ವಿನಯ್ -ರೋನಿತ್ ಸಾಹಸ, ರಾಜ್ಯಕ್ಕೆ ಮುನ್ನಡೆ
Team Udayavani, Jan 17, 2019, 12:30 AM IST
ಬೆಂಗಳೂರು: ಆತಿಥೇಯ ಕರ್ನಾಟಕ-ರಾಜಸ್ಥಾನ ತಂಡಗಳ ರಣಜಿ ಕ್ವಾರ್ಟರ್ಫೈನಲ್ ಪಂದ್ಯದ ಎರಡನೇ ದಿನ ಹಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು.
ವಿನಯ್ ಕುಮಾರ್-ರೋನಿತ್ ಮೋರೆ ಅವರು ಪ್ರಚಂಡ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಎದೆಬಡಿತವನ್ನು ಹೆಚ್ಚಿಸಿದರು. ಕ್ಷಣಕ್ಷಣಕ್ಕೂ ಆತಂಕ ಹೆಚ್ಚಿದ್ದ ಪಂದ್ಯದಲ್ಲಿ ಇಬ್ಬರೂ ಆಟಗಾರರು ಎಲ್ಲ ಸವಾಲುಗಳನ್ನು ಮೆಟ್ಟಿನಿಂತರು. ಅಪ್ರತಿಮ ನಿರ್ವಹಣೆಯ ಮೂಲಕ ತಂಡಕ್ಕೆ ರೋಚಕ ಮೊದಲ ಇನ್ನಿಂಗ್ಸ್ ಮುನ್ನಡೆ ತಂದುಕೊಟ್ಟರು.
ರಾಜಸ್ಥಾನದ 224 ರನ್ನಿಗೆ ಉತ್ತರವಾಗಿ ಕರ್ನಾಟಕ ದ್ವಿತೀಯ ದಿನ 263 ರನ್ನಿಗೆ ಆಲೌಟಾಗಿ 39 ರನ್ನುಗಳ ಅಮೂಲ್ಯ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯಿತು. ದಿನದಾಟದ ಅಂತ್ಯಕ್ಕೆ ರಾಜಸ್ಥಾನ ತನ್ನ ದ್ವಿತೀಯ ಇನ್ನಿಂಗ್ಸ್ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 11 ರನ್ ಗಳಿಸಿದೆ.
ಕಾಪಾಡಿದ ವಿನಯ್-ರೋನಿತ್
ಇನ್ನೇನು ರಾಜ್ಯ ತಂಡ ಮೊದಲ ಇನ್ನಿಂಗ್ಸ್ ಹಿನ್ನಡೆಗೆ ಸಿಲುಕಲಿದೆ. ಸೆಮಿಫೈನಲ್ ಕನಸು ಭಗ್ನವಾಗಲಿದೆ ಎಂದೇ ಭಾವಿಸಲಾಗಿತ್ತು. ಅಷ್ಟರಲ್ಲಿ ಮಾಜಿ ನಾಯಕ ವಿನಯ್ ಕುಮಾರ್ (ಅಜೇಯ 83 ರನ್) ಹಾಗೂ ರೋನಿತ್ ಮೋರೆ (10 ರನ್) ಅಪತ್ಪಾಂಧವರಾಗಿ ಬಂದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 9ನೇ ವಿಕೆಟಿಗೆ ಸಾಹಸಮಯ 97 ರನ್ ಜತೆಯಾಟ ನಿರ್ವಹಿಸಿದರು. ಸಂಭವನೀಯ ಆತಂಕದಿಂದ ತಂಡವನ್ನು ಪಾರು ಮಾಡಿದರು.
