ಮಡದಿಯೆಂಬ ಮಹಾಗುರು…


Team Udayavani, Feb 22, 2019, 12:30 AM IST

35.jpg

ಆತನ ಮನಸ್ಸಿಗೆ, ದೇಹಕ್ಕೆ ಆಸರೆಯಾಗಿ ನಿಂತುಬಿಟ್ಟಳು. ತನ್ನ ಬದುಕಿನ ಎಲ್ಲ ಸಮಯವನ್ನೂ ಅವನ ಆರೋಗ್ಯಕ್ಕೆ ಧಾರೆ ಎರೆದಳು. ಅವಳು ಅವನಿಗೆ ಮಡದಿ, ಗೆಳತಿ, ಮಾತೆ, ಗುರು, ವೈದ್ಯ ಎಲ್ಲ ಆಗಿಬಿಟ್ಟಳು. 

ಅವರು ಮತ್ತೆ ಬಂದಿದ್ದರು. ಬಹುಶಃ ಐದನೆಯ ಬಾರಿ. ಮತ್ತದೇ ಅವಸ್ಥೆ. ಮುಖದಲ್ಲಿ ಅದೇ ನೋವು. ಅವನು ಹೊಟ್ಟೆ ನೋವಿನಿಂದ ಒದ್ದಾಡುತ್ತಿದ್ದರೆ, ಇವಳು ಅವನ ನೋವನ್ನು ನೋಡಲಾರದೇ ವ್ಯಥೆ ಪಡುತ್ತಿದ್ದಳು. ಹೊಟ್ಟೆನೋವು ತಾನಾಗಿ ಬಂದದ್ದಲ್ಲ, ಅವನ ವ್ಯಸನದಿಂದಾಗಿ ಕಾಣಿಸಿಕೊಂಡದ್ದು. 

ಹೌದು, ಅವನು ಮದ್ಯವ್ಯಸನಿ. ಆಸ್ಪತ್ರೆಗೆ ಬಂದಾಗಲೊಮ್ಮೆ ಅತೀವ ನೋವಿನಿಂದಲೇ ಒಳರೋಗಿಯಾಗುತ್ತಿದ್ದ. ವೈದ್ಯಕೀಯ ಆರೈಕೆಯಿಂದಾಗಿ ನಾಲ್ಕೆದು ದಿನಗಳಲ್ಲಿ  ಮತ್ತೆ ಗೆಲುವಾಗುತ್ತಿದ್ದ. ಅವನ ಹೆಂಡತಿ ಮಾತ್ರ ಪ್ರತಿ ಬಾರಿಯೂ ಇವನ ಕಷ್ಟ ನೋಡದೇ ಸಂಕಟ ಪಡುತ್ತಿದ್ದಳು. ಆದರೆ ಎಂದೂ ಗೊಣಗಿದವಳಲ್ಲ. ಅವನ ಆರೈಕೆ, ಔಷಧೋಪಚಾರ ಕಡಿಮೆ ಮಾಡಿದವಳಲ್ಲ. ಅವನೂ ಎಲ್ಲ ಮದ್ಯವ್ಯಸನಿಗಳಂತೆಯೇ.. ಹೊಟ್ಟೆನೋವು ಬಂದಾಗಲೆಲ್ಲ ಮದ್ಯಪಾನ ಬಿಡುವ ಪ್ರತಿಜ್ಞೆ ಮಾಡಿಯೇ ಮನೆಗೆ ಹೋಗುತ್ತಿದ್ದ. ಆದರೆ ಅದು ಆಸ್ಪತ್ರೆ ವೈರಾಗ್ಯ ಮಾತ್ರ!  ಮತ್ತೆ ತಿಂಗಳಿಗೋ, ಎರಡು ತಿಂಗಳಿಗೋ ಯಥಾ ಸ್ಥಿತಿ. 

ನಾನು ಬಹಳಷ್ಟು ಮದ್ಯವ್ಯಸನಿಗಳನ್ನು ನೋಡಿದ್ದೇನೆ. ಅವರ ಜೊತೆ ಬಂದ ಮನೆಮಂದಿಯೆಲ್ಲ ಅವರ ಬಗ್ಗೆ ಕೆಟ್ಟದಾಗಿ ಮಾತಾ ಡುವುದೂ, ಅವರ ಬಗ್ಗೆ ಬೇಸರ ವ್ಯಕ್ತಪಡಿಸುವುದೂ ಸಾಮಾನ್ಯ. ಇಡೀ ಸಂಸಾರಕ್ಕೆ ಅವರು ಬೇಡದವರಾಗಿರುತ್ತಾರೆ. ಆದರೆ ಇವರಲ್ಲಿ ನಾನು ಬೇರೆಯದೇ ರೀತಿಯ ಸಂಬಂಧ ಗಮನಿಸಿದ್ದೆ. ಅವಳೆಂದೂ  ಇವನ ಬಗೆಗೆ ಕೆಟ್ಟದ್ದನ್ನು ಮಾತಾಡಿದವಳಲ್ಲ. ಸಿಟ್ಟಿಗೆದ್ದವಳಲ್ಲ. ಹೊರನೋಟಕ್ಕೆ ಅವರದು ಅನುರೂಪ ಜೋಡಿ.  ಮದುವೆಯಾಗಿ ನಾಲ್ಕೈದು ವರ್ಷ. ಮದುವೆಗಿಂತ ಮೊದಲೇ ಆತ ಮದ್ಯ ಸೇವಿಸುತ್ತಿದ್ದನಂತೆ. ಎಲ್ಲರಂತೆ ಅವನೂ “ಗೆಳೆಯರ’ ಒತ್ತಾಯಕ್ಕೆ ಮತ್ತು ಕುತೂಹಲಕ್ಕೆ ರುಚಿ ನೋಡಿದವ. ಆಮೇಲೆ ಚಟ ಹಚ್ಚಿಕೊಂಡವ.  ಮದ್ಯದ “ಮಹಾಗುಣ’ವೆಂದರೆ ಒಮ್ಮೆ ರುಚಿ ನೋಡಿದವರನ್ನು ಅವರಿಗರಿವಿಲ್ಲದೆಯೇ ತನ್ನ ಬಂಧದೊಳಗೆ ಹಿಡಿದಿಟ್ಟುಕೊಂಡುಬಿಡುತ್ತದೆ. ಅದು ಅವರಿಗೆ ಅರಿವಾಗುವು ದರೊಳಗೆ ಅಮಲಿನ ಪರಿಧಿಯೊಳಗೆ ಸುತ್ತತೊಡಗಿರುತ್ತಾರೆ. ಇವನಿಗೂ ಆಗಿದ್ದು ಅದೇ. ಆದರೆ ಇವಳಿಗದು ಮದುವೆಗಿಂತ ಮೊದಲು ಗೊತ್ತಿರಲಿಲ್ಲ. “ಲೋಕರೂಢಿ’ಯಂತೆ ಇವರದೂ ಸಾವಿರ ಸುಳ್ಳು ಹೇಳಿ ನಿಶ್ಚಯಿಸಿದ ಮದುವೆ. ಎಲ್ಲ ವರಮಹಾಶ ಯರಂತೆ ಅವನೂ ಸರ್ವಗುಣ ಸಂಪನ್ನ, ಸಾಧುಪ್ರಾಣಿ ಎಂದೇ ವರ್ಣಿಸಲ್ಪಟ್ಟವ. ಮದುವೆಯಾದ ಹೊಸದರಲ್ಲಿ ಹೆಂಡತಿಯೇ ಒಂದು ಆಕರ್ಷಣೆಯಾದಾಗ ಒಂದಿಷ್ಟು ದಿನ ಮದ್ಯವನ್ನೇನೋ ತ್ಯಜಿಸಿದ್ದ. ಆಮೇಲೆ ಶುರುವಾದ ಇವನ “ಮದ್ಯಯಾತ್ರೆ’ ಅವ್ಯಾಹತ. ಮೊದಮೊದಲು ವಾರಕ್ಕೊಮ್ಮೆ, ನಾಲ್ಕು ದಿನಕ್ಕೊಮ್ಮೆ ಕುಡಿಯುವವ ಈಗ ನಿತ್ಯಾರಾಧಕ. ಹೆಚ್ಚು ಕುಡಿದಾಗಲೊಮ್ಮೆ ಹೊಟ್ಟೆನೋವಿನಿಂದ ನರಳುತ್ತ ಆಸ್ಪತ್ರೆಗೆ. ಮತ್ತದೇ ಪುನರಾವರ್ತನೆ. ಅತ್ತ ಮದ್ಯ ಕೊಳ್ಳಲು ದುಡ್ಡು, ಇತ್ತ ಆಸ್ಪತ್ರೆಗೆ ದುಡ್ಡು. ಪೂರ್ಣ ವ್ಯಸನಿಯಾಗಿದ್ದ ಆತನ ಆದಾಯವೂ ಕಡಿಮೆ. ಇವನ ಖರ್ಚು ಹಾಗೂ ಮನೆಯ ಖರ್ಚು ಎರಡನ್ನೂ ನಿಭಾಯಿಸುತ್ತಿದ್ದದ್ದೂ ಅವನ ಹೆಂಡತಿಯೇ. ಅವಳೊಂದು ಹೊಲಿಗೆ ಯಂತ್ರ ಇಟ್ಟು ಕೊಂಡು, ಹಗಲಿರುಳೂ ದುಡಿಯುತ್ತ ಎಲ್ಲ ತೂಗಿಸುತ್ತಿದ್ದಳು. ಕುಡಿದು ಬಂದರೂ ಶಾಂತವಾಗಿಯೇ ಅವನಿಗೆ ಉಣಬಡಿಸು ತ್ತಿದ್ದಳು, ಭೋಜ್ಯೇಷು ಮಾತಾ!. ಕಷ್ಟವೆಂದರೆ ಖರ್ಚು, ವೆಚ್ಚವನ್ನೇನೋ ಹೇಗೋ ನಿಭಾಯಿಸಬಹುದು, ಆದರೆ ಮನಃಶಾಂತಿ? ನಾಲ್ಕು ವರ್ಷವಾದರೂ ಮಕ್ಕಳಾಗಿರಲಿಲ್ಲ. ಮೇಲೆ “ಕುಡುಕನ ಹೆಂಡತಿ’ ಎಂಬ ಬಿರುದು ಬೇರೆ!

