ಜೈಪುರ್ ತಂಡಕ್ಕೆ ಅಪರೂಪದ ಜಯ
Team Udayavani, Dec 10, 2018, 9:33 AM IST
ವಿಶಾಖಪಟ್ಟಣ: ಪ್ರೊ ಕಬಡ್ಡಿ ಆರನೇ ಆವೃತ್ತಿ ಅಂತರ್ ವಲಯ “ಚಾಲೆಂಜ್ ವೀಕ್’ನ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ 24-37 ಅಂತರದಿಂದ ಜೈಪುರ ಪಿಂಕ್ ಪ್ಯಾಂಥರ್ ಗೆಲುವು ಗಳಿಸಿತು. ಸತತ ವೈಫಲ್ಯಗಳ ಬಳಿಕ ಜೈಪುರ್ ಈ ಜಯ ಸಾಧಿಸಿ ಸಮಾಧಾನಪಟ್ಟಿತು.
ರವಿವಾರ ವಿಶಾಖಪಟ್ಟಣದ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದೀಪಕ್ ಹೂಡಾ ಜೈಪುರದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ದೀಪಕ್ ಒಟ್ಟು 9 ಅಂಕಗಳನ್ನು ರೈಡಿಂಗ್ನಿಂದ ತಂಡಕ್ಕೆ ತಂದುಕೊಟ್ಟರು. ಇವರಿಗೆ ಆನಂದ್ ಪಾಟೀಲ್ (5 ಅಂಕ) ಹಾಗೂ ಅಜಿಂಕ್ಯ ಪವಾರ್ (4 ಅಂಕ) ರೈಡಿಂಗ್ ಮೂಲಕ ಸಾಥ್ ನೀಡಿದರು. ಸುನಿಲ್ ಸಿದ್ಧಗಾವಲಿ ಪ್ರಚಂಡ ಟ್ಯಾಕಲ್ ನಡೆಸಿದರು. ಒಟ್ಟು 6 ಅಂಕ ಕಲೆ ಹಾಕಿ ತಂಡದ ಗೆಲುವನ್ನು ಸಾರಿದರು.
ತಲೈವಾಸ್ ಪರ ತಾರಾ ಆಟಗಾ ರರಾದ ಅಜಯ್ ಕುಮಾರ್ (2 ಅಂಕ), ಜಸ್ವೀರ್ ಸಿಂಗ್ (3 ಅಂಕ) ಹಾಗೂ ಮಂಜಿತ್ ಚಿಲ್ಲರ್ (0 ) ಕಳಪೆ ಆಟ ನಿರ್ವಹಿಸಿದ್ದು ತಂಡಕ್ಕೆ ಕುತ್ತಾಗಿ ಪರಿಣಮಿಸಿತು. ಇದರಿಂದ ತಮಿಳ್ ಪಡೆ ಭಾರೀ ಹಿನ್ನಡೆ ಕಾಣುವಂತಾಯಿತು. ಕರ್ನಾಟಕದ ರೈಡರ್ ಸುಕೇಶ್ ಹೆಗ್ಡೆ (6 ಅಂಕ) ರೈಡಿಂಗ್ ಮೂಲಕ ಸ್ವಲ್ಪ ಮಿಂಚಿದರು. ಒಟ್ಟಾರೆ ಒಂದು ತಂಡವಾಗಿ ಆಡದೆ ತಲೈವಾಸ್ ಸೋಲು ಅನುಭವಿಸಿತು.
ಆತಿಥೇಯರಿಗೆ ಗೆಲುವು
ದಿನದ ದ್ವಿತೀಯ ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟಾನ್ಸ್ 35-31 ಅಂತರದಿಂದ ಹರ್ಯಾಣ ಸ್ಟೀಲರ್ ತಂಡವನ್ನು ಮಣಿಸಿ ತವರಿನಲ್ಲಿ ಸತತ 2ನೇ ಗೆಲುವು ಸಾಧಿಸಿತು.
ಸೋಮವಾರ ಪ್ರೊ ಕಬಡ್ಡಿ ಪಂದ್ಯಗಳಿಗೆ ವಿರಾಮ.