ಏಶ್ಯಾಡ್ನಲ್ಲಿದ್ದರೂ ಕೇರಳ ಸ್ಪರ್ಧಿಗಳಿಗೆ ಕುಟುಂಬದವರದೇ ಚಿಂತೆ…
Team Udayavani, Aug 21, 2018, 6:30 AM IST
ಜಕಾರ್ತಾ: ಕೇರಳದಲ್ಲಿ ಮಳೆಯ ಅಬ್ಬರಕ್ಕೆ ಜೀವಸಂಕುಲವೇ ನಡುಗಿಹೋಗಿದ್ದು, ಜಕಾರ್ತಾದಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ನಲ್ಲಿ ಭಾಗವಹಿಸುತ್ತಿರುವ ಕೇರಳದ ಕ್ರೀಡಾಪಟುಗಳಲ್ಲಿಯೂ ನಡುಕ ಹುಟ್ಟಿಸಿದೆ. ಆ್ಯತ್ಲೀಟ್ಗಳ ಗಮನ ಕ್ರೀಡೆ ಮೇಲಿದ್ದರೂ, ಹೃದಯ ಮಾತ್ರ ಕುಟುಂಬ ಮತ್ತು ಸ್ನೇಹಿತರ ಸೌಖ್ಯಕ್ಕಾಗಿ ಮಿಡಿಯುತ್ತಿದೆ.
ಗೃಹ ಸಚಿವಾಲಯದ ನೆರವಿನಿಂದ ಕ್ರೀಡಾಪಟುಗಳ ಕುಟುಂಬದವರ ಸುರಕ್ಷೆತೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. “ಕೇರಳ ಆ್ಯತ್ಲೀಟ್ಗಳ ಕುಟುಂಬಗಳು ಎಲ್ಲಿವೆ ಎಂಬ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಯಾವುದೇ ಒತ್ತಡಗಳಿಲ್ಲ ಸ್ಪರ್ಧಿಸಲು ಆ್ಯತ್ಲೀಟ್ಗಳಿಗೆ ನಮ್ಮ ಸಹಕಾರ ಬೇಕಾಗಿದೆ. ಇಂತಹ ಸಂದರ್ಭದಲ್ಲಿ ಅವರ ಮನಸ್ಸು ಹೇಗಿರುತ್ತದೆ ಎಂಬ ಅರಿವಿದೆ. ಸುರಕ್ಷೆತೆಯ ಮಾಹಿತಿಯನ್ನು ನೀಡುತ್ತಿರುತ್ತೇವೆ’ ಎಂದು ಜಕಾರ್ತಾದಲ್ಲಿರುವ ಭಾರತದ ಮುಖ್ಯ ಅಧಿಕಾರಿ, ಬ್ರಿಜ್ಭೂಷಣ್ ಶರಣ್ ಸಿಂಗ್ ತಿಳಿಸಿದ್ದಾರೆ.
ಕೇರಳದ 34 ಕ್ರೀಡಾಪಟುಗಳು
ಭಾರತದ ತಂಡದಲ್ಲಿ ಆ್ಯತ್ಲೆಟಿಕ್ಸ್, ವಾಲಿಬಾಲ್, ಬಾಸ್ಕೆಟ್ಬಾಲ್, ಈಜು ಮತ್ತು ಹಾಕಿ ಮುಂತಾದ ಕ್ರೀಡೆಗಳಲ್ಲಿ ಕೇರಳದ ಒಟ್ಟು 34 ಕ್ರೀಡಾಪಟುಗಳಿದ್ದಾರೆ.
“ನನ್ನ ಕುಟುಂಬ ಸುರಕ್ಷಿತ ಸ್ಥಳದಲ್ಲಿದೆ. ಆದರೆ, ಸಂಬಂಧಿಗಳು ಮತ್ತು ಸ್ನೇಹಿತರು ಈ ಭೀಕರ ಪ್ರವಾಹದಲ್ಲಿ ಸಿಲುಕಿದ್ದಾರೆ. ಇದು ಬೇಸರದ ಸಂಗತಿ’ ಎಂದು 400ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಓಟಗಾರ ಮೊಹಮ್ಮದ್ ಅನಾಸ್ ಹೇಳಿದ್ದಾರೆ. ಅನಾಸ್ ಅವರು ಕೇರಳದ ರಾಜಧಾನಿ ತಿರುವನಂತಪುರಂ ಸಮೀಪದ ನಿಲಾಮೇಲ್ ನಗರದವರಾಗಿದ್ದಾರೆ.
“ಕೇರಳದಲ್ಲಿ ಏನಾಗುತ್ತಿದೆ ಎಂಬುದನ್ನು ನನ್ನ ಕಣ್ಣುಗಳಿಂದ ಕಂಡೆ. ಜನರೆಲ್ಲ ಸಾವನ್ನಪ್ಪುತ್ತಿದ್ದಾರೆ. ಮನೆಗಳೆಲ್ಲ ಉರುಳುತ್ತಿವೆ. ಜನರು ರಸ್ತೆಯಲ್ಲಿ ಮತ್ತು ನಿರಾಶ್ರಿತರ ಕೇಂದ್ರಗಳಲ್ಲಿದ್ದಾರೆ. ನನ್ನ ಅಜ್ಜ-ಅಜ್ಜಿ ಕುಟುಂಬದ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಮಾಹಿತಿ ದೊರಕಿತು. ಸ್ವಲ್ಪ ಸಮಯದ ಅನಂತರ ನನ್ನ ಹೆತ್ತವರು ಕರೆ ಮಾಡಿ, ಅಜ್ಜ-ಅಜ್ಜಿ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನು ಕೇಳಿ ಮನಸ್ಸಿಗೆ ಸಮಾಧಾನವಾಗಿದೆ. ಇನ್ನು ಯಾವುದೇ ಗೊಂದಲವಿಲ್ಲದೆ ಆಟದ ಮೇಲೆ ಗಮನಹರಿಸುತ್ತೇನೆ’ ಎಂದು ಲಾಂಗ್ಜಂಪರ್ ಶ್ರೀಶಂಕರ್ ಹೇಳಿದ್ದಾರೆ.