ಮದ್ಯವ್ಯಸನದಿಂದ ಮುಳುಗಿದ ಸಂಸಾರಗಳೆಷ್ಟೋ, ಒಡೆದ ಮನಸ್ಸುಗಳೆಷ್ಟೋ, ಬೀದಿಪಾಲಾದ ಕುಟುಂಬಗಳೆಷ್ಟೋ. ಆದರೂ ಅದರಷ್ಟು ವ್ಯಾಪಕವಾಗಿ ಆರೋಗ್ಯಹಾನಿ, ಆಸ್ತಿಹಾನಿ ಮಾಡಿದ ಚಟ ಇನ್ನೊಂದಿಲ್ಲ. ವಿಚಿತ್ರವೆಂದರೆ ಶ್ರೀಮಂತರು, ಸಮಾಜದ ಉತ್ಛಸ್ಥರದಲ್ಲಿರುವವರು ಕುಡಿದರೂ ಕೂಡ ಒಳ್ಳೆಯ ಪೌಷ್ಟಿಕ ಆಹಾರ ಸೇವಿಸುತ್ತ, ಚಟವನ್ನು ತಮ್ಮ ಆಧೀನದಲ್ಲಿಟ್ಟುಕೊಂಡು, ಸಮಾಜದಲ್ಲಿ ಒಳ್ಳೆಯ ಪೋಜು ಕೊಡುತ್ತ ಆರಾಮವಾಗಿರುತ್ತಾರೆ. ಮೇಲಿನಂತಸ್ತಿನ ಇಂಥ  ಬಲುಜನರಿಗೆ ದುಃಖ ಮತ್ತು ಸುಖ ಎರಡೂ ಕೊನೆಗೊಳ್ಳುವುದು ರಾತ್ರಿಯ ಸಮಾರಾಧನೆಯಿಂದಲೇ. ಕುಡಿತವಿಲ್ಲದ ಪಾರ್ಟಿಗಳಿಗೆ ಬೆಲೆಯೇ ಇಲ್ಲ.  ಕುಡಿಯಲೊಂದು ನೆಪ ಬೇಕು, ಅಷ್ಟೇ. ಅವರಿಗೆ “ಸೋಶಲೈಜೆಶನ್‌’ ಎಂಬ ಅಧಿಕೃತ ಮುದ್ರೆಯ ಅಡಿಯಲ್ಲಿ ಮದ್ಯಸೇವನೆ “ಅವಶ್ಯಕ’ವಾಗಿರುತ್ತದೆ. ಅದು ಅನೇಕ ಸ್ನೇಹಗಳಿಗೆ, ಮತ್ತು ಕಾರ್ಯಸಾಧನೆಗೆ ರಹದಾರಿ ಕೂಡ ಆಗಿಬಿಟ್ಟಿದೆ. 

