ಕಾಲಾಂತರದಲ್ಲಿ ಕಳೆಗುಂದಿದ ಮುಂಬಯಿಯ ತಾಳಮದ್ದಳೆ
Team Udayavani, Nov 7, 2018, 6:25 AM IST
ಶಬ್ದಗಳ ಇಟ್ಟಿಗೆಗಳನ್ನು ಪೇರಿಸುತ್ತಾ, ತರ್ಕದ ಕಂಬಗಳನ್ನು ಊರುತ್ತಾ, ವಾದದ ಗೋಡೆಗಳನ್ನು ಕಟ್ಟುತ್ತ ವಿಚಾರದ ಕಿಟಿಕಿಯನ್ನು ತೆರೆಯುತ್ತಾ ಮಾತಿನ ಮನೆಯಾಗಿ ಬೆಳೆೆದು ನಿಂತ ತಾಳಮದ್ದಳೆಯೆಂಬ ಕಲಾಪ್ರಕಾರವನ್ನು ಮುಂಬಯಿಯಲ್ಲಿ ಪಸರಿಸಿದ ಶ್ರೇಯಸ್ಸು ಇಲ್ಲಿನ ತಾಳಮದ್ದಳೆಯ ಅರ್ಥದಾರಿಗಳಿಗೆ ಸಲ್ಲುತ್ತದೆ. ಮುಂಬಯಿಯ ತಾಳಮದ್ದಳೆ ರಂಗಕ್ಕೆ ಸಾಧಾರಣ ನೂರ ಇಪ್ಪತ್ತು ವರ್ಷಗಳ ಇತಿಹಾಸವಿದೆ.ವಿದ್ವಾಂಸರಾದ ಅನೇಕ ಮಂದಿ ತಾಳಮದ್ದಳೆಯ ಕಲಾವಿದರು ಮುಂಬಯಿಯಲ್ಲಿ ಕ್ರಿಯಾಶೀಲ ರಾಗಿದ್ದರು. ಅನೇಕ ಯಕ್ಷಗಾನ ಸಂಘಗಳು ಅಸ್ತಿತ್ವದಲ್ಲಿದ್ದವು.ತವರೂರಿನಿಂದ ಯಾರಾದರೂ ಅರ್ಥಧಾರಿಗಳು ಮುಂಬಯಿಗೆ ಸ್ವಕಾರ್ಯ ನಿಮಿತ್ತ ಬಂದರೆ ಅವರಿಗಾಗಿ ತಾಳಮದ್ದಳೆ ಕಾರ್ಯಕ್ರಮ ಏರ್ಪಾಡು ಆಗುತ್ತಿತ್ತು. ವಿಶೇಷವೆಂದರೆ ಯಾವ ಕಲಾವಿದರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಸಂಭಾವನೆ ಪಡೆಯುತ್ತಿರಲಿಲ್ಲ.
ಕಳೆದ ಶತಮಾನದ ಮಧ್ಯಭಾಗದಲ್ಲಿ ಊರಿನಿಂದ ಹರಿದಾಸರು, ಯಕ್ಷಗಾನ ಬಯಲಾಟ ಕಲಾವಿದರು ಅಪರೂಪವಾಗಿ ಭಾಗವಹಿಸಿದಾಗ ಅವರಿಗೆ ಸಂಭಾವನೆ ಕೊಡಲಾಗುತ್ತಿತ್ತು .ದಿ. ಪೋಲ್ಯ ದೇಜಪ್ಪ ಶೆಟ್ಟಿ, ಸೀತಾನದಿ ಗಣಪಯ್ಯ ಶೆಟ್ಟಿ ,ದಿ. ಮಂದಾರ ಕೇಶವ ಭಟ್ ಇವರೆಲ್ಲ ಮುಂಬಯಿಗೆ ಬಂದವರು ಇಲ್ಲಿನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಒತ್ತಾಯ ಪೂರ್ವಕ ಸಂಭಾವನೆ ಕೊಟ್ಟರೂ ಪಡೆಯುತ್ತಿರಲಿಲ್ಲ. ಹಾಗಾಗಿ ಹಬ್ಬಗಳ ದಿನಗಳಲ್ಲಿ ತಾಳಮದ್ದಳೆ ಇಡೀ ರಾತ್ರಿ ಜರಗುತ್ತಿತ್ತು.
