ಭಾಷಾ ಮಾಧ್ಯಮವೊಂದೇ ಮುಖ್ಯವಲ್ಲ​​​​​​​


Team Udayavani, Feb 11, 2019, 12:30 AM IST

kannada-medium-primary-education.jpg

ಮಕ್ಕಳ ಪ್ರಾಥಮಿಕ ಶಿಕ್ಷಣವು ಅವರಿಗೆ ಚೆನ್ನಾಗಿ ಗೊತ್ತಿರುವ ಭಾಷೆಯಲ್ಲಿ ಆದರೆ ಕಲಿಕೆ ಸುಲಭ ಮತ್ತು ಸರಳವಾಗುತ್ತದೆ ಎಂಬುದನ್ನು ಒಂದು ತತ್ವವಾಗಿ ಒಪ್ಪದವರಿಲ್ಲ. ಆದರೆ ಇದರ ಅನುಷ್ಠಾನದ ವಿಚಾರಕ್ಕೆ ಬಂದರೆ ಬೇರೆಯೇ ವಾಸ್ತವ ಕಾಣುತ್ತದೆ. ಬಹುತೇಕ ಮಂದಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೇ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ಇದಕ್ಕೆ ಕಾರಣ ಮಕ್ಕಳ ಭವಿಷ್ಯದ ಬಗೆಗಿನ ಹೆತ್ತವರ ದೃಷ್ಟಿ-ಧೋರಣೆಗಳು.

ಪ್ರಾಥಮಿಕ ಶಿಕ್ಷಣದ ಕುರಿತ ಚರ್ಚೆಗಳೆಲ್ಲ ಯಾವ ಭಾಷೆ ಮಾಧ್ಯಮವಾಗಬೇಕು ಎಂಬುದರ ಸುತ್ತಲೇ ಇರುತ್ತವೆ. ಏಕರೂಪದ ಪ್ರಾಥಮಿಕ ಶಿಕ್ಷಣ ಜಾರಿಯಾಗಬೇಕು ಎನ್ನುವುದರ ಹಿಂದೆಯೂ ಇಂಗ್ಲೀಷಿನ ಹಾವಳಿಯನ್ನು ತಡೆಯಬೇಕು ಎಂಬ ಇರಾದೆಯೇ ಇದೆ. ಈ ಭಾಷಾ ಮಾಧ್ಯಮದ ಚರ್ಚೆ ಎಷ್ಟು ಸರ್ವವ್ಯಾಪಕವಾಗಿದೆಯೆಂದರೆ ಪ್ರಾಥಮಿಕ ಶಿಕ್ಷಣವನ್ನು ಇನ್ನಷ್ಟು ಉತ್ತಮ ಅಥವಾ ಪರಿಣಾಮಕಾರಿಗೊಳಿಸುವ ನಿಟ್ಟಿನಲ್ಲಿ ಬೇರೆ ಏನನ್ನೂ ನಾವು ಯೋಚಿಸದಂತೆ ಆಗಿದೆ. ವಿದ್ಯಾರ್ಥಿಗಳ ಹೆತ್ತವರ ದೃಷ್ಟಿಕೋನವನ್ನು ಪರಿಶೀಲಿಸುವುದರ ಜೊತೆ ಚರ್ಚೆಯನ್ನು ಮಾಧ್ಯಮಕ್ಕೆ ಸೀಮಿತಗೊಳಿಸದೆ ಅದರಿಂದಾಚೆಗೆ ವಿಸ್ತರಿಸಬೇಕಾದ ಅಗತ್ಯವಿದೆ ಅನ್ನುವ ನಿಟ್ಟಿನಲ್ಲಿ ಕೆಲವು ಅಂಶಗಳನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಪ್ರಸ್ತುತ ವಿದ್ಯಮಾನಗಳನ್ನು ಗಮನಿಸುವುದಾದರೆ, ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮವನ್ನು ಆರಂಭಿಸುವ ಪ್ರಸ್ತಾಪ ಬಂದ ನಂತರ ಆ ಬಗ್ಗೆ ವಿಭಿನ್ನ ಅಭಿಪ್ರಾಯಗಳು ಪತ್ರಿಕೆಗಳಲ್ಲಿ ಹಾಗೂ ಜಾಲತಾಣಗಳಲ್ಲಿÉ ವ್ಯಕ್ತವಾಗುತ್ತಿವೆ. ಅನೇಕ ಸಾಹಿತಿಗಳು ಮತ್ತು ಶಿಕ್ಷಣ ತಜ್ಞರು ಇದನ್ನು ವಿರೋಧಿಸಿದ್ದಾರೆ. ಸಮಾಜದಲ್ಲಿ ಹಿಂದುಳಿದ ವರ್ಗಗಳಿಗೂ ಇಂಗ್ಲಿಷ್‌ ಮಧ್ಯಮದಲ್ಲಿ ಶಿಕ್ಷಣ ಪಡೆಯುವ ಅವಕಾಶ ಸಿಗುತ್ತಿರುವಾಗ ಇದನ್ನು ವಿರೋಧಿಸುವುದು ತಪ್ಪು ಎಂದು ಕೆಲವರು ವಾದಿಸುತ್ತಿದ್ದಾರೆ. ಮತ್ತೆ ಕೆಲವರು ಒಂದು ಪ್ರಯೋಗವಾಗಿ ಸದ್ಯಕ್ಕೆ ಜಾರಿಗೆ ಬರುವುದರಲ್ಲಿ ತಪ್ಪಿಲ್ಲ ಎಂಬ ಅಭಿಪ್ರಾಯವನ್ನು ನೀಡಿದ್ದಾರೆ. ಬೇಕಾದರೆ ಇಂಗ್ಲಿಷನ್ನು ಭಾಷೆಯಾಗಿ ಒಂದನೇ ತರಗತಿಯಿಂದಲೇ ಕಲಿಸಿ; ಮಾಧ್ಯಮವಾಗಿ ಇಂಗ್ಲಿಷ್‌ ಬೇಡ ಎಂದು ಪ್ರತಿಪಾದಿಸುವವರೂ ಇದ್ದಾರೆ. ಭಾಷೆಯಾಗಿ ಬೇಕಾದರೆ ಒಂದನೆಯ ತರಗತಿಯಿಂದಲೇ ಕಲಿಸಿ ಎಂಬ ಮಾತನ್ನು ಬಹಳ ಮಂದಿ ಈಗ ಒಪ್ಪುವಂತಾಗಿದೆ ಎಂಬಲ್ಲಿಗೆ ಅರ್ಧ ಯುದ್ಧವನ್ನು ಇಂಗ್ಲಿಷ್‌ ಗೆದ್ದಂತೆಯೇ ಆಗಿದೆ.

ಮಕ್ಕಳ ಪ್ರಾಥಮಿಕ ಶಿಕ್ಷಣವು ಅವರಿಗೆ ಚೆನ್ನಾಗಿ ಗೊತ್ತಿರುವ ಭಾಷೆಯಲ್ಲಿ ಆದರೆ ಕಲಿಕೆ ಸುಲಭ ಮತ್ತು ಸರಳವಾಗುತ್ತದೆ ಎಂಬುದನ್ನು ಒಂದು ತತ್ವವಾಗಿ ಒಪ್ಪದವರಿಲ್ಲ. ಆದರೆ ಈ ತತ್ವದ ಅನುಷ್ಠಾನದ ವಿಚಾರಕ್ಕೆ ಬಂದರೆ ಬೇರೆಯೇ ವಾಸ್ತವ ಕಾಣುತ್ತದೆ. ಅನುಕೂಲ ಇರುವವರಲ್ಲಿ ಬಹುತೇಕ ಮಂದಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೇ ತಮ್ಮ ಮಕ್ಕಳನ್ನು ಕಳುಹಿಸುವವರು. ಎಲ್ಲರಿಗೂ ಗೊತ್ತಿರುವಂತೆ ಇದಕ್ಕೆ ಕಾರಣ ಮಕ್ಕಳ ಭವಿಷ್ಯದ ಬಗೆಗಿನ ಹೆತ್ತವರ ದೃಷ್ಟಿ-ಧೋರಣೆಗಳು.

ಕನ್ನಡ ಮಾಧ್ಯಮದಲ್ಲಿ ಕಲಿತ ಹಲವು ಮಂದಿ ತಾವು ಜೀವನದಲ್ಲಿ ಯಶಸ್ಸು ಗಳಿಸಿದ ಬಗ್ಗೆ ಹೇಳಿಕೊಳ್ಳುವುದುಂಟು. ಹಾಗೆಯೇ ಕನ್ನಡ ಮಾಧ್ಯಮದಲ್ಲಿಯೇ ಓದಿ ಉನ್ನತ ಹುದ್ದೆಗಳಿಗೆ ಹೋದ ಮಹನೀಯರ ದೃಷ್ಟಾಂತಗಳನ್ನು ಕನ್ನಡದ ಪರ ಇರುವವರು ನೀಡುತ್ತಾರೆ. ಕನ್ನಡ ಮಾಧ್ಯಮವೆಂದರೆ ಯಾವುದೇ ಕೀಳರಿಮೆ ಇರಬಾರದು ಎಂಬ ನಿಟ್ಟಿನಲ್ಲಿ ಕಥನಗಳನ್ನು ನಾವು ಕಟ್ಟುತ್ತೇವೆ. ಇಷ್ಟಿದ್ದರೂ ಹೆತ್ತವರು ಇಂಗ್ಲಿಷ್‌ ಮಾಧ್ಯಮದಿಂದ ದೂರವಾಗದೆ ಇರಲು ಕಾರಣವೇನೆಂದು ಯೋಚಿಸಬೇಕಾಗಿದೆ.

