ಮಗಳು, ಮಗನಾಗಿ ಮನೆಯ ಬೆಳಗಿದಳು!
Team Udayavani, Sep 18, 2018, 2:16 AM IST
ಹುಡುಗಿ ಸ್ವಲ್ಪ ಜೋರಿದ್ದಾಳೆ. ತುಂಬಾ ಸ್ಟ್ರೈಟ್ ಫಾರ್ವರ್ಡ್. ಸ್ಟೂಡೆಂಟ್ ಆಗಿದ್ದಾಗ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ಳು ಅನಿಸುತ್ತೆ. ಆ ಕಾರಣದಿಂದಲೋ ಏನೋ: ಯಾರಿಗೂ ಕೇರ್ ಮಾಡೋದಿಲ್ಲ. ಅನಿಸಿದ್ದನ್ನು ಮುಖಕ್ಕೆ ಹೊಡೆದಂತೆ ಹೇಳಿಬಿಡ್ತಾಳೆ. ಮುಖ್ಯವಾಗಿ, ಅವಳು ಯಾವಾಗ ಹೇಗೆ ಇರ್ತಾಳೆ, ಹೇಗೆ ಮಾತಾಡ್ತಾಳೆ ಎಂದು ಅಂದಾಜು ಮಾಡಲು ಸಾಧ್ಯವೇ ಇಲ್ಲ. ಒಂಥರಾ ವಿಚಿತ್ರ ಮನಸ್ಥಿತಿಯ ಹುಡುಗಿ. ಆದರೆ, ಅವಳು ಯಾವತ್ತೂ, ಯಾರ ವಿಷಯದಲ್ಲೂ ಬೇಜವಾಬ್ದಾರಿಯಿಂದ ಮಾತಾಡಿಲ್ಲ. ಕೆಲಸದಲ್ಲಿ ಯಾವ ಸಂದರ್ಭದಲ್ಲೂ ನಿರ್ಲಕ್ಷ್ಯ ತೋರಿಲ್ಲ. ಯಾರ ಕುರಿತೂ ಗಾಸಿಪ್ ಮಾಡಿಲ್ಲ. ಆರಾರು ತಿಂಗಳಿಗೆ ಒಮ್ಮೆ ಗೆಟಪ್ ಬದಲಿಸ್ತಾಳೆ. ಕೆಲವೊಮ್ಮೆ, ಇದ್ದಕ್ಕಿದ್ದಂತೆಯೇ
ಹೇರ್ ಸ್ಟೈಲ್ ಚೇಂಜ್ ಮಾಡ್ತಾಳೆ. ಈ ಬಗ್ಗೆ ಯಾರಾದ್ರೂ ವಿಚಾರಿಸಿದ್ರೆ-“ಜನ ಚೇಂಜ್ ಕೇಳ್ತಾರೆ’ ಎಂದು ಹೇಳಿ ಕಣ್ಣು ಮಿಟುಕಿಸಿ ಹೋಗಿಬಿಡ್ತಾಳೆ. ಇನ್ನೂ ವಿವರಿಸಿ ಹೇಳುವುದಾದರೆ- ತನಗೆ ಹೇಗೆ ಇಷ್ಟವೋ ಹಾಗೆ ಬದುಕ್ತಾ ಇದ್ದಾಳೆ. ಫ್ಯಾಮಿಲಿ ಪರ್ಸನ್ ಆದ್ರೆ ಹೀಗೆಲ್ಲ ಬಿಂದಾಸ್ ಆಗಿ ಬದುಕಲು ಸಾಧ್ಯವಿಲ್ಲ. ಸೋ, ಅವಳು ಸಿಂಗಲ್ ಅಂತ ಧಾರಾಳವಾಗಿ ಹೇಳಬಹುದು…ಅಕೌಂಟ್ಸ್ ವಿಭಾಗದ ಕ್ಲರ್ಕ್ ಮಂಗಳಾ ಅವರನ್ನು ಕುರಿತು ಎಚ್ಆರ್ ವಿಭಾಗದ ಮುಖ್ಯಸ್ಥರು ಹೇಳಿದ್ದ ಮಾತುಗಳಿವು.
