯವೂ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ಅದರ ಮುಖ್ಯ ಉದ್ದೇಶ ಮಕ್ಕಳನ್ನು ಹೆಚ್ಚು ಬುದ್ಧಿವಂತರಾಗಿಸುವುದು ಮತ್ತು ಚುರುಕಾಗಿಸುವುದು. ಪರೀಕ್ಷೆ ಎಂಬುದನ್ನು ನಾವು ಕೇವಲ ಕಲಿತ ವಿಷಯಕ್ಕೆ ಸೀಮಿತಗೊಳಿಸಿ ನೋಡುವುದು ಸಲ್ಲದು. ಅದು ವಿದ್ಯಾರ್ಥಿಯ ನಿಜವಾದ ಪ್ರತಿಭೆ ಮತ್ತು ಸಾಮರ್ಥ್ಯ ವನ್ನು ಹೊರತರುವ ಮಾಧ್ಯಮವಾಗಬೇಕು. 
ಎಷ್ಟೋ ಬಾರಿ ನಮ್ಮ ರ್‍ಯಾಂಕ್‌ ವಿಜೇತ ಮಕ್ಕಳಿಗೆ ಅವರು ಕಲಿತ ವಿಷಯಕ್ಕಿಂತ ಹೊರಗಿನ ಜ್ಞಾನ ಏನೂ ಇರುವುದಿಲ್ಲ. ಒಂದು ಅರ್ಜಿ ನಮೂನೆಯನ್ನು ಸರಿಯಾಗಿ ತುಂಬಿಸುವ ಸಾಮರ್ಥ್ಯ ಅವರಲ್ಲಿ ಇರುವುದಿಲ್ಲ. ಅಂಥವರನ್ನು ನಾವು ರ್‍ಯಾಂಕ್‌ ವಿಜೇತರೆಂದು ತಲೆಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡುತ್ತೇವೆ. ಆದರೆ ಅವರು ಜೀವನದ ಪರೀಕ್ಷೆಯಲ್ಲಿ ಜಸ್ಟ್‌ ಪಾಸ್‌ ಆಗಲೂ ವಿಫ‌ಲರಾಗುತ್ತಾರೆ. 

ಈಗೀಗ ಎಷ್ಟೋ ಉನ್ನತ ಪದವೀಧರರು ಮತ್ತು ತಾವು ಕಲಿತ ವಿಷಯಗಳಲ್ಲಿ ಉತ್ತಮ ಅಂಕ ಗಳಿಸಿದವರು ಉದ್ಯೋಗ ರಂಗದಲ್ಲಿ ಸೋಲುತ್ತಾರೆ. ಅವರು ವೃತ್ತಿಯಲ್ಲಿ ಅಸಮರ್ಥ ರೆಂದು ಎಂದು ಗುರುತಿಸಿಕೊಳ್ಳುತ್ತಾರೆ. ಇದಕ್ಕೆ ಕಾರಣ ಕುಸಿದಿರುವ ಶಿಕ್ಷಣ ವ್ಯವಸ್ಥೆ ಮತ್ತು ಅವರನ್ನು ಪರೀಕ್ಷಿಸುವ ವಿಧಾನ ಎಂಬುದು ವಾಸ್ತವ. ಕಡಿಮೆ ಅಂಕ ಎಂಬುದು ಈಗ ಯಾರಿಗೂ ಇಲ್ಲ. ತೇರ್ಗಡೆಯಾಗುವ ಬಹುತೇಕ ಮಂದಿ ಶೇ. 70ಕ್ಕಿಂತ ಹೆಚ್ಚು ಅಂಕ ಗಳಿಸಿದವರೇ. ಹಾಗಿದ್ದರೂ ಪ್ರತಿಭಾನ್ವಿತ ಉದ್ಯೋಗಿಗಳ ಕೊರತೆ ಏಕೆ ಕಾಡುತ್ತದೆ ಮತ್ತು ನಿರುದ್ಯೋಗ ಸಮಸ್ಯೆ ಹೆಚ್ಚಾಗಲು ಏನು ಕಾರಣ ಎಂಬ ಪ್ರಶ್ನೆಗೆ ಸಿಗುವ ಉತ್ತರ ಒಂದೇ…ಗುಣಮಟ್ಟದ ಕೊರತೆ.