ಇಂಗ್ಲಿಷ್‌ ಮಾಧ್ಯಮದ ಹಾವಳಿಯನ್ನು ಹೇಳುವಾಗ ಸಾಮಾನ್ಯವಾಗಿ ಎರಡು ನೆಲೆಗಳಲ್ಲಿ ಗುರುತಿಸುತ್ತೇವೆ. ಒಂದು ಮಕ್ಕಳ ಕಲಿಕೆಗೆ ಪರಭಾಷೆ ಸೂಕ್ತವಲ್ಲ ಎನ್ನುವುದು. ಎರಡು ಇಂಗ್ಲಿಷಿನಿಂದಾಗಿ ಕನ್ನಡ ನಾಶವಾಗುತ್ತದೆ; ನಮ್ಮ ಸಂಸ್ಕೃತಿಯಿಂದ ಮಕ್ಕಳು ದೂರ ಹೋಗುತ್ತಾರೆ ಇತ್ಯಾದಿ.

ಈಗ ಮೊದಲನೆಯದನ್ನು ಗಮನಿಸೋಣ. ಪರಭಾಷೆಯಲ್ಲಿ ಕಲಿಕೆಯೆಂದರೆ ಕೇವಲ ಕಂಠಪಾಠ ಮಾತ್ರ; ಮಕ್ಕಳಿಗೆ ಪರಿಕಲ್ಪನೆಗಳು ಅರ್ಥವಾಗುವುದಿಲ್ಲ; ಇದರಿಂದ ಮಾಹಿತಿ ಮಾತ್ರ ಸಿಗುತ್ತದೆ; ಜ್ಞಾನಕ್ಕೆ ಇಂಗ್ಲಿಷ್‌ ಮಾಧ್ಯಮ ಪೂರಕವಲ್ಲ ಅಂತೆಲ್ಲ ಯಾರು ಏನೇ ಹೇಳಿದರೂ ಬಹುತೇಕ ಹೆತ್ತವರು ಅದನ್ನು ಕೇಳಲು ಸಿದ್ಧರಿಲ್ಲ. ಇದಕ್ಕೆ ಒಂದು ಕಾರಣ ಕನ್ನಡ ಮಾಧ್ಯಮದಲ್ಲಿ ಓದಿ ಯಶಸ್ಸು ಗಳಿಸಿದವರ ಬಗ್ಗೆ ಮಾತ್ರ ಕಥನಗಳಿರುವುದು. ಅದೇ ಪ್ರಮಾಣದಲ್ಲಿ, ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿತು ಜೀವನದಲ್ಲಿ ವಿಫ‌ಲರಾದವರ ಕಥನಗಳು ಇಲ್ಲದಿರುವುದು.

