ಇಶಾನ್ ಬಳಿ ಕ್ಷಮೆ ಕೇಳಿದ ಪಾಂಡ್ಯ
Team Udayavani, Apr 20, 2018, 7:40 AM IST
ಮುಂಬಯಿ: ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ವಿರುದ್ಧ ನಡೆದ ಐಪಿಎಲ್ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ವಿಕೆಟ್ ಕೀಪರ್ ಇಶಾನ್ ಕಿಶನ್ ಕಣ್ಣಿನ ಸಮೀಪ ಗಂಭೀರ ಗಾಯಗೊಂಡು ಹೊರ ನಡೆದಿದ್ದರು. ಈ ಘಟನೆಗೆ ಸಂಬಂಧಪಟ್ಟಂತೆ ಈಗ ಇಶಾನ್ ಕಿಶನ್ ಬಳಿ ಹಾರ್ದಿಕ್ ಪಾಂಡ್ಯ ಕ್ಷಮೆಯಾಚಿಸಿದ್ದಾರೆ.
“ನನ್ನನ್ನು ಕ್ಷಮಿಸು ಸಹೋದರ, ಬಲಿಷ್ಠವಾಗು. ಬೇಗ ಚೇತರಿಸು’ ಎಂದು ಹಾರ್ದಿಕ್ ಪಾಂಡ್ಯ ಟ್ವಿಟರ್ನಲ್ಲಿ ಪ್ರಕಟಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಬೌಂಡರಿ ಬಳಿಯಿಂದ ಎಸೆದ ಚೆಂಡೊಂದು ಪಿಚ್ ಬಿದ್ದು ಬೌನ್ಸ್ ಆಗಿ ವಿಕೆಟ್ ಕೀಪರ್ ಕಣ್ಣಿನ ಸಮೀಪ ಬಡಿದಿತ್ತು. ತತ್ಕ್ಷಣ ನೋವು ತಾಳಲಾಗದೆ ಇಶಾನ್ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಕ್ರೀಡಾಂಗಣದಿಂದ ಹೊರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ಇಶಾನ್ ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ 6.2 ಕೋಟಿ ರೂ.ಗೆ ಖರೀದಿ ಮಾಡಿತ್ತು. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದು, ಮುಂದಿನ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ.