ಮೈಸೂರು ಚರಣ ಮುಕ್ತಾಯ: ನಾಳೆಯಿಂದ ಹುಬ್ಬಳ್ಳಿಯಲ್ಲಿ ಕೆಪಿಎಲ್
Team Udayavani, Sep 13, 2017, 7:55 AM IST
ಹುಬ್ಬಳ್ಳಿ: ಕೆಪಿಎಲ್ ಮೈಸೂರು ಚರಣ ಮಂಗಳವಾರ ಮುಕ್ತಾಯವಾಗಿದೆ. ಗುರುವಾರದಿಂದ ಹುಬ್ಬಳ್ಳಿಯಲ್ಲಿ ಪಂದ್ಯಗಳು ಆರಂಭವಾಗಲಿವೆ. ಅದಕ್ಕಾಗಿ ಹುಬ್ಬಳ್ಳಿಯ ರಾಜನಗರ ಮೈದಾನ ಸಜ್ಜಾಗಿದೆ. ಅಂತಿಮ ಹಂತದ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿದ್ದು, ಮಂಗಳವಾರ ತಂಡಗಳ ಆಟಗಾರರು ಅಭ್ಯಾಸ ನಡೆಸಿದರೆ, ಮೈದಾನದ ಸಿಬ್ಬಂದಿ ಪಿಚ್ ಪರಿಶೀಲನೆ ನಡೆಸಿದರು. ಗ್ಯಾಲರಿ, ಮೀಡಿಯಾ ಬಾಕ್ಸ್ ನಿರ್ಮಾಣ ಕಾರ್ಯ ಕೂಡ ಜರುಗಿತು.
ಮೂರು ತಂಡಗಳು ಈಗಾಗಲೇ ನಗರಕ್ಕಾಗಮಿಸಿದ್ದು, ಮೈಸೂರು ವಾರಿಯರ್ ಹಾಗೂ ಬಿಜಾಪುರ ಬುಲ್ಸ್ ತಂಡಗಳ ಆಟಗಾರರು ಮಂಗಳವಾರ ಮಧ್ಯಾಹ್ನ 3ರಿಂದ 5ರವರೆಗೆ ಕ್ರೀಡಾಂಗಣದ ನೆಟ್ನಲ್ಲಿ ಅಭ್ಯಾಸ ನಡೆಸಿದರು. ಶಿವಿಲ್ ಕೌಶಿಕ್, ಅಕ್ಷಯ್, ಸುನೀಲ್ ರಾಜ್ ಸೇರಿದಂತೆ ಹಲವು ರಣಜಿ ಆಟಗಾರರು ಅಭ್ಯಾಸದಲ್ಲಿ ಪಾಲ್ಗೊಂಡರು. ಹುಬ್ಬಳ್ಳಿ ಟೈಗರ್ ತಂಡದ ಆಟಗಾರರು ಬೆಳಗ್ಗೆ 11ಕ್ಕೆ ಹುಬ್ಬಳ್ಳಿ ಜಿಮ್ಖಾನಾ ಮೈದಾನದಲ್ಲಿ ಅಭ್ಯಾಸ ನಡೆಸಿದರು.
ನವಲೂರ ಕೆರೆ ಮಣ್ಣಿನಿಂದ ಪಿಚ್ ನಿರ್ಮಾಣ: ಕಳೆದೆರಡು ತಿಂಗಳುಗಳಿಂದ ಪಿಚ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕಳೆದ ಬಾರಿ ಕಲಘಟಗಿ ಕೆರೆ ಮಣ್ಣಿನಿಂದ ಪಿಚ್ ನಿರ್ಮಿಸಲಾಗಿತ್ತು. ಆದರೆ ಈ ಬಾರಿ ನವಲೂರಿನ ಕೆರೆ ಮಣ್ಣಿನಿಂದ 4 ಪಿಚ್ಗಳ ನಿರ್ಮಾಣ ಮಾಡಲಾಗಿದೆ. ಪಿಚ್ನ್ನು ಪುನಶ್ಚೇತನಗೊಳಿಸಲಾಗಿದೆ. ಮಣ್ಣನ್ನು ಕೃಷಿ ವಿಶ್ವವಿದ್ಯಾಲಯ ಹಾಗೂ ಬಿ.ವಿ.ಭೂಮರೆಡ್ಡಿ ಎಂಜಿನಿಯರಿಂಗ್ ಕಾಲೇಜಿನ ಲ್ಯಾಬ್ಗಳಲ್ಲಿ ಪರೀಕ್ಷೆ ಮಾಡಿಸಲಾಗಿದೆ.