ಆಧುನಿಕತೆಯ ಅಂಧಕಾರಕ್ಕೊಂದು ನಕ್ಷತ್ರ ಕಂದೀಲು!
Team Udayavani, Nov 15, 2018, 2:22 AM IST
ಹಲವು ಮಕ್ಕಳು ಒಮ್ಮೆಯೂ ಕತ್ತೆತ್ತಿ ಆಕಾಶದ ಕಡೆ ನೋಡಿರಲಿಲ್ಲ. ಪ್ರಜ್ವಲಿಸುವ ಮರ್ಕ್ಯುರಿ, ಸೋಡಿಯಂ ಲ್ಯಾಂಪಿನ ದೀಪಗಳ ಪ್ರಭಾವಳಿಯ ಆಚೆ ಅವರಿಗೆಂದೂ ಕತ್ತೆತ್ತಿ ನೋಡುವ ಅಗತ್ಯ ಬಿದ್ದಿರಲಿಲ್ಲ. ನೋಡುವ ಪ್ರಯತ್ನ ಮಾಡಿದ್ದರೂ ಅವರಿಗೆ ಪಟ್ಟಣದ ಪ್ರಖರ ದೀಪಗಳ ನಡುವೆ ಏನೂ ಕಾಣುತ್ತಲೂ ಇರಲಿಲ್ಲ. ಅವರನ್ನು ಊರಿನ ಹೊರವಲಯಕ್ಕೆ ಕರೆದೊಯ್ದು ಅವರಿಗೆ ಆಕಾಶ, ನಕ್ಷತ್ರ ಪುಂಜಗಳು, ಗ್ರಹಗಳನ್ನು ಪರಿಚಯಿಸುವ ಕೆಲಸವನ್ನು ಮಾಡಲು ಯಾಂತ್ರಿಕ ಬದುಕಿನಲ್ಲಿ ತಂದೆ-ತಾಯಿಗಳಿಗೆ ಪುರಸೊತ್ತಾದರೂ ಎಲ್ಲಿ?
ಇತ್ತೀಚೆಗೆ ಒಮ್ಮೆ ಯಾವುದೋ ಕಾರಣಕ್ಕೆ ವಿದ್ಯುತ್ ಸ್ಥಗಿತಗೊಂಡು ಇಡೀ ಊರು ಕತ್ತಲಲ್ಲಿ ಮುಳುಗಿದ ಒಂದು ರಾತ್ರಿ. ಇಡೀ ಊರಲ್ಲಿದ್ದ ಯುಪಿಎಸ್ಗಳೆಲ್ಲಾ ಬೆಳಗಿನಿಂದ ಉರಿದು ಖಾಲಿಯಾಗಿದ್ದವು. ಮನೆಗಳಲ್ಲಿ ಟಿವಿಯ ಸದ್ದಿಲ್ಲದೆ ಒಂದು ರೀತಿಯ ಪ್ರಶಾಂತ ಮೌನ ಆವರಿಸಿತ್ತು. ಮನೆಗಳು ಮಾತ್ರವಲ್ಲ, ಸುತ್ತಮುತ್ತಲಿನ ಪರಿಸರವೂ ಸಹ ನೀರವ ಮೌನದಲ್ಲಿ ಮುಳುಗಿ ಹೋಗಿತ್ತು. ಮಿಕ್ಸಿ, ಗ್ರೈಂಡರ್ಗಳ ಸದ್ದಿಲ್ಲ. ಸುತ್ತಮುತ್ತಲಿನ ಸಾಮಿಲ್, ಪ್ಲೇನಿಂಗ್ ಮಿಲ್ಗಳ ಕರ್ಕಶ ಶಬ್ದವಿಲ್ಲ. ಸುಮಾರು 30 ವರ್ಷಗಳ ಹಿಂದೆ ಆಧುನಿಕತೆ ಧಾಂಗುಡಿ ಇಡದ ಆ ಕಾಲದ ಗುಯ್ಗಾಡುವ ಮೌನರಾತ್ರಿಗಳ ನೆನಪಾಯಿತು.
