ಜೀವ ವೈವಿಧ್ಯತೆ ರಕ್ಷಣೆ ಆದ್ಯ ಕರ್ತವ್ಯ
Team Udayavani, Jan 6, 2019, 12:30 AM IST
ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯ ಮತ್ತು ಆಯಾ ರಾಜ್ಯ ಸರಕಾರದ ಅರಣ್ಯ ಇಲಾಖೆಯ ಮೂಲಕ ಸಂವಿಧಾನಬದ್ಧವಾಗಿ ಜೀವವೈವಿಧ್ಯತೆಯ ಸಂರಕ್ಷಣೆಯನ್ನು ಆದ್ಯ ಕರ್ತವ್ಯವಾಗಿ ಪರಿಗಣಿಸಿ ಸಂರಕ್ಷಿಸಬೇಕಾಗಿದೆ. ಮಾನವರಿಗೆ ಮಾತ್ರವಲ್ಲದೆ ಸಕಲ ಜೀವರಾಶಿಗಳಿಗೆ ಆಶ್ರಯ, ಆಹಾರ ನೀಡುವ ಜೀವ ವೈವಿಧ್ಯತೆ ಕುರಿತು ಹೆಚ್ಚುಹೆಚ್ಚು ಆಸಕ್ತಿ ಹೊಂದಬೇಕಿದೆ. ವಿನಾಶ ತಡೆದು ಪರಿಸರ ಸಹ್ಯ ವಿಕಾಸದತ್ತ ರಾಜಕಾರಣಿಗಳು, ತಂತ್ರಜ್ಞರು, ಸಾಮಾಜಿಕ ಸೇವಾಸಂಸ್ಥೆ ಪದಾಧಿಕಾರಿ ಮನಗಾಣಬೇಕು.
ಜಾಗತಿಕ ತಾಪಮಾನದ ವೈಪರೀತ್ಯದ ದುಷ್ಪರಿಣಾಮದಿಂದ ಸರ್ವಜೀವಿಗಳೂ ತತ್ತರಿಸುವ ದಿನಗಳು ದೂರವಿಲ್ಲ. ತಾಪಮಾನದ ವೈಪರೀತ್ಯ ತಡೆಗಟ್ಟುವ ಹಲವಾರು ಉಪಕ್ರಮಗಳು ಕೇವಲ ವೇದಿಕೆಗಳ ಭಾಷಣಗಳಿಗೆ ಸೀಮಿತವಾಗಿವೆ. ಪರಿಸರ ವಿಜ್ಞಾನಿಗಳ ಎಚ್ಚರಿಕೆ ನಮ್ಮ ಆಡಳಿತ ನಿರ್ವಹಿಸುವ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಕೇಳಿಸುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಹವಾಮಾನ ಬದಲಾಗುತ್ತಿದೆ ಎಂಬುದೊಂದು ಹೇಳಿಕೆ ಪ್ರಕಟವಾಗುತ್ತದೆ. ಹವಾಮಾನ ಬದಲಾಗಲು ಮಾನವರೂ ಮೂಲ ಕಾರಣ ಎನ್ನುವುದನ್ನು ಮರೆತರೆ?