ಪರೀಕ್ಷೆ ವ್ಯವಸ್ಥೆ
ಸಾಮಾನ್ಯವಾಗಿ ಜಾರಿಯಲ್ಲಿರುವ ಪರೀಕ್ಷೆ ವ್ಯವಸ್ಥೆ ಎಂದರೆ ತಾವು ಕಲಿತ ಪಠ್ಯಕ್ರಮದಲ್ಲಿ ಶಿಕ್ಷಕರು ತರಗತಿಯಲ್ಲಿ ಹೇಳಿ ಕೊಟ್ಟದ್ದಕ್ಕೆ ಸಂಬಂಧಿಸಿ ಕೇಳುವ ಪ್ರಶ್ನೆಗಳಿಗೆ ನೆನಪು ಮತ್ತು ಬಾಯಿಪಾಠ ವಿಧಾನದಿಂದ ಉತ್ತರ ಬರೆಯುವುದು. ಹೆಚ್ಚಿನ ಮಕ್ಕಳು ಉತ್ತಮ ಅಂಕ ಗಳಿಸುವುದು ಇದರಲ್ಲಿಯೇ. ಆದರೆ ಒಂದು ಪ್ರಶ್ನೆಯನ್ನು ತಿರುಚಿ ಕೇಳಿದರೆ, ಪರೋಕ್ಷ ರೀತಿಯಲ್ಲಿ ಪ್ರಶ್ನೆ ಕೇಳಿದರೆ ಅದಕ್ಕೆ ಉತ್ತರಿಸುವುದು ಬಿಡಿ- ಆ ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳಲೇ ವಿದ್ಯಾರ್ಥಿಗಳು ವಿಫ‌ಲರಾಗುತ್ತಾರೆ. ಇದು ಅವರು ಪರೀಕ್ಷೆಯನ್ನು ನೆನಪಿನ ಶಕ್ತಿಯಿಂದ ಮಾತ್ರವೇ ಎದುರಿಸುತ್ತಾರೆ ಹೊರತು ಬುದ್ಧಿವಂತಿಕೆಯಿಂದಲ್ಲ ಎಂಬುದನ್ನು ಸಾಬೀತು ಮಾಡುತ್ತದೆ.

ನೆನಪಿನ ಶಕ್ತಿ ಮತ್ತು ಚಿಂತನೆಯ ಶಕ್ತಿ
ಎಷ್ಟೋ ಮಕ್ಕಳು ಉತ್ತಮ ಸ್ಮರಣ ಶಕ್ತಿ ಹೊಂದಿರುತ್ತಾರೆ; ಆದರೆ ಉತ್ತಮ ಚಿಂತನ ಶಕ್ತಿ ಹೊಂದಿರುವುದಿಲ್ಲ. ಈಗಿನ ಬಹುತೇಕ ಪರೀಕ್ಷೆ ವ್ಯವಸ್ಥೆಯು ನೆನಪು ಶಕ್ತಿ ಕೇಂದ್ರಿತವಾಗಿರುತ್ತದೆಯೇ ಹೊರತು ಚಿಂತನ ಶಕ್ತಿ ಕೇಂದ್ರಿತವಾಗಿರುವುದಿಲ್ಲ. ನಾವು ಮಕ್ಕಳಿಗೆ ನೆನಪು ಶಕ್ತಿಯ ಬಗ್ಗೆ ಹೇಳುತ್ತೇವೆಯೇ ಹೊರತು ಚಿಂತನ ಶಕ್ತಿ ವೃದ್ಧಿ ಕುರಿತು ಗಮನ ಹರಿಸುವುದು ತುಂಬಾ ಕಡಿಮೆ. ಈಗಿನ ಬೋಧನ ಕ್ರಮ ಕೂಡ ನೆನಪು ಶಕ್ತಿ ಕೇಂದ್ರಿತವಾಗಿರುತ್ತದೆ, ಚಿಂತನೆಗೆ ಪೂರಕವಾಗಿರುವುದಿಲ್ಲ. ಆ ನೆನಪು ಶಕ್ತಿ ಕೂಡ ಪರೀಕ್ಷೆವರೆಗೆ ಸೀಮಿತವಾಗಿರುತ್ತದೆ. ಒಂದು ಸೆಮಿಸ್ಟರ್‌ನ ವಿಷಯವನ್ನು ಮುಂದಿನ ಸೆಮಿಸ್ಟರ್‌ನಲ್ಲಿ ಕೇಳಿದರೆ ಗೊತ್ತಿಲ್ಲ, ಅದರ ಪರೀಕ್ಷೆ ಮುಗಿದಾಯಿತು ಎಂದು ಹೇಳುವವರೇ ಹೆಚ್ಚು. ಪರೀಕ್ಷೆ ಮುಗಿದಿರುತ್ತದೆ, ಉತ್ತಮ ಅಂಕವೂ ಸಿಕ್ಕಿರುತ್ತದೆ. ಆದರೆ ನಾಲ್ಕು ದಿನ ಕಳೆದು ಕೇಳಿದರೆ ಏನೂ ಗೊತ್ತಿಲ್ಲ! ಕೈಯಲ್ಲಿ ಇರುವುದು ಉತ್ತಮ ಅಂಕಗಳ ಒಂದು ಪಟ್ಟಿ ಮಾತ್ರ! ಅದನ್ನೇ ಹಿಡಿದುಕೊಂಡು ನಾವು ಉದ್ಯೋಗ ಹುಡುಕಾಟ ನಡೆಸುತ್ತೇವೆ! 