ಆ ನೆನಪಿನಲ್ಲೇ ಮುಳುಗೇಳುತ್ತಾ ವಾಸ್ತವದತ್ತ ಗಮನ ಹರಿಸಿದಾಗ ಸುತ್ತಮುತ್ತಲಿನವರಾರಿಗೂ ಈ ತನ್ಮಯತೆ, ಪ್ರಶಾಂತತೆಯನ್ನು ಆಸ್ವಾದಿಸುವ ವ್ಯವಧಾನವಿರಲಿಲ್ಲ. ಕಾಲ ಗರ್ಭದೊಳಗೆ ಪಯಣಿ ಸುವ, ನೆನಪಿನಾಳಕ್ಕೆ ಇಳಿಯುವ ಪ್ರಶಾಂತ ಮನಸ್ಥಿತಿ ಇದ್ದಂತಿರಲಿಲ್ಲ. ಎಲ್ಲಾ ಏನೋ ಒಂದು ರೀತಿಯ ಚಡಪಡಿಕೆಯಲ್ಲಿದ್ದರು. ಹಲವು ಗೃಹಿಣಿಯರು ಕರೆಂಟ್ ಬರದಿದ್ದರೆ ಅಡುಗೆ ಆಗುವುದು ಯಾವಾಗ? ಅಯ್ಯೋ! ಹಾಳಾದ್ದು ಈ ಸೀರಿಯಲ್ ಮಿಸ್ಸಾಗಿ ಹೋಯಿತಲ್ಲ! ಹೀಗೆ ಅಂತ ಗೊತ್ತಿದ್ರೆ ನಾನು, ನಮ್ಮೆಜಮಾನರು ಸಿನಿಮಾಕ್ಕಾದರೂ ಹೋಗ್ತಿದ್ವಿ! (ಜನರೇಟರ್ ಇರುತ್ತಲ್ಲ!) ಎಂದು ಅಹನೆಯಿಂದ ಗೊಣಗುವವರೇ ಆಗಿದ್ದರು.
ಸ್ನೇಹಿತರೊಬ್ಬರ ಮನೆಯೊಳಗಿನ ಟಿವಿ, ಮಿಕ್ಸರ್, ಗ್ರೈಂಡರ್ ಮುಂತಾದ ಯಂತ್ರಗಳ ತರ ಮಕ್ಕಳೂ ಸ್ತಬ್ಧವಾಗಿಬಿಟ್ಟಿದ್ದರು. ಅಕ್ಕಪಕ್ಕದ ಮನೆ ಮಕ್ಕಳೂ ಸೇರಿದಂತೆ ಎಲ್ಲಾ ಒಂದೆಡೆ ಗರಬಡಿದವರಂತೆ ಕುಳಿತುಬಿಟ್ಟಿದ್ದರು. ಕಾಟೂìನ್ ಶೋ ನೋಡಲು ಟಿವಿ ಇಲ್ಲ, ಕಂಪ್ಯೂಟರ್ ಹಾಕಲು ಯುಪಿಎಸ್ ಖಾಲಿ! ವೀಡಿಯೋ ಗೇಮ್ ಆಡಲು ಸೆಲ್ ಡೌನ್! ಅಮ್ಮನ ಮೊಬೈಲ್ ಕಿತ್ಕೊಂಡು ಗೇಮ್ಸ್ ಆಡೋಣವೆಂದರೆ ಅದರಲ್ಲಿ ಬ್ಯಾಟರಿ ಒಂದೇ ಕಡ್ಡಿ ಇರುವುದು ಎಂದು ಅಮ್ಮ ಕಿತ್ತಿಟ್ಟುಕೊಂಡಿದ್ದಳು. ಹೊರಗೆ ರಸ್ತೆಯಲ್ಲಿ ಆಡೋಣವೆಂದರೆ ಕತ್ತಲು. ಎಷ್ಟೋ ವರ್ಷಗಳ ನಂತರ, ಪ್ರಾಯಶಃ ಕೆಲ ಮಕ್ಕಳು ಜೀವನದಲ್ಲಿ ಮೊದಲ ಬಾರಿಗೆ ಈ ತರಹ ಘೋರ ಅಂಧಕಾರದಲ್ಲಿ ಕುಳಿತಿರುವಂತೆ ಭಯಭೀತರಾಗಿದ್ದರು. ಯಾವುದೋ ತೀವ್ರ ಬಿಕ್ಕಟ್ಟಿಗೆ ಒಳಗಾದವರಂತೆ ಆರ್ತರಾಗಿ ಕುಳಿತುಬಿಟ್ಟಿದ್ದರು ಈ ಮಕ್ಕಳು! “ಏನ್ ಮಾಡ್ತಿದೀರ