ಅದೊಂದು ಕಾರ್ಪೊರೇಟ್ ಕಂಪನಿ. ಅಲ್ಲಿ- “ಕೆಲಸದ ಸಂದರ್ಭದಲ್ಲಿ ಒತ್ತಡವನ್ನು ನಿಭಾಯಿಸುವುದು ಹೇಗೆ? ಟೆನ್ಶನ್ನಿಂದ ಮುಕ್ತರಾಗುವುದು ಹೇಗೆ?’ ಎಂಬ ವಿಷಯವಾಗಿ, ನೌಕರರಿಗೆ ಕೌನ್ಸೆಲಿಂಗ್ ನೀಡಬೇಕಿತ್ತು. ನೌಕರರಿಗೆ ಮಾನಸಿಕ ಸ್ಥೈರ್ಯ ತುಂಬಿ ಅವರನ್ನು ರೀಚಾರ್ಜ್ ಮಾಡಲೇಬೇಕು ಎಂದು ಪಣತೊಟ್ಟಿದ್ದ ಕಂಪನಿ, ಅದಕ್ಕಾಗಿಯೇ ಎಂಟು ತಿಂಗಳ ಸುದೀರ್ಘ ಅವಧಿಯನ್ನು ಕೌನ್ಸೆಲಿಂಗ್ಗೆ ಮೀಸಲಿಟ್ಟಿತ್ತು. ಕೌನ್ಸೆಲಿಂಗ್ ಆರಂಭಕ್ಕೂ ಮೊದಲು ಯಾವ ನೌಕರನ ವರ್ತನೆ ಹೇಗೆ ಎಂಬುದನ್ನು ಅರಿಯಬೇಕಿತ್ತು. ಆ ನೆಪದಲ್ಲಿಯೇ ಎಚ್ಆರ್ ವಿಭಾಗದ ಮುಖ್ಯಸ್ಥರು, ಮಂಗಳಾ ಕುರಿತು ವಿವರಗಳನ್ನು ಹಂಚಿಕೊಂಡಿದ್ದರು.
ಆ ನಂತರದ ಒಂದಿಡೀ ತಿಂಗಳು ಸೂಕ್ಷ್ಮವಾಗಿ ಗಮನಿಸಿದಾಗ ಅನಿಸಿದ್ದು: ಎಚ್ಆರ್ ವಿಭಾಗದವರು ಹೇಳಿದ್ದರಲ್ಲಿ ಒಂದಿಷ್ಟೂ ಉತ್ಪ್ರೇಕ್ಷೆ ಇರಲಿಲ್ಲ. ಮಂಗಳಾ, ವಿಪರೀತ ಅನ್ನುವಷ್ಟು ರಿಸರ್ವ್ಡ್ ಆಗಿದ್ದಳು. ಯಾವುದೇ ಲೋಪವಿಲ್ಲದಂತೆ ಕೆಲಸ ಮಾಡುತ್ತಿದ್ದಳು ನಿಜ. ಆದರೆ ಸಣ್ಣ ಪುಟ್ಟ ವಿಷಯಕ್ಕೂ ಬೇಗನೇ ಸಿಟ್ಟಾಗುತ್ತಿ ದ್ದಳು. ಜಗಳಕ್ಕೇ ಹೋಗಿಬಿಡುತ್ತಿದ್ದಳು. ಇವೆಲ್ಲಾ ಗೊತ್ತಿದ್ದೂ ಚೇಷ್ಟೆ ಸ್ವಭಾವದ ಆಸಾಮಿಯೊಬ್ಬ ಅದೊಮ್ಮೆ ಅವಳ ಹೆಸರಿನ ಕಡೆಯ ಅಕ್ಷರವನ್ನು ತೆಗೆದುಹಾಕಿ, ಎರಡೇ ಅಕ್ಷರಗಳ ನೇಮ್ಪ್ಲೇಟ್ ಮಾಡಿ, ಅವಳ ಕಂಪ್ಯೂಟರ್ನ ಮುಂದಿಟ್ಟು ಹೋಗಿಬಿಟ್ಟ. ಪರಿಣಾಮ: ಮಂಗಳಾ ಎಂದಿರಬೇಕಿದ್ದ ಹೆಸರು “ಮಂಗ’ ಎಂದಾಗಿಬಿಟ್ಟಿತ್ತು. ಅದನ್ನು ಕಂಡವರೆಲ್ಲ, ಸಹಜವಾಗಿಯೇ ಮುಸಿಮುಸಿ ನಕ್ಕು ಮುಂದೆ ಸಾಗುತ್ತಿದ್ದರು.
