ಬೆಂಗಾಲ್ ವಿರುದ್ಧ ಹರ್ಯಾಣಕ್ಕೆ ಜಯ
Team Udayavani, Dec 6, 2018, 6:15 AM IST
ನವದೆಹಲಿ: 6ನೇ ಆವೃತ್ತಿ ಪ್ರೊ ಕಬಡ್ಡಿ ದೆಹಲಿ ಚರಣದಲ್ಲಿ ಬುಧವಾರ ನಡೆದ ಅಂತರ್ವಲಯ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ 35-33 ಅಂಕಗಳಿಂದ ಬೆಂಗಾಲ್ ವಾರಿಯರ್ಸ್ ವಿರುದ್ಧ ಜಯ ಸಾಧಿಸಿದೆ.
ಈ ಜಯದ ಮೂಲಕ ಎ ಗುಂಪಿನಲ್ಲಿರುವ ಹರ್ಯಾಣ ಸ್ಥಿತಿ ತುಸು ಸುಧಾರಿಸಿದೆ. ಬಿ ಗುಂಪಿನಲ್ಲಿರುವ ಬೆಂಗಾಲ್ ಯಥಾಸ್ಥಾನ ಕಾಪಾಡಿಕೊಂಡಿದೆ. ಒಟ್ಟಾರೆ ಹೋಲಿಸಿದರೆ ಹರ್ಯಾಣಕ್ಕಿಂತ ಬೆಂಗಾಲ್ ಉತ್ತಮ ಸ್ಥಿತಿಯಲ್ಲಿದೆ.
ಹರ್ಯಾಣ ಪರ ದಾಳಿಯಲ್ಲಿ ಖ್ಯಾತ ಆಟಗಾರ ಮೋನು ಗೋಯತ್ ಮಿಂಚಿದರು. ಆದರೆ ಅವರ ಎಂದಿನ ಸಾಮರ್ಥ್ಯಕ್ಕೆ ಹೋಲಿಸಿದರೆ ಈ ಪ್ರದರ್ಶನ ಅದ್ಭುತವೇನಲ್ಲ ಎಂದು ಖಚಿತವಾಗಿ ಹೇಳಬಹುದು. ಮೋನು 25 ಬಾರಿ ಬೆಂಗಾಲ್ ಕೋಟೆಗೆ ದಾಳಿಯಿಟ್ಟು, 12 ಬಾರಿ ಯಶಸ್ಸು ಸಾಧಿಸಿದರು. 8 ಬಾರಿಎದುರಾಳಿಗಳನ್ನು ಔಟ್ ಮಾಡಿದರೆ,ಇನ್ನು 4 ಬೋನಸ್ ಅಂಕ ಅವರಿಗೆ ಲಭಿಸಿತು. ರಕ್ಷಣಾ ವಿಭಾಗದಲ್ಲಿ ಹರ್ಯಾಣ ಸಾಧನೆ ಪರವಾಗಿಲ್ಲ ಎನ್ನುವ ಮಟ್ಟದಲ್ಲೇ ಇದೆ. ಇದರ ನಡುವೆಯೇ ಆ ತಂಡ ಗೆದ್ದಿದೆ ಅಚ್ಚರಿ ಮೂಡಿಸಿದೆ.
ಸೋತ ಬೆಂಗಾಲ್ ಪರ ಮಣಿಂದರ್ ಸಿಂಗ್ ಹಾಗೂ ರವೀಂದ್ರ ಕುಮಾವತ್ ಮಿಂಚಿದರು. ಮಣಿಂದರ್ ಸಿಂಗ್ 18 ಬಾರಿ ದಾಳಿ ನಡೆಸಿ 11 ಅಂಕ ಗಳಿಸಿದರು. ಇವರ ನೆರವಿಗೆ ನಿಂತ ರವೀಂದ್ರ 7 ಅಂಕ ಗಳಿಸಿದರು. ಬೆಂಗಾಲ್ ಕೂಡ ರಕ್ಷಣೆಯಲ್ಲಿ ವೈಫಲ್ಯ ಅನುಭವಿಸಿತು.