ಲಂಚ ಆರೋಪ: ರಾಷ್ಟ್ರೀಯ ಕ್ರಿಡಾ ಪ್ರಾಧಿಕಾರ ಅಧಿಕಾರಿಗಳು ಸಿಬಿಐ ವಶಕ್ಕೆ
Team Udayavani, Jan 18, 2019, 4:56 AM IST
ಹೊಸದಿಲ್ಲಿ: ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ (SAI) ಅಧಿಕಾರಿಗಳನ್ನು ಲಂಚ ಪಡೆದ ಆರೋಪದ ಮೇಲೆ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಒಟ್ಟು ಆರು ಅಧಿಕಾರಿಗಳನ್ನು ಸಿಬಿಐ ವಶಕ್ಕೆ ಪಡೆದಿದ್ದು, ಸಾಮಾನ್ಯ ಆಡಳಿತ ವಿಭಾಗದ ನಿರ್ದೇಶಕ ಎಸ್.ಕೆ.ಶರ್ಮಾ ಇವರಲ್ಲಿ ಪ್ರಮುಖರು.
ಹೊಸದಿಲ್ಲಿಯಲ್ಲಿರುವ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ ಕಚೇರಿಗೆ ಗುರುವಾರ ದಾಳಿ ಮಾಡಿದ ಸಿಬಿಐ ಅಧಿಕಾರಿಗಳು ಏಸ್,ಕೆ.ಶರ್ಮಾ ಸೇರಿದಂತೆ ಇತರ ಅಧಿಕಾರಿಗಳಾದ ಲಲಿತ್ ಜೋಲಿ, ಹರೇಂದ್ರ ಪ್ರಸಾದ್, ವಿ.ಕೆ.ಶರ್ಮಾ ಮತ್ತು ಇಬ್ಬರು ಖಾಸಗಿ ವ್ಯಕ್ತಿಗಳಾದ ಮನದೀಪ್ ಅಹುಜಾ ಮತ್ತು ಯೂನಸ್ ರನ್ನು ವಶಕ್ಕೆ ಪಡೆದಿದ್ದಾರೆ.
ಪ್ರಾಧಿಕಾರಕ್ಕೆ ಸಂಬಂಧಿಸಿದ 19 ಲಕ್ಷ ಮೊತ್ತದ ಸಾರಿಗೆ ಬಿಲ್ ಪಾಸು ಮಾಡಲು ಖಾಸಗಿ ಗುತ್ತಿಗೆದಾರರಿಂದ ಮೂರು ಪ್ರತಿಶತ ಲಂಚ ಕೇಳಿದ ಆರೋಪ ಈ ಅಧಿಕಾರಿಗಳ ಮೇಲಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್, ‘ ಭ್ರಷ್ಟಾಚಾರ ವಿರುದ್ಧ ನಮ್ಮ ಸರಕಾರ ಸಮರ ಸಾರುತ್ತಿದೆ. ಕ್ರಿಡಾ ಇಲಾಖೆಯಲ್ಲಿ ಯಾವ ಭ್ರಷ್ಟಾಚಾರ ಕಂಡು ಬಂದರೂ ನಾವು ಸಹಿಸುವುದಿಲ್ಲ’ ಎಂದಿದ್ದಾರೆ.