ಸಾಹಾ ಸ್ಥಾನ ಕಳೆದುಕೊಳ್ಳಲು ಕಾರಣವೇನು?
Team Udayavani, Jul 21, 2018, 6:00 AM IST
ಮುಂಬಯಿ: ಭಾರತ ಟೆಸ್ಟ್ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾಗೆ ವಾಸ್ತವವಾಗಿ ಆಗಿದ್ದೇನು, ಅವರು ತಂಡದಿಂದ ನಿಜಕ್ಕೂ ಹೊರಬೀಳಲು ಗಾಯ ಕಾರಣವೇ ಅಥವಾ ಬೇರೆನಾದರೂ ಕಾರಣವೇ ಎಂಬ ಅನುಮಾನಗಳು ಇದೀಗ ಹುಟ್ಟಿಕೊಂಡಿವೆ.
ವೃದ್ಧಿಮಾನ್ಗೆ ಹೆಬ್ಬೆರಳು ಗಾಯವಾಗಿದೆ ಎಂದು ಬಿಸಿಸಿಐ ಆರಂಭದಲ್ಲಿ ಹೇಳಿತ್ತು. ಅದಕ್ಕೂ ಕೆಲ ತಿಂಗಳ ಮುನ್ನ ಎಡಗಾಲು ಮಂಡಿ ನೋವಿಗೀಡಾಗಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಬಿಸಿಸಿಐ ಸಾಹಾಗೆ ಭುಜದ ನೋವಾಗಿದೆ. ಶಸ್ತ್ರಚಿಕಿತ್ಸೆಗೊಳಗಾಗುವ ಸಾಧ್ಯತೆಯಿದೆ ಎಂದಿದೆ. ಆದರೆ ಅವರಿಗೆ ಭುಜದ ನೋವು ಆಗಿದ್ದು ಹೇಗೆ, ಯಾವಾಗ ಎಂದು ಆಂಗ್ಲ ಪತ್ರಿಕೆಯೊಂದು ತನ್ನ ವರದಿಯಲ್ಲಿ ಪ್ರಶ್ನಿಸಿದೆ.
ಜನವರಿಯಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ನಡೆಸಿತ್ತು. ಮೊದಲ ಟೆಸ್ಟ್ನಲ್ಲಿ 0 ಮತ್ತು 8ಕ್ಕೆ ಔಟಾದ ಅನಂತರ ಸಹಾಗೆ ಮಂಡಿನೋವಾಗಿದೆ ಎಂದು ಹೇಳಲಾಗಿತ್ತು. ಆಗ ಅವರು ಮುಂದಿನೆರಡು ಟೆಸ್ಟ್ಗಳಿಂದ ಹೊರಬಿದ್ದಿದ್ದರು. ಬಳಿಕ ಅವರು ಆಫ್ಘಾನಿಸ್ಥಾನದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದರು. ಆಗ ಸಾಹಾ ಐಪಿಎಲ್ ವೇಳೆ ಹೆಬ್ಬೆರಳಿನ ಗಾಯ ಮಾಡಿಕೊಂಡಿದ್ದಾರೆಂದು ಬಿಸಿಸಿಐ ಹೇಳಿತ್ತು. ಇದೀಗ ಇಂಗ್ಲೆಂಡ್ ಪ್ರವಾಸ ದಿಂದ ಹೊರಬಿದ್ದಿದ್ದಾರೆ. ಮುಂದಿನ ಆಸ್ಟ್ರೇಲಿಯ ಪ್ರವಾಸದಲ್ಲೂ ಆಡುವ ಸಾಧ್ಯತೆಯಿಲ್ಲ. ಇದಕ್ಕೆ ಬಿಸಿಸಿಐ ಭುಜದ ನೋವಿನ ಕಾರಣ ನೀಡಿದೆ. ಆದರೆ ಸಾಹಾಗೆ ಭುಜದ ನೋವು ಯಾವಾಗ ಆಗಿದ್ದು ಎಂಬ ಬಗ್ಗೆ ಉಲ್ಲೇಖವಿಲ್ಲ. ಈ ಬಗ್ಗೆ ಬಿಸಿಸಿಐ ವೈದ್ಯಾಧಿಕಾರಿಗಳು ಸರಿಯಾದ ಮಾಹಿತಿ ನೀಡಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಕಳಪೆ ಪ್ರದರ್ಶನದ ಕಾರಣಕ್ಕೆ ಸಾಹಾ ಅವರನ್ನು ಕೈಬಿಡಲಾಗಿದೆಯೇ ಅಥವಾ ರಿಷಭ್ ಪಂತ್, ದಿನೇಶ್ ಕಾರ್ತಿಕ್ ಅವರನ್ನು ಒಳಕ್ಕೆಳೆದುಕೊಳ್ಳಲು ಸಾಹಾ ಹೊರಬಿದ್ದಿದ್ದಾರೆಯೇ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ.