ಕ್ಷೀಣಿಸುತ್ತಿರುವ ಮಾನವೀಯ ಮೌಲ್ಯ
Team Udayavani, Jan 11, 2019, 4:51 AM IST
ಬೃಹದಾರಣ್ಯಕೋಪನಿಷತ್ತಿನ ದ್ವಿತೀಯ ಬ್ರಾಹ್ಮಣದಲ್ಲಿ ಒಂದು ಕತೆ ಇದೆ. ದೇವತೆಗಳು, ಮನುಷ್ಯರು, ಅಸುರರು ಎಂಬ ಮೂರು ವರ್ಗದ ಪ್ರಜಾಪತಿಯ ಮಕ್ಕಳು ತಂದೆಯ ಬಳಿ ಇದ್ದು ಬ್ರಹ್ಮಚರ್ಯೆ ತಪವೃತ ಪಾಲಿಸಿದರು. ಅನಂತರ ಅವರೆಲ್ಲರೂ ಪ್ರಜಾಪತಿಯ ಬಳಿ ಬಂದು ದಯವಿಟ್ಟು ನೀವು ನಮಗೆ ಉಪದೇಶಿಸು ಎಂದರು.
ಪ್ರಜಾಪತಿಯು ಮೂವರಿಗೂ “ದ’ ಎಂಬ ಅಕ್ಷರವನ್ನು ಉಪದೇಶಿಸಿ ನಂತರ ಅವರಲ್ಲಿ “ನೀವು ಅರಿತಿರಾ?’ ಎಂದು ಪ್ರಶ್ನಿಸಿದನು. ದೇವತೆಗಳು “ಹೌದು’ “ದಾಂತರಾಗಿರಿ’ ಎಂದು ಹೇಳುತ್ತಿದ್ದೀಯೆ ಎಂದರು. ಮಾನವರು “ಹೌದು ನಾವೂ ತಿಳಿದೆವು ದಾನಿಗಳಾಗಿರಿ ಎನ್ನುತ್ತಿದ್ದೀಯಲ್ಲವೇ? ಎಂದರು. ಅಸುರರು “ಹೌದು ನಾವೂ ತಿಳಿದುಕೊಂಡೆವು ದಯಾವಂತರಾಗಿರಿ’ ಎಂದು ಉಪದೇಶಿಸಿದಿಯಲ್ಲವೇ?’ ಎಂದರು. ಪ್ರಜಾಪತಿಯು ಸಂತೋಷದಿಂದ “ಹೌದು ನೀವೆಲ್ಲರೂ ಚೆನ್ನಾಗಿ ತಿಳಿದಿರಿ’ ಎಂದು ಸಮ್ಮತಿಸಿದನು. ಉಪನಿಷತ್ತಿನ ಅತ್ಯಂತ ಮೌಲ್ಯಯುತವಾದ ಈ ವಿಚಾರಕ್ಕೆ “ದಮಾದಿ ಸಾಧನ ತ್ರಯವಿಧಿ’ ಎಂದು ಹೇಳುತ್ತಾರೆ. ಯಾವ ಗುಣದ ಕೊರತೆಯು ಯಾರಲ್ಲಿದೆಯೋ ಅವರು ಅದನ್ನು ಕಷ್ಟದಿಂದ ಸಾಧಿಸಿ ಕೊಳ್ಳಬೇಕು ಎನ್ನುವುದು ಇಲ್ಲಿನ ನೀತಿಯಾಗಿದೆ.
