“ಯೋಧರ ಕುಟುಂಬಕ್ಕೆ ಬಿಸಿಸಿಐ 5 ಕೋಟಿ ರೂ. ನೆರವು ನೀಡಲಿ’
Team Udayavani, Feb 18, 2019, 12:35 AM IST
ಮುಂಬಯಿ: ಪುಲ್ವಾಮದಲ್ಲಿ ಉಗ್ರರ ದಾಳಿಗೆ ಬಲಿಯಾದ ಸೈನಿಕರ ಕುಟುಂಬಕ್ಕೆ ಬಿಸಿಸಿಐ ಕನಿಷ್ಠ 5 ಕೋಟಿ ರೂ. ನೀಡಬೇಕು ಎಂದು ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಅವರು ಬಿಸಿಸಿಐ ಆಡಳಿತಾಧಿಕಾರಿ ಮುಖ್ಯಸ್ಥ ವಿನೋದ್ ರಾಯ್ಗೆ ಮನವಿ ಮಾಡಿದ್ದಾರೆ.
“ವೀರ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ತ್ಯಾಗ ಬಲಿದಾನವನ್ನು ಎಂದಿಗೂ ಮರೆಯಲಾಗದು, ನಾವು ಯೋಧರ ಕುಟುಂಬಕ್ಕೆ ಬಿಸಿಸಿಐ ವತಿಯಿಂದ ಕನಿಷ್ಠ 5 ಕೋಟಿ ರೂ.ಗಳನ್ನಾದರೂ ನೀಡಬೇಕು. ಸರಕಾರದ ಮೂಲಕ ಇದನ್ನು ಅವರಿಗೆ ತಲುಪಿಸುವ ಕೆಲಸ ತುರ್ತಾಗಿ ಮಾಡಬೇಕಿದೆ’ ಎಂದು ವಿನೋದ್ ರಾಯ್ಗೆ ಬರೆದ ಪತ್ರದಲ್ಲಿ ಖನ್ನಾ ತಿಳಿಸಿದ್ದಾರೆ. ಮಾತ್ರವಲ್ಲ “ದೇಶದ ವಿವಿಧ ರಾಜ್ಯ ಕ್ರಿಕೆಟ್ ಸಂಸ್ಥೆಗಳು, ಐಪಿಎಲ್ ಫ್ರಾಂಚೈಸಿಗಳು ಕೂಡ ನಮ್ಮೊಂದಿಗೆ ಕೈ ಜೋಡಿಸಬೇಕು. ಮುಂಬರುವ ಭಾರತ-ಆಸ್ಟ್ರೇಲಿಯ ನಡುವಿನ ಆರಂಭಿಕ ಪಂದ್ಯಕ್ಕೂ ಮೊದಲು ಮತ್ತು ಐಪಿಎಲ್ ಆರಂಭಿಕ ಪಂದ್ಯದ ವೇಳೆ ಯೋಧರಿಗಾಗಿ ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.