ದಿ. ಬೋಜರಾಜ ಶೆಟ್ಟಿ ಮುದ್ರಾಡಿ , ಅಡ್ವೆ ವಾಸು ಶೆಟ್ಟಿ ,ಮಾಣಿಯೂರು ಶಂಕರ ಶೆಟ್ಟಿ ,ಕೊಜಕೊಳಿ ಸದಾಶಿವ ಶೆಟ್ಟಿ , ಬ್ರಹ್ಮಾವರ ರಘರಾಮ ಶೆಟ್ಟಿ , ಕಾಸರಗೋಡು ಬಾಬು ನಾಯಕ್ ಮೊದಲಾದ ತಾಳಮದ್ದಳೆಯ ಕಲಾವಿದರು ಇದ್ದರು, ಯಾರೂ ಸಂಭಾವನೆ ಪಡೆಯುತ್ತಿರಲಿಲ್ಲ. ಚಂಡೆ ಮದ್ದಳೆ ಸಾಗಾಟ ಮತ್ತು ಅದನ್ನು ನುಡಿಸುವವರಿಗೆ ಗೌರವಧನ ಕೊಡುತ್ತಿದ್ದರು.ಆದ್ದರಿಂದ ತಾಳಮದ್ದಳೆಗೆ ವಿಶೇಷ ಖರ್ಚು ಆಗುತ್ತಿರಲಿಲ್ಲ. ಬಯಲಾಟದ ವೇಷದಾರಿಗಳಲ್ಲಿ ಯಾರೂ ತಾಳಮದ್ದಳೆಯಲ್ಲಿ ಭಾಗವಹಿಸುತ್ತಿರಲಿಲ್ಲ. ಯಾವಾಗ “ಹರಿದಾಸ’ರ ಪ್ರವೇಶ ಟೆಂಟು ಮೇಳಗಳಿಗೆ ಆಯಿತೋ ಅಂದಿನಿಂದ ಬಯಲಾಟ, ಹರಿಕಥೆ ,ತಾಳಮದ್ದಳೆ ಮೂರೂ ರಂಗಗಳಲ್ಲಿ ಹರಿದಾಸರು ವಿಜೃಂಭಿಸಲಾರಂಬಿಸಿದ್ದೇ ಬಯಲಾಟ ಕಲಾವಿದರೂ ಪ್ರಯತ್ನಪಟ್ಟು ತಾಳಮದ್ದಳೆ ರಂಗದಲ್ಲಿ ಪ್ರಾವೀಣ್ಯ, ಪ್ರಾಧಾನ್ಯ ಪಡೆಯಲಾರಂಬಿಸಿದರು. ಇದರ ಪರಿಣಾಮವೇ ತಾಳಮದ್ದಳೆ ಕಲಾರಂಗ ಗಳಿಕೆಯ ರಂಗವಾಯಿತು. ಮೇಲೆ ಹೆಸರಿಸಿದ ಕಲಾವಿದರು ವಯೋಬಾಹುಳ್ಯದಿಂದ ಕಾಲಗರ್ಭಕ್ಕೆ ಸರಿದರು. ಮುಂಬಯಿ ಯಕ್ಷರಂಗದ ತಾಳಮದ್ದಳೆ ಕ್ಷೇತ್ರದ ಮೇರು ಕಲಾವಿದ ಅಡ್ವೆ ವಾಸು ಶೆಟ್ಟಿಯವರು 15.11.2003ರಂದು ದೈವಾಧೀನರಾದ ಬಳಿಕ ಮುಂಬಯಿ ತಾಳಮದ್ದಳೆ ರಂಗ ಕ್ಷೀಣವಾಯಿತು. ಅಳಿದ ಹಿರಿಯ ಕಲಾವಿದರ ಸ್ಥಾನ ತುಂಬುವಲ್ಲಿ ಕಲಾವಿದರ ಉದಯವಾಗದೇ ಇದ್ದದ್ದು ಇದಕ್ಕೆ ಕಾರಣ.
