ಗಾಂಧಿಯೊಂದಿಗೆ ಹೆಜ್ಜೆ ಹಾಕಿದವರು 


Team Udayavani, Aug 15, 2018, 6:00 AM IST

x-18.jpg

ಸ್ವಾತಂತ್ರ್ಯ ಪೂರ್ವ ಕಾಲ. ಉಡುಪಿ ಜಿಲ್ಲೆಯು ಅವಿಭಜಿತ ದ.ಕ. ಜಿಲ್ಲೆಯೊಳಗೆ ಸೇರಿತ್ತು. ಹಾಗಾಗಿ ಮಂಗಳೂರೇ ಸ್ವಾತಂತ್ರ್ಯ ಚಳವಳಿಯ ಕೇಂದ್ರವಾಗಿತ್ತು. ಕಾರ್ನಾಡು ಸದಾಶಿವ ರಾಯರೇ ಅವಿಭಜಿತ ಜಿಲ್ಲೆಯ ಚಳವಳಿಯ ಮುಂಚೂಣಿಯಲ್ಲಿದ್ದರು. 

ದ.ಕ. ಜಿಲ್ಲೆಗೆ ಗಾಂಧೀಜಿಯವರು ಭೇಟಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಸದಾಶಿವರಾಯರು. ಅವರು ಪತ್ರದ ಮೂಲಕ ಗಾಂಧೀಜಿಯವರನ್ನು ದ.ಕ. ಜಿಲ್ಲೆಗೆ ಭೇಟಿ ನೀಡುವಂತೆ ವಿನಂತಿಸಿದರು. ಅವರ ವಿನಂತಿಯ ಮೇರೆಗೆ ಗಾಂಧೀಜಿಯವರು ಮೂರು ಬಾರಿ ಭೇಟಿ ನೀಡಿ, ಸಾರ್ವಜನಿಕ ಸಭೆಗಳಲ್ಲಿ ಮಾತನಾಡಿದರು. ಮೊದಲ ಎರಡು ಭೇಟಿಗಳಲ್ಲಿ ಕಾರ್ನಾಡರ ಮನೆಯಲ್ಲಿಯೇ ಗಾಂಧೀಜಿ ತಂಗಿದ್ದರು. ಮೂರನೆಯ ಭೇಟಿಯಲ್ಲಿ (1934 ಫೆಬ್ರವರಿ 24) ಕುಂದಾಪುರದಲ್ಲಿ ತಂಗಿದರು. ಕುಂದಾಪುರದ ಗೋಪಾಲಕೃಷ್ಣ ಕಾಮತ್‌ರವರ ನಿವಾಸವು ಗಾಂಧಿಯವರ ವಾಸ್ತವ್ಯದ ತಾಣವಾಗಿತ್ತು. ಗಾಂಧಿ ತಂಗಿದ ನೆನಪಿಗಾಗಿ ಈ ಮನೆಯನ್ನು ಶಾಂತಿನಿವಾಸ ಎಂದು ಇಂದಿಗೂ ಕರೆಯುತ್ತಾರೆ. ಗಾಂಧೀಜಿಯವರು ತಮ್ಮ ಮೂರನೇ ಭೇಟಿಯಲ್ಲಿ ಉಡುಪಿ, ಬ್ರಹ್ಮಾವರ, ಕುಂದಾಪುರಗಳಲ್ಲಿ ಸಾರ್ವಜನಿಕ ರನ್ನುದ್ದೇಶಿಸಿ ಮಾತನಾಡಿದರು. ಉಡುಪಿಯ ಅಜ್ಜರಕಾಡಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹಾಜಿ ಅಬ್ದುಲ್ಲಾ ಸಾಹೇಬರು ಗಾಂಧೀಜಿಯವರನ್ನು ಎಲ್ಲರ ಪರವಾಗಿ ಸ್ವಾಗತಿಸಿದ್ದರು.