ಅದನ್ನು ಕಂಡ ಮಂಗಳಾ ಕಿಡಿಕಿಡಿಯಾದಳು. ತನ್ನ ಹೆಸರಿನ ಒಂದು ಅಕ್ಷರವನ್ನೇ ತೆಗೆದುಹಾಕಿ ಚಾಷ್ಟಿ ಮಾಡಿದ್ದವನ ಎದುರು ನಿಂತು- “ನೀವು ನನಗೆ ಮಂಗ ಅಂದಿದೀರ. ಅದನ್ನು ನಾನು ಒಪ್ಕೋತೇನೆ. ನಾನು ನಿಮ್ಮನ್ನು ಹಂದಿ ಅಂತೀನಿ. ಅದನ್ನು ಒಪ್ಕೊಳ್ಳೋಕೆ ನಿಮಗೆ ಧಮ್ ಇದೆಯಾ?’ ಎಂದು ಕೇಳಿಬಿಟ್ಟಿದ್ದಳು. ಹುಡುಗಿಯೊಬ್ಬಳಿಂದ ಈ ಬಗೆಯ ಕಟು ಮಾತು ಬರುವುದೆಂದು ಊಹಿಸದಿದ್ದ ಆ ಮನುಷ್ಯ, ಒಂದೂ ಮಾತಾಡದೆ ತಲೆ ತಗ್ಗಿಸಿಕೊಂಡು ಹೋಗಿಬಿಟ್ಟಿದ್ದ. ಈ ಬಗೆಯ ಕಿರಿಕಿರಿಗಳಾದಾಗಲೆಲ್ಲ ಡಿಪ್ರಶನ್ಗೆ ಹೋಗಿಬಿಡುತ್ತಿದ್ದಳು ಮಂಗಳಾ. ಆಗೆಲ್ಲಾ ಲೋ ಬಿಪಿ, ತಲೆಸುತ್ತುವುದು, ಕಣ್ಣಿಂದ ಧಾರಾಕಾರ ನೀರು ಸುರಿಯುವುದು… ಮುಂತಾದ ಸಮಸ್ಯೆಗಳು ಆಕೆಗೆ ಜೊತೆ ಯಾಗುತ್ತಿದ್ದವು. ಇಂಥ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಕೌನ್ಸೆಲಿಂಗ್ ಅಗತ್ಯವಾಗಿತ್ತು…
“ನಮುª ಕೊಪ್ಪಳ ಹತ್ರ ಒಂದು ಹಳ್ಳಿ ಸಾರ್. ಅಪ್ಪ ಕೃಷಿಕ. ನಾವು ಒಟ್ಟು ಐದು ಮಂದಿ ಹೆಣ್ಣು ಮಕ್ಕಳು! ಬಡವರ ಮನೇಲಿ ಸಾಲುಸಾಲಾಗಿ ಐದು ಹೆಣ್ಮಕ್ಕಳು ಅಂದಮೇಲೆ ಬಿಡಿಸಿ ಹೇಳಬೇಕಾ? ನಮಗೆ ಉಸಿರಾಟದಷ್ಟೇ ಸಹಜವಾಗಿ ಸಮಸ್ಯೆಗಳೂ ಜೊತೆಯಾಗುತ್ತಿದ್ದವು. ಅಪ್ಪನಿಗೆ, ಪಿತ್ರಾರ್ಜಿತವಾಗಿ ಬಂದ ಎರಡೆಕರೆ ಜಮೀನಿತ್ತು, ಆದರೆ, ಮಳೆ ಆಶ್ರಯಿಸಿದ್ದ ಕೃಷಿ ಪದ್ಧತಿಯಿಂದಾಗಿ, ಹೆಚ್ಚಿನ ಬೆಳೆ ತೆಗೆಯಲು ಸಾಧ್ಯವಾಗಲೇ ಇಲ್ಲ. ಮಳೆ ಬಿದ್ದ ವರ್ಷ ನಮ್ಮ ಜಮೀನಿನಲ್ಲಿ, ಬೀಳದೇ ಇದ್ದ ವರ್ಷ ಶ್ರೀಮಂತರ ಮನೆಯಲ್ಲಿ ಕೆಲಸ ಮಾಡುವುದು ಅಪ್ಪನ ಕೆಲಸ-ಕರ್ತವ್ಯ ಎರಡೂ ಆಗಿತ್ತು. ಹಳ್ಳಿ ಅಂದಮೇಲೆ ಕೇಳಬೇಕಾ ಸಾರ್? ಹೆಣ್ಣು ಮಕ್ಕಳು ಜಾಸ್ತಿ ಓದಿದ್ರೆ ಗಂಡು ಸಿಗೋದಿಲ್ಲ ಎಂಬ ಪುರಾತನ ನಂಬಿಕೆಗೆ ಬಲಿಯಾಗಿ, ಏಳನೇ ಕ್ಲಾಸ್ ಮುಗೀತಿ ದ್ದಂತೆಯೇ ನನ್ನ ಇಬ್ಬರೂ ಅಕ್ಕಂದಿರನ್ನು ಸ್ಕೂಲ್ ಬಿಡಿಸಿಬಿಟ್ರಾ.