ಅಗೋಚರತೆಯುಳ್ಳ ದೇವತೆಗಳ ಗುಣಾವಗುಣಗಳ ಕುರಿತು ಏನನ್ನೂ ಹೇಳುವಂತಿಲ್ಲ. ಆದರೆ ಇಂದು ತುಲನೆ ಮಾಡಬೇಕಾಗಿರುವುದು “ಮನುಷ್ಯ’ ಎಂಬ ಪ್ರಜಾಪತಿಯ ಸಂತತಿಗಳಾದ ನಮ್ಮ ಕುರಿತು. “ನಾವೇಕೆ ಹೀಗಾಗಿದ್ದೇವೆ?’ ಎಂದು ನಮ್ಮನ್ನು ನಾವೇ ಎಂದಾದರೂ ಪ್ರಶ್ನಿಸಿಕೊಂಡಿದ್ದೇವೆಯೇ? ಮಾನವರಾದ ನಮ್ಮಲ್ಲಿ ಮಾನವೀಯ ಗುಣ, ಧರ್ಮ, ಮೌಲ್ಯಗಳು ನಿರಂತರವಾಗಿ ಕ್ಷೀಣಿಸುತ್ತಾ ಬರುತ್ತಿದೆ. ಅದರ ಬದಲು ಅಸುರತನ, ಕ್ರೌರ್ಯ, ದಾಷ್ಟ éìತೆಗಳು ಮೆರೆದಾಡುತ್ತಾ ದಯೆ, ಕರುಣೆ, ಸಹಿಷ್ಣುತೆಗಳು ತೀರಾ ವಿರಳವಾಗಿ ಗೋಚರಿಸುವಂತಾಗಿದೆಯಲ್ಲಾ? ಕೀರ್ತಿ, ಆಸ್ತಿಪಾಸ್ತಿ, ಧನಕನಕ, ಸ್ಥಾನಮಾನ, ಅಧಿಕಾರ ಗೌರವ, ದವಲತ್ತಿಗಾಗಿ ಮನುಷ್ಯನೋರ್ವ ಮತ್ತೋರ್ವ ಮನುಷ್ಯನನ್ನೂ ಜೀವಂತ ಭಕ್ಷಿಸಲೂ ಹೇಸದಂತಹ ಪೈಶಾಚಿಕ ಲೋಕದಲ್ಲಿ ನಾವು ಬಾಳುತ್ತಿರುವಂತೆ ಭಾಸವಾಗುವುದಿಲ್ಲವೇ?
ಭೌತಿಕ ಸುಖದತ್ತ ಸಂಪೂರ್ಣವಾಗಿ ಸಮರ್ಪಿಸಿ ಕೊಂಡಂತಿರುವ ನಾವು ಅಂತಃಸ್ಸತ್ವವನ್ನು ಕಳೆದುಕೊಂಡ ನರರೂಪದ ರಾಕ್ಷಸರಂತೆ ವರ್ತಿಸುತ್ತಿರುವುದು ಪ್ರತಿನಿತ್ಯ ಕಾಣುವ ಕೇಳುವ ಸಮಾಚಾರವಾಗಿ ಪರಿಣಮಿಸಿರುವುದರ ಹೊಣೆಗಾರಿಕೆ ಯಾರದು? ನಮ್ಮದೇ ತಾನೇ? ಭೌತಿಕ ಸ್ವಾರ್ಥವನ್ನೇ ನಿಜವಾದ ಸಂತೋಷ ಎಂದು ಕೊಂಡಿರುವ ನಾವು ಕಠೊಪನಿಷತ್ತಿನ ನಚಿಕೇತನ ನುಡಿಯನ್ನು ಕೊಂಚ ಪರಾಮರ್ಶಿಸಬೇಕು. “ನ ವಿತ್ತೇನ ತರ್ಪಣೀಯೋ ಮನುಷ್ಯಃ’ ಕೇವಲ ಸಂಪತ್ತಿನಿಂದ ಅಥವಾ ಲೌಕಿಕ ಸುಖಾನುಭವದಿಂದಲೇ ತೃಪ್ತಿ ದೊರೆಯುವುದಿಲ್ಲ ಎಂಬ ದಿಟ್ಟ ನಿಲುವನ್ನು ನಾವು ಅರಿತುಕೊಳ್ಳುವುದೇ ಇಲ್ಲ.
“ನ ಜಾತು ಕಾಮ ಕಾಮನಾಮುಪಭೋಗೆನ ಕಾಮ್ಯತಿ, ಹವಿಷಾ ಕೃಷ್ಣ ವರ್ತೆàನ ಭೂಯ ಏವಾಭಿ ವರ್ಧತೇ’ ಎಂಬ ಮನುಸ್ಮತಿಯ ವಾಕ್ಯವು ಆಶೆಗಳು ಅದರ ಪೂರೈಕೆಯಿಂದ ಮುಗಿಯಲಾರವು ಬದಲಾಗಿ ವೃದ್ಧಿಸುತ್ತವೆ ಎಂಬ ಸತ್ಯವನ್ನು ನಾವು ಅರಿಯುವ ಗೋಜಿಗೇ ಹೋಗುವುದಿಲ್ಲ.