ಅದಕ್ಕೇ ಉನ್ನತ ಮಟ್ಟದ’ ಪಾರ್ಟಿಗಳಲ್ಲಿ ಮದ್ಯ ಸೇವಿಸದವರನ್ನು ವಿಚಿತ್ರ ಪ್ರಾಣಿಯಂತೆ, ನಿಕೃಷ್ಟವಾಗಿ ನೋಡಲಾಗುತ್ತದೆ. ಮತ್ತೆ ಅನೇಕ ಪಾರ್ಟಿಗಳಲ್ಲಿ ನಾನದನ್ನು ಸ್ವತಃ ಅನುಭವಿಸಿದ್ದೇನೆ, ಕೂಡ. ಮದ್ಯ ಸೇವಿಸುವವರಿಗೆ ಕ್ರಿಸ್ಟಲ್‌ ಕ್ಲಿಯರ್‌ ಗ್ಲಾಸುಗಳಲ್ಲಿ, ಚಿನ್ನವರ್ಣದ ದ್ರವ ಬಗ್ಗಿಸಿ ಕೊಡುವ ವೇಟರ್‌ಗಳ ಮುಖದ ಮೇಲೊಂದು ಮಿಂಚು ಕಂಡಿದ್ದೇನೆ. ಅವರು ಭಕ್ತಿಯಿಂದ ತಂದಿಡುವ ಐಸ್‌ ಕ್ಯೂಬುಗಳು, ಮುತುವರ್ಜಿಯಿಂದ ಓಪನ್‌ ಮಾಡುವ ಸೋಡಾ ಬಾಟಲಿಗಳು, ಬೇರೆಯದೇ ಒಂದು ಲೋಕವನ್ನು ಸೃಷ್ಟಿಸಿಬಿಡುತ್ತವೆ. ಅದಕ್ಕೆ ಮರುಳಾದವರೆಷ್ಟೋ!   ಅದೇ ಕುಡಿಯಲಾರದ ನಮ್ಮಂಥವರಿಗೆ ಸಾಫr… ಡ್ರಿಂಕÕ… ಕೊಡುವಾಗ “ಡಿನ್ಪೋಜೆಬಲ್‌ ಗ್ಲಾಸು’ಗಳನ್ನು ಇತ್ತ ಸರಿಸಿ ಅತ್ತ ಮುಖ ತಿರುವಿಬಿಡುತ್ತಾರೆ, ನಮ್ಮನ್ನೂ “ಡಿನ್ಪೋಜೆಬಲ್‌’ ವರ್ಗಕ್ಕೆ ಸೇರಿಸಿ! ಹೀಗಾಗಿ ಶ್ರೀಮಂತರ ಸ್ನೇಹವರ್ಧನೆಗೆ, ತನ್ಮೂಲಕ ಅಂತಸ್ತು, ಆಸ್ತಿವರ್ಧನೆಗೆ “ಮದ್ಯಮಾರ್ಗ’ ಅವಶ್ಯಕವಾಗುತ್ತದೆ. ಆದರೆ ಬಡವರಿಗೆ, ಶ್ರಮಜೀವಿಗಳಿಗೆ ಅಂಟಿದ ಈ ಚಟ ಆರೋಗ್ಯವನ್ನೂ, ಆಸ್ತಿಯನ್ನೂ ಕೂಡಿಯೇ ಮುಗಿಸಿಬಿಡುತ್ತದೆ. ಕುಡಿಯುವುದು ಒಂದು ಗೀಳಾದರಂತೂ ಮುಗಿದೇ ಹೋಯಿತು. ದಿನವೆಲ್ಲ ಕುಡಿದು ಮನೆಯ ಹೊರಗೆ, ಒಳಗೆ ರಂಪಾಟ ಮಾಡುತ್ತ ಸಮಾಜಕ್ಕೆ ಹೊರೆಯಾಗಿಬಿಡುತ್ತಾರೆ.

ಮದ್ಯಪಾನದಿಂದಾಗಿ ಶಾರೀರಿಕ ಸಮಸ್ಯೆಗಳು ಹಲವಾರು. ಅದು ಪ್ರಾರಂಭದಲ್ಲಿ ಮನಸ್ಸಿಗೆ ಹಿತ ನೀಡಿದರೂ ಕಾಲಾಂತರದಲ್ಲಿ ಶರೀರದ ಅನೇಕ ಅಂಗಾಂಗಗಳನ್ನು ನಿರ್ನಾಮ ಮಾಡಿಬಿಡುತ್ತದೆ. ಮದ್ಯಪಾನದಿಂದ ಮೆದುಳಿನಲ್ಲಿ “ಡೋಪಮಿನ್‌’ ಎಂಬ ಉತ್ತೇಜಕ ಅಂತಃಸ್ರಾವ ಬಿಡುಗಡೆಯಾಗುವುದರಿಂದ ಹಾಯಾದ ಅನುಭವ ನೀಡುತ್ತದೆ. ಹೀಗಾಗಿ ಇನ್ನಷ್ಟು ಕುಡಿಯಲು ಪ್ರಚೋದನೆ ನೀಡು ತ್ತದೆ. ಅನಿಯಂತ್ರಿತ ಕುಡಿತ ದೈಹಿಕ ಅನಾರೋಗ್ಯಕ್ಕೆ ಕಾರಣವಾ ಗುತ್ತದೆ. ಮದ್ಯ ಸೇವಿಸಿದ ಕೆಲವೇ ಕ್ಷಣಗಳಲ್ಲಿ ಅದು ರಕ್ತದೊಡನೆ ಸೇರ್ಪಡೆಗೊಳ್ಳುತ್ತದೆ. ಜಠರದಲ್ಲಿಯೇ ಅದರ 30% ಗೂ ಹೆಚ್ಚು ಪ್ರಮಾಣ ಹೀರಲ್ಪಡುತ್ತದೆ. ಅಲ್ಲಿಂದ ಸೀದಾ ಯಕೃತ್ತಿಗೆ. ತನ್ನ ಉಳಿದೆಲ್ಲ ಕೆಲಸಗಳನ್ನು ಬದಿಗಿಟ್ಟು ಮದ್ಯವನ್ನು ಉತ್ಕರ್ಷಣಗೊಳಿ ಸುವುದರಲ್ಲೇ ಯಕೃತ್ತಿನ ಜೀವಕೋಶಗಳು ತೊಡಗಿಕೊಳ್ಳುತ್ತವೆ. 

