ಡೇವಿಸ್ ಕಪ್ : ರಾಮ್ಕುಮಾರ್, ಪ್ರಜ್ಞೆಶ್ ಗೆ ಆಘಾತ
Team Udayavani, Sep 16, 2018, 12:09 PM IST
ಹೊಸದಿಲ್ಲಿ: ಭಾರತದ ರಾಮ್ಕುಮಾರ್ ರಾಮನಾಥನ್ ಮತ್ತು ಪ್ರಜ್ಞೆಶ್ ಗುಣೇಶ್ವರನ್ ಅವರು ಡೇವಿಸ್ಕಪ್ ವಿಶ್ವಬಣ ಪ್ಲೇ ಆಫ್ನ ಮೊದಲೆರಡು ಸಿಂಗಲ್ಸ್ ಪಂದ್ಯಗಳಲ್ಲಿ ಬಲಿಷ್ಠ ಸರ್ಬಿಯಾ ತಂಡದೆದುರು ವೀರೋಚಿತವಾಗಿ ಹೋರಾಡಿ ಸೋಲನ್ನು ಕಂಡಿದ್ದಾರೆ. ಮೊದಲ ದಿನದ ಎರಡೂ ಸಿಂಗಲ್ಸ್ ಗೆದ್ದಿರುವ ಸರ್ಬಿಯಾ 2-0 ಮುನ್ನಡೆ ಸಾಧಿಸಿದೆ.
ಈ ಹೋರಾಟವನ್ನು ಜೀವಂತವಿರಿಸಿ ಕೊಳ್ಳಬೇಕಾದರೆ ಡಬಲ್ಸ್ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಾಗಿದೆ. ಡಬಲ್ಸ್
ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಎನ್. ಶ್ರೀರಾಮ್ ಬಾಲಾಜಿ ಅವರು ನಿಕೋಲಾ ಮಿಲೊಜೆವಿಕ್ ಮತ್ತು ಡ್ಯಾನಿಲೊ ಪೆಟ್ರೊವಿಕ್ ಅವರನ್ನು ಎದುರಿಸಲಿದ್ದಾರೆ.
ಜೊಕೋವಿಕ್ ಅನುಪಸ್ಥಿತಿ
ಹಾಲಿ ಯುಎಸ್ ಓಪನ್ ಚಾಂಪಿಯನ್ ನೊವಾಕ್ ಜೊಕೋವಿಕ್ ಮತ್ತು ಗಾಯಗೊಂಡಿರುವ ಫಿಲಿಪ್ ಕ್ರ್ಯಾಜಿನೋವಿಕ್ ಅವರ ಅನುಪಸ್ಥಿತಿಯಲ್ಲಿ ಸರ್ಬಿಯಾ ಆಡುತ್ತಿರುವ ಕಾರಣ ಭಾರತ ಮೊದಲ ದಿನ ಕಡಿಮೆ ಪಕ್ಷ ಒಂದು ಪಂದ್ಯ ಗೆಲ್ಲಬಹುದೆಂದು ಭಾವಿಸಲಾಗಿತ್ತು.
ಮೊದಲ ಸಿಂಗಲ್ಸ್ನಲ್ಲಿ ರಾಮ್ಕುಮಾರ್ ಭರ್ಜರಿಯಾಗಿ ಆಡಿದರು. ಮೊದಲ ಸೆಟ್ ಗೆದ್ದು ಗೆಲ್ಲುವ ಭರವಸೆ ಮೂಡಿಸಿದರು. ಆದರೆ ಆಬಳಿಕ ಹಿಡಿತ ಸಾಧಿಸಿದ ಸರ್ಬಿಯಾದ ಲಾಸ್ಲೊ ಡಿಜೆರೆ ಅವರು ಮೂರು ತಾಸು ಮತ್ತು 11 ನಿಮಿಷಗಳ ನಿಕಟ ಹೋರಾಟದಲ್ಲಿ 6-3, 4-6, 6-7 (2), 2-6 ಸೆಟ್ಗಳಿಂದ ಜಯಭೇರಿ ಬಾರಿಸಿದರು.ಇದು ಡೇವಿಸ್ ಕಪ್ನಲ್ಲಿ ಡಿಜೆರೆ ದಾಖಲಿಸಿದ ಮೊದಲ ಗೆಲುವು ಆಗಿತ್ತು. ಈ ಮೊದಲು ಅವರು ಆಡಿದ ಎರಡು ಪಂದ್ಯಗಳಲ್ಲಿ ಸೋತಿದ್ದರು.
ಎರಡನೇ ಸಿಂಗಲ್ಸ್ನಲ್ಲಿ ಪ್ರಜ್ಞೆಶ್ 56ನೇ ರ್ಯಾಂಕಿನ ದುಸಾನ್ ಲಾಜೊವಿಕ್ ಅವರ ಕೈಯಲ್ಲಿ ನೇರ ಸೆಟ್ಗಳಲ್ಲಿ ಶರಣಾದರು. ಅಮೋಘ ಆಟದ ಮೂಲಕ ಎದುರಾಳಿಯನ್ನು ಕಟ್ಟಿಹಾಕಿದ ಲಾಜೊವಿಕ್ 6-4, 6-3, 6-4 ನೇರ ಸೆಟ್ಗಳಿಂದ ಜಯ ಸಾಧಿಸಿ ಸಂಭ್ರಮಿಸಿದರು.