ಮಹಾಮಸ್ತಕಾಭಿಷೇಕ : ಅಚ್ಚರಿ ಮೂಡಿಸುತ್ತಿದೆ “3ಡಿ ಪ್ರದರ್ಶನ”
Team Udayavani, Feb 15, 2019, 11:38 AM IST
ಧರ್ಮಸ್ಥಳ: ಇಳಿಸಂಜೆಯ ಮಬ್ಬು, ತಂಗಾಳಿಯ ಹಿತವಾದ ಸ್ಪರ್ಶ, ಮೆಲುದನಿಯ ಸಂಗೀತ ವರ್ಣಮಯ ಬೆಳಕಿನ ಲಯಬದ್ಧ ಅಲಂಕಾರದೊಂದಿಗೆ ಎತ್ತರದ ರತ್ನಗಿರಿ ಬೆಟ್ಟದಲ್ಲಿ ಭಕ್ತಿ-ಭಾವ ಪರವತೆಯ ಅದ್ಭುತ ಕಥನದ ಅನಾವರಣ. ಭಗವಾನ್ ಬಾಹುಬಲಿಯ ಮೂರ್ತಿಯನ್ನೇ ರಂಗಸ್ಥಳವಾಗಿಸಿ ದೃಶ್ಯ-ಶ್ರವ್ಯಗಳ ಅಪೂರ್ವ ಸಂಗಮದ ಮೂಲಕ ಚರಿತ್ರೆಯನ್ನು ವಿವರಿಸುವ ಪರಿಯಿದು.
ಮೂರ್ತಿಯೇ ಕಥೆ ಹೇಳುವಂತೆ ವಿಭಿನ್ನ ಪರಿಕಲ್ಪನೆಯಲ್ಲಿ, ಭಗವಾನ್ ಬಾಹುಬಲಿಯ 4 ನೇ ಮಹಾಮಸ್ತಕಾಭಿಷೇಕದ ಪ್ರಯುಕ್ತ ಭಾರತದಲ್ಲೇ ಇದೇ ಮೊದಲ ಬಾರಿಗೆ ಎಂಬಂತೆ ಮೂರ್ತಿಯ ಮೇಲೆ 3ಡಿ ತಂತ್ರಜ್ಞಾನದ ಮೂಲಕ ಬಾಹುಬಲಿಯ ಆದರ್ಶ ಕಥನದ ಎಳೆಗಳು ಪ್ರಸ್ತುತಗೊಳ್ಳುತ್ತಿದೆ.
ಶ್ರೇಯಸ್ ಕುಮಾರ್ ಮತ್ತು ತಂಡದವರ ಮೇಲ್ವಿಚಾರಣೆಯಲ್ಲಿ ಫೆ.9 ರಿಂದ 18 ರವರೆಗೆ ಸಂಜೆ 7 ರಿಂದ ದಿನಕ್ಕೆ 3 ಪ್ರದರ್ಶನ ನಡೆಯುತ್ತಿದೆ. ವಿಜ್ಞಾನ, ತಂತ್ರಜ್ಞಾನದ ಸಮ್ಮಿಲನದ ಮೂಲಕ ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಧರ್ಮ ಸಂದೇಶವುಳ್ಳ ಚರಿತ್ರೆಯ ಕಥೆಯೊಂದನ್ನು ಸಾದರಪಡಿಸುವ ಈ ಅದ್ಭುತ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ದೇಶದ ಮೂಲೆ ಮೂಲೆಗಳಿಂದ ಆಗಮಿಸುತ್ತಿರುವ ಭಕ್ತಾದಿಗಳು ಈ ಅದ್ಭುತ ಪರಿಕಲ್ಪನೆಯ ಬಗೆಗೆ ಅಚ್ಚರಿಯ ಜೊತೆಗೆ ಭಕ್ತಿ ಪರವಶತೆಯ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಆಗಿಹೋದ ಚರಿತ್ರೆಯನ್ನು ವಿಶೇಷ ರೀತಿಯಲ್ಲಿ ಮರುಸೃಷ್ಟಿಸಿ ಹೊಸಪೀಳಿಗೆಗೆ ದಾಟಿಸುವ ಈ ದೃಶ್ಯ ಕಥನವು ಈ ಬಾರಿಯ ಮಸ್ತಕಾಭಿಷೇಕದ ವಿಶೇಷ ಆಕರ್ಷಣೆಯಾಗಿದೆ.
ಅತ್ಯಾಧುನಿಕ ತಂತ್ರಜ್ಞಾನ:
ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿನ 39 ಅಡಿ ಎತ್ತರದ ಮಹಾಮೂರ್ತಿಯ ಮೇಲೆ ಈ ಚಿತ್ರಕಥನವು ಪ್ರಸ್ತುತಗೊಳ್ಳುತ್ತಿದೆ. 3ಡಿ ತಂತ್ರಜ್ಞಾನದ ಸಹಾಯದಿಂದ ಪಾತ್ರಗಳನ್ನು ವಿಭಿನ್ನವಾಗಿ ಸೃಷ್ಟಿಸಿ, ಆನಿಮೇಶನ್, ಸಂಭಾಷಣೆ, ಸಂಗೀತದ ಮೂಲಕ ಕಥಾಹಂದರಗಳನ್ನು 17 ನಿಮಿಷದಲ್ಲಿ ಸಾದರಪಡಿಸಲಾಗುತ್ತಿದೆ.
ಐವರಿ ಎಡ್ಜ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯು ಮೂರ್ತಿಯ ಮೇಲೆ ಕ್ರಿಯಾತ್ಮಕವಾದ 3ಡಿ ಪ್ರದರ್ಶನವನ್ನು ಮೊದಲ ಬಾರಿಗೆ ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿ ಪರಿಚಯಿಸಿದೆ. 100 ಮಂದಿ ನುರಿತ ಕಲಾವಿದರ ತಂಡದ 2 ತಿಂಗಳುಗಳ ಶ್ರಮದ ಫಲವು ಇದಾಗಿದೆ. 3ಡಿ ತಂತ್ರಜ್ಞಾನ ಬಳಸಿ ಕಥೆಯಲ್ಲಿ ಬರುವ ಪಾತ್ರಗಳನ್ನು ಮೊದಲಿಗೆ ಸಿದ್ಧಗೊಳಿಸಲಾಗುತ್ತದೆ. ಕಥೆಯ ನಿರೂಪಣೆ, ಸಂಗೀತಕ್ಕೆ ತಕ್ಕಂತೆ ಆನಿಮೇಶನ್ ಮೂಲಕ ಪಾತ್ರಗಳಲ್ಲಿ ಚಲಿಸುವಂತೆ ಮಾಡಲಾಗುತ್ತದೆ. ಮೂರ್ತಿಯ ಮೇಲೆ ಬೆಳಕು ಹಾಯಿಸಿ ಕಥೆಯ ಪಾತ್ರಗಳು ಅಲ್ಲಿ ಮೂಡಿಸಲಾಗುತ್ತದೆ. ಹಿನ್ನಲೆ ಧ್ವನಿಗೆ ತಕ್ಕಂತೆ ಕಥೆಯು ವಿವರಿಸಲ್ಪಡುತ್ತದೆ.
-ಅಂಬಿಕಾ ಕೈಲಾಸ
ಚಿತ್ರ: ಅಭಿನಂದನ್ ಎಂ. ಜೈನ್