ಯಾಕೆಂದರೆ ಜೈವಿಕ ಭಾಷೆಯಲ್ಲಿ ಮದ್ಯ ಒಂದು ವಿಷಕಾರಿ ಅಂಶ. ಆದಷ್ಟು ಬೇಗ ಅದನ್ನು ಚಯಾಪಚಯಿಸಿ ಅದನ್ನು ನೀರು ಹಾಗೂ ಇಂಗಾಲದ ಡೈ ಆಕ್ಸೆ„ಡ್‌ ಆಗಿ ಪರಿವರ್ತಿಸಿ ನಿರಾಳವಾಗುವ ಕಾರ್ಯ ಅದರದು. ಶರ್ಕರ ಪಿಷ್ಟ , ಮೇಧಸ್ಸು ಹಾಗೂ ಪ್ರೊಟೀನುಗಳನ್ನು  ಪರಿವರ್ತಿಸಿ ಯಕೃತ್ತಿನಲ್ಲಿ ಹಾಗೂ ಬೇರೆ ಅಂಗಗಳಲ್ಲಿ  ಶೇಖರಿಸಲು ಸಾಧ್ಯವಿದೆ. ಆದರೆ ಮದ್ಯ ಹಾಗಲ್ಲ. ಅದನ್ನು ಯಾವ ರೀತಿಯಿಂದಲೂ ಪರಿವರ್ತಿಸಿ ಶೇಖರಿಸಲು ಸಾಧ್ಯವೇ ಇಲ್ಲ. ಹೀಗಾಗಿ ಬಂದದ್ದನ್ನೆಲ್ಲ ಶುದ್ಧಗೊಳಿಸಲೇ ಬೇಕು, ಅದೂ ತುರ್ತಾಗಿ. ಮದ್ಯದ ಅಂಶ ಹೆಚ್ಚಿದ್ದಾಗ “ಅಸಿಟಾಲ್ಡಿಹೈಡ್‌’ ಎಂಬ ಹಾನಿಕಾರಕ ರಾಸಾಯನಿಕ ಬಿಡುಗಡೆಯಾಗುತ್ತದೆ. ಅದು ಅನೇಕ ಕ್ಯಾನ್ಸರ್‌ಗಳಿಗೆ ಕಾರಣವಾಗುತ್ತದೆ. 

