ಮಹಾಮಸ್ತಕಾಭಿಷೇಕ : ಮಾರ್ಚ್ ತಿಂಗಳಾಂತ್ಯವರೆಗೂ “ಅಭಿಷೇಕ”
Team Udayavani, Feb 15, 2019, 11:47 AM IST
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕದ ಸಂಭ್ರಮ ನಡೆಯುತ್ತಿದೆ. ಫೆಬ್ರವರಿ 16 ರಿಂದ 19ರ ತನಕ ವೈರಾಗ್ಯ ಮೂರ್ತಿಗೆ ಮಹಾಮಜ್ಜನ ನಡೆಯಲಿದ್ದು ಸಿದ್ಧತೆ ಅಂತಿಮ ಹಂತದಲ್ಲಿದೆ. ಭಕ್ತರಿಗೆ ಅನುಕೂಲವಾಗುವಂತೆ ಕಲಶ ಸಮಿತಿ, ಪಾಸ್, ಬ್ಯಾಜ್ ಸಮಿತಿ ರಚಿಸಲಾಗಿದೆ.
ಮಹಾಮಸ್ತಕಾಭಿಷೇಕದ ಹಿನ್ನಲೆ ಕಲಶ ಸಮಿತಿ ಕಾರ್ಯಾಚರಿಸುತ್ತಿದ್ದು, ಸಂಚಾಲಕರಾದ ಪುಷ್ಪರಾಜ್ ಜೈನ್, ಪ್ರಸನ್ನ ಕುಮಾರ್ ಹಾಗೂ ಸಂಯೋಜಕ ಜಯಕುಮಾರ್ ಶೆಟ್ಟಿ ನೇತೃತ್ವದಲ್ಲಿ ನಡೆಯುತ್ತಿದೆ. ಫೆ.16ರಂದು ಪ್ರಾತಃ ಕಾಲ 6 ಗಂಟೆಗೆ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಪೂಜಾ ವಿಧಿವಿಧಾನಗಳು ಆರಂಭವಾಗಲಿದ್ದು, ಬೆಳಗ್ಗೆ 8.45 ಗಂಟೆಗೆ ಮಹಾಮಸ್ತಕಾಭಿಷೇಕ ಆರಂಭವಾಗಲಿದೆ. ಬಾಹುಬಲಿ ಪ್ರತಿಷ್ಠಾಪಕರಾದ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಕುಟುಂಬಸ್ಥರಿಂದ ಮಹಾಮಜ್ಜನ ನಡೆಯಲಿದೆ. 1,008 ಕಲಶಗಳ ಜಲಾಭಿಷೇಕ ನಡೆಯಲಿದೆ. ಸುಮಾರು 11.30ರವರೆಗೆ ಅಭಿಷೇಕ ನಡೆಯಲಿದ್ದು, ಈ ಅಪೂರ್ವ ಸನ್ನಿವೇಶಕ್ಕೆ ಸಾವಿರಾರು ಜನ ಸಾಕ್ಷಿಯಾಗಲಿದ್ದಾರೆ. ಬಾಹುಬಲಿ ಮೂರ್ತಿಗೆ ನಾಳಿಕೇರ (ಎಳನೀರು) ಅಭಿಷೇಕ, ಕಬ್ಬಿನ ಹಾಲಿನ ಅಭಿಷೇಕ, ಕ್ಷೀರಾಭಿಷೇಕ, ಕಲ್ಕಚೂರ್ಣ, (ಅಕ್ಕಿಹಿಟ್ಟಿನ ಅಭಿಷೇಕ), ಅರಶಿನ ಅಭಿಷೇಕ, ಬೇರೆ ಬೇರೆ ಗಿಡಮೂಲಿಕೆಗಳಿಂದ ತಯಾರಿಸಿದ ದ್ರವ್ಯಗಳ ಅಭಿಷೇಕವೂ ನಡೆಯಲಿದೆ. ಗಂಧಾಭಿಷೇಕ, ಚಂದನಾಭಿಷೇಕ, ಅಷ್ಟಗಂಧಾಭಿಷೇಕ ನಡೆದು ಪುಷ್ಪವೃಷ್ಠಿ ಬಳಿಕ ಹೂವಿನ ಮಾಲೆ ಹಾಕಿ ಭಗವಾನ್ ಬಾಹುಬಲಿಯನ್ನು ಸಿಂಗರಿಸಲಾಗುತ್ತದೆ.
