ವಿಶ್ವಕಪ್ ಕೂಟದಲ್ಲಿ ಭಾರತ ಪಾಕ್ ಮುಖಾಮುಖಿ ಡೌಟ್?
Team Udayavani, Feb 20, 2019, 9:34 AM IST
ಪುಲ್ವಾಮದಲ್ಲಿ ಸಿ.ಆರ್.ಪಿ.ಎಫ್. ಯೋಧರ ಮೇಲಿನ ಉಗ್ರ ದಾಳಿಯ ಬಳಿಕ ಪಾಕಿಸ್ತಾನ ಮತ್ತು ಭಾರತದ ನಡುವೆ ಬಿಗುವಿನ ವಾತಾವರಣ ಮನೆಮಾಡಿದೆ. ಪಾಕಿಸ್ಥಾನವು ಉಗ್ರಪೋಷಣೆಯನ್ನು ಕೈಬಿಡಬೇಕು ಎಂದು ಭಾರತವು ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹಾಕುತ್ತಿದ್ದರೆ, ಪುಲ್ವಾಮ ದಾಳಿಗೆ ನಾವು ಹೊಣೆಗಾರರೇ ಅಲ್ಲ ಎಂದು ಪಾಕಿಸ್ಥಾನ ತನ್ನ ಹಳೆಯ ರಾಗವನ್ನೇ ಹಾಡುತ್ತಿದೆ. ಪರಿಸ್ಥಿತಿ ಹೀಗಿರುವಾಗ ಮುಂಬರುವ ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಬಾರತ – ಪಾಕಿಸ್ಥಾನ ಪಂದ್ಯಗಳ ಕುರಿತಾಗಿಯೂ ಅಪಸ್ವರ ಎದ್ದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಬಿ.ಸಿ.ಸಿ.ಐ. ಮಾಜೀ ಕಾರ್ಯದರ್ಶಿ ನಿರಂಜನ್ ಶಾ ಅವರು ವಿಶೇಷ ಸಭೆಯೊಂದನ್ನು ಕರೆಯುವಂತೆ ಕಮಿಟಿ ಆಫ್ ಅಡ್ಮಿನಿಸ್ಟ್ರೇಷನ್ (ಸಿ.ಒ.ಎ.) ಅನ್ನು ಒತ್ತಾಯಿಸಿದ್ದಾರೆ. ಈ ಮೂಲಕ ಭಾರತ – ಪಾಕ್ ವಿಶ್ವಕಪ್ ಪಂದ್ಯಗಳ ಕುರಿತಾಗಿ ಎದ್ದಿರುವ ಗೊಂದಲಗಳನ್ನು ಬಗೆಹರಿಸುವಂತೆ ಶಾ ಅವರು ಒತ್ತಾಯಿಸಿದ್ದಾರೆ.
ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ದಿನೇ ದಿನೇ ಬಿಗಡಾಯಿಸುತ್ತಿರುವ ಕುರಿತಾಗಿ ಶಾ ಅವರು ಮಂಡಳಿಯ ಗಮನಸೆಳೆದಿದ್ದಾರೆ ಮತ್ತು ಏನೇ ಆದರೂ ಎರಡೂ ರಾಷ್ಟ್ರಗಳ ನಡುವಿನ ಕ್ರಿಕೆಟ್ ಸಂಬಂಧದ ಕುರಿತಾದಂತೆ ಸರಕಾರದ ತೀರ್ಮಾನವೇ ಅಂತಿಮವಾದುದಾಗಿದೆ ಎಂಬ ಮಾತನ್ನೂ ಅವರು ಒತ್ತಿ ಹೇಳಿದ್ದಾರೆ.
ಮುಂಬರುವ ವಿಶ್ವಕಪ್ ಕೂಟದಲ್ಲಿ ಭಾರತ ಪಾಕಿಸ್ಥಾನ ಪಂದ್ಯಗಳ ಮೇಲೆ ಪುಲ್ವಾಮ ದಾಳಿಯ ಕರಿನೆರಳು ಬಿದ್ದಿದ್ದು, ಈ ಸಂಬಂಧವಾಗಿ, ಬಿಸಿಸಿಐ ಮತ್ತು ಭಾರತ ಸರಕಾರ ಯಾವ ನಿಲುವನ್ನು ತಳೆಯಲಿದೆ ಎಂಬ ಕುತೂಹಲ ಎರಡೂ ದೇಶಗಳ ಕ್ರಿಕೆಟ್ ಪ್ರೇಮಿಗಳಲ್ಲಿ ಮೂಡಿದೆ.