ಮದ್ಯವ್ಯಸನಿಗಳಲ್ಲಿ ಬಿಡುವಿಲ್ಲದೆ ಮದ್ಯ ರಕ್ತ ಸೇರುವುದರಿಂದ ಯಕೃತ್ತು ಇದೇ ಕೆಲಸದಲ್ಲಿ ನಿರತವಾಗುವುದು ಅನಿವಾರ್ಯವಾ ಗುತ್ತದೆ. ಹೀಗಾಗಿ ತನ್ನೊಳಗೆ ಶೇಖರವಾಗುತ್ತಿರುವ ಮೇಧಸ್ಸನ್ನು ಕೂಡ ಚಯಾಪಚಯಿಸಲು ಸಾಧ್ಯವಾಗದೆ ಫ್ಯಾಟಿ ಲಿವರ್‌ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಹಂತದಲ್ಲಿ ವ್ಯಕ್ತಿ ಕುಡಿತವನ್ನು ಬಿಟ್ಟರೆ ಆರು ವಾರಗಳಲ್ಲಿ ಯಕೃತ್ತು ಪುನರಾರೋಗ್ಯ ಹೊಂದುತ್ತದೆ. ಇಲ್ಲವಾದರೆ  ಸಿರೋಸಿಸ್‌ ಎಂಬ ಮರಳಿಬಾರದ ಹಂತ ತಲುಪು ತ್ತದೆ. ಆಗ ಮದ್ಯವರ್ಜನೆ ಮಾಡಿದರೂ ಮೊದಲಿನ ಆರೋಗ್ಯ ಸಾಧ್ಯವಾಗದು. ಉಪಯೋಗ, ದುರುಪಯೋಗ, ಸಮಸ್ಯಾತ್ಮಕ ಉಪಯೋಗ, ಹಾನಿಕಾರಕ ಉಪಯೋಗ, ದುವ್ಯìಸನ ಅಥವಾ ಗೀಳು ಇವು ಮದ್ಯಪಾನದ ಹಂತಗಳು. ಆದರೆ ಎಲ್ಲ ಹಂತಗಳಲ್ಲೂ ಮದ್ಯ ಒಂದಿಷ್ಟಾದರೂ ಹಾನಿಯನ್ನು ಮಾಡಿಯೇ ತೀರುತ್ತದೆ. ಮಾನಸಿಕ, ಕೌಟುಂಬಿಕ, ಸಾಮಾಜಿಕ, ಆರ್ಥಿಕ ಸಮಸ್ಯೆಗಳಲ್ಲದೆ, ಜಠರದ ಹುಣ್ಣು, ರಕ್ತವಾಂತಿ, ಜೀರ್ಣಾಂಗವ್ಯೂಹದ ಕ್ಯಾನ್ಸರ್‌ಗಳು, ಮೇದೋಜೀರಕ ಉರಿಯೂತ, ಹೃದಯದ ಕಾಯಿಲೆಗಳು, ನರಮಂಡಲಕ್ಕೆ ಹಾನಿ ಇತ್ಯಾದಿಗಳು ಮದ್ಯಪಾನದಿಂದಾಗುವ ದುಷ್ಪರಿಣಾಮಗಳು. ಮದ್ಯಪಾನಿಯ ದಾಂಪತ್ಯವಂತೂ ನರಕ ಸದೃಶ. ಹೊಂದಾಣಿಕೆಯಿಲ್ಲದ ಬದುಕು,ಲೈಂಗಿಕ ದುರ್ಬಲತೆ ಸರ್ವೇಸಾಮಾನ್ಯ. “ಮ್ಯಾಕ್‌ಬೆತ್‌’ ನಾಟಕದಲ್ಲಿ ಶೇಕ್ಸ್ ಪಿಯರ್‌ ಹೇಳುವ ಹಾಗೆ It Provokes the Desire but takes away the Performance.! ಇವುಗಳಲ್ಲದೆ ಖನ್ನತೆ, ಆತ್ಮಹತ್ಯೆಗಳು, ರಸ್ತೆ ಅಪಘಾತಗಳು, ಅಪರಾಧಗಳು ಮದ್ಯಪಾನದಿಂದ ಉದ್ಭವಿಸುವ ಅಡ್ಡ ಪರಿಣಾಮಗಳು. 

ಈ ಬಾರಿ ಆತ ತುಂಬ ಗಂಭೀರ ಸ್ಥಿತಿಯಲ್ಲಿದ್ದ. ಆತನಿಗೆ “ಮದ್ಯಪಾನದಿಂದಾಗುವ ಮೇದೋಜೀರಕ ಗ್ರಂಥಿಯ ಉರಿಯೂತ’ (Alcoholic Acute Pancreatitis). ಅದೊಂದು ಮಾರಣಾಂತಿಕವಾಗಬಹುದಾದ ರೋಗ. ಮೇದೋಜೀರಕ ಗ್ರಂಥಿಯಲ್ಲಿ ಪಚನಕ್ರಿಯೆಗೆ ಅವಶ್ಯಕವಾದ ಕಿಣ್ವಗಳು ತಯಾರಾಗುತ್ತವೆ. ನಾವು ಉಂಡಿದ್ದನ್ನೆಲ್ಲ ಕರಗಿಸುವ, ಮೀನು, ಮಾಂಸಗಳನ್ನೇ ನಿರಾಯಾಸವಾಗಿ ಪಚನಗೊಳಿಸುವ ಶಕ್ತಿಶಾಲಿ ಸ್ರವಿಕೆಗಳವು. ಈ ಸ್ರವಿಕೆಗಳು ಸಣ್ಣ ಕರುಳಿನಲ್ಲಿ ಸುರಿಯಲ್ಪಟ್ಟಾಗ ಮಾತ್ರ ಸಕ್ರಿಯಗೊಳ್ಳುತ್ತವೆ. ಸಣ್ಣ ಕರುಳಿನಲ್ಲಿ  ಈ ಸ್ರವಿಕೆಗಳನ್ನು ತಡೆದುಕೊಳ್ಳುವ ಲೋಳೊ³ರೆಯ ಕವಚವಿರುತ್ತದೆ. ಆದರೆ  ಮೇದೋಜೀರಕ ಗ್ರಂಥಿಯಲ್ಲಿ ಇಲ್ಲ. ಮದ್ಯಪಾನದಿಂದ ಮೇದೋಜೀರಕ ಗ್ರಂಥಿ ಉರಿಯೂತ ಹೊಂದಿದಾಗ ಆ ಗ್ರಂಥಿಯಲ್ಲಿಯೇ ಈ ಕಿಣ್ವಗಳು ಸಕ್ರಿಯಗೊಂಡು ಗ್ರಂಥಿಯನ್ನೇ ಜೀರ್ಣಿಸಲು ಪ್ರಾರಂಭಿಸಿಬಿಡುತ್ತವೆ. ಕಿಣ್ವಗಳಿಗೆ ಅದೂ ಒಂದು ಮಾಂಸ ಮಾತ್ರ!  ಹೀಗಾಗಿ ಈ ರೋಗವನ್ನು ಗುಣಪಡಿಸುವುದು ತುಂಬ ಸವಾಲಿನ ಕೆಲಸ. ಅದು ಬಡವರನ್ನು ಕಾಡುವ, ಶ್ರೀಮಂತ ಜೇಬಿನ ಅವಶ್ಯಕತೆ ಇರುವ ರೋಗ..! 

