ಭಾರತದ ಸೋಲಿಗೆ ರವಿ ಶಾಸ್ತ್ರೀ ಹೊಣೆ: ಚೇತನ್ ಚೌಹಾಣ್
Team Udayavani, Sep 17, 2018, 1:47 PM IST
ಧನ್ಬಾದ್ (ಜಾರ್ಖಂಡ್): ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ 4-1 ಅಂತರದಿಂದ ಭಾರತ ಸೋಲಲು ಪ್ರಧಾನ ಕೋಚ್ ರವಿ ಶಾಸ್ತ್ರೀಯೇ ಕಾರಣ ಎಂದು ಭಾರತದ ಮಾಜಿ ಟೆಸ್ಟ್ ಆರಂಭಕಾರ ಚೇತನ್ ಚೌಹಾಣ್ ಅವರು ಆರೋಪಿಸಿದ್ದಾರೆ.
“ಆಸ್ಟ್ರೇಲಿಯ ಪ್ರವಾಸಕ್ಕೂ ಮುನ್ನ ರವಿ ಶಾಸ್ತ್ರೀ ಅವರನ್ನು ಪ್ರಮುಖ ಕೋಚ್ ಸ್ಥಾನದಿಂದ ಕೆಳಗಿಳಿಸಬೇಕು. ರವಿ ಶಾಸ್ತ್ರೀ ಉತ್ತಮ ಆಟಗಾರ, ವೀಕ್ಷಕ ವಿವರಣೆಗಾರ. ಅವರು ಅದೇ ಕೆಲಸವನ್ನು ಮುಂದುವರಿಸಲಿ’ ಎಂದು ಉತ್ತರ ಪ್ರದೇಶದ ಕ್ರೀಡಾ ಸಚಿವರೂ ಆಗಿರುವ ಚೇತನ್ ಚೌಹಾಣ್ ತಿಳಿಸಿದ್ದಾರೆ.
ಬೆಸ್ಟ್ ಟ್ರಾವೆ ಲಿಂಗ್ ಟೀಮ್
ವಿರಾಟ್ ಕೊಹ್ಲಿ ಸಾರಥ್ಯದ ತಂಡ “ಬೆಸ್ಟ್ ಟ್ರಾವೆಲಿಂಗ್ ಟೀಮ್ ಇನ್ ದ ವರ್ಲ್ಡ್’ ಎಂದು ಹೇಳಿರುವ ಶಾಸ್ತ್ರೀ ಮಾತನ್ನು ಅಲ್ಲಗೆಳೆದಿರುವ ಚೌಹಾಣ್, “ರವಿಶಾಸ್ತ್ರೀಯವರ ಈ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಈ ಹೆಗ್ಗಳಿಕೆ 1980ರ ತಂಡಕ್ಕೆ ಸಲ್ಲುತ್ತದೆ’ ಎಂದಿದ್ದಾರೆ.
ಇದರೊಂದಿಗೆ ರವಿಶಾಸ್ತ್ರೀ ಅವರನ್ನು ಕೋಚ್ ಸ್ಥಾನದಿಂದ ಕೆಳಗಿಳಸಬೇಕೆಂಬ ಮಾಜಿ ಕ್ರಿಕೆಟಿಗರ ಕೂಗಿಗೆ ಚೇತನ್ ಚೌಹಾಣ್ ಸಾಥ್ ನೀಡಿ ದಂತಾಗಿದೆ. ಇವರಿಗೂ ಮುನ್ನ ಸೌರವ್ ಗಂಗೂಲಿ, ವೀರೇಂದ್ರ ಸೆಹವಾಗ್, ಗೌತಮ್ ಗಂಭೀರ್ ಮೊದಲಾದವರೆಲ್ಲ ಶಾಸ್ತ್ರೀ ಅವರನ್ನು ಕೋಚ್ ಸ್ಥಾನದಿಂದ ಕೆಳಗಿಳಿಸಬೇಕೆಂದು ಒತ್ತಾಯಿಸಿದ್ದರು.
ಏಶ್ಯ ಕಪ್ ಕ್ರಿಕೆಟಿಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಚೇತನ್ ಚೌಹಾಣ್, “ಭಾರತ ತಂಡ ಹೆಚ್ಚು ಸಂತುಲಿತವಾಗಿದೆ. ಯುವ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು’ ಎಂದರು.