ಇನ್ನು, ಎರಡನೆಯ ನೆಲೆಯನ್ನು ಗಮನಿಸಿದರೆ, ಭಾಷೆ, ಸಂಸ್ಕೃತಿ ನಾಶವಾಗುವುದರ ಬಗ್ಗೆ ಅಥವಾ ಸೋಲುವುದರ ಬಗ್ಗೆ ಹೆತ್ತವರು ತಲೆಕೆಡಿಸಿಕೊಳ್ಳುತ್ತಿಲ್ಲ ಎನ್ನುವುದು ಗೊತ್ತಾಗುತ್ತದೆ. ಇಲ್ಲಿಯೂ ಎರಡು ಧೋರಣೆಗಳು ಹೆತ್ತವರಲ್ಲಿ ಕಾಣುತ್ತದೆ. ತಮ್ಮ ಮಗು ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿತರೆ ಕನ್ನಡವೇನೂ ಮುಳುಗಿ ಹೋಗುವುದಿಲ್ಲ ಎಂಬುದು ಒಂದಾದರೆ, ತಮಗೆ ಹೇಗೂ ಕನ್ನಡ ತಿಳಿದಿದೆ; ಮಗು ಹೇಗಿದ್ದರೂ ಕನ್ನಡಕ್ಕಿಂತ ಹೆಚ್ಚಿನ ಅವಕಾಶಗಳನ್ನು ತರಬಲ್ಲ ಇಂಗ್ಲಿಷ್‌ ಕಲಿಯುತ್ತದೆ; ಅಲ್ಲದೆ, ಮನೆಭಾಷೆಯಾಗಿ ಕನ್ನಡವನ್ನು ಮಗು ಹೇಗೂ ತಿಳಿದಿದೆ. ಇನ್ನು ಯಾರಿಗಾಗಿ ಅಥವಾ ಯಾಕಾಗಿ ಕನ್ನಡವನ್ನು ತಾವು ಮಾಧ್ಯಮವಾಗಿ ಬಳಸಿ ಉಳಿಸಬೇಕು ಎಂಬ ಧೋರಣೆ ಇನ್ನೊಂದು. ತಮ್ಮ ಸಂಸ್ಕೃತಿಯ ಬಗ್ಗೆ ಎಲ್ಲರಿಗೂ ಸಹಜವಾಗಿಯೇ ಪ್ರೀತಿ ಅಭಿಮಾನಗಳಿರುತ್ತವೆ. ಹಾಗೆಂದು ಸಂಸ್ಕೃತಿಯ ಎಲ್ಲಾ ಅಂಶಗಳನ್ನೂ ಹಾಗೆಯೇ ಉಳಿಸುವುದು ಯಾವಾಗಲೂ ಆದ್ಯತೆಯ ವಿಷಯವಾಗಿರುತ್ತದೆ ಎಂದೇನಿಲ್ಲ. ಸಂಸ್ಕೃತಿಯ ಮೂಲದ್ರವ್ಯಗಳಾದ ಭಾಷೆ, ಆಹಾರ ಪದ್ಧತಿಗಳನ್ನು ಜನರು ಬದಲಾಯಿಸಿಕೊಂಡುದಕ್ಕೆ ಬೇಕಾದಷ್ಟು ಉದಾಹರಣೆಗಳಿವೆ. ಹೀಗಿರುವಾಗ ಮುಂದಿನ ತಲೆಮಾರು ಕನ್ನಡವನ್ನು ಕಳೆದುಕೊಳ್ಳುತ್ತದೆ ಎಂದು ಇಂದು ಆತಂಕ ಪಡುವವರ ಸಂಖ್ಯೆ ಎಷ್ಟಿರಬಹುದು?

ಹೆತ್ತವರನ್ನು ಮಾತನಾಡಿಸಿದರೆ ಇನ್ನೊಂದು ಅಂಶವೂ ಗೊತ್ತಾಗುತ್ತದೆ. ತಮ್ಮ ಮಕ್ಕಳಿಗೆ ತರಗತಿಗಳಲ್ಲಿ ಸಹಪಾಠಿಗಳಾಗಿ ಯಾರು ಇರುತ್ತಾರೆ ಎಂಬುದರ ಬಗ್ಗೆ ಹೆತ್ತವರು ಕಾಳಜಿ ಮಾಡುತ್ತಾರೆ. ಜಾತಿ, ಮತ, ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರೂ ಒಟ್ಟಿಗೆ ಕಲಿಯಬೇಕು ಎಂಬುದು ಭಾರತದ ಔಪಚಾರಿಕ ಶಿಕ್ಷಣದ ಪರಿಕಲ್ಪನೆಯೇನೋ ಹೌದು. ಆದರೆ ಸಹಜವಾಗಿಯೇ ಊಧ್ವì ದೃಷ್ಟಿಯ ಮಾನವನು ತನ್ನ ಅಥವಾ ತನಗಿಂತ ಮೇಲಿನ ಹಂತದವರ ಜೊತೆ ಬೆರೆತು, ಗೆಳೆತನ ಬೆಳೆಸಿ ಲಾಭ ಮಾಡಿಕೊಳ್ಳುವ ದೃಷ್ಟಿಯನ್ನು ಹೊಂದಿರುತ್ತಾನೆ.

