ರಣಜಿ: ನಿಶ್ಚಲ್, ಶರತ್ ಶತಕ ಕರ್ನಾಟಕಕ್ಕೆ ಇನ್ನಿಂಗ್ಸ್ ಮುನ್ನಡೆ
Team Udayavani, Nov 15, 2018, 6:20 AM IST
ನಾಗ್ಪುರ: ಆರಂಭಕಾರ ಡಿ. ನಿಶ್ಚಲ್ ಮತ್ತು ವಿಕೆಟ್ ಕೀಪರ್ ಬಿ.ಆರ್. ಶರತ್ ಅವರ ಆಕರ್ಷಕ ಶತಕದ ನೆರವು ಪಡೆದ ಕರ್ನಾಟಕ, ಹಾಲಿ ಚಾಂಪಿಯನ್ ವಿದರ್ಭ ವಿರುದ್ಧದ ರಣಜಿ ಮುಖಾಮುಖೀಯಲ್ಲಿ ಇನ್ನಿಂಗ್ಸ್ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ವಿದರ್ಭದ 307 ರನ್ನಿಗೆ ಜವಾಬು ನೀಡುತ್ತಿದ್ದ ಕರ್ನಾಟಕ 2ನೇ ದಿನದ ಅಂತ್ಯಕ್ಕೆ 5 ವಿಕೆಟಿಗೆ 208 ರನ್ ಗಳಿಸಿತ್ತು. ನಿಶ್ಚಲ್ ಮತ್ತು ಭರತ್ ಕ್ರೀಸಿನಲ್ಲಿದ್ದರು. 3ನೇ ದಿನವಾದ ಬುಧವಾರ ಇಬ್ಬರೂ ಬ್ಯಾಟಿಂಗ್ ಮುಂದುವರಿಸಿ ವೈಯಕ್ತಿಕ ಶತಕ ಸಾಹಸದೊಂದಿಗೆ ತಂಡದ ಮೊತ್ತವನ್ನು 378ಕ್ಕೆ ಏರಿಸಿದರು. ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ವಿದರ್ಭ 2 ವಿಕೆಟಿಗೆ 72 ರನ್ ಮಾಡಿದ್ದು, ಒಂದು ರನ್ ಮುನ್ನಡೆಯಲ್ಲಿದೆ.
ನಿಶ್ಚಲ್-ಶರತ್ ಜೋಡಿಯಿಂದ 6ನೇ ವಿಕೆಟಿಗೆ 260 ರನ್ ಹರಿದು ಬಂತು. ನಿಶ್ಚಲ್ 113 ರನ್ ಹೊಡೆದರೆ (338 ಎಸೆತ, 10 ಬೌಂಡರಿ) ಮತ್ತು ಶರತ್ 103 ರನ್ ಬಾರಿಸಿದರು (161 ಎಸೆತ, 20 ಬೌಂಡರಿ). ಕರ್ನಾಟಕಕ್ಕೆ ಇನ್ನಿಂಗ್ಸ್ ಮುನ್ನಡೆ ಒದಗಿಸಿದ ಬಳಿಕವೇ ಈ ಜೋಡಿ ಬೇರ್ಪಟ್ಟಿತು. ಬಳಿಕ ನಾಯಕ ವಿನಯ್ ಕುಮಾರ್ ಅಜೇಯ 39, ಜೆ. ಸುಚಿತ್ 20 ರನ್ ಗಳಿಸಿದರು.
ವಿದರ್ಭ ಪರ ಆದಿತ್ಯ ಸರ್ವಟೆ 5 ವಿಕೆಟ್ ಉರುಳಿಸಿದರು. ಗುರುವಾರ ಪಂದ್ಯದ ಅಂತಿಮ ದಿನ.
ಸಂಕ್ಷಿಪ್ತ ಸ್ಕೋರ್: ವಿದರ್ಭ-307 ಮತ್ತು 2 ವಿಕೆಟಿಗೆ 72. ಕರ್ನಾಟಕ-378.