ಯುವಿ ಸಮಾಜ ಸೇವೆಗೆ ಪ್ರಧಾನಿ ಪ್ರೋತ್ಸಾಹ ಪತ್ರ
Team Udayavani, Sep 2, 2017, 11:36 AM IST
ಹೊಸದಿಲ್ಲಿ: “ಯುವಿಕೆನ್ ಫೌಂಡೇಶನ್’ ವತಿಯಿಂದ ಸಮಾಜ ಸೇವೆ ಮಾಡುತ್ತಿರುವ ಭಾರತ ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲ ಮೋದಿ ಪ್ರೋತ್ಸಾಹ ಪತ್ರವೊಂದನ್ನು ನೀಡುವ ಮೂಲಕ ಖುದ್ದಾಗಿ ಅಭಿನಂದಿಸಿದ್ದಾರೆ. ಈ ವಿಷಯವನ್ನು ಖುದ್ದಾಗಿ ಯುವರಾಜ್ ಸಿಂಗ್ ಸಾಮಾಜಿಕ ಜಾಲತಾಣ ಟ್ವೀಟರ್ನಲ್ಲಿ ತಿಳಿಸಿದ್ದಾರೆ. ಯುವರಾಜ್ ಸಿಂಗ್ ಭಾರತಕ್ಕೆ ಏಕದಿನ ಹಾಗೂ ಚುಟುಕು ವಿಶ್ವಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಆ ಬಳಿಕ ಅವರು ಕ್ಯಾನ್ಸರ್ಗೆ ಒಳಗಾಗಿದ್ದರು. ಇದರಿಂದ ಗುಣಮುಖಗೊಂಡು ಬಂದ ಅನಂತರ ಯುವಿಕೆನ್ ಫೌಂಡೇಶನ್ ಸ್ಥಾಪನೆ ಮಾಡಿದ್ದರು. ಈ ಮೂಲಕ ಕ್ಯಾನ್ಸರ್ಗೆ ಸಿಲುಕಿ ನರಳಾಡುತ್ತಿರುವವರಿಗೆ ಉಚಿತ ಚಿಕಿತ್ಸೆ ನೀಡುವ ಸಂಕಲ್ಪ ಮಾಡಿದ್ದರು.