ಶಾಲೆಯಲ್ಲಿ ಒಂದೇ ಒಂದು ಮಗುವಿದ್ದರೂ ಕನ್ನಡ ಶಾಲೆಯನ್ನು ಮುಚ್ಚಬಾರದು ಎಂಬ ಧ್ವನಿಯೂ ಜೋರಾಗಿಯೇ ಸಾಹಿತ್ಯ ಸಮ್ಮೇಳನಗಳಂಥ ಕಡೆಗಳಲ್ಲಿ ಕೇಳಿಬರುತ್ತದೆ. ಇಂಥ ಶಾಲೆಗಳನ್ನು ನಡೆಸುವುದು ಸರಕಾರಕ್ಕೆ ಅನಗತ್ಯ ಆರ್ಥಿಕ ಹೊರೆ ಎಂದು ಭಾವಿಸಬಾರದು ಎನ್ನುವುದೇನೋ ನಿಜ. ಆದರೆ ಮುಚ್ಚಬಾರದು ಎಂದು ಹೇಳುವವರು ಅಂಥ ಶಾಲೆಗಳಲ್ಲಿ ಕಲಿಯುವ ನಾಲ್ಕೋ ಐದೋ ಮಕ್ಕಳು ಹೇಗೆ ಸರಿಯಾದ ಅರ್ಥದಲ್ಲಿ ಶಿಕ್ಷಣ ಪಡೆಯಲು ಸಾಧ್ಯ ಎನ್ನುವುದರ ಕಡೆಗೆ ಅಗತ್ಯವಾಗಿ ಗಮನ ನೀಡಬೇಕು. ತರಗತಿಯಲ್ಲಿ ಆಟವಾಡಲು ಕೂಡ ಜೊತೆಗಾರರಿಲ್ಲದೆ ಕಲಿಯುವುದು ಎಂದರೆ, ಶಾಲೆಯನ್ನು ಉಳಿಸಿದರೂ ಮಗುವಿಗೆ ಶಿಕ್ಷೆಯೇ. ಇನ್ನು ಶಾಲೆಗಳನ್ನು ಉಳಿಸಲಿಕ್ಕಾಗಿ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮವನ್ನು ಆರಂಭಿಸಿದರೆ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಿದಂತಾಗುವುದಿಲ್ಲ. ಮಾಜಿ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಿದಂತಾಗುತ್ತದೆ ಅಷ್ಟೆ. ಅಪವಾದವೆಂಬಂತೆ ಕನ್ನಡ ಮಾಧ್ಯಮದ ಬಗ್ಗೆ ಕೆಲವೆಡೆ ಹೆತ್ತವರು ಮತ್ತು ಶಿಕ್ಷಣ ಸಂಸ್ಥೆಯವರು ಒಲವು ತೋರಿಸುತ್ತಿದ್ದಾರಾದರೂ ಒಟ್ಟಾರೆಯಾಗಿ ಪರಿಸ್ಥಿತಿ ಸದ್ಯಕ್ಕಂತೂ ಸುಧಾರಣೆಗೊಳ್ಳುವ ಲಕ್ಷಣಗಳಿಲ್ಲ.

ಪ್ರಾಥಮಿಕ ಶಿಕ್ಷಣದ ವಿಚಾರದಲ್ಲಿ ಚಿಂತಿಸಬೇಕಾದ ಇತರ ಒಂದೆರಡು ವಿಚಾರಗಳಿವೆ. ಮಾಧ್ಯಮ ಯಾವುದೇ ಇರಲಿ, ವಿಷಯಗಳನ್ನು ಬೋಧಿಸುವಾಗ ಅಂದರೆ ವಿಜ್ಞಾನ, ಗಣಿತ ಅಷ್ಟೇ ಅಲ್ಲ; ಸಮಾಜ ವಿಜ್ಞಾನ ಮತ್ತು ಭಾಷಾ ವಿಷಯಗಳನ್ನು ಪಾಠ ಮಾಡುವಾಗಲೂ ಪರಿಕಲ್ಪನೆಗಳನ್ನು ಮಕ್ಕಳು ಸರಿಯಾಗಿ ಗ್ರಹಿಸುವಂತೆ ಕಲಿಸಲಾಗುತ್ತದೆಯೇ ಎಂಬುದು ದೊಡ್ಡ ಪ್ರಶ್ನೆ. (ಇದು ಕೇವಲ ಪ್ರಾಥಮಿಕ ಶಾಲೆಗಳಿಗೆ ಮಾತ್ರ ಅನ್ವಯಿಸುವುದಲ್ಲ; ಮೇಲಿನ ಹಂತಗಳಲ್ಲೂ ಈ ಸಮಸ್ಯೆಯಿದೆ). ಶಿಕ್ಷಕರಿಗೆ ಈ ನಿಟ್ಟಿನಲ್ಲಿ ವಿದ್ಯಾರ್ಹತೆ, ತರಬೇತಿ ಇರುತ್ತದೆ ನಿಜ. ಆದರೂ ಈ ಕೊರತೆ ಬಹಳಷ್ಟು ಇದೆ.

ಯಾವುದೇ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಹಾಗೂ ಜ್ಞಾನದ ಸೃಷ್ಟಿ ಮತ್ತು ವೃದ್ಧಿ ಅಗಬೇಕಾದರೆ, ಮೂಲಭೂತವಾಗಿ ವ್ಯಕ್ತಿಯಲ್ಲಿ ಇರಬೇಕಾದ ಅಂಶಗಳು ಎರಡು. ಒಂದನೆಯದು ಭಾಷೆ. ಎರಡನೆಯದು ತರ್ಕ. ತರ್ಕಬುದ್ಧಿ ಅಥವಾ ತರ್ಕಶಕ್ತಿ ಬೆಳೆಯಲು ಗಣಿತ ಸಹಾಯ ಮಾಡುತ್ತದೆ. ಇವೆರಡನ್ನು ಆರಂಭದಿಂದಲೇ ಸರಿಯಾಗಿ ಕಲಿಸುವುದು ಅತ್ಯಂತ ಮುಖ್ಯ. ಇಂದಿನ ಭಾರತದ ಅತಿದೊಡ್ಡ ಸಮಸ್ಯೆಯೆಂದರೆ ತಾರ್ಕಿಕ ಯೋಚನೆಯ ಕೊರತೆ. ಹಲವು ಸಮಾಜ ವಿಜ್ಞಾನಿಗಳೂ ಇದಕ್ಕೆ ಹೊರತಲ್ಲ. ಭಾರತದ ಈಗಿನ ಜನಪ್ರಿಯ ಧಾರೆಯ ವಿಚಾರವಾದವೇ ಬೇರೆ; ತರ್ಕಬುದ್ಧಿಯೇ ಬೇರೆ. ಸರಿಯಾದ ತರ್ಕಶಕ್ತಿಯಿದ್ದವರು ಮಾತ್ರ ಯಾವುದನ್ನು ವೈಚಾರಿಕವಾಗಿ ನೋಡಬೇಕು, ಯಾವುದನ್ನು ಭಾವನಾತ್ಮಕವಾಗಿ ಸ್ವೀಕರಿಸಬೇಕು ಎಂದು ತಿಳಿದುಕೊಳ್ಳಬಲ್ಲರು.

ದೇಶದಾದ್ಯಂತ ಅನ್ವಯಿಸಬಹುದಾದ ಏಕರೂಪವೆಂದರೆ ಹೇಗಿರಬೇಕು ಎಂದು ಸೂಚಿಸಬಹುದು. ಐದನೆಯ ತರಗತಿಯವರೆಗೆ ಕೇವಲ ಕನ್ನಡ(ಆಯಾ ರಾಜ್ಯ ಭಾಷೆ) ಮತ್ತು ಇಂಗ್ಲಿಷ್‌ ಹಾಗೂ ಗಣಿತ ಮಾತ್ರ ಪಠ್ಯ ವಿಷಯಗಳಾಗಿ ಇರಬೇಕು. ಈ ಎಲ್ಲಾ ವಿಷಯಗಳ ಕಲಿಕೆ ಅತ್ಯಂತ ಪ್ರಾಯೋಗಿಕವಾಗಿ ನಡೆಯಬೇಕು. ಮೊದಲ ಎರಡು ವರ್ಷಗಳಲ್ಲಿ ಕನ್ನಡ- ಇಂಗ್ಲಿಷ್‌ ಲಿಪಿಗಳನ್ನು ಬರೆಯುವ ಅಭ್ಯಾಸ ಮಾಡಿಸಬಾರದು. ಅಂಕೆಗಳನ್ನು ಬರೆಯಲು ಕಲಿತರೆ ಸಾಕು. ಮೂರನೆಯ ತರಗತಿಯಿಂದ ಭಾಷೆಯ ಬೋಧನೆ ಲಿಖೀತ ಸಾಹಿತ್ಯವನ್ನು ಬಳಸಿಕೊಂಡೂ ನಡೆಯಬೇಕು. ಪರಿಸರ ಪ್ರೀತಿ, ಸಂವಿಧಾನದ ಆಶಯ ಮುಂತಾದವು ಮೌಲ್ಯ ಮತ್ತು ನೈತಿಕತೆಗೆ ಸಂಬಂಧಿಸಿದ ವಿಚಾರಗಳು. ಇವನ್ನು ದಿನಕ್ಕೆ ಒಂದು ಪಿರಿಯಡಿನಷ್ಟು ಅವಧಿಯ ಮೌಲ್ಯ ಶಿಕ್ಷಣದ ಮೂಲಕ ತಿಳಿಸಬಹುದು. ಅದಕ್ಕೆ ಪರೀಕ್ಷೆ ಅಗತ್ಯವಿಲ್ಲ. ಇನ್ನು ಭಾಷಾ ಪಠ್ಯಕ್ರಮದೊಳಗಿನ ಸಾಹಿತ್ಯದ ಮೂಲಕ ಹೇಗಿದ್ದರೂ ಹಲವಾರು ಸಾಮಾಜಿಕ ವಿಚಾರಗಳು ಮತ್ತು ಮೌಲ್ಯಗಳ ಪರಿಚಯ ಆಗಿಯೇ ತೀರುತ್ತದೆ.

ಈ ವ್ಯವಸ್ಥೆಯಲ್ಲಿ ಭಾಷಾ ಬೋಧನೆಗೆ ಹಾಗೂ ಗಣಿತಕ್ಕೆ ಸಾಕಷ್ಟು ಸಮಯ ಸಿಗುವುದರಿಂದ ಅವನ್ನು ಅತ್ಯಂತ ಪರಿಣಾಮಕಾರಿಯಾಗಿ ಬೋಧಿಸಲು ಸಾಧ್ಯ. ಐದಾರು ವರ್ಷಗಳ ಕಲಿಕೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳು ಕರಗತವಾಗಿ, ಅಲ್ಲಿಯವರೆಗಿನ ಗಣಿತದ ಹಂತಹಂತದ ಕಲಿಕೆ ಮೂಲಕ ತರ್ಕಶಕ್ತಿ ಬೆಳೆದರೆ ಅಂಥ ಮಕ್ಕಳು ನಾವೀಗ ಊಹಿಸಲೂ ಸಾಧ್ಯವಿಲ್ಲದಷ್ಟು ಚುರುಕಾದಾರು. ಅಲ್ಲದೆ ಅವರ ಮುಂದಿನ ಹಂತದ ಕಲಿಕೆ ಸುಲಲಿತವಾಗುವುದರಲ್ಲಿ ಸಂದೇಹವಿಲ್ಲ. ಕನ್ನಡ, ಇಂಗ್ಲಿಷ್‌ ಎರಡರಲ್ಲೂ ಮಕ್ಕಳು ಪ್ರಾವೀಣ್ಯ ಪಡೆಯುವುದರಿಂದ ಯಾವ ಮಾಧ್ಯಮ ಎನ್ನುವ ಪ್ರಶ್ನೆಯೇ ಅಪ್ರಸ್ತುತವಾಗುವಂತೆ ಆದೀತು. ಹೀಗಿದ್ದರೂ ಗಣಿತವನ್ನು ಯಾವ ಭಾಷೆಯಲ್ಲಿ ಬೋಧಿಸಬೇಕು ಎಂಬ ಪ್ರಶ್ನೆ ಬರುತ್ತದೆ. ಸಾಧ್ಯವಿದ್ದಷ್ಟು ಮಟ್ಟಿಗೆ ಎರಡೂ ಭಾಷೆಗಳಲ್ಲೂ ಬೋಧಿಸಬೇಕು. ಗಣಿತ ಪಠ್ಯಪುಸ್ತಕ ಒಟ್ಟೊಟ್ಟಿಗೇ ಎರಡೂ ಭಾಷೆಗಳಲ್ಲಿರಬೇಕು; ಅಂದರೆ ಉದಾಹರಣೆಗೆ ಎಡಪುಟದಲ್ಲಿ  ಕನ್ನಡ ಭಾಷೆಯ ಪಠ್ಯವಿದ್ದರೆ ಬಲಬದಿಯ ಪುಟಗಳಲ್ಲಿ ಅದೇ ವಿಚಾರ ಇಂಗ್ಲಿಷ್‌ ಭಾಷೆಯಲ್ಲಿರಬೇಕು.