ತಾಳಮದ್ದಳೆಯಲ್ಲಿ ಅರ್ಥ ವಿವರಿಸುವ ಅರ್ಹತೆ ಬರಬೇಕಾದರೆ ಕನ್ನಡದಲ್ಲಿ ಮಾತಾಡಲು ಬಂದರೆ ಸಾಲದು, ಸಿ.ಡಿ ಮತ್ತು ಯೂಟ್ಯೂಬ್ಗಳಲ್ಲಿ ಬರುತ್ತಿರುವ ತಾಳಮದ್ದಳೆ ಕೇಳಿದರೆ ಸಾಲದು. ಅರ್ಥದಾರಿಗೆ ರಾಮಾಯಣ, ಮಹಾಭಾರತ ಭಾಗವತ , ಜೈಮಿನಿ ಭಾರತ ಇತ್ಯಾದಿ ಗ್ರಂಥಗಳ ಅಧ್ಯಯನದ ಜೊತೆಗೆ ಪ್ರಸಂಗ ಸಾಹಿತ್ಯದ ಅನುಭವ ಇರಬೇಕು. ನಿರ್ವಹಿಸಲಿರುವ ಪಾತ್ರದ ಬಗ್ಗೆ ಉತ್ತಮ ಅಧ್ಯಯನಶೀಲರಾದರೆ ಮಾತ್ರ ಸಾಧ್ಯ. ಈಗ ಮೊಬೈಲ್ ಯುಗದಲ್ಲಿ ಅಧ್ಯಯನದ ಅಭಾವದಿಂದಾಗಿ ಬಯಲಾಟದಲ್ಲಿ ಆಲಾಪನೆ ಮತ್ತು ಚಾಲು ಕುಣಿತವೆಂಬ ಗೀಳು ಪ್ರಾರಂಭವಾದ ಕಾರಣ ಮತ್ತು ಅರ್ಥ ವಿವರಣೆ ಕೆಲವೇ ಮಂದಿ ವಿದ್ವಾಂಸರ ವಶವಾದ್ದರಿಂದ ತಾಳಮದ್ದಳೆ ಕಲಾವಿದರ ಸಂಭಾವನೆ ಒಂದು ಸಾವಿರದಿಂದ ಎರಡೂವರೆ ಸಾವಿರದವರೆಗೆ ಏರಿದೆ.
ಮುಂಬಯಿಯಲ್ಲಿ ಸಮರ್ಥ ತಾಳಮದ್ದಳೆಯ ಕಲಾವಿದರು ಇಲ್ಲದೇ ಇರುವುದರಿಂದ ಊರಿನಿಂದ ತಾಳಮದ್ದಳೆ ತಂಡವನ್ನು ತರಿಸಿ ಮುಂಬಯಿಯಲ್ಲಿ ಉಚಿತವಾಗಿ ಪ್ರದರ್ಶನ ನೀಡುವ ಪರಿಸ್ಥಿತಿ ಬಂತು. ಪ್ರೇಕ್ಷಕರಿಗೆ ಚಹಾ, ತಿಂಡಿ ಹಾಗೂ ಕೆಲವೊಮ್ಮೆ ಊಟವನ್ನೂ ಒದಗಿಸಲಾಗುತ್ತಿದೆ. ಇದರಿಂದಾಗಿ ಮುಂಬಯಿ ತಾಳಮದ್ದಳೆ ರಂಗ ಪೂರ್ಣವಾಗಿ ಸ್ಥಗಿತವಾಗಿ ಊರಿನ ಕಲಾವಿದರ ಸಮಾವೇಶದಿಂದ ವರ್ಷಕ್ಕೆ ಸುಮಾರು ನಲ್ವತ್ತು ತಾಳಮದ್ದಳೆ ನಡೆಯುತ್ತಿದೆ. ಒಂದು ಕಾಲದಲ್ಲಿ ಏನೂ ಖರ್ಚಿಲ್ಲದೆ ಉತ್ಸಾಹದಿಂದ ಮುಂಬಯಿಯಲ್ಲಿ ಸಾದರಗೊಳ್ಳುತ್ತಿದ್ದ ತಾಳಮದ್ದಳೆ ಕಾರ್ಯಕ್ರಮಕ್ಕೆ ಈಗ ಮೂವತ್ತು-ನಲ್ವತ್ತು ಸಾವಿರ ರೂಪಾಯಿ ಖಚ್ಚಾಗುತ್ತಿದೆ ಎಂಬುದು ಆಶ್ಚರ್ಯವೆನಿಸಿದರೂ ವಾಸ್ತವವಾಗಿದೆ.
