ನಂಗ್ಯಾರೂ ಅವಮಾನ ಮಾಡಿಲ್ಲ: ಶೂಟರ್ ಮನು ಭಾಕರ್ ಸ್ಪಷ್ಟನೆ
Team Udayavani, Apr 19, 2018, 6:00 AM IST
ಹರಿಯಾಣ: ಕಾಮನ್ವೆಲ್ತ್ ಗೇಮ್ಸ್ನ 10 ಮೀ. ಏರ್ ಪಿಸ್ತೂಲ್ನಲ್ಲಿ ಚಿನ್ನ ಗೆದ್ದಿರುವ ಮನುಭಾಕರ್ಗೆ ಸಮ್ಮಾನ ಕಾರ್ಯಕ್ರಮದ ವೇಳೆ ಅವಮಾನ ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದನ್ನು ಸ್ವತಃ 16 ವರ್ಷದ ಶೂಟರ್ ಭಾಕರ್ ತಿರಸ್ಕರಿಸಿದ್ದಾರೆ.
ಭಾಕರ್ ಅವರ ಹಳ್ಳಿ ಚರ್ಖಿದಾದ್ರಿಯಲ್ಲಿ ನಡೆದ ಸಮ್ಮಾನದ ವೇಳೆ ಅವರನ್ನು ಕುರ್ಚಿಯಿಂದ ಕೆಳಕ್ಕಿಳಿಸಿ ನೆಲದಲ್ಲಿ ಕೂರುವಂತೆ ಹೇಳಲಾಗಿತ್ತು ಎಂದು ವರದಿಗಳಾಗಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಭಾಕರ್, ನನಗೆ ಯಾರೂ ಕೆಳಗಿಳಿಯುವಂತೆ ಹೇಳಿಲ್ಲ, ಕಾರ್ಯಕ್ರಮದಲ್ಲಿ ಹಿರಿಯರಿದ್ದರಿಂದ ನೆಲದ ಮೇಲೆ ಕೂರಲು ನಾನೇ ನಿರ್ಧರಿಸಿದೆ. ಯಾರೂ ನನಗೆ ಕೆಳಗೆ ಕೂರಲು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.