ಕೀರ್ತಿಯ ಬೆನ್ನೇರುವಾತ ಸಾಕಷ್ಟು ಗೌರವಾದರ ಪಡೆದ ನಂತರವೂ ಮತ್ತಷ್ಟು ದೊರಕಲಿ, ಇನ್ನಷ್ಟು ಲಭಿಸಲಿ ಎಂದು ಬಯಸುತ್ತಾನೆ. ಬಯಕೆಯ ಶಮನಕ್ಕಾಗಿ ನೈಜ ಅರ್ಹತೆ ಉಳ್ಳವನನ್ನು ಮುಟ್ಟುತ್ತಾನೆ. ಧನದಾಹಿಯೋರ್ವ
ಧಾರಾಳ ಸಂಪತ್ತಿದ್ದರೂ ಅದನ್ನು ನೂರ್ಮಡಿಗೊಳಿಸುವುದೆಂತು ಎಂದು ಯೋಚಿಸುತ್ತಾ ಹೇಯ ಕೃತ್ಯಗಳತ್ತ ವಾಲುತ್ತಾನೆ. ಹೆಣ್ಣು, ಮಣ್ಣು, ಹೊನ್ನಿಗಾಗಿ ನಡೆದ ಐತಿಹಾಸಿಕ ಕದನಗಳ, ರಕ್ತಪಾತದ ಅಧ್ಯಯನವು ನಮ್ಮನ್ನು ಬಾಹುಬಲಿ ಯನ್ನಾಗಿಸುವ ಬದಲು ರಾವಣ, ಧುರ್ಯೋಧನನಾಗಿಸುತ್ತಿರುವುದೇ ದುರಂತವಲ್ಲವೇ?
ಇಂದು ದೇವರ ದಾಸೋಹಗಳೇ ಹಾಲಾಹಲವಾಗುತ್ತದೆ. ತ್ಯಾಗದ ಸಂಕೇತವೆಂದು ಪರಿಗಣಿಸಲ್ಪಟ್ಟ “ಕಾಷಾಯ ವಸ್ತ್ರ’ವು ಷಡ್ವರ್ಗಗಳ ಪರಮಾವಧಿಯನ್ನು ಮರೆಗೊಳಿಸುವ ಒಂದು ಮರೆಪರದೆಯಂತಾಗಿದೆ. ದೇವರು, ಧರ್ಮ, ಶಾಸ್ತ್ರ, ನೀತಿ, ರೀತಿ ಇತ್ಯಾದಿಗಳೆಲ್ಲಾ ಅನುಷ್ಠಾನ ರಹಿತರ ಬಾಯಿಂದ ಹೊರಡುವ ಒಣ ಉಪದೇಶವಾಗಿದೆ.
‘ ‘ We talk like philosophers but act like fools’ ಎಂಬ ಆಂಗ್ಲ ಗಾದೆಯಂತೆ ನಮ್ಮ ನಾಟಕದ ಪಾತ್ರದಂತಹ ಸಾಧು ಸಂತರು, ಜನನಾಯಕರು, ಬುದ್ಧಿಜೀವಿಗಳು ಹೆಚ್ಚೇಕೆ ನಾವೆಲ್ಲರೂ ವರ್ತಿಸುತ್ತಿದ್ದೇವೆ. ಸದುಪದೇಶ ಪಡೆದ ಬೇಡ ವಾಲ್ಮೀಕಿಯಾದ ಈ ದೇಶದ ಭವ್ಯ ಪರಂಪರೆಯು ಇಂದು ತಿರುವು-ಮುರುವಾಗಿ ವಾಲ್ಮೀಕಿಯೇ ಮರಳಿ ಬೇಟೆಗಾರನಂತೆ ಆದಂತೆ ಅನಿಸುತ್ತಿದೆಯಲ್ಲವೇ? “ಊಧ್ವ ಮೂಲ ಅಧಃ ಶಾಖ’ ಎನ್ನೋಣವೇ?
ಮೋಹನದಾಸ ಸುರತ್ಕಲ್