ಮನೇಲಿ ನಾನು ಮೂರನೇ ಮಗಳು. ಮಧ್ಯದವಳು ಎಂಬ ಕಾರಣಕ್ಕೇ ಇರಬೇಕು: ನನಗೆ ತುಸು ಹೆಚ್ಚೇ ಅಭದ್ರತೆ ಇತ್ತು. ಯಾವಾಗಲೂ ಅಪ್ಪನಿಗೆ ಅಂಟಿಕೊಂಡೇ ಇರ್ತಿದ್ದೆ. ಇದನ್ನೇ ನೆಪಮಾಡಿಕೊಂಡು ಅಪ್ಪ ನನಗೆ “ಬಾಲ’ ಎಂದೇ ಹೆಸರು ಕಟ್ಟಿದ್ದರು. ಅವರು ಇಡೀ ದೇಹ, ನಾನು ಯಾವಾಗಲೂ ಅದಕ್ಕೆ ಅಂಟಿಕೊಂಡೇ ಇರುವ ಬಾಲ ಎಂಬುದು ಅವರ ಮಾತಿನ ಅರ್ಥವಾಗಿತ್ತು. ಬಡತನ, ನಮ್ಮ ಕುಟುಂಬಕ್ಕೆ ಶಾಪದಂತೆ ಅಂಟಿಕೊಂಡಿದೆ. ಹಾಗಾಗಿ ನಾವು ಯಾವತ್ತೂ ಶ್ರೀಮಂತಿಕೆಯ ಕನಸು ಕಾಣಬಾರದು ಎಂಬುದು ನಮಗೆ ನಾವೇ ಹಾಕಿಕೊಂಡ ಲಕ್ಷ್ಮಣ ರೇಖೆಯಾಗಿತ್ತು.
ಅವತ್ತೂಂದು ರಾತ್ರಿ ನಿದ್ರೆ ಬಾರದೆ ಹೊರಳಾಡುತ್ತಿದ್ದೆ. ಆಗಲೇ ಅಪ್ಪನ ಮಾತು ಕೇಳಿಸಿತು. ಈ ಹೊತ್ತಿನಲ್ಲಿ ಏನು ಹೇಳುತ್ತಿರಬಹುದು ಎಂಬ ಕುತೂಹಲದಿಂದಲೇ ಆಲಿಸಿದೆ: “ನಾನಾದ್ರೂ ಏನ್ಮಾಡಲಿ ಹೇಳು? ಇಬ್ಬರೂ ಬೆಳೆದು ನಿಂತಿದಾರೆ. ಬೇಗ ಮದುವೆ ಮಾಡಬೇಕು. ಇಲ್ಲಾಂದ್ರೆ ಜನ ಆಡಿಕೊಳ್ತಾರೆ. ವ್ಯಕ್ತಿಯೊಬ್ಬನಿಗೆ ಕಷ್ಟ ಕೊಡಬೇಕು ಅನಿಸಿದ್ರೆ- ಹೆಣ್ಣು ಮಕ್ಕಳು ಅಥವಾ ಬಡತನ-ಎರಡರಲ್ಲಿ ಒಂದು ಕೊಟ್ರೆ ಸಾಕು. ದೇವ್ರು ನಮಗೆ ಎರಡನ್ನೂ ಕೊಟ್ಟಿದಾನೆ. ಏನ್ಮಾಡಲಿ ಹೇಳು…ಒಂದೇ ಒಂದು ಗಂಡು ಮಗು ಇದ್ದಿದ್ರೆ-ಕೊನೆಗಾಲದಲ್ಲಿ ನಮ್ಮನ್ನು ನೋಡಿಕೊಳ್ಳಲಿಕ್ಕೆ, ಅಕ್ಕ ತಂಗೀರ ಮದುವೆಯ ಸಾಲ ತೀರಿಸೋಕ್ಕೆ ದಾರಿ ಆಗ್ತಿತ್ತು. ಅವನಿಗೆ ನಮ್ಮ ಕಷ್ಟವನ್ನೆಲ್ಲ ಹೇಳಿ ನೆಮ್ಮದಿಯಿಂದ ಸಾಯಬಹುದಿತ್ತು. ನಮ್ಮ ಕರ್ಮಕ್ಕೆ, ಎಲ್ಲಾ ಹೆಣ್ಣುಮಕ್ಕಳೇ ಆಗಿಬಿಟುÌ…’ ಅಪ್ಪ ಹೀಗೆ ಹೇಳುತ್ತಿದ್ದಂತೆಯೇ ಅಮ್ಮ- “ಭಗವಂತಾ, ಒಂದೇ ಸಲ ನಮ್ಮನ್ನ ಕರ್ಕೊಂಡ್ ಬಿಡಪ್ಪಾ. ಯಾಕೆ ಹೀಗೆ ದಿನಾದಿನ ಪರೀಕ್ಷೆ ಮಾಡ್ತೀಯ?’ ಅನ್ನುತ್ತ ಬಿಕ್ಕಿ ಬಿಕ್ಕಿ ಅತ್ತಳು.
ಒಬ್ಬ ಗಂಡು ಮಗ ಇದ್ದಿದ್ರೆ ನಮ್ಮ ಕಷ್ಟಗಳೆಲ್ಲ ಕಳೆದು ಹೋಗಿರ್ತಿದುÌ. ಹೆಣ್ಣು ಯಾವತ್ತಿದ್ರೂ ಹುಣ್ಣಿದ್ದ ಹಾಗೆ ಎಂಬರ್ಥದಲ್ಲಿ ಅಪ್ಪ-ಅಮ್ಮ ಮಾತಾಡಿದರಲ್ಲ: ಅವತ್ತೇ ನಾನೊಂದು ನಿರ್ಧಾರಕ್ಕೆ ಬಂದೆ. ಇವತ್ತಿಂದ ನಾನೇ ಈ ಮನೆಯ ಗಂಡು ಮಗ. ನನ್ನ ಪರ್ಸನಲ್ ಲೈಫ್ ಏನಾದ್ರೂ ಪರವಾಗಿಲ್ಲ. ಹೆತ್ತವರಿಗೆ ನೆರವಾಗಬೇಕು. ತಂಗಿಯರಿಗೆ ಮದುವೆ ಮಾಡಬೇಕು. ಕೊನೆಗಾಲದಲ್ಲಿ ಅಪ್ಪ-ಅಮ್ಮನಿಗೆ ಆಸರೆಯಾಗ ಬೇಕು. ಹೀಗೆಲ್ಲಾ ಆಗಬೇಕಾದ್ರೆ ಮೊದಲು ಚೆನ್ನಾಗಿ ಓದಬೇಕು. ಆಮೇಲೆ ನೌಕರಿ ಹಿಡಿಯಬೇಕು. ಒಂದೊಂದೇ ರುಪಾಯಿ ಜೋಡಿಸಿ, ಅದರಿಂದಲೇ ಕಷ್ಟಗಳನ್ನು ಎದುರಿಸ್ತಾ ಹೋಗಬೇಕು ಅಂದುಕೊಂಡೆ. ಈ ಮಧ್ಯೆ ಇಬ್ಬರು ಅಕ್ಕಂದಿರಿಗೆ ಮದುವೆ ಯಾಯಿತು. ಆ ಕಾರಣಕ್ಕೇ ಇದ್ದ ಜಮೀನನ್ನೂ ಮಾರಬೇಕಾಗಿ ಬಂತು. ಜಮೀನಿಗಿಂತ ಮಕ್ಕಳ ಭವಿಷ್ಯ ಮುಖ್ಯ ಎಂದು ಅಮ್ಮನೂ ಹೇಳಿದ್ದರಿಂದ, ಕೂಲಿ ಮಾಡಿಕೊಂಡೇ ಬದುಕಿದರಾಯ್ತು ಎಂದುಕೊಂಡು ಅಪ್ಪ ಮೌನಿಯಾದರು.