ಗುಣಮಟ್ಟ ಕಸಿದದ್ದು ಸೆಮಿಸ್ಟರ್‌ ಪದ್ಧತಿ
ಸೆಮಿಸ್ಟರ್‌ ಪದ್ಧತಿ ಜಾರಿಗೆ ಬಂದ ಬಳಿಕ ಶಿಕ್ಷಣದ ಗುಣಮಟ್ಟ ತುಂಬಾ ಕಡಿಮೆಯಾಗಿದೆ ಎಂಬುದು ಬಹುತೇಕರು ಒಪ್ಪಿಕೊಳ್ಳುವ ಸತ್ಯ. ಮಕ್ಕಳ ಪ್ರತಿಭೆಗೆ ಕಂಬಳಿ ಹೊದ್ದು ಎಲ್ಲರಿಗೂ ಹೆಚ್ಚಿನ ಅಂಕಗಳ ಪಟ್ಟಿ ಸಿಗಲು ಹಾಗೂ ತಾವು ಬುದ್ಧಿವಂತರು ಎಂದು ಮಕ್ಕಳು ಭಾವಿಸಲು ಕಾರಣವಾದದ್ದು ಕೂಡ ಇದೇ ಸೆಮಿಸ್ಟರ್‌ ಪದ್ಧತಿ. ಇದರಲ್ಲಿ ನೀಡಲಾಗುವ ಆಂತರಿಕ ಅಂಕ ಮತ್ತು ಆಂತರಿಕ ಮಾಲ್ಯಮಾಪನವು ಮಕ್ಕಳನ್ನು ಸುಶಿಕ್ಷಿತ ನಿರುದ್ಯೋಗಿಗಳಾಗಿ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿದೆ ಎಂಬುದು ಕೂಡ ವಾಸ್ತವ. ಆದ್ದರಿಂದಲೇ ಸೆಮಿಸ್ಟರ್‌ ಪದ್ಧತಿ ಮತ್ತು ಆಂತರಿಕ ಮೌಲ್ಯಮಾಪನಕ್ಕೆ ಸಂಬಂಧಿಸಿ ಶಿಕ್ಷಣ ತಜ್ಞರು ಟೀಕೆ ಹೊರ ಹಾಕುತ್ತಿದ್ದಾರೆ. ಸೆಮಿಸ್ಟರ್‌ ಪದ್ಧತಿ ಜಾರಿಗೆ ಬರುವ ಮೊದಲು ಮಕ್ಕಳಿಗೆ ಈ ರೀತಿಯಲ್ಲಿ ಅಂಕಗಳು ಸಿಗುತ್ತಿರಲಿಲ್ಲ; ಆದರೆ ಅವರು ಉದ್ಯೋಗ ರಂಗದಲ್ಲಿ ಜಯಿಸುವಷ್ಟು ಬುದ್ಧಿವಂತ ರಾಗಿರುತ್ತಿದ್ದರು.

ಬದಲಾವಣೆ ಮೂಲದಲ್ಲೇ ಆಗಲಿ 
ಈಗ ಕೆಲವು ಕಡೆಗಳಲ್ಲಿ ಪರೀಕ್ಷೆ ಪದ್ಧತಿ ಬದಲಾವಣೆ ಬಗ್ಗೆ ಚರ್ಚೆ, ಚಿಂತನೆ ನಡೆಯುತ್ತಿದೆ. ಅದರಿಂದ ನಮ್ಮ ರಾಜ್ಯವೂ ಮುಕ್ತವಾಗಿಲ್ಲ. ನಮ್ಮಲ್ಲಿ ತೆರೆದ ಪುಸ್ತಕ ಪರೀಕ್ಷೆ ವ್ಯವಸ್ಥೆ ಬಗ್ಗೆಯೂ ಚಿಂತನೆ ಮತ್ತು ಚರ್ಚೆ ಜಾರಿಯಲ್ಲಿದೆ. ಆದರೆ ಬೋಧನ ಶೈಲಿಯನ್ನು ಯಥಾವತ್ತಾಗಿ ಉಳಿಸಿಕೊಂಡು ಪರೀಕ್ಷೆ ವ್ಯವಸ್ಥೆಯನ್ನು ಮಾತ್ರ ಬದಲಾಯಿಸುವುದರಿಂದ ಏನೂ ಪ್ರಯೋಜನ ಆಗದು. ಇದರಿಂದ ಮಕ್ಕಳ ಸ್ಥಿತಿ ಬಾಣಲೆಯಿಂದ ಒಲೆಗೆ ಬಿದ್ದಂತಾದೀತು. ಬೋಧನ ಕ್ರಮ ಬದಲಾಗದೆ ಪರೀಕ್ಷೆ ಪದ್ಧತಿ ಕಡೆಗಷ್ಟೆ ಬದಲಾವಣೆಯ ಗಮನ ಹರಿಸಿದರೆ ಅದು ಒಳಗೆ ನಂಜಿನ ಮುಳ್ಳನ್ನಿಟ್ಟು ಹೊರಗಿನಿಂದ ಮುಲಾಮು ಹಚ್ಚುವುದಕ್ಕೆ ಸಮಾನವಾದೀತು. ಬದಲಾಗುವ ಪರೀಕ್ಷೆ ಕ್ರಮಕ್ಕೆ ಹೊಂದಿಕೊಂಡು ಬೋಧನ ಕ್ರಮ ಕೂಡ ಬದಲಾಗಬೇಕಿದೆ. ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆ ಮತ್ತು ಚಿಂತನ ಶಕ್ತಿಯನ್ನು ವೃದ್ಧಿಸುವ ಮತ್ತು ಬಹಿರಂಗಕ್ಕೆ ತರುವುದಕ್ಕೆ ಪೂರಕವಾದಂಥ ಬೋಧನ ಶೈಲಿ ಮತ್ತು ಅದಕ್ಕೆ ಸರಿ ಹೊಂದುವಂಥ ಪಠ್ಯಕ್ರಮ ಸಿದ್ಧವಾಗಬೇಕಾದ ಅಗತ್ಯವಿದೆ.