ಒಂದು ಹಂತದಲ್ಲಿ ಆತಿಥೇಯರು 166 ರನ್ನಿಗೆ 9 ವಿಕೆಟ್ ಕಳೆದುಕೊಂಡಿದ್ದರು. ಈ ಹಂತದಲ್ಲಿ ಇನ್ನಿಂಗ್ಸ್ ಮುನ್ನಡೆ ಸಾಧಿಸಲು ರಾಜ್ಯ ತಂಡಕ್ಕೆ ಇನ್ನೂ 58 ರನ್ ಬೇಕಾಗಿತ್ತು. ಈ ವೇಳೆ ವಿನಯ್ ಕುಮಾರ್-ರೋನಿತ್ ಮೋರೆ ಗಟ್ಟಿಯಾಗಿ ಕ್ರೀಸ್ಗೆ ಅಂಟಿ ಬ್ಯಾಟ್ ಬೀಸಿದರು. ಅಗತ್ಯವಾಗಿದ್ದ 58 ರನ್ಗಳನ್ನು ಇಬ್ಬರೂ ಆಟಗಾರರು ಸೇರಿಸಿ ಕಲೆಹಾಕಿದರು. ವಿನಯ್ ಒಟ್ಟು 144 ಎಸೆತ ಎದುರಿಸಿ 10 ಬೌಂಡರಿ ಹಾಗೂ 2 ಸಿಕ್ಸರ್ನಿಂದ 83 ರನ್ ಗಳಿಸಿ ಅಜೇಯರಾದರು. ರೋನಿತ್ ಮೋರೆ ಇವರಿಗೆ ಉತ್ತಮವಾಗಿ ಸಾಥ್ ನೀಡಿದರು. 59 ಎಸೆತ ಎದುರಿಸಿದ ರೋನಿತ್ ಕೇವಲ ಒಂದು ಬೌಂಡರಿಯಿಂದ ತಂಡದ ನೆರವಿಗೆ ನಿಂತರಲ್ಲದೆ 10ನೆಯವರಾಗಿ ಔಟಾಗುವ ಮೊದಲು 10 ರನ್ ಮಾಡಿದ್ದರು. ಈ ವೇಳೆ ಕರ್ನಾಟಕ ಸುಭದ್ರವಾಗಿತ್ತು.
ರಾಜ್ಯಕ್ಕೀಗ ತುಸು ನಿರಾಳ
ಎರಡನೇ ದಿನದ ಆಟದಲ್ಲಿ ಕರ್ನಾಟಕ 39 ರನ್ಗಳ ಅಲ್ಪ ಮುನ್ನಡೆ ಪಡೆಯಿತು. ಇದಕ್ಕುತ್ತರವಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ರಾಜಸ್ಥಾನ ವಿಕೆಟ್ ನಷ್ಟವಿಲ್ಲದೆ 11 ರನ್ ಗಳಿಸಿದೆ. ಅಮಿತ್ ಕುಮಾರ್ (ಅಜೇಯ 11 ರನ್) ಹಾಗೂ ಇನ್ನೂ ಖಾತೆ ತೆರೆಯದ ಚೇತನ್ ಬಿಸ್ಟ್ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ರಾಜಸ್ಥಾನ ತಂಡ ಮುನ್ನಡೆ ಸಾಧಿಸಲು 28 ರನ್ ಗಳಿಸಬೇಕಿದೆ.
ಒಂದು ಲೆಕ್ಕಾಚಾರದ ಪ್ರಕಾರ ರಾಜ್ಯ ತಂಡವೀಗ ನಿರಾಳ. ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿರುವುದರಿಂದ ಸೆಮಿಫೈನಲ್ಗೆ ಅಗತ್ಯವಾಗಿದ್ದ ಒಂದು ಹಂತದ ಯಶಸ್ಸನ್ನು ಆತಿಥೇಯರು ಪಡೆದುಕೊಂಡಿದ್ದಾರೆ. ಆದರೆ ರಾಜಸ್ಥಾನಕ್ಕೆ ಮುಂದೆ ಬೇಕಿರುವುದು ಗೆಲುವೊಂದೇ ದಾರಿ. ಸೋತರೆ ಅಥವಾ ಡ್ರಾವಾದರೆ ಪ್ರವಾಸಿಗರು ನೇರ ಮನೆ ದಾರಿ ಹಿಡಿಯಬೇಕಾಗಿದೆ. ಕರ್ನಾಟಕ ಸೆಮಿಫೈನಲ್ಗೆ ಏರಬೇಕಾದರೆ ಪಂದ್ಯವನ್ನು ಡ್ರಾ ಮಾಡಿಕೊಳ್ಳಬೇಕಿದೆ ಅಥವಾ ಗೆಲ್ಲಬೇಕಿದೆ.