ಅಂದುಕೊಂಡಂತೆಯೇ ನಾನು ಡಿಗ್ರಿ ಮುಗಿಸಿದೆ. ಕೆಲಸಕ್ಕೂ ಸೇರಿಕೊಂಡೆ. ಪೈಸೆಗೆ ಪೈಸೆ ಸೇರಿಸಿ ಊರಲ್ಲಿ ಮನೆ ಕಟ್ಟಿಸಿದೆ. ಇದನ್ನಂತೂ ಅಪ್ಪ-ಅಮ್ಮ ಇಬ್ಬರೂ ನಿರೀಕ್ಷಿಸಿರಲಿಲ್ಲ. ಹುಡುಗಿ ಬೆಂಗಳೂರಲ್ಲಿದ್ದಾಳೆ. ಸಂಪಾದನೆ ಮಾಡ್ತಾಳೆ ಎಂದು ಗೊತ್ತಾಗುತ್ತಿ ದ್ದಂತೆಯೇ ಗಂಡಿನ ಕಡೆಯವರು ಬರತೊಡಗಿದರು. ಅಕಸ್ಮಾತ್, ಮದುವೆಯಾಗಿಬಿಟ್ಟರೆ ಅಪ್ಪ-ಅಮ್ಮನ ಬದುಕು ಸೂತ್ರ ಹರಿದ ಗಾಳಿಪಟದಂತೆ ಆಗುತ್ತದೆ ಅನ್ನಿಸಿತು. ಹೆಂಡತಿಯ ಅಷ್ಟೂ ಸಂಬಳ ನನಗೇ ಬೇಕು ಎಂದು ಅದೆಷ್ಟೋ ಗಂಡುಗಳು ಮದುವೆಯ ನಂತರ ರಂಪ ಮಾಡಿದ ಕಥೆಗಳೂ ಗೊತ್ತಿದ್ದವು. ಆದರೆ, ಈಗಲೇ ನನಗೆ ಮದುವೆ ಬೇಡ ಎಂದು ನೇರವಾಗಿ ಹೇಳಿ ಹೆತ್ತವರಿಗೆ ಬೇಸರ ಮಾಡಲು ಇಷ್ಟವಿರಲಿಲ್ಲ. ಆಗ ನಾನೇನು ಮಾಡ್ತಿದ್ದೆ ಗೊತ್ತೆ? ಗಂಡಿನ ಕಡೆಯವರು ಬರ್ತಿದಾರೆ ಅನ್ನುವ ದಿನ ಬಾಬ್ಕಟ್ ಮಾಡಿಸಿಕೊಂಡು, ವಿಪರೀತ ಮಾಡ್ ಅನ್ನುವಂಥ ಡ್ರೆಸ್ ಹಾಕಿಕೊಂಡು ಅಥವಾ ಬಾಲ್ಡಿ ಮಾಡಿಸಿಕೊಂಡು ಹೋಗಿಬಿಡುತ್ತಿದ್ದೆ. ಈ ಅವತಾರದಲ್ಲಿ ನನ್ನನ್ನು ಕಂಡವರು, ಹುಡುಗಿ ಸರಿಯಿಲ್ಲ ಎಂದೋ, ಹುಡುಗಿ ಚೆನ್ನಾಗಿಲ್ಲ ಎಂದೋ ಕಾರಣ ಹೇಳಿ ಹೋಗಿಬಿಡುತ್ತಿದ್ದರು. ಒಂದು ಬಾರಿಯಂತೂ ನನ್ನನ್ನು