ಪಾಂಡ್ಯಾ,ರಾಹುಲ್ ವಿವಾದ;ಮೌನ ಮುರಿದ ಕಪ್ತಾನ ಕೊಹ್ಲಿ
Team Udayavani, Jan 11, 2019, 4:43 AM IST
ನವದೆಹಲಿ: ಹಾರ್ದಿಕ್ ಪಾಂಡ್ಯಾ ಮತ್ತು ಕೆ.ಎಲ್.ರಾಹುಲ್ ಅವರು ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ನಲ್ಲಿ ಭಾಗವಹಿಸಿ ವಿವಾದಾತ್ಮಕ ಹೇಳಿಕೆ ನೀಡಿದ ಕುರಿತು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಮೌನ ಮುರಿದಿದ್ದು, ಭಾರತದ ಕ್ರಿಕೆಟ್ ತಂಡದ ಸದಸ್ಯನಾಗಿ, ಜವಾಬ್ಧಾರಿಯುತ ಆಟಗಾರನಾಗಿ ಇಂತಹ ಅಭಿಪ್ರಾಯಗಳನ್ನು ನಾನು ಬೆಂಬಲಿಸುವುದಿಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೊಹ್ಲಿ ರಾಹುಲ್ ಮತ್ತು ಪಾಂಡ್ಯಾ ನೀಡಿರುವ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯಗಳು. ನಾವೆಲ್ಲರೂ ಈಗ ಬಿಸಿಸಿಐನಿಂದ ಯಾವ ನಿರ್ಧಾರ ಹೊರ ಬೀಳುತ್ತದೆ ಎಂದು ಕಾಯುತ್ತಿದ್ದೇವೆ ಎಂದಿದ್ದಾರೆ.
ಇದೇ ವೇಳೆ ಈ ವಿವಾದ ಭಾರತ ತಂಡದ ಆತ್ಮವಿಶ್ವಾಸವನ್ನು ಕುಗ್ಗಿಸುವುದಿಲ್ಲ . ಡ್ರೆಸ್ಸಿಂಗ್ ರೂಮ್ನಲ್ಲಿ ನಂಬಿಕೆಗಳನ್ನು ಬದಲು ಮಾಡುತ್ತೇವೆ ಎಂದಿದ್ದಾರೆ.
ಬಿಸಿಸಿಐನ ನಿರ್ವಾಹಕ ಸಮಿತಿಯ ಮುಖ್ಯಸ್ಥ ವಿನೋದ್ ರಾಯ್ ಅವರು ಇಬ್ಬರಿಗೂ ತಲಾ 2 ಪಂದ್ಯಗಳಿಗೆ ನಿಷೇಧ ಹೇರಲು ಶಿಫಾರಸು ಮಾಡಿದ ಬೆನ್ನಲ್ಲೇ ಕೊಹ್ಲಿ ಈ ಹೇಳಿಕೆ ನೀಡಿದ್ದಾರೆ.
ಶೋನ ಬಳಿಕ ಇಬ್ಬರು ಆಟಗಾರರು ಭಾರೀ ವಿವಾದಕ್ಕೆ ಗುರಿಯಾಗಿದ್ದರು. ಈ ಕಾರಣಕ್ಕಾಗಿ , ಬಿಸಿಸಿಐ ಇಬ್ಬರಿಗೂ ಕಾರಣ ಕೇಳಿ ಬುಧವಾರ ನೋಟಿಸ್ ಜಾರಿ ಮಾಡಿತ್ತು ಮತ್ತು 24 ಗಂಟೆಯೊಳಗಾಗಿ ಉತ್ತರಿಸಬೇಕೆಂದು ಆದೇಶಿಸಿತ್ತು.