ಗ್ರ್ಯಾಂಡ್ ಫಿನಾಲೆಗೂ ಮುನ್ನ ಅಫ್ಘಾನ್ ಟೆಸ್ಟ್
Team Udayavani, Sep 25, 2018, 12:37 PM IST
ದುಬಾೖ: ಏಶ್ಯ ಕಪ್ ಕ್ರಿಕೆಟ್ನಲ್ಲಿ ಸೋಲಿಲ್ಲದ ಸರದಾರನಾಗಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿರುವ ಭಾರತ, ಮಂಗಳವಾರದ ತನ್ನ ಅಂತಿಮ ಸೂಪರ್-4 ಪಂದ್ಯದಲ್ಲಿ ಅಫ್ಘಾನಿಸ್ಥಾನ ವಿರುದ್ಧ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಲಿದೆ. ರವಿವಾರ ಪಾಕಿಸ್ಥಾನವನ್ನು ಸದೆಬಡಿದ ರೀತಿಯನ್ನು ಗಮನಿಸಿದಾಗ ಟೀಮ್ ಇಂಡಿಯಾ ಅಫ್ಘಾನ್ ತಂಡಕ್ಕೂ ಅಂಜಿಕೆ ಹುಟ್ಟಿಸುವುದು ಖಚಿತ ಎನ್ನಲಡ್ಡಿಯಿಲ್ಲ.
ಈಗಾಗಲೇ ಫೈನಲ್ ಪ್ರವೇಶಿಸಿರುವ ಭಾರತಕ್ಕೆ, ಹಾಗೆಯೇ ಕೂಟದಿಂದ ಹೊರಬಿದ್ದಿರುವ ಅಫ್ಘಾನಿಸ್ಥಾನಕ್ಕೆ ಇದು ಮಹತ್ವದ ಪಂದ್ಯವೇನಲ್ಲ. ಇಲ್ಲಿನ ಫಲಿತಾಂಶದಿಂದ ಇತ್ತಂಡಗಳಿಗೆ ಆಗಬೇಕಾದ್ದೇನೂ ಇಲ್ಲ. ಆದರೆ ಇದು ಪ್ರತಿಷ್ಠೆಯ ಕಾಳಗವೆಂಬುದು ಸುಳ್ಳಲ್ಲ. ಬದ್ಧ ಎದುರಾಳಿ ಪಾಕಿಸ್ಥಾನಕ್ಕೇ 2 ಸಲ ಶಾಕ್ ಟ್ರೀಟ್ಮೆಂಟ್ ನೀಡಿರುವ ಭಾರತ, ಅಫ್ಘಾನಿಸ್ಥಾನದಂಥ ಅನನುಭವಿ ತಂಡದ ವಿರುದ್ಧ ಜಾರದಂತೆ ಎಚ್ಚರ ವಹಿಸಬೇಕಿದೆ. ಸೋತರೆ ಮರ್ಯಾದೆ ಪ್ರಶ್ನೆ!
ಹಾಗೆಯೇ ಈಗಾಗಲೇ ನಿರ್ಗಮಿ ಸಿದರೂ ಭಾರತದ ವಿರುದ್ಧ ಗೆದ್ದರೆ ಅದು ಅಫ್ಘಾನಿಸ್ಥಾನಕ್ಕೆ ಚಾಂಪಿಯನ್ ಆದಷ್ಟೇ ಸಂಭ್ರಮ ತರುವ ಸಂಗತಿ. ಕಾರಣ, ಭಾರತ ಫೈನಲಿಸ್ಟ್ ತಂಡ ತಾನೆ! ಅಸYರ್ ಅಫ್ಘಾನ್ ಬಳಗ ಇಂಥದೊಂದು ಪ್ರಯತ್ನಕ್ಕೆ ಮುಂದಾಗುವುದರಲ್ಲಿ ಅನುಮಾನವಿಲ್ಲ.
ಭಾರತದ ಮೀಸಲು ಸಾಮರ್ಥ್ಯ ಪರೀಕ್ಷೆ ?
ಫೈನಲ್ ಟಿಕೆಟ್ ಲಭಿಸಿರುವುದರಿಂದ ಈ ಪಂದ್ಯಕ್ಕಾಗಿ ಭಾರತ ತನ್ನ ಮೀಸಲು ಸಾಮರ್ಥ್ಯವನ್ನು ಪರಿಚಯಿಸುವ ಸಾಧ್ಯತೆ ಇದೆ. ಮುಖ್ಯವಾಗಿ ಮಧ್ಯಮ ಕ್ರಮಾಂಕದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಕೊಳ್ಳಬಹುದು. ಸರಣಿಯುದ್ದಕ್ಕೂ ಆರಂಭಿಕರಾದ ಶಿಖರ್ ಧವನ್ (327) ಮತ್ತು ರೋಹಿತ್ ಶರ್ಮ (269) ಅವರೇ ರನ್ ಪ್ರವಾಹ ಹರಿಸುತ್ತ ಬಂದಿದ್ದಾರೆ. ಉಳಿದವರಿಗೆ ಹೆಚ್ಚಿನ ಅವಕಾಶ ಲಭಿಸಿದರೆ ಹೇಗೆ ಬ್ಯಾಟಿಂಗ್ ನಡೆಸಿಯಾರೆಂಬ ಪ್ರಶ್ನೆಗೆ ತುರ್ತಾಗಿ ಉತ್ತರ ಕಂಡುಕೊಳ್ಳಬೇಕಿದೆ.