ನೋಡಲು ಬಂದಿದ್ದವರು ಹೊರಡುವ ಮುನ್ನ ಅಪ್ಪನನ್ನು ಹೊರಗೆ ಕರೆದು-“ದೊಡ್ಡ ಹುಡುಗಿ ಬೇಡ. ಚಿಕ್ಕವಳನ್ನು ಮಾಡಿಕೊಡ್ತೀರಾ ನೋಡಿ’ ಎಂದುಬಿಟ್ಟಿದ್ದರು. ಇದನ್ನೇ ಪಾಯಿಂಟ್ ಥರಾ ಇಟ್ಕೊಂಡು ಒಬ್ಬಳು ತಂಗಿಗೆ ಮದುವೆ ಮಾಡಿಸಿದೆ. ಹೀಗೆ, ಮೊದಲಿನಿಂದಲೂ ಕಷ್ಟಗಳ ಮಧ್ಯೆಯೇ ಬೆಳೆದು ಬಂದೆನಲ್ಲ ಸಾರ್…ಅದೇ ಕಾರಣ ಇರಬಹುದು: ಎಲ್ಲರೊಂದಿಗೆ ರಾéಶ್ ಆಗಿ ನಡೆದುಕೊಳ್ಳುವುದು ಅಭ್ಯಾಸ ಆಗಿಹೋಯ್ತು. ಹೀಗೆಲ್ಲಾ ವರ್ತಿಸಬಾರದು ಅಂತ ತುಂಬಾ ಸಲ ಅಂದೊRಳ್ತಿದ್ದೆ. ಆದರೆ ಇದ್ದಕ್ಕಿದ್ದಂತೆಯೇ ಸಿಟ್ಟು ಬಂದು ಎಲ್ಲವೂ ಕೈ ಮೀರಿ ಹೋಗುತ್ತಿತ್ತು…’
ನಾನು ಹೇಳಬೇಕಿರುವುದೆಲ್ಲಾ ಮುಗೀತು ಎಂಬಂತೆ ಮೌನಿ ಯಾದಳು ಮಂಗಳಾ. ಆಕೆಯ ರಫ್ ಆ್ಯಂಡ್ ಟಫ್ ವರ್ತನೆ, ಪದೇ ಪದೆ ಬದಲಾಗುತ್ತಿದ್ದ ಗೆಟಪ್, ಕೆಲಸ ಕಳ್ಕೊàಬಾರದು ಎಂಬಂತೆ ಇನ್ನಿಲ್ಲದ ಶ್ರದ್ಧೆಯಿಂದ ದುಡಿಯುತ್ತಿದ್ದುದರ ಹಿಂದಿದ್ದ ರಹಸ್ಯವೆಲ್ಲಾ ಗೊತ್ತಾಯಿತು. ಕಾಯಿಲೆಯ ಸ್ವರೂಪ ಗೊತ್ತಾದರೆ ಚಿಕಿತ್ಸೆ ತುಂಬಾ ಸುಲಭ. “ಇನ್ನು ನಾಲ್ಕೇ ತಿಂಗಳಲ್ಲಿ ಡಿಪ್ರಶನ್ ಎಂಬ ಪದವೇ ಗೊತ್ತಿಲ್ಲದಂತೆ ನಿಮ್ಮನ್ನು ಬದಲಿಸ್ತೇನೆ. ಆರಾಂ ಆಗಿರಿ’ ಎಂದು ಧೈರ್ಯ ಹೇಳಿದ್ದೆ.