ಗಾಂಧಿಯವರ ಈ ಮೂರು ಭೇಟಿಗಳಿಂದ ದ.ಕ. ಜಿಲ್ಲೆಯಲ್ಲಿ ಸ್ವಾತಂತ್ರ್ಯ ಚಳವಳಿ ತೀವ್ರ ಸ್ವರೂಪ ಪಡೆಯಿತು. ಗಾಂಧೀಜಿಯ ವರಿಂದ ಅನೇಕರು ಪ್ರಭಾವಿತರಾದರು. ಗಾಂಧಿ ಅನುಯಾಯಿಗಳ ತಂಡವೇ ಜಿಲ್ಲೆಯಲ್ಲಿ ಸಿದ್ಧವಾಯಿತು. ಇಲ್ಲಿನ ಜನರ ಜೀವನ ಶೈಲಿಯಲ್ಲಿಯೂ ಮಹತ್ತರ ಬದಲಾವಣೆಗಳಾದವು.

ಚರಕ, ತಕಲಿ , ಟೊಪ್ಪಿ 
ಪ್ರತೀ ಗಾಂಧಿವಾದಿಗಳ ಮನೆಯಲ್ಲಿ ಚರಕವು ಅಂದು ಸಾಮಾನ್ಯ ವಾಗಿ ಕಾಣಸಿಗುತ್ತಿತ್ತು. “ಮುಳಾಡಿನ ಗಾಂಧಿ’ ಎಂದೇ ಪ್ರಸಿದ್ಧರಾಗಿದ್ದ ಕಾಂತಪ್ಪ ಪೂಜಾರಿ, ಹಾಲಾಡಿ ಮೋನಪ್ಪ ಶೆಟ್ಟಿ ಮೊದಲಾದವರ ಮನೆಯಲ್ಲಿ ಚರಕವಿದ್ದುದನ್ನು ಇಂದಿಗೂ ಹಲವರು ಸ್ಮರಿಸುತ್ತಾರೆ. ಚರಕವು ಕೇವಲ ಹೆಸರಿಗಷ್ಟೇ ಮನೆಯಲ್ಲಿ ಇರುತ್ತಿರಲಿಲ್ಲ. ಚರಕದಿಂದ ನೂಲನ್ನು ನೇಯುವ ಕಾಯಕವೂ ಅಂದು ದೇಶಭಕ್ತಿಯ ಕೆಲಸವಾಗಿತ್ತು. ಕಿರಿಮಂಜೇಶ್ವರದ ಚೌಕಿ ಸುಬ್ಬ ಚರಕದಲ್ಲಿ ನೂಲು ತೆಗೆಯುವ ಕಾಯಕದಲ್ಲಿ ಚಿನ್ನದ ಪದಕ ಪಡೆದಿದ್ದರು. ನಾಗಪುರದಲ್ಲಿ ನಡೆದ ಧ್ವಜ ಸತ್ಯಾಗ್ರಹದಲ್ಲಿ ಸ್ವಯಂಸೇವಕರಾಗಿಯೂ ಭಾಗವಹಿಸಿದ್ದರು.ಹಿರಿಯ ಗಾಂಧಿವಾದಿ ಬಡಗಬೆಟ್ಟು ಸುಬ್ಬಯ್ಯ ಹೆಗ್ಡೆಯವರು ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಂತೆ. ಡಾ| ಟಿ.ಎಂ.ಎ. ಪೈಗಳ ಅಣ್ಣನವರು ಇವರು ಚರಕದಿಂದ ತೆಗೆದ ನೂಲನ್ನು ಕೊಂಡು ಮನೆಯಲ್ಲಿ ಖಾದಿ ವಸ್ತ್ರವನ್ನು ತಯಾರಿಸಿ ಧರಿಸುತ್ತಿದ್ದರಂತೆ. ಬ್ರಿಟಿಷ್‌ ಅಧಿಕಾರಿಗಳಿಗೆ ಖಾದಿ ಹಾಗೂ ಗಾಂಧಿ ಟೊಪ್ಪಿಯ ಕಂಡರೆ ವಿಪರೀತ ಭಯ. ಅದನ್ನು ಧರಿಸಿದವರು ಆಗ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗುತ್ತಿ ದ್ದರು. ಆದರೂ ಗಾಂಧೀವಾದಿಗಳು ಇದನ್ನು ಲೆಕ್ಕಿಸುತ್ತಿರಲಿಲ್ಲ. ಉಡುಪಿಯ ಬೋರ್ಡ್‌ ಹೈಸ್ಕೂಲಿನಲ್ಲಿ ಅಧಿಕಾರಿಗಳು ಭೇಟಿ ನೀಡುವಾಗ ಟೊಪ್ಪಿ ಧರಿಸಬಾರದೆಂಬ ಕಟ್ಟಾಜ್ಞೆ ಇದ್ದರೂ ಧರಿಸಿ ದೇಶಪ್ರೇಮ ಮೆರೆದ ವಿದ್ಯಾರ್ಥಿಗಳನ್ನು ಪಾ.ವೆಂ. ಆಚಾರ್ಯರು ಕೃತಿಯೊಂದರಲ್ಲಿ ನೆನಪಿಸಿಕೊಳ್ಳುತ್ತಾರೆ. ಚೇರ್ಕಾಡಿ ರಾಜಗೋಪಾಲ ಶೆಟ್ಟರು ಶಾಲೆಗೆ ಹೋಗುವಾಗ ಕಿಸೆಯಲ್ಲಿಯೇ ಟೊಪ್ಪಿಯನ್ನು ಇಟ್ಟುಕೊಳ್ಳುತ್ತಿದ್ದರಂತೆ. ಕಾರ್ಕಳ ದುರ್ಗಾದ ಸೋಮನಾಥ ಗೋಖಲೆಯವರು ಶಾಲಾ ಆವರಣ ಪ್ರವೇಶಿಸುವಾಗ ಕೈಯಲ್ಲಿ ತಕಲಿ ಹಿಡಿದುಕೊಂಡು ತಲೆಯಲ್ಲಿ ಟೊಪ್ಪಿ ಧರಿಸುತ್ತಿದ್ದರಂತೆ. ಬ್ರಿಟಿಷರ ಗೊಡ್ಡು ಬೆದರಿಕೆಗೆ ಸೊಪ್ಪು ಹಾಕುತ್ತಿರಲಿಲ್ಲವಂತೆ.