ಭಾರತದಲ್ಲಿ ಸಮೃದ್ಧ ಅರಣ್ಯ ಪ್ರದೇಶವಿದೆ. ನದಿಗಳು ಸರ್ವ ಋತುವಿನಲ್ಲಿಯೂ ಹರಿಯುತ್ತವೆ. ಫಲವತ್ತಾದ ಕೃಷಿಯಂತೂ 130 ಕೋಟಿ ಜನ ಸಮುದಾಯಕ್ಕೆ ಆಹಾರ, ಧಾನ್ಯ, ತರಕಾರಿ, ಹಣ್ಣುಹಂಪಲು, ಖಾದ್ಯ ತೈಲ, ಸಾಂಬಾರು ಪದಾರ್ಥ ಒದಗಿಸುತ್ತಿದೆ. ವಿಪರ್ಯಾಸವೆಂದರೆ ಕೃಷಿಕ ರೈತ ಬಂಧು ವರ್ಗದವರು ಹವಾಮಾನ ಬದಲಾವಣೆಯ ತೀವ್ರ ದುಷ್ಪರಿಣಾಮ ಎದುರಿಸುವವರಾಗಿದ್ದಾರೆ. ಕೃಷಿಗೆ ಅಗತ್ಯವಿರುವ ನೀರಾವರಿ ಸಮರ್ಪಕವಾಗಿ ಸರ್ವ ಋತುಗಳಲ್ಲಿ ದೊರಕದಿರುವುದು ಕೃಷಿಕರಿಗೆ ಸವಾಲಾಗಿದೆ.
ಹವಾಮಾನ ವೈಪರೀತ್ಯವನ್ನು ಸ್ಥಳೀಯವಾಗಿ ಹೊಸ ವಿಧಾನಗಳಿಂದ ತಡೆಗಟ್ಟಬಹುದು. ಕೃಷಿಕರು, ಕೈಗಾರಿಕೋದ್ಯಮಿಗಳು ಮತ್ತು ಜನ ಸಾಮಾನ್ಯರು “ನೈಜ ಪರಿಸರ ರಕ್ಷಿಸಬೇಕು, ಪರಿಸರ ರಕ್ಷಣೆ ನಮ್ಮ ಧರ್ಮವಾಗಿದೆ’ ಎನ್ನುವ ಧ್ಯೇಯವನ್ನು ರೂಢಿಸಿಕೊಳ್ಳಬೇಕು. ಕನಿಷ್ಠ ನಿಯಮಾವಳಿಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರ ಜಂಟಿಯಾಗಿ ದೇಶದೆಲ್ಲೆಡೆ ತಾಪಮಾನ ವೈಪರೀತ್ಯ ತಡೆಗಟ್ಟಲು ರೂಪಿಸಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಲು ಪರಿಸರ, ಅರಣ್ಯ ಅಥವಾ ಜಿಲ್ಲಾಡಳಿತ ಆಡಳಿತಾಧಿಕಾರಿಗಳ “ಒಲ್ಲದ ಮನಸ್ಸು’ ಪರಿಸ್ಥಿತಿಯನ್ನು ತಿಳಿಗೊಳಿಸುವ ಬದಲಾಗಿ ಹದಗೆಡುವ ಸನ್ನಿವೇಶ ಉದ್ಭವಿಸಿದೆ.
ನೈಜ ಪರಿಸರ ಕಾಪಾಡದ ಸಮಾಜ, ಮುಂದೊಂದು ದಿನ ಬರಗಾಲ ಅಥವಾ ಅನಾವೃಷ್ಟಿ ಸಮಸ್ಯೆಗಳಿಂದ ತತ್ತರಿಸುವ ಮುನ್ಸೂಚನೆ ನಮ್ಮ ನೆರೆಹೊರೆಯಲ್ಲಿ ಕಾಣುವಂತಾಗಿದೆ. ಹೀಗಿದ್ದರೂ ಎಚ್ಚರಗೊಳ್ಳದ ಸಮಾಜ ಮತ್ತು ಜನಪ್ರತಿನಿಧಿಗಳನ್ನೊಳಗೊಂಡ ಸರಕಾರ ಅಥವಾ ಸಂಬಂಧಪಟ್ಟ ಅಧಿಕಾರಿಗಳು “ಪರಿಸ್ಥಿತಿ ಗಂಭೀರತೆಯನ್ನು’ ಅರ್ಥಮಾಡಿಕೊಂಡಿಲ್ಲ.