ಎಲ್ಲರ ನಿರೀಕ್ಷೆಯೂ ಉಲ್ಟಾ ಆಗುವಂತೆ ಅದೊಂದು ದಿನ ದಿಢೀರನೆ ನೌಕರಿ ಬಿಟ್ಟಳು ಮಂಗಳಾ, ಕಾರ್ಪೊರೇಟ್ ಕಂಪನಿಯ ಕೆಲಸವಲ್ಲವೇ? ಕೆಲವೇ ದಿನಗಳಲ್ಲಿ ಆಕೆ ಮರೆತೂ ಹೋದಳು. ನೋಡನೋಡುತ್ತಲೇ ಎರಡು ವರ್ಷಗಳು ಕಳೆದುಹೋದವು. ವಾರದ ಹಿಂದೆ ಅದೇ ಮಂಗಳಾ. ಬೆಂಗಳೂರಿನಲ್ಲಿ ಆಕಸ್ಮಿಕವಾಗಿ ಮೆಟ್ರೋ ಸ್ಟೇಷನ್ನಲ್ಲಿ ಸಿಕ್ಕಿಬಿಟ್ಟಳು. “ವಯಸ್ಸಾಯ್ತು ಅಲ್ವ ಸಾರ್, ಅದೇ ಕಾರಣದಿಂದ ಅಪ್ಪನಿಗೆ ಕೂಲಿ ಕೆಲಸ ಮಾಡಲು ಆಗ್ತಿರಲಿಲ್ಲ. ಕೊನೆಯ ತಂಗಿಯೂ ಮದುವೆ ವಯಸ್ಸಿಗೆ ಬಂದಿದ್ಲು. ಅಪ್ಪ-ಅಮ್ಮನಿಗೆ ಆಸರೆಯಾಗಿ ಮನೇಲಿ ಒಬ್ಬರು ಇರಲೇಬೇಕಿತ್ತು. ಹಾಗಾಗಿ ಕೆಲಸ ಬಿಟ್ಟೆ. ಸೇವಿಂಗ್ಸ್ ರೂಪದಲ್ಲಿ ದುಡ್ಡು ಸಿಕ್ತಲ್ಲ; ಅದರಲ್ಲಿ ನಾಲ್ಕು ಹಸು ತಗೊಂಡೆ. ಉಳಿದಿದ್ದ ಹಣದಲ್ಲಿ ತಂಗಿಯ ಮದುವೆ ಮಾಡಿದೆ. ಈಗ ಅಪ್ಪ ಕೂಲಿಗೆ ಹೋಗಲ್ಲ. ಬೆಳಗ್ಗಿಂದ ಸಂಜೆಯವರೆಗೆ ಹಸು ಮೇಯಿಸ್ತಾರೆ. ನಾನು-ಅಮ್ಮ ಮನೇಲಿದ್ದು ಹಾಲು ಮಾರ್ತೀವಿ. ಅಪ್ಪನಿಗೆ ಕಣ್ಣಿನ ಆಪರೇಷನ್ ಆಗಬೇಕಿತ್ತು. ಆಸ್ಪತ್ರೆಗೆ ಕರ್ಕೊಂಡು ಬಂದಿದೀನಿ. ಹಿಂದೊಮ್ಮೆ- “ಈ ಹೆಣ್ಣುಮಕ್ಕಳು ನಮ್ಮ ಪಾಲಿಗೆ ನೋವು ಕೊಡುವ ಹುಣ್ಣುಗಳು’ ಎಂದು ಅಪ್ಪ ಹೇಳಿದ್ದರು: ಇವತ್ತು ಅದೇ ಅಪ್ಪ, ನೀನು ನಮ್ಮ ಮನೆಯ ಲಕ್ಷ್ಮಿದೇವಿ ಮಗಳೇ. ಗಂಡು ಮಗನಿಗಿಂತ ಹೆಚ್ಚಾಗಿ ನೋಡಿಕೊಂಡಿದೀಯ. ನಿನ್ನ ಮದುವೇನ ನೋಡಿಬಿಟ್ರೆ ನೆಮ್ಮದಿಯಾಗಿ ಕಣ್ಮುಚ್ಚಬಹುದು ಅಂತಿದ್ದಾರೆ. ಇಷ್ಟು ದಿನ ಒಳ್ಳೇದು ಮಾಡಿದ ದೇವರು ಮುಂದೆಯೂ ಒಳ್ಳೆಯದು ಮಾಡ್ತಾನೆ ಎಂಬ ನಂಬಿಕೆಯಿದೆ. ನಾನು ಇಳಿಯೋ ಸ್ಟೇಷನ್ ಬಂತು ಸಾರ್. ಹೋಗಿಬತೇìನೆ…’ ಅಂದಳು.
“ನೀನು “ಮಂಗಳ’ ಅಲ್ಲಮ್ಮಾ. “ಶುಭಮಂಗಳ!’ ಒಳ್ಳೆಯವರಿಗೆ ಯಾವತ್ತೂ ಕೆಟ್ಟದಾಗೋದಿಲ್ಲ, ನೆಮ್ಮದಿಯಾಗಿರು’ ಎನ್ನುತ್ತಾ ಕೈಬೀಸಿದೆ…
ಎ.ಆರ್. ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ
RC 17: ಮತ್ತೆ ಒಂದಾದ ರಂಗಸ್ಥಳಂ ತಂಡ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