ರಾಷ್ಟ್ರೀಯ ಶಿಕ್ಷಣ ಶಾಲೆ 
ಉಡುಪಿ ಜಿಲ್ಲೆಯಲ್ಲಿ ಅಂದು ನಾಲ್ಕು ರಾಷ್ಟ್ರೀಯ ಶಿಕ್ಷಣ ಶಾಲೆಗಳಿದ್ದವು. ಅವುಗಳಲ್ಲಿ ಒಂದು ಪೆರ್ಡೂರಿನಲ್ಲಿತ್ತು. ಬ್ರಿಟಿಷ್‌ ಶಿಕ್ಷಣವನ್ನು ವಿರೋಧಿಸಿ ಈ ಶಾಲೆಗಳು ಹುಟ್ಟಿಕೊಂಡವು. ದೇಶೀಯ ಶಿಕ್ಷಣವನ್ನು ಇಲ್ಲಿ ಕೊಡಲಾಗುತ್ತಿತ್ತು. ಅನೇಕ ಗಾಂಧಿ ವಾದಿಗಳು ಬ್ರಿಟಿಷ್‌ ಶಿಕ್ಷಣ ನೀಡುವ ಶಾಲಾ, ಕಾಲೇಜುಗಳನ್ನು ಬಹಿಷ್ಕರಿಸಿದರು. ರಾಷ್ಟ್ರೀಯ ಶಾಲೆಗಳನ್ನು ಸೇರಿಕೊಂಡು ಅನೇಕರು ಅದರಲ್ಲಿ ಅಧ್ಯಾಪಕರಾದರು. ಹಿರಿಯಡಕ ರಾಮರಾಯ ಮಲ್ಯ, ಕೆ.ಕೆ. ಶೆಟ್ಟಿ, ಲಕ್ಷ್ಮೀನಾರಾಯಣ ಬಲ್ಲಾಳ್‌ ಮೊದಲಾದವರು ಶಿಕ್ಷಕರಾಗಿ ದುಡಿದ ಹೋರಾಟಗಾರರು. “ಉಡುಪಿಯ ಗಾಂಧಿ’ ಎಂದೇ ಖ್ಯಾತರಾದ ಸಾಂತ್ಯಾರು ಅನಂತಪದ್ಮನಾಭ ಭಟ್ಟರು ಪೆರ್ಡೂರಿನ ಶಾಲೆಯ ಮುಖ್ಯಸ್ಥರು. ಸ್ವಂತ ಖರ್ಚಿನಿಂದ ಈ ಶಾಲೆಯನ್ನು ನಡೆಸುತ್ತಿದ್ದರು. ಗಾಂಧಿಯವರ ಕಟ್ಟಾ ಅಭಿ ಮಾನಿಯಾಗಿದ್ದ ಇವರು ಗಾಂಧೀಜಿಯವರ ಮರಣ ವಾರ್ತೆ ಯನ್ನು ರೇಡಿಯೋದ ಮೂಲಕ ಕೇಳಿ ಹಾ… ಎಂದು ನರಳಿ ತೀವ್ರ ವೇದನೆಗೆ ಒಳಗಾಗಿ ಹಾಸಿಗೆ ಹಿಡಿದರು. ಕೊನೆಗೆ ಇದೇ ದುಃಖದಲ್ಲಿ ಇಹಲೋಕದ ಯಾತ್ರೆ ಮುಗಿಸಿದರು. ಕುಂದಾಪುರ ಬಳ್ಕೂರಿನ ರಾಮಣ್ಣ ಶೆಟ್ಟಿಯವರು “ಗಾಂಧಿ ರಾಮಣ್ಣ ಶೆಟ್ಟ’ರೆಂದೇ ಖ್ಯಾತರು. ಅವರು ಕರಾಚಿಯ ತನಕ ಹೋಗಿ ಗಾಂಧಿಯವರನ್ನು ಕಂಡು ಆಶೀರ್ವಾದ ಪಡೆದಿದ್ದರು. ಗಾಂಧೀಜಿಯವರು ಉಪವಾಸ ಸತ್ಯಾಗ್ರಹ ಕೈಗೊಂಡಾಗ ಇವರೂ ಉಪವಾಸ ಕೂರುತ್ತಿದ್ದರು.

