ಚಹಾ ಮಾರಾಟಕ್ಕಿಳಿದ ಏಶ್ಯಾಡ್ ಪದಕ ವಿಜೇತ!
Team Udayavani, Sep 8, 2018, 6:00 AM IST
ಹೊಸದಿಲ್ಲಿ: ಈ ಬಾರಿ ಏಶ್ಯಾಡ್ನಲ್ಲಿ ಭಾರತದ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ತೋರಿದ್ದಾರೆ. ಪದಕ ಸಾಧಕರಿಗೆ ಸರಕಾರಗಳು ದೊಡ್ಡ ಮೊತ್ತದ ಬಹುಮಾನವನ್ನೂ ಘೋಷಿಸಿವೆ. ಆದರೆ ಅಪರಿಚಿತ ಕ್ರೀಡೆ ಸೆಪಕ್ ಟಕ್ರಾದಲ್ಲಿ ಕಂಚು ಗೆದ್ದ ಹರೀಶ್ ಕುಮಾರ್ ಬದುಕಿನಲ್ಲಿ ಮಾತ್ರ ಯಾವುದೇ ಪವಾಡ ಸಂಭವಿಸಿಲ್ಲ. ಯಾರೂ ಬಹುಮಾನ ಘೋಷಿಸಿಲ್ಲ. ಹೀಗಾಗಿ ಜೀವನ ನಿರ್ವಹಣೆಗಾಗಿ ಮತ್ತೆ ತಂದೆ ಯೊಂದಿಗೆ ಚಹಾ ಮಾರಾಟಕ್ಕೆ ಇಳಿದಿದ್ದಾರೆ. ದಿಲ್ಲಿಯ “ಮಂಜುಕಾಟಿಲ್ಲಾ’ ಪ್ರದೇಶದಲ್ಲಿರುವ ತನ್ನ ತಂದೆಯ ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ನೆರವಾಗುತ್ತಿದ್ದಾರೆ.
“ನನ್ನ ಕುಟುಂಬದಲ್ಲಿ ಬಹಳ ಜನರಿದ್ದಾರೆ. ಆದರೆ ಆದಾಯದ ಮೂಲ ಮಾತ್ರ ಕಡಿಮೆ. ಕುಟುಂಬಕ್ಕೆ ನೆರ ವಾಗಲು ತಂದೆಯೊಂದಿಗೆ ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತೇನೆ. ತರಬೇತಿಗಾಗಿ 4 ಗಂಟೆ ಮೀಸಲಿಡುತ್ತೇನೆ. ನನ್ನ ಭವಿಷ್ಯಕ್ಕಾಗಿ, ಕುಟುಂಬಕ್ಕೆ ನೆರವಾಗಲು ಉತ್ತಮ ನೌಕರಿಯ ಅಗತ್ಯವಿದೆ’ ಎನ್ನುತ್ತಾರೆ ಹರೀಶ್.
“2011ರಲ್ಲಿ ಈ ಕ್ರೀಡೆಯಲ್ಲಿ ತೊಡಗಿಸಿಕೊಂಡೆ. ಟಯರ್ ಬಳಿಸಿ ಆಟವಾಡು ತ್ತಿದ್ದಾಗ ನನ್ನನ್ನು ಗಮನಿಸಿದ ಕೋಚ್ ಹೇಮ್ರಾಜ್ “ಸಾಯ್’ಗೆ ಪರಿಚಯಿ ಸಿದರು. ಇದಾದ ಬಳಿಕ ಪ್ರತಿ ತಿಂಗಳ ತರಬೇತಿಗಾಗಿ ಸಣ್ಣದೊಂದು ಮೊತ್ತ ಮತ್ತು ಕಿಟ್ ದೊರಕುತ್ತಿದೆ. ದೇಶದ ಕ್ರೀಡಾ ಪ್ರತಿಷ್ಠೆ ಹೆಚ್ಚಿಸುವ ಸಲುವಾಗಿ ಪ್ರತಿದಿನ ತರಬೇತಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದೇನೆ’ ಎಂದು ಹರೀಶ್ ಹೇಳಿದ್ದಾರೆ.
ಹರೀಶ್ ಅವರ ತಾಯಿ ಏಶ್ಯಾಡ್ ತರಬೇತಿ ಸಂದರ್ಭ ಸರಕಾರ ನೀಡಿದ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಪ್ರತಿ ತಿಂಗಳು ಆರ್ಥಿಕ ನೆರವು ನೀಡುತ್ತಿರುವ “ಸಾಯ್’ಗೆ ಹರೀಶ್ ಸಹೋದರ ಧವನ್ ಆಭಾರಿಯಾಗಿದ್ದು, ಸಹೋದರನ ಜೀವನ ನಿರ್ವಹಣೆಗೆ ಸರಕಾರಿ ಉದ್ಯೋಗದ ಆವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.