ಭಯ ಮುಕ್ತ ಪರೀಕ್ಷೆ ಅಗತ್ಯ
ಪರೀಕ್ಷೆ ಎಂದರೆ ಈಗ ಮಕ್ಕಳಲ್ಲಿ ಒಂದು ರೀತಿಯ ಭೀತಿ ಮೂಡಿಸುತ್ತದೆ. ಯಾರು ಏನು ಹೇಳಿದರೂ ಮಕ್ಕಳು ಅದರಿಂದ ಹೊರ ಬರುವುದೇ ಇಲ್ಲ. ಇದಕ್ಕೆ ಈಗಿನ ಪರೀಕ್ಷೆ ವ್ಯವಸ್ಥೆ ಮತ್ತು ಅದಕ್ಕೆ ಅವರನ್ನು ಸಿದ್ಧಗೊಳಿಸುವ ಪಠ್ಯಕ್ರಮ ಕಾರಣವಾಗಿದೆ. ಮಕ್ಕಳನ್ನು ಪರೀಕ್ಷೆ ಭಯದಿಂದ ಮುಕ್ತಗೊಳಿಸುವ ವ್ಯವಸ್ಥೆಯನ್ನು ಹೇಗೆ ಪರಿಣಾಮಕಾರಿಯಾಗಿ ಜಾರಿಗೆ ತರಬಹುದು ಮತ್ತು ಅದಕ್ಕೆ ಯಾವೆಲ್ಲ ಬದಲಾವಣೆಗಳು ಬೇಕಾಗಿವೆ ಎಂಬುದರ ಕುರಿತು ಚಿಂತಿಸಬೇಕಾಗಿದೆ.
 
ಪರೀಕ್ಷೆ ಪರಿಣಾಮಕಾರಿಯಾಗಲಿ
ಪರೀಕ್ಷೆ ವ್ಯವಸ್ಥೆ ಪರಿಣಾಮಕಾರಿಯಾಗಬೇಕು. ಅದು ನೀಡುವ ಅಂಕಪಟ್ಟಿ ವಿದ್ಯಾರ್ಥಿಯ ಭವಿಷ್ಯಕ್ಕೆ ಎಲ್ಲ ರೀತಿಯಲ್ಲೂ ಸಹಕಾರಿಯಾಗಬೇಕು. ಅಂಕಪಟ್ಟಿಯು ವಿದ್ಯಾರ್ಥಿಯ ಸಾಮರ್ಥ್ಯ, ಪ್ರತಿಭೆಯನ್ನು ಪ್ರತಿಬಿಂಬಿಸುವಂತಿರಬೇಕು. ಅದು ಕೇವಲ ವಿಷಯದ ತಾತ್ಕಾಲಿಕ ಜ್ಞಾನದ ಪ್ರತಿಬಿಂಬ ವಾಗಿರಬಾರದು. ಆದರೆ ಪರಿಣಾಮಕಾರಿ ಪರೀಕ್ಷೆಗೆ ತಕ್ಕಂತೆ ನಮ್ಮ ಬೋಧನ ಕ್ರಮವೂ ಬದಲಾಗಬೇಕು. ಪರೀಕ್ಷೆ ಎಂಬುದು ನಾವು ಊಹಿಸಿದಷ್ಟು ಸರಳವೂ ಆಗಿರಬಾರದು ಮತ್ತು ಸಂಕುಚಿತವೂ ಆಗಿರಬಾರದು. ಪರೀಕ್ಷೆ ವ್ಯವಸ್ಥೆಯನ್ನು ಬದಲಾಯಿಸುತ್ತೇವೆ ಎಂದು ಹೇಳುವ ಪ್ರಮುಖರು ಮತ್ತು ಅದಕ್ಕೆ ತಕ್ಕ ಅಧಿಕಾರ ಹೊಂದಿರುವವರು ಶಿಕ್ಷಣ ವ್ಯವಸ್ಥೆಯ ಕುರಿತು ಅಧ್ಯಯನ ನಡೆಸಿ ಪೂರಕ ಮತ್ತು ಸಮರ್ಪಕ ಮಾಹಿತಿ ಮತ್ತು ಜ್ಞಾನವನ್ನು ಹೊಂದಿರುವುದು ತುಂಬಾ ಅಗತ್ಯ. ಯಾವುದೇ ಪ್ರಯೋಗ ಅಥವಾ ಹೊಸ ಬದಲಾವಣೆ ವಿದ್ಯಾರ್ಥಿಗಳಿಗೆ ಮಾರಕ ಆಗಬಾರದು.

– ಪುತ್ತಿಗೆ ಪದ್ಮನಾಭ ರೈ

ಟಾಪ್ ನ್ಯೂಸ್

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK

2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

World Water Day: ಜುಳು ಜುಳು ಸದ್ದೇಕೆ ಉರಿ ಮೌನ

World Water Day: ಜುಳು ಜುಳು ಸದ್ದೇಕೆ ಉರಿ ಮೌನ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.