ದೀನ ದಲಿತರ ಸೇವೆ 
ದಲಿತರಿಗೆ ಸಾಮಾಜಿಕ ನ್ಯಾಯ ನೀಡಲು ಅಂದಿನ ಹೋರಾಟಗಾರರು ಜಾತಿ, ಮತಗಳ ಮೊದಲಾದ ಅಂತಸ್ತುಗಳನ್ನು ಮೀರಿ ಶ್ರಮಿಸಿದರು. ಬ್ರಹ್ಮಾವರದ ಅಂತಯ್ಯ ಶೆಟ್ಟಿಯವರು ಉಡುಪಿ ತಾಲೂಕು ದಲಿತ ಸೇವಾ ಸಂಘದ ಕಾರ್ಯದರ್ಶಿಗಳು. ದಲಿತ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ಭವನವನ್ನು ತೆರೆದರು. ದಲಿತರ ದೇವಾಲಯ ಪ್ರವೇಶಕ್ಕೆ ಮುಂಚೂಣಿಯಲ್ಲಿ ನಿಂತು ಧೈರ್ಯ ತುಂಬಿದರು. ಉಡುಪಿಯ ಅಷ್ಟಮಠಗಳಿಂದ ವಿದ್ಯಾರ್ಥಿಗಳ ಭೋಜನಕ್ಕೆ ಅಕ್ಕಿಯನ್ನು ಕೊಡಿಸುವಲ್ಲಿಯೂ ಯಶಸ್ವಿಯಾದರು. ಕುಂದಾಪುರದಲ್ಲಿ ಕೃಷ್ಣರಾಯ ಕೊಡ್ಗಿಯವರ ಆತ್ಮೀಯರಾದ ಕೋಣಿ ಅಣ್ಣಪ್ಪ ಕಾರಂತರು ದಲಿತ ಮಕ್ಕಳಿಗೆ ಮನೆಯಲ್ಲಿಯೇ ಭೋಜನ ವ್ಯವಸ್ಥೆ ಮಾಡಿ, ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಿದರು. ಆ ಕಾಲದ ಮಡಿವಂತ ಸಮಾಜದ ವಿರೋಧದ ನಡುವೆಯೂ ಗಾಂಧಿವಾದವನ್ನು ಅಕ್ಷರಶಃ ಪಾಲಿಸಿದರು. ಕುಂದಾಪುರದ ಕೊಡ್ಗಿ ಕಂಪೌಂಡ್‌, ಅಣ್ಣಪ್ಪ ಕಾರಂತರ ಹೋಟೆಲ್‌ ಸ್ವಾತಂತ್ರ್ಯ ಚಳವಳಿಯ ಚಟುವಟಿಕೆಗಳ ಕೇಂದ್ರವಾಗಿತ್ತು.

