ಆಡಳಿತಾಧಿಕಾರಿಗಳ ಸಮಸ್ಯೆ ಇತ್ಯರ್ಥಕ್ಕೆ ಮಾತುಕತೆ?
Team Udayavani, Dec 15, 2018, 12:06 PM IST
ಹೊಸದಿಲ್ಲಿ: ಬಿಸಿಸಿಐ ಸಮಸ್ಯೆ ಬಗೆಹರಿಸಲು ಸರ್ವೋಚ್ಚ ನ್ಯಾಯಾಲಯದಿಂದ ನಿಯೋಜಿತಗೊಂಡಿರುವ ಆಡಳಿತಾಧಿಕಾರಿಗಳ ನಡುವೆಯೇ ಸಮಸ್ಯೆ ತೀವ್ರಗೊಂಡಿದೆ. ಮುಖ್ಯ ಆಡಳಿತಾಧಿಕಾರಿ ವಿನೋದ್ ರಾಯ್, ಡಯಾನಾ ಎಡುಲ್ಜಿ ನಡುವೆ ಉದ್ಭವಿಸಿರುವ ಸಮಸ್ಯೆಯನ್ನು ಬಗೆಹರಿಸಲು ಅಮಿಕಸ್ ಕ್ಯೂರಿ (ನ್ಯಾಯಾಲಯ ಮತ್ತು ಬಿಸಿಸಿಐ ನಡುವಿನ ಮಧ್ಯವರ್ತಿ) ಗೋಪಾಲ್ ಸುಬ್ರಹ್ಮಣ್ಯಂ ಯತ್ನಿಸುತ್ತಿದ್ದಾರಾದರೂ, ಪ್ರಕರಣ ಬಗೆಹರಿಯುವ ಯಾವುದೇ ಲಕ್ಷಣ ಕಾಣುತ್ತಿಲ್ಲ.
ಡಯಾನಾ ಮತ್ತು ವಿನೋದ್ ನಡುವೆ ಉಂಟಾಗಿರುವ ಸಮಸ್ಯೆಯನ್ನು ಅವರಿಬ್ಬರೇ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಸಂಬಂಧಪಟ್ಟವರು ಅಭಿ ಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೇ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಲು ಸ್ವತಃ ಸರ್ವೋಚ್ಚ ನ್ಯಾಯಾಲಯ ಸಿದ್ಧವಿಲ್ಲ ಎಂದು ವರದಿಯಾಗಿದೆ.
ವಿನೋದ್ ರಾಯ್, ಬಿಸಿಸಿಐ ವಿಚಾರದಲ್ಲಿ ತೆಗೆದುಕೊಳ್ಳುತ್ತಿರುವ ಹಲವು ನಿರ್ಧಾರಗಳು ಕಾನೂನು ಬಾಹಿರ ವಾಗಿವೆ. ಅವರು ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾ ರೆಂದು ಆರೋಪಗಳಿವೆ. ವಿನೋದ್ ರಾಯ್ಗೆ ಬಿಸಿಸಿಐಗೆ ಸಂಬಂಧಪಟ್ಟಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿದ್ದರೂ, ಅವರ ಬಳಿ ಪರಮಾಧಿಕಾರವೇನಿಲ್ಲ ಎಂದು ಬಿಸಿಸಿಐ ಅತೃಪ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಮಹಿಳಾ ಟಿ20 ತರಬೇತುದಾರರ ಆಯ್ಕೆಯಲ್ಲಿ ಏಕಪಕ್ಷೀಯ ನಿರ್ಧಾರ ಮಾಡಿದ್ದು, ಕಾರ್ಯದರ್ಶಿ ಅಮಿತಾಭ್ ಚೌಧರಿಗೆ ಆಸ್ಟ್ರೇಲಿಯಕ್ಕೆ ತೆರಳಲು ನಿರಾಕರಿಸಿದ್ದೂ ಸೇರಿ ಹಲವು ಸಂಗತಿಗಳು ತೀವ್ರ ಭಿನ್ನಾಭಿಪ್ರಾಯ ಹುಟ್ಟುಹಾಕಿವೆ.