ಸಿದ್ಧಾರ್ಥ್ ಅರ್ಧಶತಕ
ಮೊದಲ ದಿನದ ಆಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ ಆತಿಥೇಯರು 12 ರನ್ ಗಳಿಸಿದ್ದರು. ಬುಧವಾರ ಬ್ಯಾಟಿಂಗ್ ಮುಂದುವರಿಸಿದ ಕರ್ನಾಟಕಕ್ಕೆ ಹೇಳಿಕೊಳ್ಳುವಂತಹ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಬ್ಯಾಟ್ಸ್ಮನ್ ಆರ್. ಸಮರ್ಥ್ (32 ರನ್)ಗಳಿಸಿದರೆ ಮತ್ತೋರ್ವ ಆರಂಭಿಕ ಡಿ.ನಿಶ್ಚಲ್ (6 ರನ್)ಬೇಗನೇ ಔಟಾಗಿ ನಿರಾಸೆ ಮೂಡಿಸಿದರು. ಎರಡನೇ ವಿಕೆಟಿಗೆ ಬಂದ ಕೆ.ವಿ. ಸಿದ್ಧಾರ್ಥ್ (52 ರನ್) ಗಳಿಸಿದ್ದು ಬಿಟ್ಟರೆ ಅಗ್ರ ಕ್ರಮಾಂಕದ ಎಲ್ಲ ಬ್ಯಾಟ್ಸ್ಮನ್ಗಳು ಕೈಕೊಟ್ಟರು. ರಾಹುಲ್ ಚಾಹರ್ (93ಕ್ಕೆ 5), ಅಲ್ ಹಕ್ (50ಕ್ಕೆ 3) ಹಾಗೂ ದೀಪಕ್ ಚಾಹರ್ (62ಕ್ಕೆ 2) ಮಾರಕ ಬೌಲಿಂಗ್ ದಾಳಿಗೆ ಸಿಲುಕಿ ರಾಜ್ಯ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಸೇರಿಕೊಂಡರು. ತಂಡದ ಮೊತ್ತ 124 ರನ್ ಆಗಿದ್ದಾಗ ಕರ್ನಾಟಕ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ತಾರಾ ಬ್ಯಾಟ್ಸ್ಮನ್ಗಳಾದ ಕರುಣ್ ನಾಯರ್ (4 ರನ್), ನಾಯಕ ಮನೀಶ್ ಪಾಂಡೆ (7 ರನ್) ಹಾಗೂ ಶ್ರೇಯಸ್ ಗೋಪಾಲ್ (25 ರನ್) ಬೇಗನೆ ಔಟಾದರು. ಬೆನ್ನಲ್ಲೇ ಬಿ.ಆರ್. ಶರತ್ (4 ರನ್), ಕೆ. ಗೌತಮ್ (19 ರನ್) ಕೂಡ ಔಟಾಗಿ ಸ್ಪರ್ಧೆಗೆ ಬಿದ್ದವರಂತೆ ಪೆವಿಲಿಯನ್ ಸೇರಿಕೊಂಡರು. ಇದರಿಂದ ತಂಡ ಬೇಗನೇ ಆಲೌಟಾಗುವ ಒತ್ತಡಕ್ಕೆ ಸಿಲುಕಿಕೊಂಡಿತ್ತು.
ಸಂಕ್ಷಿಪ್ತ ಸ್ಕೋರು: ರಾಜಸ್ಥಾನ 224 ಮತ್ತು ವಿಕೆಟ್ ನಷ್ಟವಿಲ್ಲದೇ 11; ಕರ್ನಾಟಕ 263 (ಆರ್. ಸಮರ್ಥ್ 32, ಸಿದ್ಧಾರ್ಥ್ 52, ಶ್ರೇಯಸ್ ಗೋಪಾಲ್ 25, ಗೌತಮ್ 19, ವಿನಯ್ ಕುಮಾರ್ 83 ಔಟಾಗದೆ, ರಾಹುಲ್ ಚಾಹರ್ 93ಕ್ಕೆ 5, ಉಲ್ ಹಕ್ 50ಕ್ಕೆ 3, ದೀಪಕ್ ಚಾಹರ್ 62ಕ್ಕೆ 2).