ವಿರಕ್ತಿ-ದೇಶ ಭಕ್ತಿ 
ಹೆರಂಜಾಲು ಕುಪ್ಪಯ್ಯ ಹೆಬ್ಟಾರರು ಅಧ್ಯಾತ್ಮದಲ್ಲಿ ಆಸಕ್ತರು. ಹಿಮಾಲಯದ ತನಕ ಹೋಗಿ ಅಲ್ಲಿ ಕೆಲವು ಕಾಲ ಕಳೆದರು. ಊರಿಗೆ ಬಂದು ಖಾವಿ ವಸ್ತ್ರದಲ್ಲಿ ಕೊಡಚಾದ್ರಿಯಲ್ಲಿ ಮತ್ತೆ ತಪಸ್ಸಿಗೆ ಮುಂದಾದಾಗ ಬವಲಾಡಿ ಪಟೇಲ್‌ ಸೂರಪ್ಪಯ್ಯನವರ ಸಂಪರ್ಕವಾಯಿತು. ಆಗ ಬ್ರಿಟಿಷರ ವಿರುದ್ಧ ಚಳವಳಿ ತೀವ್ರ ಸ್ವರೂಪ ಪಡೆದಿತ್ತು. ಸೂರಪ್ಪಯ್ಯ ಹೆಬ್ಟಾರರು ದೇಶವನ್ನು ಪರಕೀ ಯರಿಂದ ಪಾರು ಮಾಡಲು ಮುಂದಾಗುವಂತೆ ಮನವೊಲಿಸಿ ದರು. ಅಂದಿನಿಂದಲೇ ಖಾವಿ ಹೋಗಿ ಖಾದಿ ಬಂತು. ಗಾಂಧಿ ಟೊಪ್ಪಿ ಶಿರವೇರಿತು.  ಅದಮಾರು ಮಠದ ಯತಿಗಳಾಗಿದ್ದ ಶ್ರೀ ವಿಬುಧೇಶತೀರ್ಥ ಶ್ರೀಪಾದರು ಪೂರ್ವಾಶ್ರಮದಲ್ಲಿ ದೊಡ್ಡ ದೇಶಭಕ್ತರು. ಮೂಲ್ಕಿ ಯಲ್ಲಿ ನಡೆದ ಬೃಹತ್‌ ಸಭೆಯಲ್ಲಿ ಕಿರಿಯವರಾದ ಇವರು ಸಾರ್ವಜನಕರನ್ನುದ್ದೇಶಿಸಿ ಮಾತನಾಡಿ ಬೆರಗನ್ನುಂಟು ಮಾಡಿ ದರು. ಬೋರ್ಡ್‌ ಹೈಸ್ಕೂಲಿನಲ್ಲಿ ರೋಕ್‌ ಫೆರ್ನಾಂಡೀಸರ ಶಿಷ್ಯರು. ಸ್ವಾತಂತ್ರಾéನಂತರ ಮೂಲ್ಕಿಯ ಬಳಿ ಹಾದು ಹೋಗುವಾಗ ತಾನು ಭಾಷಣ ಮಾಡಿದ ಜಾಗವನ್ನು ನೆನಪಿಸಿಕೊಂಡು ಜೊತೆಯಲ್ಲಿದ್ದವರಿಗೆ ತೋರಿಸುತ್ತಿದ್ದರಂತೆ.