ಭಗವಾನ್ ಬಾಹುಬಲಿ ಸ್ವಾಮಿಗೆ ಅಭಿಷೇಕ ನಡೆಸಲು ಜನರಿಗೂ ಅವಕಾಶ ಕಲ್ಪಿಸಲಾಗಿದೆ. ವಿವಿಧ ಕಲಶಗಳಿಗೆ ದರಗಳನ್ನು ನಿಗದಿಪಡಿಸಿದ್ದು, ಅಭಿಷೇಕ ಮಾಡಲು ಇಚ್ಚಿಸುವವರು ಪಾಸ್ ಪಡೆದುಕೊಂಡಿದ್ದಾರೆ. ವಿವಿಧ ದ್ರವ್ಯಗಳ ಅಭಿಷೇಕಕ್ಕೂ ದರ ನಿಗದಿಪಡಿಸಲಾಗಿದ್ದು, ಅರಶಿನ, ಕೇಸರಿ, ಅಷ್ಟಗಂಧ ದ್ಯವ್ಯ ಕಲಶ ಅಭಿಷೇಕಗಳಿಗೆ ದರ ನಿಗದಪಡಿಸಲಾಗಿದೆ. ಕಲಶ ಮಾಡಿದ ಭಕ್ತರಿಗೆ ಉಚಿತ ವಸತಿ, ಉಟೋಪಚಾರದ ವ್ಯವಸ್ಥೆಯನ್ನೂ ಮಾಡಲಾಗಿದೆ. ಪ್ರತಿದಿನ ಮಧ್ಯಾಹ್ನ 2 ಗಂಟೆವರೆಗೆ ಅಭಿಷೇಕಾಧಿಕ್ರಿಯೆಗಳು ನಡೆಯಲಿದೆ. ಮಾರ್ಚ್ ತಿಂಗಳಾಂತ್ಯದವರೆಗೂ ಬಾಹುಬಲಿ ಸ್ವಾಮಿಗೆ ಅಭಿಷೇಕ ನಡೆಯಲಿದ್ದು, ನಾಡಿನ ವಿವಿಧ ಜೈನ ಸಂಘಟನೆಗಳು ಈಗಾಗಲೇ ಅಭಿಷೇಕಕ್ಕೆ ಹೆಸರು ನೋಂದಾಯಿಸಿದೆ.
ಸಜ್ಜಾಗಿದೆ ತಂಡ:
ಧರ್ಮಸ್ಥಳದಲ್ಲಿ ನಡೆಯುತ್ತಿರುವ ವೈಭವದ ಮಹಾಮಸ್ತಕಾಭಿಷೇಕದ ಕಾರ್ಯನಿರ್ವಹಣೆಗೆ ಈಗಾಗಲೇ ವಿವಿಧ ತಂಡಗಳನ್ನು ಮಾಡಲಾಗಿದೆ. ಒಟ್ಟು 27 ಸಮಿತಿ ಕಾರ್ಯನಿರ್ವಹಿಸುತ್ತಿದ್ದು 5 ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಸೇವೆ ಮಾಡುತ್ತಿದ್ದಾರೆ. 27 ಸಮಿತಿಗಳಲ್ಲಿ ಸಂಚಾಲಕರು, ಸಂಯೋಜಕರು ನೇತೃತ್ವ ವಹಿಸಿದ್ದು, ಪ್ರತಿಯೊಬ್ಬರಿಗೂ ಬ್ಯಾಜ್ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ಸಮಿತಿಗಳಿಗೂ ಬ್ಯಾಜ್ ವ್ಯವಸ್ಥೆ ಮಾಡಲಾಗಿದೆ.
ಹಗಲು ಮಹಾಮಸ್ತಕಾಭಿಷೇಕ:
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹಗಲು ಮಹಾಮಸ್ತಕಾಭಿಷೇಕದ ನಡೆಯಲಿದೆ. ಜೈನ ಮುನಿಗಳ ಪರಂಪರೆ ಪ್ರಕಾರ ಸಂಜೆ 6 ಗಂಟೆಯ ನಂತರ ಹೊರ ಹೋಗಲು ಅವಕಾಶ ಇಲ್ಲ. ಬಾಹುಬಲಿಯ ಮಹಾಮಸ್ತಕಾಭಿಷೇಕದ ವೈಭವವನ್ನು ಮುನಿಗಳೂ ನೋಡಬೇಕೆನ್ನುವ ಉದ್ದೇಶದಿಂದ ಹಗಲು ಅಭಿಷೇಕ ನಡೆಯಲಿದೆ. ಧರ್ಮಸ್ಥಳ ಮತ್ತು ಶ್ರವಣಬೆಳಗೊಳದಲ್ಲಿ ಈ ಪದ್ಧತಿಯಿದ್ದು, ವೈರಾಗ್ಯ ಮೂರ್ತಿಯ ಮಹಾಮಜ್ಜನವನ್ನು ಸಹಸ್ರಾರು ಜೈನ ಶ್ರಾವಕ, ಶ್ರಾವಕಿಯರು ಕಣ್ತುಂಬಿಕೊಳ್ಳಲಿದ್ದಾರೆ.
-ಶ್ವೇತಾ ಎಂ. ,ಎಸ್.ಡಿ.ಎಂ. ಕಾಲೇಜು ಉಜಿರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