ಅವನದು ಒಂದು ವಾರ ಸಾವು ಬದುಕಿನ ನಡುವಿನ ಸೆಣಸಾಟ. ಕೊನೆಗೂ ಗುಣಮುಖನಾದ. ನಮ್ಮ ಉಪಚಾರ, ಅವಳ ಆರೈಕೆ ಫ‌ಲಿತಾಂಶ ನೀಡಿದ್ದವು. ಆದರೆ ಈ ಬಾರಿ ಅವರು ಹೋಗುವಾಗ ನನ್ನ ಚೇಂಬರ್‌ನಲ್ಲಿ ಕುಳ್ಳಿರಿಸಿ, ಮತ್ತೂಮ್ಮೆ ಎಲ್ಲ ತಿಳಿಹೇಳಿದೆ. ಮರಣದ ದಾರಿಯನ್ನು ಅದಾಗಲೇ ಅರ್ಧ ಕ್ರಮಿಸಿ ತಿರುಗಿ ಬಂದಿ¨ªಾ ನೆಂದೂ, ಇನ್ನೊಮ್ಮೆ ಹೀಗಾದರೆ ಬದುಕಿ ಉಳಿಯುವುದು ಕಷ್ಟ ವೆಂದೂ ತಿಳಿಸಿದೆ. ಅವನು ಕುಡಿಯುವುದನ್ನು ಬಿಡಲು ಮನಸ್ಸು ಮಾಡಿದರೆ ಅದಕ್ಕಾಗಿಯೇ ಒಳ್ಳೆಯ ಔಷಧಿಗಳೂ, ಕೇಂದ್ರ ಗಳೂ ಇವೆ ಎಂದು ತಿಳಿಹೇಳಿದೆ. ಕುಡಿಯುವುದು ಗೀಳಾದಾಗ ಮನಸ್ಸಲ್ಲದೆ ದೇಹದ ಎಲ್ಲ ಜೀವಕೋಶಗಳೂ “ಮದ್ಯಾವಲಂಬಿ’ಯಾಗಿರುತ್ತವೆ.  ಮದ್ಯವಿಲ್ಲದೆ ಬದುಕೇ ಇಲ್ಲದ ಸ್ಥಿತಿ. ಅವನು ತಲೆತಗ್ಗಿಸಿ ಕುಳಿತಿದ್ದ. ಇವಳು ಅವನೆಡೆ ನೋಡು ತ್ತಿದ್ದಳು. ಆದರೆ ಅವಳ ಮುಖದಲ್ಲಿ ಸಿಟ್ಟಿರಲಿಲ್ಲ, ಅಲ್ಲೇನೋ ದೃಢ ನಿರ್ಧಾರ. “ನಿಮ್ಮ ಉಪಕಾರ ಭಾಳ ಆತ್ರಿ, ನಾ ಬರ್ತೀನ್ರಿ, ಸಾಹೇ ಬರ..’ ಅಂದವಳು ಗಂಡನಿಗೆ ಆಸರೆಯಾಗುತ್ತ ಹೊರನಡೆದಿದ್ದಳು. ಅವನೆಡೆಗೆ ಅವಳದು ಅವಿಚ್ಛಿನ್ನ ಪ್ರೀತಿ. ಕ್ಷಮಯಾ ಧರಿತ್ರೀ..