ನಿಸ್ವಾರ್ಥ ಸೇವೆ 
ಸ್ವಾತಂತ್ರ್ಯ ಹೋರಾಟಗಾರರಿಗೆ ಸರಕಾರ ಪಿಂಚಣಿ, ಜಾಗವನ್ನು ನೀಡುತ್ತಿತ್ತು. ಇದನ್ನು ಅನೇಕರು ತ್ಯಜಿಸಿದರು. ಎಸ್‌. ಯು.ಪಣಿಯಾಡಿ ನಾನು ದೇಶಕ್ಕಾಗಿ ಹೋರಾಡಿದವನು. ಜಾಗಕ್ಕಾಗಿ ಅಲ್ಲ ಎಂದರು. ಉಡುಪಿಯ ಟಿ.ವಾಸುದೇವ ಶೆಣೈ ಸರಕಾರ ನೀಡಿದ ಜಾಗವನ್ನು ಸ್ವೀಕರಿಸಲಿಲ್ಲ. ಮುದ್ರಾಡಿ ನಾರಾಯಣ ಶೆಟ್ಟರೂ ಯಾವುದೇ ಜಾಗವನ್ನು ಬಯಸದೆ ಕೊನೆಯ ತನಕ ಬ್ರಹ್ಮಚಾರಿಯಾಗಿ ಬದುಕಿದರು. ಕೆ. ಲಕ್ಷ್ಮೀ ನಾರಾಯಣ ಶರ್ಮರು ಸರಕಾರ 20 ಎಕರೆ ನೀಡಲು ಮುಂದಾದರೂ, 10 ಎಕರೆ ಸಾಕೆಂದು ಅಷ್ಟನ್ನೇ ಸ್ವೀಕರಿಸಿದರು. ಎಂ.ವಿ.ಹೆಗ್ಡೆಯವರು ಪಿಂಚಣಿಯನ್ನು ನಿರಾಕರಿಸಿದರು.

ಆ ಕಾಲದ ಸ್ವಾತಂತ್ರ್ಯ ಹೋರಾಟಗಾರರು ಗಾಂಧೀಜಿಯ ವರನ್ನು ಅಕ್ಷರಶಃ ಪಾಲಿಸುತ್ತಿದ್ದರು. ಅನೇಕರು ಪ್ರಾಣಿಹಿಂಸೆ ವಿರೋಧಿಸಿದರು. ಕೆ.ಕೆ.ಶೆಟ್ಟರು ಸುರತ್ಕಲ್ಲಿನಲ್ಲಿ ನಡೆಯುತ್ತಿದ್ದ ಪ್ರಾಣಿ ಬಲಿ ತಡೆಯಲು ಮುಂದಾದರು. ಮುದ್ರಾಡಿ ಕೃಷ್ಣಯ್ಯ ಶೆಟ್ಟರು ನಿತ್ಯವೂ ಮನೆಮಂದಿಯವರೆನ್ನೆಲ್ಲ ಕೂಡಿಕೊಂಡು ರಘುಪತಿ ರಾಘವ ಹಾಡುತ್ತಿದ್ದರು. ಮಾಂಸಾಹಾರಕ್ಕೆ ವಿದಾಯ ಹೇಳಿದರು. ಗದ್ದೆ ಉಳುವಾಗ ಕೋಣನಿಗೆ ಹೊಡೆಯುವುದನ್ನೂ ಅವರು ಸಹಿಸುತ್ತಿರಲಿಲ್ಲ. ಕಾರ್ಕಳದ ಕಾಂತಪ್ಪ ಪೂಜಾರಿಯವರು ಮಾಂಸಾಹಾರಿಗಳ ಸಾಲಿನಲ್ಲಿ ಕೂರುತ್ತಿರಲಿಲ್ಲ.