ಯಕ್ಷಗಾನ ಕಾಲಮಿತಿಗೆ ಒಳಪಟ್ಟ ಮೇಲೆ ಮೂರುಗಂಟೆಯ ಒಳಗೆ ನಾಲ್ಕು ಮಂದಿ ಅರ್ಥಧಾರಿಗಳು ನಾಲ್ಕು ಹಾಡುಗಳಿಗೆ ಅರ್ಥ ಹೇಳಿದರೂ ಎರಡು ಸಾವಿರ ರೂಪಾಯಿ ಸಂಭಾವನೆ ದೊರೆಯುತ್ತದೆ. ಈಗಲೂ ಮುಂಬಯಿಯಲ್ಲಿ ಸಮರ್ಥ ಅರ್ಥದಾರಿಗಳು ಇದ್ದಾರೆ. ಅವರಿಗೆ “ಮುಂಬಯಿ ಕಲಾವಿದರು’ ಎಂಬ ಹಣೆಪಟ್ಟಿ ಇರುವುದರಿಂದ ಮತ್ತು ಅವರು ಹವ್ಯಾಸಿ ಕಲಾವಿದರಾಗಿರುವುದರಿಂದ ಊರಿನ ಕಲಾವಿದರಿಗೆ ಸಿಗುವ ಪ್ರೋತ್ಸಾಹ ಸಿಗುತ್ತಿಲ್ಲ. ಮುಂಬಯಿಗೆ ಬರುವ ತಾಳಮದ್ದಲೆ ತಂಡಗಳಲ್ಲಿ ಯುವ ಕಲಾವಿದರ ತಂಡ, ಪ್ರೌಢ ಕಲಾವಿದರ ತಂಡ, ಮಹಿಳಾ ಕಲಾವಿದರ ತಂಡ ಎಂಬ ವಿಭಾಗಗಳಿವೆ. ಇನ್ನು ಬಾಕಿ ಇರುವುದು ಮಕ್ಕಳ ತಂಡ , ವೃದ್ದರ ತಂಡಗಳು. ಆದರೂ ಮುಂಬಯಿಗೆ ಬರುವ ಎಲ್ಲ ವಯೋಮಾನದ ಕಲಾವಿದರಿಗೆ ಅವಕಾಶ ಕಲ್ವಿಸಿದ ಶ್ರೇಯಸ್ಸು ಇಲ್ಲಿನ ಸಂಯೋಜಕರಿಗೆ ಸಲ್ಲುತ್ತದೆ. ತಾಳಮದ್ದಳೆಗೆ ಊರಿನಲ್ಲೂ ಅಪಾರ ಅವಕಾಶವಿರುವುದರಿಂದ ಪ್ರಸಿದ್ಧ ಕಲಾವಿದರಿಗೆ ಮುಂಬಯಿಗೆ ಬರಲು ಸಮಯವೇ ಸಿಗುವುದಿಲ್ಲ. ಆಟ-ಕೂಟಗಳಲ್ಲಿ ಬಿಡುವಿಲ್ಲದೆ ದುಡಿಯುವ ಕಲಾವಿದರನ್ನು ಆಮಂತ್ರಿಸಿದರೆ ಮೊದಲು ಡೈರಿ ತೆರೆದು ನೋಡಿ ಬಳಿಕವೇ ಒಪ್ಪುತ್ತಾರೆ. ಹೋಗಿ ಬರುವ ಪ್ರಯಾಣ ವೆಚ್ಚ , ವಸತಿ , ಉತ್ತಮ ಊಟದ ಜೊತೆಯಲ್ಲಿ ಗರಿಷ್ಟ ಸಂಭಾವನೆ ಕೊಡಬೇಕು. ಕೆಲವು ಕಲಾವಿದರು ಸ್ಟಾರ್ವ್ಯಾಲ್ಯೂ ಪಡೆದಿದ್ದಾರೆ. ಅವರ ಪ್ರಮಾಣ ವಿಮಾನದಲ್ಲೇ ಇರುವುದರಿಂದ ಸಂಭಾವನೆ ಜೊತೆಯಲ್ಲಿ ವಿಮಾನಯಾನದ ವೆಚ್ಚವನ್ನೂ ಬರಿಸುವ ಮುಂಬಯಿ ಕಲಾಭಿಮಾನಿಗಳ ಔದಾರ್ಯ ಸದಾ ಸ್ಮರಣೀಯ.
ಕೋಲ್ಯಾರು ರಾಜು ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ
ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…
Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”
World Water Day: ಜುಳು ಜುಳು ಸದ್ದೇಕೆ ಉರಿ ಮೌನ
ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫಕೀರ
MUST WATCH
ಹೊಸ ಸೇರ್ಪಡೆ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