ತಮಿಳ್ ತಲೈವಾಸ್ಗೆ ಮತ್ತೂಮ್ಮೆ ಗೂಳಿ ಗುದ್ದು
Team Udayavani, Oct 18, 2018, 9:34 AM IST
ಸೋನೆಪತ್ (ಹರ್ಯಾಣ): ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್ ಅಬ್ಬರ ಮುಂದುವರಿದಿದ್ದು, ಮತ್ತೂಮ್ಮೆ ತಮಿಳ್ ತಲೈವಾಸ್ಗೆ ಗುದ್ದಿದೆ. ಬುಧವಾರ ನಡೆದ ಮೊದಲ ಮುಖಾಮುಖಿಯಲ್ಲಿ ಬುಲ್ಸ್ 44-35 ಅಂತರದಿಂದ ಗೆದ್ದು ಬೀಗಿತು. ಇದಕ್ಕೂ ಮೊದಲು ಚೆನ್ನೈ ಚರಣದ ಮೊದಲ ಪಂದ್ಯದಲ್ಲೂ ತಲೈವಾಸ್ ವಿರುದ್ಧ ಗೆಲುವು ಸಾಧಿಸಿತ್ತು. ಇದು ಬುಲ್ಸ್ಗೆ ಈ ಕೂಟದಲ್ಲಿ ಒಲಿದ ಸತತ 2ನೇ ಗೆಲುವು. ಇನ್ನೊಂದೆಡೆ ತಮಿಳ್ ತಲೈವಾಸ್ ನಿರಂತರ 5ನೇ ಸೋಲು ಅನುಭವಿಸಿತು. ದಿನದ ಇನ್ನೊಂದು ಪಂದ್ಯದಲ್ಲಿ ಯು ಮುಂಬಾ ಹರ್ಯಾಣವನ್ನು 42-32 ಅಂತರದಿಂದ ಸೋಲಿಸಿ 3ನೇ ಜಯ ಸಾಧಿಸಿತು. ಹರ್ಯಾಣಕ್ಕಿದು 5ನೇ ಸೋಲು.
ಮೆರೆದ ಪವನ್, ಕಾಶಿಲಿಂಗ್ ಅಡಕೆ
ಬೆಂಗಳೂರು ಬುಲ್ಸ್ ಪಾಲಿಗೆ ಪವನ್ ಸೆಹ್ರಾವತ್ (16 ಅಂಕ) ಹಾಗೂ ಕಾಶಿಲಿಂಗ್ ಅಡಕೆ (12 ಅಂಕ) ಅವರ ಅತ್ಯುತ್ತಮ ಮಟ್ಟದ ರೈಡಿಂಗ್ ವರವಾಗಿ ಪರಿಣಮಿಸಿತು. ಇವರಿಬ್ಬರು ಸೇರಿಕೊಂಡು ತಲೈವಾಸ್ ಕೋಟೆಯನ್ನು ಛಿದ್ರಗೊಳಿಸಿದರು. ಪವನ್ 10 ಬಾರಿ ಟಚ್ ಪಾಯಿಂಟ್, 4 ಸಲ ಬೋನಸ್ ಪಾಯಿಂಟ್ ತಂದರು. ಅದ್ಭುತ ಟ್ಯಾಕ್ಲಿಂಗ್ ಮಾಡುವ ಮೂಲಕವೂ 2 ಅಂಕ ಸೇರಿಸಿದ ಅವರು ಬೆಂಗಳೂರು ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಪವನ್ಗೆ ಮತ್ತೂಂದು ತುದಿಯಲ್ಲಿ ಶ್ರೇಷ್ಠ ರೈಡಿಂಗ್ ನಿರ್ವಹಣೆ ನೀಡುವ ಮೂಲಕ ಕಾಶಿಲಿಂಗ್ ಅಡಕೆ ನೆರವಾದರು. ಕಾಶಿಲಿಂಗ್ ಟಚ್ ಪಾಯಿಂಟ್ ಮೂಲಕ 8 ಅಂಕ, ಬೋನಸ್ ಮೂಲಕ 8 ಅಂಕ ಕೊಡಿಸಿದರು. ಜತೆಗೆ 2 ಟ್ಯಾಕಲ್ ಕೂಡ ನಡೆಸಿದರು.
ಅಜಯ್ ಆಟ ವ್ಯರ್ಥ
ಅಜಯ್ ಠಾಕೂರ್ ಕಳೆದ ಎಲ್ಲ ಪಂದ್ಯಗಳಲ್ಲಿ ಭರ್ಜರಿ ಆಟವಾಡಿದ್ದಾರೆ. ಈ ಪಂದ್ಯದಲ್ಲೂ ಅತ್ಯುತ್ತಮ ರೈಡಿಂಗ್ ನಿರ್ವಹಿಸಿದರು. ಆದರೆ ಇದರಿಂದ ತಂಡಕ್ಕೆ ಯಾವುದೇ ಲಾಭವಾಗಲಿಲ್ಲ. ಒಟ್ಟಾರೆ 15 ರೈಡಿಂಗ್ನಿಂದ ಅವರು 7 ಟಚ್ ಪಾಯಿಂಟ್, 2 ಬೋನಸ್ ಪಾಯಿಂಟ್ ಸಹಿತ 9 ಅಂಕ ಗಳಿಸಿದರು. ಹೆಚ್ಚುವರಿ ಆಟಗಾರನಾಗಿ ಬಂದ ಅತುಲ್ ರೈಡಿಂಗ್ನಿಂದ ಒಟ್ಟಾರೆ 6 ಅಂಕ ಗಳಿಸಿದರು.