ಮುಂದೆ ಅನೇಕ ತಿಂಗಳುಗಳವರೆಗೆ ಅವರು ಬರಲಿಲ್ಲ. ಬಹುಶಃ ಬೇರೆ ವೈದ್ಯರೆಡೆ ಹೋಗಿರಬಹುದು ಅಂದುಕೊಂಡೆ. ಅಥವಾ ಅವನು ಕುಡಿದು ಪೂರಾ ಹಾಳಾಗಿಬಿಟ್ಟನೇನೋ, ಎಂಬ ಆತಂಕ ಕಾಡುತ್ತಿತ್ತು. ಆದರೆ ಅವೆರಡೂ ಆಗಿರಲಿಲ್ಲ. ಅವನ ಹೆಂಡತಿ ಪವಾಡವನ್ನೇ ಮಾಡಿಬಿಟ್ಟಿದ್ದಳು. ಇತ್ತೀಚೆಗೆ ಅವರು ಮತ್ತೆ ಬಂದಿದ್ದರು. ಇಬ್ಬರೂ ಗೆಲುವಾಗಿದ್ದರು.ಅವನು ಆರೋಗ್ಯವಾಗಿದ್ದ. ಜೊತೆಗೇ ಅವಳ ಬಗಲಲ್ಲೊಂದು ಮಗು.! ನನಗೆ ಆನಂದಾಶ್ಚರ್ಯ. ಹೇಗೆ ಸಾಧ್ಯವಾಯಿತೆಂದು ಕೇಳಿದರೆ ಅವಳೊಂದು ಸುಂದರ ಸಾಧನೆಯ “ಕತೆ’ ಹೇಳಿದಳು. ಮನೆ ತಲುಪಿದೊಡನೆ ಇಬ್ಬರದೂ ಸಮಾಲೋಚನೆ. ಅವನದು ಮದ್ಯ ಬಿಡುವ ಮನಸ್ಸು, ಆದರೆ ದೇಹ ಅವಲಂಬಿತವಾಗಿದೆ. ಆದರೆ ಇವಳದು ವ್ಯಸನ ಬಿಡಿಸುವ ದೃಢನಿರ್ಧಾರ. ಮುಂದಿನದೆಲ್ಲ ಸಲೀಸು. ಅವನನ್ನು ಮನೆಯಿಂದ ಹೊರಗೆ ಬಿಡಲಿಲ್ಲ. ಮನೆಯಲ್ಲೇ ಮದ್ಯ ತಂದಿಟ್ಟಳು. ತಾನೇ ಬಗ್ಗಿಸಿ ಕೊಡತೊಡಗಿದಳು. ಆದರೆ ಅಲ್ಲೂ ಒಂದು ಜಾಣ್ಮೆ. ಕೊಡುವ ಪ್ರಮಾಣ ದಿನ ದಿನಕ್ಕೂ ಕಡಿಮೆ. ಜೊತೆಗೇ ಪೌಷ್ಟಿಕ ಆಹಾರ. ಆತನ ಮನಸ್ಸಿಗೆ, ದೇಹಕ್ಕೆ ಆಸರೆಯಾಗಿ ನಿಂತುಬಿಟ್ಟಳು. ತನ್ನ ಬದುಕಿನ ಎಲ್ಲ ಸಮಯವನ್ನೂ ಅವನ ಆರೋಗ್ಯಕ್ಕೆ ಧಾರೆ ಎರೆದಳು. ಅವಳು ಅವನಿಗೆ ಮಡದಿ, ಗೆಳತಿ, ಮಾತೆ, ಗುರು, ವೈದ್ಯ ಎಲ್ಲ ಆಗಿಬಿಟ್ಟಳು. ಆರು ತಿಂಗಳ ತಪಸ್ಸಿನಂಥ ಪ್ರಯತ್ನ ಫ‌ಲನೀಡಿತ್ತು.  ಅವನು ಮದ್ಯ ತ್ಯಜಿಸಿಬಿಟ್ಟಿದ್ದ ! ಮುಂದಿನದೆಲ್ಲ  ಸೌಖ್ಯ ಮಾತ್ರ. ಮಡಿಲಲ್ಲೊಂದು ಮಗು, ಮುಖದಲ್ಲಿ ತೃಪ್ತಿಯ  ನಗು..!

ಪ್ರೀತಿಗೆ ಎಲ್ಲವನ್ನೂ ಗೆಲ್ಲುವ ಶಕ್ತಿ ಇದೆ, ಎಂದು ಮತ್ತೂಮ್ಮೆ ಸಾಬೀತಾಯಿತು…

ಡಾ. ಶಿವಾನಂದ ಕುಬಸದ

ಟಾಪ್ ನ್ಯೂಸ್

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

4-manohar-prasad

ನುಡಿನಮನ- ಪತ್ರಿಕಾರಂಗದ ಮನೋಹರ ಪ್ರಸಾದ್‌ ಕರಾವಳಿಯ ರಾಯಭಾರಿ

1-dasdsad

Yakshagana; ಮಾತಿನ ಜರಡಿ: ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Shivratri 2024; ದಕ್ಷಿಣ ಕಾಶಿ, ಸಂಗಮ ಕ್ಷೇತ್ರ ಎನಿಸಿಕೊಂಡ ಶ್ರೀ ಸಹಸ್ತ್ರಲಿಂಗೇಶ್ವರನ ಆಲಯ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.