ಖೋ ಖೋ ವಿವಾದ: ಸರಕಾರಕ್ಕೆ ಮಾಹಿತಿ ಕೇಳಿದ ಹೈಕೋರ್ಟ್
Team Udayavani, Jan 3, 2019, 1:10 AM IST
ಬೆಂಗಳೂರು: ಇದೇ 9ರಿಂದ ಪುಣೆಯಲ್ಲಿ ನಡೆಯಲಿರುವ “ಖೇಲೋ ಇಂಡಿಯಾ’ ಯುವ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲ್ಲಿರುವ ರಾಜ್ಯದ ಖೋ ಖೋ ತಂಡದ ಆಯ್ಕೆ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಮಾಹಿತಿ ಒದಗಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಬುಧವಾರ ಸೂಚನೆ ನೀಡಿದೆ.
ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ ಸಲ್ಲಿಸಿರುವ ಅರ್ಜಿಯನ್ನು ಬುಧವಾರ ನ್ಯಾ| ಬಿ.ಎಂ. ಶ್ಯಾಮಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆಗೆ ಎತ್ತಿಕೊಂಡಿತು. ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ ಈ ಸಂಬಂಧ ಮಾಹಿತಿ ಸಲ್ಲಿಸುವಂತೆ ಸರಕಾರದ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ (ಜ.4) ಮುಂದೂಡಿತು.
ಏನಿದು ವಿವಾದ?
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲೆ ಡಿ. ಸಂಧ್ಯಾ, ಖೇಲೋ ಇಂಡಿಯಾ ಯುವ ಕ್ರೀಡಾಕೂಟಕ್ಕೆ ಪುರುಷರ ಹಾಗೂ ಮಹಿಳೆಯರ ತಂಡಗಳನ್ನು ಆಯ್ಕೆ ಮಾಡಿ ಕಳಿಸಿಕೊಂಡುವಂತೆ ಖೋ ಖೋ ಫೆಡರೇಷನ್ ಆಫ್ ಇಂಡಿಯಾ 2018ರ ಆ. 7ರಂದು ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆಗೆ ಪತ್ರ ಬರೆದಿತ್ತು. ಅದರಂತೆ ಅಕ್ಟೋಬರ್ ತಿಂಗಳಲ್ಲಿ ತಂಡಗಳನ್ನು ಆಯ್ಕೆ ಮಾಡಿ ಪಟ್ಟಿ ಕಳಿಸಿಕೊಡಲಾಗಿತ್ತು.
ಈ ಮಧ್ಯೆ ನ. 20ರಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿಗಳನ್ನು ಕ್ರೀಡಾಕೂಟಕ್ಕೆ ನೋಡಲ್ ಅಧಿಕಾರಿಯನ್ನಾಗಿ ರಾಜ್ಯ ಸರಕಾರ ನೇಮಕ ಮಾಡಿತು. ತಂಡಗಳ ಪಟ್ಟಿಗೆ ನೋಡಲ್ ಅಧಿಕಾರಿಯ ಅನುಮೋದನೆ ಪಡೆದುಕೊಳ್ಳುವಂತೆ ಖೋ ಖೋ ಫೆಡರೇಷನ್ ಆಫ್ ಇಂಡಿಯಾ ಹೇಳಿತ್ತು. ಅದರಂತೆ, ಎರಡೂ ತಂಡಗಳ ಪಟ್ಟಿಯನ್ನು ಅನುಮೋದನೆಗಾಗಿ ನೋಡಲ್ ಅಧಿಕಾರಿಗೆ ನ. 27ರಂದು ಕಳಿಸಿಕೊಡಲಾಗಿದೆ. ಆದರೆ, ಈವರೆಗೆ ಅನುಮೋದನೆ ಕೊಟ್ಟಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದೇ ವೇಳೆ ಅಧಿಕೃತ ಸಂಸ್ಥೆಯಾಗಿರುವ ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆ ಈಗಾಗಲೇ ತಂಡಗಳನ್ನು ಆಯ್ಕೆ ಮಾಡಿದ್ದರೂ ಕರ್ನಾಟಕ ರಾಜ್ಯ ಒಲಿಂಪಿಕ್ ಸಂಸ್ಥೆ ಪ್ರತ್ಯೇಕ ತಂಡ ರಚಿಸಿ ಅನುಮೋದನೆ ಪಡೆದು ಆ ತಂಡವನ್ನು ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಕಳಿಸಲು ಮುಂದಾಗಿದೆ. ಇದು ಕಾನೂನುಬಾಹಿರ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ವಿವರಿಸಿದರು.