ಏಕದಿನ: ಧೋನಿ, ಯುವಿ ಆಯ್ಕೆ ಖಚಿತ?
Team Udayavani, Aug 13, 2017, 7:55 AM IST
ಹೊಸದಿಲ್ಲಿ: ಶ್ರೀಲಂಕಾ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಗಾಗಿ ರವಿವಾರ ಪ್ರಕಟಿಸಲಾಗುವ ಭಾರತ ತಂಡದಲ್ಲಿ ಸೀನಿಯರ್ ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿ ಮತ್ತು ಯುವರಾಜ್ ಸಿಂಗ್ ಮುಂದುವರಿಯುವ ಸಾಧ್ಯತೆ ಇದೆ.
ಕಳೆದ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಿದ ಭಾರತ ತಂಡವನ್ನೇ ಉಳಿಸಿಕೊಳ್ಳುವುದು ಆಯ್ಕೆ ಮಂಡಳಿಯ ಉದ್ದೇಶವಾದರೂ ಸ್ಪಿನ್ದ್ವಯರಾದ ಆರ್. ಅಶ್ವಿನ್, ರವೀಂದ್ರ ಜಡೇಜ ಮತ್ತು ಪೇಸರ್ ಮೊಹಮ್ಮದ್ ಶಮಿ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ನಾಯಕ ವಿರಾಟ್ ಕೊಹ್ಲಿ ಕೂಡ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ ಎಂದು ವರದಿಯಾಗಿತ್ತಾದರೂ ಸ್ವತಃ ಕೊಹ್ಲಿ ಇದನ್ನು ನಿರಾಕರಿಸಿದ್ದಾರೆ.
ಕಳಪೆ ಫಾರ್ಮ್ನಿಂದ ತೀವ್ರ ಟೀಕೆಗೆ ಗುರಿಯಾಗಿರುವ ಧೋನಿ ಮತ್ತು ಯುವರಾಜ್ ಮುಂದಿನ ವಿಶ್ವಕಪ್ ವೇಳೆ ತಂಡದಲ್ಲಿರಬೇಕೇ, ಬೇಡವೇ ಎಂಬ ಚರ್ಚೆ ಈಗ ವ್ಯಾಪಕಗೊಳ್ಳುತ್ತಿದೆ. ಅಷ್ಟೇ ಅಲ್ಲ, 2019ರ ವಿಶ್ವಕಪ್ಗೆ ತಂಡವನ್ನು ರೂಪಿಸಲು ಈಗಿನಿಂದಲೇ ಸೂಕ್ತ ತಯಾರಿ ನಡೆಸಬೇಕಿದೆ ಎಂದು ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಪಾಕಿಸ್ಥಾನಕ್ಕೆ ಸೋತೊಡನೆಯೆ ಬಿಸಿಸಿಐ ಸ್ಪಷ್ಟಪಡಿಸಿತ್ತು. ಸದ್ಯ ಧೋನಿ, ಯುವರಾಜ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ “ಮೌಲ್ಯಮಾಪನ ಪರೀಕ್ಷೆ’ಗೆ ಒಳಗಾಗಿದ್ದಾರೆ. ಅಂದಮೇಲೆ ಲಂಕಾ ಪ್ರವಾಸಕ್ಕೆ ತೆರಳುವುದು ಖಚಿತ ಎಂದೇ ಭಾವಿಸಬೇಕಿದೆ.
ಇವರೊಂದಿಗೆ ಕೇದಾರ್ ಜಾಧವ್, ಜಸ್ಪ್ರೀತ್ ಬುಮ್ರಾ, ಸುರೇಶ್ ರೈನಾ ಕೂಡ ಸೇರಿದ್ದಾರೆ. ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ ಕೂಡ ರೇಸ್ನಲ್ಲಿದ್ದಾರೆ.