ಎಲ್ಲಾ?’ ಎಂದು ಪ್ರಶ್ನಿಸಿದರೆ “ಕರೆಂಟೇ ಇಲ್ಲ, ಏನು ಮಾಡೋದು? ಸುಮ್ನೆ ತೂಕಡಿಸುತ್ತಾ ಕೂತಿದೀವಿ’ ಅಂದ್ಲು ಒಬ್ಬಳು ಪುಟಾಣಿ.
ಯಾಕೆ ? ಯಾವುದಾದರೂ ಹಾಡು ಹೇಳಿ ಅಂದೆ. ಸಿನಿಮಾ ಹಾಡು ಬಿಟ್ಟರೆ ಬೇರೆ ಯಾವುದೇ ಭಕ್ತಿಗೀತೆಯಾಗಲೀ, ಜನಪದ ಗೀತೆಯಾಗಲೀ ಯಾರಿಗೂ ಗೊತ್ತಿರಲಿಲ್ಲ. ಒಬ್ಬರಿಗೊಬ್ಬರು ಒಗಟು ಹೇಳಿ ಅಂದೆ. ಎಲ್ಲೋ ಒಂದೆರಡು ಒಗಟು ಈಚೆ ಬಂದವೇ ಹೊರತು ಮತ್ತೆ ಎಲ್ಲಾ ಮುಖ ಒಣಗಿಸಿಕೊಂಡು ಕೂತವು. ಗಾದೆಯಂತೂ ಹೊರಡಲೇ ಇಲ್ಲ. ಕವಡೆ, ಪಗಡೆ, ಅಳುಗುಣಿ ಮಣೆ ಏನಾದರೂ ಇದ್ರೆ ತಗೊಂಡು ಬನ್ನಿ ಎಂದೆ. ಅವೆಲ್ಲ ಏನು? ಎನ್ನುವಂತೆ ವಿಚಿತ್ರವಾಗಿ ಮುಖ ಮುಖ ನೋಡಿದವು. ಇವೆಲ್ಲಾ ಏನೂ ಇಲ್ಲ ಎಂದು ತಲೆ ಅಲ್ಲಾಡಿಸಿದವು. ಕೊನೆಗೆ ಒಂದು ಮಗು ಎದ್ದು ಹೋಗಿ ಅವರಪ್ಪ ಆಡುತ್ತಿದ್ದ ಇಸ್ಪೀಟ್ ಪ್ಯಾಕ್ ತಂದಿತು. ಇದು ಬೇಡ, ಮಕ್ಕಳು ಇಸ್ಪೀಟ್ ಆಡಬಾರದು ಎಂದು ಬುದ್ದಿ ಹೇಳಿದಾಗ ಅವು ಪಿಳಿಪಿಳಿ ನೋಡುತ್ತ ಕುಳಿತುಕೊಂಡವು. ಏನೋ ಯೋಚಿಸಿ “ಸರಿ ಬನ್ನಿ!’ ಎಂದು ಅವರನ್ನು ಕರೆದುಕೊಂಡು ಟೆರೇಸ್ ಮೇಲೆ ಬಂದೆ. ಮೇಲೆ ಶುಭ್ರ ಆಕಾಶದ ತುಂಬಾ ಪಳಗುಟ್ಟುವ ನಕ್ಷತ್ರಗಳು, ಗ್ರಹಗಳು! ಹಾಲುಚೆಲ್ಲಿದಂತೆ ದಕ್ಷಿಣದಿಂದ ಉತ್ತರಕ್ಕೆ ಹಾದು ಹೋಗಿದ್ದ ಕ್ಷೀರಪಥ! ಮಕ್ಕಳೇ ಮೇಲೆ ನೋಡಿ ಎಂದೆ. ವಾಹ್! ಆಕಾಶದಲ್ಲಿ ಇಷ್ಟೊಂದು ನಕ್ಷತ್ರ ಇರುತ್ತಾ? ಎಂದು ಉದ್ಗರಿಸಿ ಮಕ್ಕಳು ಆಶ್ಚರ್ಯಪಟ್ಟರು. ಅಲ್ಲಿ ಯಾವ್ಯಾವ ನಕ್ಷತ್ರ ಇವೆ ಎಂದು ಯಾರಾದರೂ ಗುರುತಿಸಿ ಹೇಳ್ತೀರಾ? ಎಂದು ಕೇಳಿದೆ. ಅವರ್ಯಾರಿಗೂ ಯಾವ ನಕ್ಷತ್ರದ ಪರಿಚಯವೂ ಇರಲಿಲ್ಲ.
ವಿಜ್ಞಾನ ಪುಸ್ತಕದಲ್ಲಿ ಓದಿದ ಧೃವ ನಕ್ಷತ್ರ, ಸಪ್ತರ್ಷಿಮಂಡಲ, ಶನಿ, ಗುರು, ಶುಕ್ರ ಮುಂತಾದ ಪ್ರಮುಖ ಆಕಾಶಕಾಯಗಳನ್ನು ಗುರುತಿಸಲೂ ಸಾಧ್ಯವಾಗಲಿಲ್ಲ. ಸಿಂಹ, ವೃಷಿcಕ ರಾಶಿಯಲ್ಲಿನ ನಕ್ಷತಗಳನ್ನು ನೋಡಿ ಮಕ್ಕಳು ಅಚ್ಚರಿಪಟ್ಟರು. ಕುಂತಿ, ನಕುಲ, ದ್ರೌಪದಿ ಮೊದಲಾದ ಪುಂಜಗಳ ಹೆಸರಿನ ಹಿಂದಿನ ಗ್ರೀಕ್ ಪುರಾಣದ ದಂತ ಕತೆಗಳನ್ನು ಕೇಳಿ ಖುಷಿಪಟ್ಟರು. ಹಲವು ಮಕ್ಕಳು ಜೀವಮಾನದಲ್ಲಿ ಒಮ್ಮೆಯೂ ಕತ್ತೆತ್ತಿ ಆಕಾಶದ ಕಡೆ ನೋಡಿರಲಿಲ್ಲ. ಆಧುನಿಕತೆಯ ಪ್ರತೀಕವಾದ ಪ್ರಜ್ವಲಿಸುವ ಮಕ್ಯುìರಿ, ಸೋಡಿಯಂ ಲ್ಯಾಂಪಿನ ದೀಪಗಳ ಪ್ರಭಾವಳಿಯ ಆಚೆ ಅವರಿಗೆಂದೂ ಕತ್ತೆತ್ತಿ ನೋಡುವ ಅಗತ್ಯ ಬಿದ್ದಿರಲಿಲ್ಲ. ಹಾಗೊಂದು ವೇಳೆ ನೋಡುವ ಪ್ರಯತ್ನ ಮಾಡಿದ್ದರೂ ಅವರಿಗೆ ಪಟ್ಟಣದ ಪ್ರಖರ ದೀಪಗಳ ನಡುವೆ ಏನೂ ಕಾಣುತ್ತಲೂ ಇರಲಿಲ್ಲ. ಅವರನ್ನು ಊರಿನ ಹೊರವಲಯಕ್ಕೆ ಕರೆದೊಯ್ದು ಅವರಿಗೆ ಆಕಾಶ, ನಕ್ಷತ್ರಪುಂಜಗಳು, ಗ್ರಹಗಳನ್ನು ಪರಿಚಯಿಸುವ ಕೆಲಸವನ್ನು ಮಾಡಲು ಯಾಂತ್ರಿಕ ಬದುಕಿನಲ್ಲಿ ತಂದೆ-ತಾಯಿಗಳಿಗೆ ಪುರಸೊತ್ತಾದರೂ ಎಲ್ಲಿ? ಸಾಲದ್ದಕ್ಕೆ ಅವರಿಗೆ ಅಂತಹ ಕನಿಷ್ಟ ಜ್ಞಾನ ಇರಬೇಕಲ್ಲ!