ರಣಜಿ ಕ್ವಾರ್ಟರ್ ಫೈನಲ್ಸ್
ವಯನಾಡ್: ಕೇರಳ ವಿರುದ್ಧ ನಡೆಯುತ್ತಿರುವ ರಣಜಿ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಗುಜರಾತ್ ಗೆಲುವು ಸಾಧಿಸಲು 195 ರನ್ ಗಳಿಸುವ ಗುರಿ ಪಡೆದಿದೆ. ಮೊದಲ ಇನ್ನಿಂಗ್ಸ್ನಲ್ಲಿ 23 ರನ್ ಹಿನ್ನಡೆ ಪಡೆದಿದ್ದ ಗುಜರಾತ್ ಬೌಲಿಂಗ್ನಲ್ಲಿ ಗಮನಾರ್ಹ ನಿರ್ವಹಣೆ ನೀಡಿ ಗೆಲುವು ಸಾಧಿಸುವ ಅವಕಾಶ ಪಡೆದಿದೆ.
ಮೊದಲ ದಿನದ ಅಂತ್ಯಕ್ಕೆ 4 ವಿಕೆಟ್ 97 ರನ್ ಗಳಿಸಿದ್ದ ಗುಜರಾತ್ ಬುಧವಾರ ಆಟ ಆರಂಭಿಸಿ 162 ರನ್ಗೆ ಅಲೌಟ್ ಆಗಿದೆ. ಇದರಿಂದ ತಂಡ 23 ರನ್ ಮೊದಲ ಇನ್ನಿಂಗ್ಸ್ ಹಿನ್ನಡೆ ಪಡೆಯಿತು. ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಕೇರಳ ತಂಡ ಬ್ಯಾಟಿಂಗ್ನಲ್ಲಿ ವೈಫಲ್ಯ ಕಂಡು 171 ರನ್ನಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿದ್ದು, 194 ರನ್ ಮುನ್ನಡೆಯಲ್ಲಿದೆ.
(ಕೇರಳ: 185 ಮತ್ತು 171, ಗುಜರಾತ್ 162)
ಲಕ್ನೋ: ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಉತ್ತರಪ್ರದೇಶ ಪಂದ್ಯದ ದ್ವಿತೀಯ ದಿನ 385 ರನ್ನಿಗೆ ಅಲೌಟ್ ಆಗಿದೆ. ಇನ್ನಿಂಗ್ಸ್ ಆರಂಭಿಸಿರವ ಸೌರಾಷ್ಟ್ರ 7 ವಿಕೆಟ್ ಕಳೆದುಕೊಂಡು 170 ರನ್ ಗಳಿಸಿದೆ.
(ಉತ್ತರ ಪ್ರದೇಶ: 385, ಸೌರಾಷ್ಟ್ರ 7 ವಿಕೆಟಿಗೆ 170)
ನಾಗ್ಪುರ: ವಿದರ್ಭ ವಿರುದ್ಧದ ಪಂದ್ಯದ ಮೊದಲ ದಿನ 293 ರನ್ ಗಳಿಸಿದ ಉತ್ತರಖಂಡ ಎರಡನೇ ದಿನ ತನ್ನ ಮೊತ್ತವನ್ನು 355ಕ್ಕೆ ವಿಸ್ತರಿಸಿ ಅಲೌಟಾಗಿದೆ. ಇದಕ್ಕುತ್ತರವಾಗಿ ವಿದರ್ಭ ಒಂದು ವಿಕೆಟ್ ಕಳೆದುಕೊಂಡು 260 ರನ ಮಾಡಿದೆ.
(ಉತ್ತರಖಂಡ: 355, ವಿದರ್ಭ: 1 ವಿಕೆಟಿಗೆ 260)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