ಆರನೆಯ ತರಗತಿಯ ನಂತರ ಕನ್ನಡ ಮತ್ತು ಇಂಗ್ಲಿಷ್‌ ಸೇರಿದಂತೆ ತುಳು, ಕೊಡವ, ಕೊಂಕಣಿಯಂಥ ಸ್ಥಳೀಯ ಭಾಷೆಗಳು, ತಮಿಳು, ಮಲಯಾಳದಂಥ ನೆರೆಯ ಭಾಷೆಗಳು ಹಾಗೂ ಹಿಂದಿ, ಸಂಸ್ಕೃತದಂಥ ಭಾರತವ್ಯಾಪಿ ಭಾಷೆಗಳು ಇವುಗಳಲ್ಲಿ ಯಾವುದಾದರೂ ಎರಡನ್ನು ಐಚ್ಛಿಕವಾಗಿ ಸೇರಿಸಿಕೊಳ್ಳಬಹುದು. ಪ್ರತಿ ಶಾಲೆಯಲ್ಲೂ ವಿದ್ಯಾರ್ಥಿಗಳ ಇಚ್ಛೆಯಂತೆ ಎಲ್ಲಾ ಭಾಷೆಗಳನ್ನೂ ಐಚ್ಚಿಕವಾಗಿ ನೀಡಲು ವ್ಯಾವಹಾರಿಕವಾಗಿ ಕಷ್ಟ. ಹೀಗಾಗಿ ಆರರಿಂದ ಎಂಟನೆಯ ತರಗತಿಯವರೆಗೆ ಜಿಲ್ಲಾವಾರು ನಿರ್ಧರಿಸಿ ಸ್ಥಳೀಯ ಅಥವಾ ನೆರೆಯ ಭಾಷೆಗೆ ಅವಕಾಶ, ಒಂಬತ್ತರಿಂದ ಹನ್ನೊಂದು ಅಥವಾ ಹನ್ನೆರಡನೆಯ ತರಗತಿಯವರೆಗೆ ಹಿಂದಿ ಅಥವಾ ಸಂಸ್ಕೃತ ಇವುಗಳಲ್ಲಿ ಒಂದು ಹೀಗೆ ಅವಕಾಶ ನೀಡಬಹುದು. ಹಾಗೆಯೇ ಇತಿಹಾಸ, ವಿಜ್ಞಾನ, ಪೌರನೀತಿ ಇತ್ಯಾದಿ ವಿಷಯಗಳನ್ನು ಆರನೆಯ ತರಗತಿಯ ನಂತರ ಪಠ್ಯಕ್ರಮದಲ್ಲಿ ಸೇರಿಸಿದರೆ ಸಾಕು. ದ್ವಿಬಾಷಾ ಪಠ್ಯಪುಸ್ತಕ ಪದ್ಧತಿ ಇಲ್ಲೂ ಮುಂದುವರಿಯಬೇಕು. ಪುಸ್ತಕ ದಪ್ಪವಾಗುವುದಾದರೆ ವರ್ಷಕ್ಕೆರಡು ಪುಸ್ತಕಗಳಿದ್ದರಾಯಿತು.

ಈ ಬಗೆಯ ಬೋಧನೆ-ಕಲಿಕೆ ಸಾಧ್ಯವಾಗಬೇಕಾದರೆ, ಬೋಧಕರು ಕೂಡ ಅದಕ್ಕೆ ತಕ್ಕಂತೆ ಸಜ್ಜುಗೊಳ್ಳಬೇಕಾದುದು ಅತ್ಯಂತ ಅಗತ್ಯ. ನಿರುದ್ಯೋಗ ನಿವಾರಣೆಗೊಳಿಸಲಿಕ್ಕಾಗಿ ಅಥವಾ ಉದ್ಯೋಗ ನೀಡಲಿಕ್ಕಾಗಿ ಶಿಕ್ಷಕರ ನೇಮಕ ಅಂತಾಗಬಾರದು. ತನ್ನಲ್ಲಿ ಬೋಧಿಸುವ ಕೌಶಲ ಇಲ್ಲ ಎಂದು ಮನವರಿಕೆಯಾದವರು ಆ ಕೌಶಲವನ್ನು ಶ್ರಮದಿಂದ ರೂಢಿಸಿಕೊಳ್ಳಬೇಕು ಅಥವಾ ರೂಢಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಅಂತಾದರೆ ಆ ಕ್ಷೇತ್ರದಲ್ಲಿ ಇರಬಾರದು. ಬೋಧಕರಲ್ಲಿ ಆ ಮಟ್ಟಿನ ಪ್ರಾಮಾಣಿಕತೆ ಮತ್ತು ಶ್ರದ್ಧೆ ಇಲ್ಲದೆ ಹೋದರೆ ಯಾವ ಉಪಕ್ರಮಗಳಿಂದಲೂ ಪ್ರಯೋಜನವಾಗದು.

– ಅಜಕ್ಕಳ ಗಿರೀಶ ಭಟ್‌

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.