ಆ ಮಕ್ಕಳಲ್ಲಿ ಒಂದು ಹುಡುಗಿ ತೀರಾ ಚಿಂತಿತಳಾಗಿದ್ದಳು. ಅವಳೊಂದು ಅಸೈನ್ಮೆಂಟ್ ಮಾಡಬೇಕಿತ್ತು. ಅದಕ್ಕೆ ಕರೆಂಟ್ ಇಲ್ಲವಲ್ಲ ಎಂಬ ಯೋಚನೆ ಅವಳದು. ಅಸೈನ್ಮೆಂಟ್ ವಿಷಯ ಏನು? ಎಂದು ಕೇಳಿದೆ. ಅದಕ್ಕವಳು ನೆಲದೊಳಗಿನ ಸಂಪತ್ತುಗಳು, ಭೂ ಸಂಪನ್ಮೂಲಗಳ ಸುಸ್ಥಿರ ಬಳಕೆ ಹಾಗೂ ಜಮೀನಿನ ಬಳಕೆ ಕುರಿತ ಜನಜನಿತ ಜ್ಞಾನ-ಈ ಮೂರು ವಿಷಯದಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ? ಎಂದು ಕೇಳಿದಳು. ನಾನು ಕೊನೆಯದನ್ನು- ಜಮೀನು ಬಳಕೆ ಕುರಿತು ಜನಜನಿತ ಜ್ಞಾನದ ಬಗ್ಗೆ ಅಸೈನ್ಮೆಂಟ್ ಬರೆಯುವಂತೆ ಸೂಚಿಸಿದೆ. ಅದಕ್ಕೆ ಇಂಟರ್ನೆಟ್ನಲ್ಲಿ ವಿಷಯ ಸಿಗುತ್ತಾ?ಎಂದು ಕೇಳಿದಳು. ಈ ವಿಷಯಕ್ಕೆ ಇಂಟರ್ನೆಟ್ನಲ್ಲಿ ಹೆಚ್ಚಿನ ವಿಷಯ ಸಿಗಲಾರದು. ನೀವೇ ಕೆಲವು ಕೃಷಿಕರನ್ನ ಸಂಪರ್ಕಿಸಿ ಮಾಹಿತಿ ಸಂಗ್ರಹಿಸಬೇಕು ಎಂದು ಹೇಳಿದಾಗ ಆ ಹುಡುಗಿ ಅಯ್ಯೋ ಅದನ್ನೆಲ್ಲಾ ಯಾರು ಮಾಡ್ತಾರೆ? ಎಂದು ಮುಖ ಮುರಿದಳು.