ನಮ್ಮ ಸುತ್ತಮುತ್ತಲಿನ ಪರಿಸರವನ್ನು “ಜೀವವೈವಿಧ್ಯ ತಾಣ’ ಎಂದು ಹೇಳಲಾಗುತ್ತದೆ. ಆದರೆ 30 ವರ್ಷಗಳ ಹಿಂದೆ ಕಂಡ ದೃಶ್ಯವನ್ನು ಇಂದು ನೋಡಲು ಅಸಾಧ್ಯ. ಸಂಪೂರ್ಣ ಬದಲಾಗಿರುವ ಸನ್ನಿವೇಶ ಚಿತ್ರಣ ಕಂಡು “ಹೀಗಾಯಿತೆ?’ಎಂದು ಮರುಗುತ್ತಿದ್ದೇವೆ. ಈಗಲಾದರೂ ಪರಿಸರ ರಕ್ಷಣೆ ನಮ್ಮೆಲ್ಲರದೆಂದು ತ್ರಿಕರಣಪೂರ್ವಕ ಪರಿಸರ ಪ್ರೀತಿ ರಕ್ತಗತಗೊಳಿಸಬೇಕಿದೆ.
ವನ್ಯ ಸಂಪತ್ತು ಪರಿಸರ ಠೇವಣಿ
ನಮ್ಮ ದೇಶ ಅಪಾರ ಸಸ್ಯಜೀವರಾಶಿ ಹೊಂದಿರುವ ಸಂಜೀವಿನಿ ಸ್ವರೂಪದಂತಿದೆ. ಸಸ್ಯಶಾಸ್ತ್ರ, ಜೀವಶಾಸ್ತ್ರ ಅಧ್ಯಯನಕ್ಕಾಗಿ ಸಂಶೋಧಕರಿಗೆ ಭಾರತದ ಜೀವ ವೈವಿಧ್ಯತೆ ಸದಾ ಪ್ರೇರಣೆ ನೀಡಿದೆ. ಕೃಷಿಕರಿಗೆ ಅರಣ್ಯ ಪ್ರದೇಶದಿಂದಾಗಿ ಕಾಲಕಾಲಕ್ಕೆ ಮಳೆ, ಬೆಳೆಗೆ ತಕ್ಕುದಾದ ಹವಾಮಾನ, ಅಂತರ್ಜಲ ಲಭ್ಯತೆ, ಹಸಿರು ಗೊಬ್ಬರ ದೊರಕುವುದು, ವನ ದೇವತೆಗೆ ಪೂಜೆ ಸಮರ್ಪಿಸುವ ಪದ್ಧತಿಯು ಭಾರತೀಯರ ಅರಣ್ಯ ಸಂರಕ್ಷಣೆಯ ಮಹತ್ವವನ್ನು ಇಂದಿಗೂ ತಿಳಿಸುವಂತಿದೆ. ಹುಣ್ಣಿಮೆ ಬೆಳದಿಂಗಳು “ವನ ಭೋಜನ’ ಸವಿಯುಂಡವರು ಪ್ರಕೃತಿಯ ಮಡಿಲಿನ ಆಹ್ಲಾದಕರ, ಹಿತಾನುಭವ ನೀಡುವ ಸನ್ನಿವೇಶವನ್ನು ಸದಾ ಸ್ಮರಿಸುತ್ತಿರುತ್ತಾರೆ. ಪ್ರಸಕ್ತ “ವನಭೋಜನ’ ಎಂದಾಕ್ಷಣ ಅರಣ್ಯಾಧಿಕಾರಿಗಳು ಪ್ರವೇಶಕ್ಕೆ ಅನುಮತಿ ನೀಡಲಾರರು. ಪ್ಲಾಸ್ಟಿಕ್ ಚೀಲ, ಬಾಟಲಿ, ಮಾದಕ ದ್ರವ್ಯಗಳು “ವನಭೋಜನ’ದಲ್ಲಿ ಸಂಪೂರ್ಣ ನಿಷಿದ್ಧ. ಕಾಡ್ಗಿಚ್ಚು ಉಂಟಾಗುವ ಸಂಭವವೂ ಜಾಸ್ತಿ.
