ಪಾಂಡ್ಯ, ರಾಹುಲ್ ಬೇಷರತ್ ಕ್ಷಮೆ
Team Udayavani, Jan 15, 2019, 12:50 AM IST
ಮುಂಬಯಿ: ಖಾಸಗಿ ಟೀವಿ ಕಾರ್ಯಕ್ರಮದಲ್ಲಿ ಮಹಿಳೆಯರ ವಿರುದ್ಧ ಅಸಭ್ಯವಾಗಿ ಮಾತನಾಡಿ ಅಮಾನತಿಗೆ ಒಳಗಾದ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್. ರಾಹುಲ್ ಸೋಮವಾರ ಬಿಸಿಸಿಐ ಎದುರು ಬೇಷರತ್ ಕ್ಷಮೆಯಾಚಿಸಿದ್ದಾರೆ.
ಬಿಸಿಸಿಐ ನೀಡಿದ್ದ ಶೋಕಾಸ್ ನೋಟಿಸ್ಗೆ ಇಬ್ಬರೂ ಕ್ರಿಕೆಟಿಗರು ಪ್ರತಿಕ್ರಿಯಿಸಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇದರ ನಡುವೆಯೂ ತನಿಖೆ ನಡೆಸಲು ಓಂಬುಡ್ಸ್ಮನ್ ನೇಮಿಸಲು ಬಿಸಿಸಿಐ ನಿರ್ಧರಿಸಿದೆ. ಕೆಲವು ಸದಸ್ಯರು ಕೂಡಲೇ ವಿಶೇಷ ಸಭೆ ಕರೆಯುವಂತೆ ಬಿಸಿಸಿಐಯನ್ನು ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಒಎ ಮುಖ್ಯಸ್ಥ ವಿನೋದ್ ರಾಯ್, “ಕ್ರಿಕೆಟಿಗರನ್ನು ಸರಿಪಡಿಸುವುದೇ ನಮ್ಮ ಗುರಿ. ಅವರ ಭವಿಷ್ಯವನ್ನು ಹಾಳು ಮಾಡುವ ಉದ್ದೇಶ ಬಿಸಿಸಿಐಗಿಲ್ಲ’ ಎಂದಿದ್ದಾರೆ.
ಬಿಸಿಸಿಐ ತಾರತಮ್ಯ ನೀತಿ
ಹರ್ಮನ್ಪ್ರೀತ್ ಕೌರ್ ಅವರಿಗೊಂದು ನ್ಯಾಯ, ಪಾಂಡ್ಯ -ರಾಹುಲ್ಗೊಂದು ನ್ಯಾಯ… ಇದು ಸರಿಯೇ ಎಂದು ಬಿಸಿಸಿಐ ಆಡಳಿತಾಧಿಕಾರಿಗಳನ್ನು ಬಿಸಿಸಿಐನ ಕೆಲವು ಸದಸ್ಯರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ನಕಲಿ ಅಂಕ ಪಟ್ಟಿ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದ ಹರ್ಮನ್ಪ್ರೀತ್ ಕೌರ್ ಭಾರತ ತಂಡದ ನಾಯಕಿಯಾಗಿ ಮುಂದುವರಿದಿದ್ದಾರೆ. ಹೀಗಿರುವಾಗ ಹಾರ್ದಿಕ್ ಹಾಗೂ ರಾಹುಲ್ ವಿಷಯವನ್ನು ಸುಖಾಸುಮ್ಮನೆ ದೊಡ್ಡ ವಿಷಯವನ್ನಾಗಿ ಮಾಡಿ ಕ್ರಿಕೆಟಿಗರ ಬದುಕನ್ನೇ ಹಾಳುಮಾಡಲು ವ್ಯವಸ್ಥಿತ ಸಂಚು ರೂಪಿಸಲಾಗಿದೆ ಎನ್ನುವಂತಹ ಟೀಕೆಗಳು ಕೇಳಿಬಂದಿವೆ.
ಪೊಲೀಸ್ ಪಾಠ
ವಿವಾದಕ್ಕೀಡಾಗಿರುವ ಹಾರ್ದಿಕ್ ಪಾಂಡ್ಯ ಅವರತ್ತ ಮುಂಬಯಿ ಪೊಲೀಸರು ಬೌನರ್ ಎಸೆದಿದ್ದಾರೆ. “ಮಹಿಳೆಯರಿಗೆ ಗೌರವ ನೀಡಿದರಷ್ಟೇ ಉತ್ತಮ ಕ್ರಿಕೆಟಿಗನಾಗಲು ಸಾಧ್ಯ’ಎಂದು ತಮ್ಮ ಟ್ವಿಟರ್ನಲ್ಲಿ ಪ್ರಕಟಿಸಿದ್ದಾರೆ.