ಈ ಮಕ್ಕಳು ಬೆಳೆಯುತ್ತಿರುವ ಪರಿ, ಅವರ ಧೋರಣೆಗಳನ್ನು ಕಂಡು ಗಾಬರಿ ಆಯಿತು. ಆಧುನಿಕತೆ, ನಾಗರಿಕತೆಯ ಸೌಲಭ್ಯಗಳು ಹಾಗೂ ಪರಿಕರಗಳಿಗೆ ಒಗ್ಗಿಕೊಂಡಿರುವ ನಮ್ಮ ಮಕ್ಕಳಿಗೆ ಅದಿಲ್ಲದಿದ್ದರೆ ಅರೆಕ್ಷಣವೂ ಜೀವಿಸಲು ಸಾಧ್ಯವಿಲ್ಲ ಎಂಬಂತಾಗಿದೆ. ನವಮಾಧ್ಯಮಗಳ ಪ್ರಭಾವದಿಂದಾಗಿ ನಮ್ಮ ಮಕ್ಕಳು ಪ್ರಕೃತಿಯ ವಿಸ್ಮಯಗಳನ್ನು ನೋಡುವುದನ್ನು, ಅವುಗಳಿಗೆ ಸ್ಪಂದಿಸುವ ಸಹಜಗುಣವನ್ನು ಮರೆತೇ ಹೋಗಿ ಕೀ ಕೊಟ್ಟ ಯಂತ್ರಗಳಾಗಿದ್ದಾರೆ. ಆಧುನಿಕ ಮಾಧ್ಯಮಗಳಿಗೆ ಅತಿಯಾಗಿ ತೆರೆದುಕೊಂಡ ಪರಿಣಾಮವಾಗಿ ವಯಸ್ಸಿಗೆ ಮೀರಿದ ಪ್ರಬುದ್ದತೆಯನ್ನು ರೂಢಿಸಿಕೊಂಡು ಮಕ್ಕಳಲ್ಲಿರಬೇಕಾದ ಸಹಜ ಕುತೂಹಲ, ಮುಗ್ಧತೆ ಮುಕ್ಕಾಗಿಹೋಗಿದೆ. ಗಿಡ, ಮರ, ಹಕ್ಕಿ, ಪಕ್ಷಿ, ಬೆಟ್ಟ, ಗುಡ್ಡ, ಆಕಾಶ, ನಕ್ಷತ್ರಗಳೆಲ್ಲಾ ವೀಡಿಯೋ ಗೇಮಿನ ತ್ರೀಡಿ ಚಿತ್ರಗಳಾಗಿ ಸ್ಪಂದನೆಯನ್ನೇ ಕಳೆದುಕೊಂಡಿವೆ. ಯಂತ್ರ, ತಂತ್ರಜ್ಞಾನ ಸ್ಥಬ್ಧವಾದರೆ ಯುವ ಪೀಳಿಗೆ ಜೀವಂತಿಕೆಯನ್ನೇ ಕಳೆದುಕೊಳ್ಳುವ ಸ್ಥಿತಿ ತಲುಪಿರುವುದು ಘೋರ ದುರಂತವೇ ಸರಿ!
ಅಪ್ಪ, ಅಮ್ಮ, ಗುರುಗಳು ಮಕ್ಕಳಿಗೆ ನಮ್ಮ ಪರಂಪರೆ, ದೇಸೀ ಜ್ಞಾನ ಹಾಗೂ ಪ್ರಕೃತಿಯ ರಹಸ್ಯಗಳನ್ನು ಶೋಧಿಸುವ ಮತ್ತು ಅವುಗಳಲ್ಲಿ ತಾದ್ಯಾತ್ಮ ಬೆಳೆಸಿಕೊಳ್ಳುವ ಪಾಠ ಹೇಳಿಕೊಡಬೇಕಿದೆ. ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಅವರಿಗೆ ಈ ಅಧುನಿಕ ಬೆಳಕಿನಾಚೆಯ ಪ್ರಖರ ನಕ್ಷತ್ರ ದರ್ಶನ ಮಾಡಿಸಬೇಕಿದೆ.
ತುರುವೇಕೆರೆ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್ ರೋಲ್ ನಲ್ಲಿ ಫಾಫಾ
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