ಫೆ. 15ಕ್ಕೆ ಆಸೀಸ್ ಸರಣಿಗೆ ಭಾರತ ತಂಡ ಪ್ರಕಟ
Team Udayavani, Feb 13, 2019, 12:30 AM IST
ಹೊಸದಿಲ್ಲಿ: ಭಾರತದ ಆತಿಥ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳ ಟಿ20 ಹಾಗೂ 5 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯ ರಾಷ್ಟ್ರೀಯ ಆಯ್ಕೆ ಮಂಡಳಿ ಫೆ. 15ಕ್ಕೆ ಭಾರತ ತಂಡವನ್ನು ಪ್ರಕಟಿಸಲಿದೆ.
ಮುಂಬರುವ ಏಕದಿನ ವಿಶ್ವಕಪ್ ಕ್ರಿಕೆಟ್ ಹಿನ್ನೆಲೆಯಲ್ಲಿ ಈ ಸರಣಿ ಆಟಗಾರರಿಗೆ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು, ಆಯ್ಕೆ ಮಂಡಳಿಯ ಗಮನ ಸೆಳೆಯಲು ಉತ್ತಮ ವೇದಿಕೆ ಆಗಿರಲಿದೆ. ಎಷ್ಟರಮಟ್ಟಿಗೆ ಆಟಗಾರರು ಇದನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ. ಭಾರತ ಈಗಾಗಲೇ ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್ ನೆಲದಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಸರಣಿ ಗೆಲುವಿನ ದಾಖಲೆ ಬರೆದಿದೆ. ಇದು ತವರಿನಲ್ಲಿ ಆಡುವ ಭಾರತದ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಲಿದೆ.
ರಾಹುಲ್, ರಹಾನೆಗೆ ಅವಕಾಶ
ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಆಟಗಾರರ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಹೀಗಾಗಿ ಆಸ್ಟ್ರೇಲಿಯ ಸರಣಿಯಲ್ಲಿ ಸಾಧಾರಣ ನಿರ್ವಹಣೆ ನೀಡಿದ್ದ ಕೆ.ಎಲ್. ರಾಹುಲ್ ಹಾಗೂ ಅಜಿಂಕ್ಯ ರಹಾನೆಗೆ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ. ಈ ಸರಣಿಯಲ್ಲಿ ಇವರಿಬ್ಬರಿಗೆ ಸಾಮರ್ಥ್ಯ ಸಾಬೀತುಪಡಿಸಲು ಕೊನೆ ಅವಕಾಶ ನೀಡಲಾಗುತ್ತದೆ. ಸಿಕ್ಕ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಂಡು ರನ್ ಮಳೆ ಸುರಿಸಿದರಷ್ಟೇ ಇವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗಬಹುದು ಎಂದು ಹೇಳಲಾಗಿದೆ.
ಕೊಹ್ಲಿ ವಾಪಸ್ ಖಚಿತ
ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯ ಕೊನೆಯ ಎರಡು ಏಕದಿನ ಪಂದ್ಯಗಳಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ ಮತ್ತೆ ತಂಡವನ್ನು ಸೇರಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಇದರಿಂದಾಗಿ ರೋಹಿತ್ ಶರ್ಮ ಅವರಿಗೆ ಟಿ20 ಸರಣಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಬೌಲಿಂಗ್ನಲ್ಲೂ ಬದಲಾವಣೆ ನಿರೀಕ್ಷೆ
ಆಸೀಸ್ ವಿರುದ್ಧದ ಸರಣಿಯಲ್ಲಿ ಬೌಲಿಂಗ್ ವಿಭಾಗದಲ್ಲಿ ಕೂಡ ಕೆಲ ಬದಲಾವಣೆಯಾಗುವ ನಿರೀಕ್ಷೆಯಿದೆ. ಟಿ20 ಸ್ಪೆಷಲಿಸ್ಟ್ ಬೌಲರ್ ಯಜುವೇಂದ್ರ ಚಾಹಲ್ ಹಾಗೂ ಕುಲದೀಪ್ ಯಾದವ್ಗೆ ವಿಶ್ರಾಂತಿ ನೀಡಿ ಹೊಸ ಪ್ರತಿಭೆಗಳಿಗೆ ಮಣೆ ಹಾಕುವ ಸಾಧ್ಯತೆ ಇದೆ. ಮತ್ತೂಂದು ಕಡೆ ವೇಗಿ ಜಸ್ಪ್ರೀತ್ ಬುಮ್ರಾ ಮತ್ತೆ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿದೆ.
ವಿಕೆಟ್ ಕೀಪಿಂಗ್ಗಾಗಿ ಪೈಪೋಟಿ
ವಿಶ್ವಕಪ್ ತಂಡದಲ್ಲಿ ಮೊದಲ ವಿಕೆಟ್ ಕೀಪರ್ ಧೋನಿ. ಅವರ ಅನಂತರ ಎರಡನೇ ವಿಕೆಟ್ ಕೀಪಿಂಗ್ಗಾಗಿ ದಿನೇಶ್ ಕಾರ್ತಿಕ್ ಮತ್ತು ರಿಷಭ್ ಪಂತ್ ನಡುವೆ ಪ್ರಬಲ ಸ್ಪರ್ಧೆ ಇದೆ. ಹೀಗಾಗಿ ಆಸೀಸ್ ವಿರುದ್ಧದ ಸರಣಿ ಈ ಇಬ್ಬರೂ ಆಟಗಾರರಿಗೆ ಮಹತ್ವದ್ದಾಗಿದೆ.