ಚಳವಳಿಯಲ್ಲಿ ಮಹಿಳೆಯರು 
ಕಾರ್ಕಳದ ಎಂ.ಡಿ.ಅಧಿಕಾರಿಯವರು ಬ್ರಿಟಿಷರ ಲಾಠಿ ರುಚಿಯನ್ನು ಅನುಭವಿಸಿ ದವರು. ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಇವರ ಪಾತ್ರ ಪ್ರಧಾನ ವಾಗಿತ್ತು. ಒಮ್ಮೆ ಗಾಂಧೀಜಿಯವರು ಚಳವಳಿಯಲ್ಲಿ ಮಹಿಳೆ ಯರೂ ಭಾಗವಹಿಸುವಂತೆ ಪ್ರೋತ್ಸಾಹಿಸಿ ಎಂದು ಇವರಲ್ಲಿ ಹೇಳಿದರು. ಇವರ ಪತ್ನಿ ಕಮಲಾವತಿ ಅಧಿಕಾರಿಯವರು ಪತಿಯ ಅಪೇಕ್ಷೆಯಂತೆ ಚಳವಳಿಗೆ ಧುಮುಕಿದರು. ಕುಂದಾಪುರದ ಕೃಷ್ಣರಾಯ ಕೊಡ್ಗಿಯವರ ಪತ್ನಿ ರಾಜಮ್ಮನವರೂ ಉಪ್ಪಿನ ಚಳವಳಿಯಲ್ಲಿ ಭಾಗವಹಿಸಿ, ಉಪ್ಪನ್ನು ಸಾಂಕೇತಿಕವಾಗಿ ಕೊಂಡು ಬ್ರಿಟಿಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಂಬಾಬಾಯಿ ಪೈಯವರೂ ಚಳವಳಿಯಲ್ಲಿ ತೊಡಗಿಸಿಕೊಂಡ ಉಡುಪಿಯ ಇನ್ನೋರ್ವ ಮಹಿಳೆ. ಉಪ್ಪಿನ ಸತ್ಯಾಗ್ರಹದ ಸಂದರ್ಭದಲ್ಲಿ ಮಲ್ಪೆಯಲ್ಲಿ ತಯಾರಿಸಿದ ಉಪ್ಪನ್ನು ಮೆರವಣಿಗೆಯಲ್ಲಿ ಉಡುಪಿಗೆ ತಂದು ಮಾರುತ್ತಿದ್ದರು.

ಇಂದು ಗಾಂಧೀಪಥ 
ಅಂದು ಗಾಂಧಿಯವರೊಂದಿಗೆ ಸ್ವಾತಂತ್ರ್ಯ ಹೋರಾಟಗಾರರು ಹಾಕಿದ ಹೆಜ್ಜೆ ಇಂದು ಮಬ್ಟಾಗಿದೆ. ಮತ್ತೆ ವಿದೇಶಿ ಸಂಸ್ಕೃತಿಯತ್ತ ಒಲವು ಬೆಳೆಯುತ್ತಿದೆ. ಸರಳ ಬದುಕಿಗಿಂತ ಆಡಂಬರದ ಬದುಕಿಗೆ ಬೆಲೆ ಬರುತ್ತಿದೆ. ಅಂದು ಗಾಂಧಿ ಜಿಲ್ಲೆಯ ಜನರ ಮೇಲೆ ಬೀರಿದ್ದ ಪ್ರಭಾವ ಇಂದು ಕೇವಲ ನೆನಪಿಗಷ್ಟೇ ಸೀಮಿತವಾಗುತ್ತಿದೆ. ಖಾದಿ ಚಳವಳಿಗೆ ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಪ್ರೋತ್ಸಾಹ ಲಭಿಸಿತು. ಆದರೆ ಇಂದು ಖಾದಿ ಮಳಿಗೆಯೇ ಉಡುಪಿಯಲ್ಲಿ ಇಲ್ಲ. ಉಡುಪಿ ಜಿಲ್ಲೆಯ ವಿವಿಧ ಊರುಗಳಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರರು ಆ ಊರಿನವರ ನೆನಪಿನಿಂದಲೂ ಮರೆಯಾಗುತ್ತಿದ್ದಾರೆ. ಅವರ ನೆನಪಿಗಾಗಿ ಊರಿನ ರಸ್ತೆ ಅಥವಾ ವೃತ್ತಕ್ಕೆ ಅವರ ಹೆಸರನ್ನಿಡುವುದರ ಮೂಲಕ ಅವರನ್ನು ಸದಾ ನೆನಪಿಸಿಕೊಳ್ಳುವಂತೆ ಮಾಡಬೇಕಾಗಿದೆ. ಹಾಗಾದಲ್ಲಿ ಅವರಿಗೆ ನಿಜವಾದ ಅರ್ಥದಲ್ಲಿ ಗೌರವ ಸಲ್ಲಿಸಿದಂತಾಗುತ್ತದಲ್ಲವೇ?.

ಡಾ| ಶ್ರೀಕಾಂತ್‌ ಸಿದ್ದಾಪುರ 

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.