ನಾವು ವೇದಿಕೆಗಳಲ್ಲಿ ಅರಣ್ಯ ಸಂಪತ್ತು ಸಂರಕ್ಷಣೆ ಕುರಿತು ಚರ್ಚಿಸುವುದನ್ನು ಕೇಳುತ್ತೇವೆ. ಅನೇಕ ವಿದ್ಯಾಸಂಸ್ಥೆಗಳು, ಅರಣ್ಯ ಇಲಾಖೆ, ಪರಿಸರ ಸಚಿವಾಲಯ ಮತ್ತು ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳು ನೈಸರ್ಗಿಕ ಸಂಪನ್ಮೂಲ ಉಳಿಸುವ ಬಗ್ಗೆ ವಿಚಾರಸಂಕಿರಣಗಳು ಏರ್ಪಡಿಸುತ್ತವೆ. ನಾವು ಕೈಗೊಳ್ಳುವ ವಿಧವಿಧವಾದ ವಿಧಾನಗಳನ್ನು ಮತ್ತು ಪಾಲಿಸುವ ನಿಯಮಾವಳಿಗಳ ವಿಚಾರದಲ್ಲಿ ವಿಶೇಷ ಗಮನಹರಿಸುವುದಿದೆ. ಆದರೆ ಕ್ಷಣಕ್ಷಣವೂ ವನ್ಯ ಸಂಪತ್ತಿನ ಲೂಟಿ ಜಾಸ್ತಿಯಾಗುವುದನ್ನು ಅರಿತಾಗ ದುಃಖವುಂಟಾಗುತ್ತದೆ. ಕಳೆದು ಹೋದ ವನ್ಯ ಸಂಪತ್ತನ್ನು ಮರಳಿ ಪಡೆಯುವುದಂತೂ ಅಸಾಧ್ಯ. ಪುನರ್ಜ್ಜೀವಗೊಳಿಸಬೇಕಾದ ಅನಿವಾರ್ಯ ಸನ್ನಿವೇಶ ಕಾಣಬಹುದಲ್ಲವೇ? ವನ್ಯಸಂಪತ್ತು ನಿಸರ್ಗದ ಠೇವಣಿ ಇದ್ದ ಹಾಗೇ ಎನ್ನಬಹುದು. ಹಸಿರು ಠೇವಣಿಯು ನಮ್ಮ ಅಮೂಲ್ಯ ಭಂಡಾರವಾಗಿದೆ .
ವಿನಾಶ್ ತಡೆ: ವಿಕಾಸ ಅನಿವಾರ್ಯ
ವಿಕಾಸ ಅನಿವಾರ್ಯ ಎನ್ನುವ ನಾವು ವಿನಾಶದ ತಡೆಗೆ ಧೃಢ ನಿರ್ಧಾರ ತಳೆಯಬೇಕಿದೆ. ಅಭಿವೃದ್ಧಿ ಎಂಬ ಮಾತು ಕೇಳಿ ಬಂದಂತೆಯೇ ಅಭಿವೃದ್ಧಿ ಯೋಜನೆಗಳಿಗಾಗಿ ಅರಣ್ಯ ಸಂಪತ್ತು ಹೇಗೆ ನಾಶವಾಗುತ್ತದೆ ಎಂಬ ಚಿಂತನೆಯೂ ಮೂಡಬೇಕು. ರಸ್ತೆ ಅಗಲೀಕರಣ ಅಥವಾ ಚತುಷ್ಪಥ ಹೆದ್ದಾರಿ ಅವಶ್ಯವಾಗಿದ್ದರೂ ನಿಸರ್ಗದ ಚಿತ್ರಣವನ್ನು ಕೆಡಿಸಿ, ಮರಗಿಡಗಳನ್ನು – ಬೆಟ್ಟವನ್ನು ಸಮತಟ್ಟು ಮಾಡಲು ಲಕ್ಷಾಂತರ ಮರಗಿಡಗಳನ್ನು ಕಡಿಯಲೇಬೇಕು ಎಂಬ ತಂತ್ರಜ್ಞರ, ಆಧುನಿಕ ವಿಕಾಸವಾದಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುವುದಿದೆ. ಹೋರಾಟ, ಚಳವಳಿ, ಸತ್ಯಾಗ್ರಹದ ಮಾರ್ಗದಿಂದ ನೈಸರ್ಗಿಕ ಸಂಪತ್ತು ಉಳಿಸಲು ಯತ್ನಿಸಲಾಗುವುದು. ಬೆರಣಿಕೆಯ ಪರಿಸರ ರಕ್ಷಕರಿಂದ ಮರಗಳ ಮಾರಣಹೋಮ ತಡೆಯಲು ಸಾಧ್ಯವೇ? ಅಭಿವೃದ್ಧಿಗೆ ಕಂಟಕಪ್ರಾಯರಾಗಿ ಪರಿಸರ-ಪ್ರಕೃತಿ ಪ್ರೀತಿಯುಳ್ಳವರು ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗುತ್ತಾರೆ. ವಾಸ್ತವ ವಿದ್ಯಮಾನಗಳು ಜೀವಸಂಕುಲದ ವಿನಾಶಕ್ಕೂ ಮೂಲಕಾರಣ ಎನ್ನಲಾಗುತ್ತಿದೆ. ಜಾಗತಿಕ ತಾಪಮಾನದ ವೈಪರೀತ್ಯಕ್ಕೂ ಹಸಿರು ವಲಯ ಕ್ಷೀಣಿಸುತ್ತಿರುವುದು ಮಾನವ ಕುಲಕೋಟಿಯ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟು ಮಾಡದಿರುತ್ತದೆಯೇ?
ಜೀವವೈವಿಧ್ಯತೆಯ ಕೊಡುಗೆಯನ್ನು ಸದ್ವಿನಿಯೋಗಿಸದೆ ದುರಾಸೆಯಿಂದ ದುರ್ಲಾಭಕ್ಕಾಗಿ ಬಳಕೆ ಮಾಡಲಾಗುತ್ತಿದೆ. ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯ ಮತ್ತು ಆಯಾ ರಾಜ್ಯ ಸರಕಾರದ ಅರಣ್ಯ ಇಲಾಖೆಯ ಮೂಲಕ ಸಂವಿಧಾನಬದ್ಧವಾಗಿ ಜೀವವೈವಿಧ್ಯತೆಯನ್ನು ಆದ್ಯ ಕರ್ತವ್ಯವಾಗಿ ಪರಿಗಣಿಸಿ ಸಂರಕ್ಷಿಸಬೇಕಾಗಿದೆ. ಮಾನವರಿಗೆ ಮಾತ್ರವಲ್ಲದೆ ಸಕಲ ಜೀವರಾಶಿಗಳಿಗೆ ಆಶ್ರಯ, ಆಹಾರ ನೀಡುವ ಜೀವ ವೈವಿಧ್ಯತೆ ಕುರಿತು ಹೆಚ್ಚುಹೆಚ್ಚು ಆಸಕ್ತಿ ಹೊಂದಬೇಕಿದೆ. ವಿನಾಶ ತಡೆದು ಪರಿಸರ ಸಹ್ಯ ವಿಕಾಸದತ್ತ ರಾಜಕಾರಣಿಗಳು, ತಂತ್ರಜ್ಞರು, ಸಾಮಾಜಿಕ ಸೇವಾಸಂಸ್ಥೆ ಪದಾಧಿಕಾರಿ ಮನಗಾಣಬೇಕು.
ಡಾ| ಎಸ್.ಎನ್. ಅಮೃತ ಮಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ
MUST WATCH
ಹೊಸ ಸೇರ್ಪಡೆ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